ನಡುಹಗಲಲ್ಲಿ ನಡೆದ ಸಾಂಸ್ಥಿಕ ಕಗ್ಗೊಲೆ

Update: 2021-07-06 05:11 GMT

ಸುತ್ತುಬಳಸಿ ಮಾತಾಡುವ ಸಮಯವಲ್ಲ. ಸ್ಟಾನ್ ಸ್ವಾಮಿಯಂಥ ಸಂತಪಾದ್ರಿಯನ್ನು ನಡುಹಗಲಿನಲ್ಲಿ ಈ ದೇಶದ ಸರಕಾರ ಹಾಗೂ ನ್ಯಾಯಂಗಗಳೆರಡೂ ಕೈಜೋಡಿಸಿ ಕೊಂದುಹಾಕಿದೆ. ಬ್ರೆಝಿಲ್‌ನ ಆರ್ಚ್ ಬಿಷಪ್ ಕಮಾರ ಎಂದರೆ ಫಾದರ್ ಸ್ವಾಮಿಗೆ ಅಚ್ಚುಮೆಚ್ಚು. ಕಮಾರ ಅವರು ಸಮಾಜ ಹಾಗೂ ಸರಕಾರಗಳ ಸೋಗಲಾಡಿತನಗಳ ಬಗ್ಗೆ ಒಮ್ಮೆ ಹೀಗೆ ಹೇಳಿದ್ದರು:

‘‘ಹಸಿದು ಬಂದವರಿಗೆ ಉಣಬಡಿಸಿದರೆ

ನನ್ನನ್ನು ಸಂತನೆಂದರು..

ಅವರೇಕೆ ಬಡವರಾಗಿದ್ದಾರೆಂದು ಕೇಳಿದರೆ ನಾನು ಕಮ್ಯುನಿಸ್ಟನೆಂದರು’’

ಫಾದರ್ ಸ್ವಾಮಿ ಕೇಳಿದ್ದೂ ಅದನ್ನೇ. ಬೆಂಗಳೂರಿನಲ್ಲಿ ಹಾಗೂ ಇತರ ಮೆಟ್ರೋ ನಗರಗಳಲ್ಲಿ ಶಾಂತಿ ಬೋಧನೆಯ ಫಾದರ್‌ಗಿರಿಯನ್ನು ಮಾಡುವುದಕ್ಕಿಂತ ಅತ್ಯಂತ ನಿರ್ಲಕ್ಷ ಹಾಗೂ ಬಡತನಗಳನ್ನು ಅನುಭವಿಸುತ್ತಿರುವ ಜಾರ್ಖಂಡ್‌ನ ಆದಿವಾಸಿ ಜನರ ಹಕ್ಕುಗಳಿಗಾಗಿ ಹೋರಾಡುವ ಜೀವಪರ ಸಂತಗಿರಿಯನ್ನು ಅಪ್ಪಿಕೊಂಡವರು ಫಾದರ್ ಸ್ಟಾನ್ ಸ್ವಾಮಿಯವರು. ಐದನೇ ಶೆಡ್ಯೂಲ್ ಜಾರಿಯಲ್ಲಿದ್ದರೂ, 2006ರ ಫಾರೆಸ್ಟ್ ಆ್ಯಕ್ಟ್ ಹಕ್ಕುಗಳನ್ನು ನೀಡಿದರೂ ಆದಿವಾಸಿಗಳ ಹಕ್ಕುಗಳನ್ನೆಲ್ಲಾ ಕಸಿದುಕೊಂಡು ಇಡೀ ಅರಣ್ಯ ಸಂಪತ್ತನ್ನು ಸಂವಿಧಾನ ಹಾಗೂ ಕಾನೂನುಗಳಿಗೆ ವಿರುದ್ಧವಾಗಿ ಕಾರ್ಪೊರೇಟ್‌ಗಳಿಗೆ ಪರಭಾರೆ ಮಾಡಿ ಆದಿವಾಸಿಗಳನ್ನು ಎತ್ತಂಗಡಿ ಮಾಡುತ್ತಿರುವುದರ ವಿರುದ್ಧ ಅಹಿಂಸಾತ್ಮಕ ಹೋರಾಟಗಳನ್ನು ಕಟ್ಟಿದರು. ಕಾರ್ಪೊರೇಟುಗಳ ಹಿತಾಸಕ್ತಿಗಳಿಗೆ ಅಡ್ಡಿಬಂದಿದ್ದಕ್ಕೆ 4,000 ಕ್ಕೂ ಹೆಚ್ಚು ಆದಿವಾಸಿಗಳನ್ನು ಭಯೋತ್ಪಾದಕರೆಂದು ಜೈಲುಪಾಲು ಮಾಡಿದವರ ವಿರುದ್ಧ ದನಿಯನ್ನು ಎತ್ತಿದರು. ಹಸಿದವರಿಗೆ ಶಾಂತಿ ಬೋಧನೆ ಮಾಡದೆ ಸಂವಿಧಾನದ ಹಕ್ಕುಗಳನ್ನು ಬೋಧನೆ ಮಾಡಿದ್ದೇ ಪಾದ್ರಿ ಮಾಡಿದ ತಪ್ಪಾಗಿತ್ತು. ಹೀಗಾಗಿ ಮೋದಿ ಸರಕಾರ ಸ್ಟಾನ್ ಸ್ವಾಮಿಯವರನ್ನು ಕೇವಲ ಕಮ್ಯುನಿಸ್ಟ್ ಎಂದು ಮಾತ್ರವಲ್ಲದೆ ಮಾವೋಯಿಸ್ಟ್ ಭಯೋತ್ಪಾದಕನೆಂದೂ ಹಣೆಪಟ್ಟಿ ಕಟ್ಟಿ 2018ರಿಂದಲೇ ಬೇಟೆಯಾಡಲು ಪ್ರಾರಂಭಿಸಿತ್ತು. 2019ರಲ್ಲಿ ಅವರ ಕಚೇರಿಗಳ ಮೇಲೆ ದಾಳಿ ಮಾಡಿ ಬೀಭತ್ಸ ಸೃಷ್ಟಿಸಿತು. ಕವಿಯೊಬ್ಬ ಹಿಂದೊಮ್ಮೆ ಹೇಳಿದಂತೆ

‘‘ಅವರು ಮುತ್ತಿಟ್ಟ ಹಸುಕಂದಮ್ಮಗಳ ಕೆನ್ನೆಯನ್ನು ಕತ್ತರಿಸಿ ಬಚ್ಚಿಟ್ಟ ರಹಸ್ಯಗಳಿಗೆ ಹುಡುಕಾಡಿದರು’’.

ಅಂತಿಮವಾಗಿ ಈ ಬಗೆಯ ಹೋರಾಟಗಾರರನ್ನು, ಈ ದೇಶದ ಜನಧ್ವನಿಗಳನ್ನು, ಅಂತಸ್ಸಾಕ್ಷಿಗಳನ್ನು ಅಣಕಿಸಲೆಂದೇ ರೂಪಿಸಲಾದ ‘‘ಭೀಮಾ ಕೋರೆಗಾಂವ್’’ ಪ್ರಕರಣದಲ್ಲಿ ಮೋದಿಯನ್ನು ಕೊಲ್ಲಬಯಸಿದ ಭಯೋತ್ಪಾದಕ ಗುಂಪಿನವನೆಂಬ ಆರೋಪ ಹೊರಿಸಿ ಕರಾಳ UAPA  ಕಾಯ್ದೆಯಡಿ ಜನರ ಪಾದ್ರಿ ವಯೋವೃದ್ಧ ಸ್ಟಾನ್ ಸ್ವಾಮಿಯವರನ್ನು 2020ರಲ್ಲಿ ಬಂಧಿಸಿ ಜೈಲಿಗಟ್ಟಿತು. ಈ ಬಗೆಯ ದಮನಕ್ಕೆ ಫಾದರ್ ಸ್ವಾಮಿಯವರು ಹೆದರಲಿಲ್ಲ. ಬಂಧನವಾಗುವ ಕೆಲ ದಿನಗಳ ಮೊದಲು ‘‘ನಾನು ಇಂಥ ದಮನ ಎದುರಿಸುತ್ತಿರುವ ಮೊದಲಿಗನೂ ಅಲ್ಲ. ಕೊನೆಯವನೂ ಅಲ್ಲ. ಎಲ್ಲಿಯತನಕ ಈ ದೇಶದಲ್ಲಿ ನಿಜವಾದ ಜನತಂತ್ರ ಸ್ಥಾಪನೆಯಾಗುವುದಿಲ್ಲವೋ ಅಲ್ಲಿಯತನಕ ಈ ದಮನ ದಬ್ಬಾಳಿಕೆ ತಪ್ಪುವುದಿಲ್ಲ. ಹೀಗಾಗಿ ಜನಹಿತವೇ ನಿಜಧರ್ಮ ಎಂದು ಭಾವಿಸಿರುವ ನಾನು ಇದಕ್ಕೆ ಹೆದರುವುದೂ ಇಲ್ಲ’’ ಎಂದು ನುಡಿದಿದ್ದರು.

ಸ್ಟಾನ್ ಸ್ವಾಮಿಯವರನ್ನು 2020ರ ಅಕ್ಟೋಬರ್‌ನಲ್ಲಿ NIA ಬಂಧಿಸಿದಾಗ ಅವರಿಗೆ 83 ವರ್ಷ ವಯಸ್ಸಾಗಿತ್ತು. ಪಾರ್ಕಿನ್ಸನ್ ಕಾಯಿಲೆಯಿತ್ತು. ನೀರು ಕುಡಿಯಲೂ ಆಗದಷ್ಟು ಕೈ ನಡುಗುತ್ತಿತ್ತು. ಹೀಗಾಗಿ ಕುಡಿಯಲು ಸ್ಟ್ರಾ ಒದಗಿಸಬೇಕೆಂದು ಜೈಲು ಅಧಿಕಾರಿಗಳಿಗೆ ಮನವಿ ಮಾಡಿದರು. ಅವರು ನ್ಯಾಯಾಲಯದ ಅನುಮತಿ ಬೇಕೆಂದರು. ನ್ಯಾಯಾಲಯ ಅದಕ್ಕೆ NIA ಗೆ ಏನಾದರೂ ಆಕ್ಷೇಪಣೆ ಇದೆಯೇ ಎಂದು ಕೇಳಿತು. NIA ತನ್ನ ಆಕ್ಷೇಪಣೆ ಇಲ್ಲ ಎಂದು ತಿಳಿಸಲು ಒಂದು ತಿಂಗಳು ತೆಗೆದುಕೊಂಡಿತು. (ಇದೇ ಬಗೆಯ ಕಿರುಕುಳವನ್ನು ಎರಡು ವರ್ಷ ಮುಂಚೆ ಇದೇ ಕಾರಣಕ್ಕೆ ಹಾಗೂ ಇದೇ ಕೇಸಿನಲ್ಲಿ ಬಂಧನಕ್ಕೊಳಗಾಗಿದ್ದ ಪ್ರಖ್ಯಾತ ಕ್ರಾಂತಿಕಾರಿ ಕವಿ ವರವರರಾವ್ ಅವರಿಗೂ ನೀಡಿತ್ತು. ಇದೀಗ ಅವರು ಸಾವಿನ ದವಡೆಯಿಂದ ಪವಾಡ ಸದೃಶವಾಗಿ ಬಚಾವಾಗಿ ಆರು ತಿಂಗಳ ಮೆಡಿಕಲ್ ಜಾಮೀನಿನ ಮೇಲಿದ್ದಾರೆ. ಆರು ತಿಂಗಳ ನಂತರ?)

 ಈ ರೀತಿ ಭಾರತದ ನಿಜವಾದ ಅಂತಸ್ಸಾಕ್ಷಿಗಳಾದ ಸ್ಟಾನ್ ಸ್ವಾಮಿ ಹಾಗೂ ಇನ್ನಿತರ ಹದಿನಾರು “Prisoners Of Conscience”ಗಳನ್ನು ನಿಧಾನವಾಗಿ ಕೊಂದುಹಾಕಬೇಕೆಂಬ ತೀರ್ಮಾನವನ್ನು ಸರಕಾರ ಮಾಡಿದ್ದರೆ ಸ್ವತಂತ್ರ ನ್ಯಾಯಾಂಗ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಡುಹಗಲಲ್ಲಿ ನಡೆದ ಈ ತಣ್ಣನೆಯ ಕೊಲೆಗಳಿಗೆ ನ್ಯಾಯದ ಮತ್ತು ಕಾನೂನಿನ ಒಪ್ಪಿಗೆಯನ್ನು ನೀಡಿತು. ಪಾರ್ಕಿನ್ಸನ್ ಕಾಯಿಲೆಯ ಜೊತೆಗೆ ಕಳೆದ ಹಲವಾರು ತಿಂಗಳಿಂದ ಕೋವಿಡ್ ಕಾಯಿಲೆಯಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದ ವೃದ್ಧ ಪಾದ್ರಿ ಸ್ಟಾನ್ ಸ್ವಾಮಿಯವರಿಗೆ ಕಾಯಿಲೆಯಿದೆಯೆಂಬುದನ್ನೇ NIA ನಿರಾಕರಿಸುತ್ತಾ ಬಂದಿತು. ಬದಲಿಗೆ ತನ್ನದೇ ಆದ ವೈದ್ಯಕೀಯ ತನಿಖೆಯನ್ನೂ ಮಾಡಿಸದೆ ಕೊಲೆಗಡುಕ ನಿರ್ಲಕ್ಷ್ಯದಲ್ಲಿ ತಿಂಗಳುಗಳನ್ನು ಕಳೆಯಿತು. ಜಾಮೀನು ಪಡೆದುಕೊಳ್ಳಲು ದುರುದ್ದೇಶದಿಂದ ಪಾದ್ರಿ ಸ್ವಾಮಿ ನಾಟಕವಾಡುತ್ತಿದ್ದಾರೆಂದು ನ್ಯಾಯಾಲಯದಲ್ಲಿ ಸಬೂಬು ಹೇಳಿದರೆ ಇವೆಲ್ಲವನ್ನೂ ನ್ಯಾಯಾಲಯ ಕಣ್ಣುಮುಚ್ಚಿಕೊಂಡು ಅವರು ಹೇಳಿದ್ದನ್ನೆಲ್ಲಾ ಒಪ್ಪಿಕೊಂಡಿತು. ಪದೇಪದೇ ಸ್ಟಾನ್ ಸ್ವಾಮಿಯವರ ಜಾಮೀನನ್ನು ನಿರಾಕರಿಸುತ್ತಲೇ ಹೋಯಿತು.

ಇತ್ತೀಚೆಗೆ ಕೂಡ 84 ವರ್ಷದ ರೋಗಗ್ರಸ್ತ ಪಾದ್ರಿಯ ಜಾಮೀನು ಅರ್ಜಿಯನ್ನು ನಿರಾಕರಿಸುತ್ತಾ ಕೋರ್ಟು ‘‘ಆರೋಪಿಯ ಮೇಲಿರುವ ಆರೋಪದ ಗಂಭೀರತೆಯ ದೃಷ್ಟಿಯಿಂದ ನೋಡುವುದಾದರೆ, ಸಮಾಜದ ಸಾರ್ವತ್ರಿಕ ಹಿತಾಸಕ್ತಿಯು ಕಾಯಿಲೆಯಿಂದ ಬಳಲುತ್ತಿದ್ದಾರೆಂದು ಹೇಳಲ್ಪಟ್ಟ ಆರೋಪಿಗೆ ಜಾಮೀನು ನೀಡುವುದಕ್ಕಿಂತ ಮಹತ್ವದ್ದೆಂದು ಕಂಡು ಬರುವುದರಿಂದ, ಜಾಮೀನು ನಿರಾಕರಿಸಲಾಗಿದೆ’’ ಎಂದೇ ಹೇಳಿತ್ತು. ಇದೇ ನ್ಯಾಯಾಲಯವೇ ದಿಲ್ಲಿ ಗಲಭೆಗಳಲ್ಲಿ ಹಿಂಸಾತ್ಮಕ ಪ್ರಚೋದನೆ ನೀಡಿದವರಿಗೆ, ಕಗ್ಗೊಲೆಗಳಲ್ಲಿ ಭಾಗವಹಿಸಿದ ಕೊಲೆಗಡುಕರಿಗೆ ಮರುಮಾತಿಲ್ಲದೆ ಜಾಮೀನನ್ನು ನೀಡಿತ್ತು ಎಂಬುದನ್ನು ಮರೆಯಬಾರದು.

ಹೀಗಾಗಿ ಸ್ಟಾನ್ ಸ್ವಾಮಿಯವರದ್ದು ವಯೋಸಹಜ ಸಾವಲ್ಲ. ಭಾರತ ಸರಕಾರ ಹಾಗೂ ಭಾರತದ ನ್ಯಾಯಾಂಗ ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸಲು ನಡುಹಗಲಿನಲ್ಲಿ ನಡೆಸಿದ ಸಾಂಸ್ಥಿಕ ಕಗ್ಗೊಲೆ. ನಮ್ಮ ನಿಮ್ಮೆಲ್ಲರ ಹೆಸರಿನಲ್ಲಿ ನಡೆದ ಪ್ರಜಾತಂತ್ರದ, ಮನುಷ್ಯತ್ವದ ಕೊಲೆ. ಹೀಗಾಗಿ ನಮ್ಮೆಲ್ಲರ ಕೈಗಳ ಮೇಲೂ ರಕ್ತವಿದೆ. ಇಡೀ ಗಂಗಾನದಿಯ ನೀರು ಈ ರಕ್ತದ ಕಲೆಯನ್ನು ತೊಳೆಯಲಾರದು. ಸಂತ ಸ್ಟಾನ್ ಸ್ವಾಮಿಯನ್ನು ಬಲಿತೆಗೆದುಕೊಂಡ ಮೋದಿ ಸರಕಾರದ ಬಲಿಪಟ್ಟಿ ಇನ್ನು ತುಂಬಾ ದೊಡ್ಡದಿದೆ..

► ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಂತ ಸ್ಟಾನ್ ಸ್ವಾಮಿಯವರ ಜೊತೆ ಸಹ ನಿಂದಿತರಾದ ಈ ದೇಶದ ಅಂತಸ್ಸಾಕ್ಷಿಗಳು... :

ಜನ ಕಲಾವಿದೆ -ಜ್ಯೋತಿ ಜಘೋಬಾ ಜಗ್ತಾಪ್ ಜನ ಕಲಾವಿದ - ಸಾಗರ್ ತಾತ್ಯಾರಾಮ್ ಗೊರ್ಖೆ

ಜನ ಕಲಾವಿದ-ರಮೇಶ್ ಮುರಳೀಧರ್ ಗಾಯ್ಚೋರ್

ಸಾಮಾಜಿಕ ಕಾರ್ಯಕರ್ತ-ಸುಧೀರ್ ಧವಾಲೆ

ವಕೀಲ-ಸುರೇಂದ್ರ ಗಾಡ್ಲಿಂಗ್

 ಯುವ ವಿದ್ವಾಂಸ-ಮಹೇಶ್ ರಾವತ್

ಅಧ್ಯಾಪಕಿ-ಶೋಮಾ ಸೆನ್ ವಿದ್ವಾಂಸ - ರೋನಾ ವಿಲ್ಸನ್

ಕಾರ್ಯಕರ್ತ - ಅರುಣ್ ಪೆರೇರಾ

 ಪ್ರಖ್ಯಾತ ವಕೀಲೆ-ಸುಧಾ ಭಾರದ್ವಾಜ್

 ಪ್ರಖ್ಯಾತ ಹಿರಿಯ ಜನಕವಿ- ವರವರರಾವ್

 ಪ್ರಖ್ಯಾತ ಕಾರ್ಯಕರ್ತ-ವೆರ್ನೆನ್ ಗೊನ್ಸಾಲ್ವಿಸ್

 ಪ್ರಖ್ಯಾತ ವಿದ್ವಾಂಸ-ಆನಂದ್ ತೇಲ್ತುಂಬ್ಡೆ

ಮಾನವ ಹಕ್ಕು ಕಾರ್ಯಕರ್ತ-ಗೌತಮ್ ನವ್ಲಾಖಾ

 ಅಧ್ಯಾಪಕ- ಪ್ರೊ. ಹನಿ ಬಾಬು

ಮತ್ತು ಹೃದಯವಂತರಾಗಿದ್ದರೆ ಮತ್ತು ಪ್ರಜಾತಂತ್ರವಾದಿಗಳಾಗಿದ್ದರೆ ನಾನು ...ಮತ್ತು ನೀವು ಕೂಡಾ .. ಆದ್ದರಿಂದ, ಮುಂದೊಂದು ಮಧ್ಯಾಹ್ನ ಇವರುಗಳನ್ನು ಕಳೆದುಕೊಳ್ಳುವ ಮುಂಚೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.

ಸ್ಟಾನ್ ಸ್ವಾಮಿಯವರನ್ನು ನೆನೆದು ಮೊಂಬತ್ತಿ ಹಚ್ಚುವ ಮುನ್ನ ಒಕ್ಕೊರಲಿನಿಂದ ಕೂಗಿ ಹೇಳಬೇಕಿದೆ

► UAPA ರದ್ದಾಗಲಿ.

► ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾದ ಎಲ್ಲರೂ ಬೇಷರತ್ ಬಿಡುಗಡೆಯಾಗಲಿ.

► ಫಾದರ್ ಸ್ಟಾನ್ ಸ್ವಾಮಿಯವರಿಗೆ ಸೂಕ್ತ ವೈದ್ಯೋಪಚಾರ ನೀಡದ ಅಧಿಕಾರಿಗಳ ಬಂಧನವಾಗಲಿ.

► ಸುಳ್ಳು ಕೇಸುಗಳನ್ನು ಹೇರುವ ಸರಕಾರಿ ಅಧಿಕಾರಿಗಳನ್ನು ಬಂಧಿಸಿ ಮೊಕದ್ದಮೆ ಹೂಡಿ.

► ಭೀಮಾ ಕೋರೆಗಾಂವ್‌ನಲ್ಲಿ ಹಿಂಸಾಚಾರ ನಡೆಸಿದ ಮೋದಿಯ ಆಪ್ತರಾದ ಸಾಂಭಾಜಿ ಭಿಡೆ ಮತ್ತು ಮಿಲಿಂದ್ ಏಕಬೋಟೆಗಳನ್ನೂ ಕೂಡಲೇ ಬಂಧಿಸಿ.

►  ಜಾರ್ಖಂಡ್- ಛತೀಸ್‌ಗಡ್‌ಗಳನ್ನೂ ಒಳಗೊಂಡಂತೆ ಈ ದೇಶದ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾರ್ಪೊರೇಟ್ ಲೂಟಿ ನಿಲ್ಲಲೇಬೇಕು.

► ಅರಣ್ಯ ಆದಿವಾಸಿಗಳದ್ದು .. ಕಾರ್ಪೊರೇಟ್ ಕಂಪೆನಿಗಳದ್ದಲ್ಲ.

► ಆದಿವಾಸಿಗಳ ಜಲ್-ಜಂಗಲ್-ಜಮೀನ್-ಅಧಿಕಾರ್ ಗಳಿಗಾಗಿ ಹೋರಾಡೋಣ.

ಈಗಲಾದರೂ ಒಂದುಗೂಡೋಣ ...

ಒಕ್ಕೊರಲಿಂದ ದನಿ ಎತ್ತೋಣ ...

ಸ್ಟಾನ್ ಸ್ವಾಮಿಯವರಿಗೆ ನಿಜವಾದ ನಮನ ಸಲ್ಲಿಸೋಣ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News