ಬೆಂಗಳೂರು:`ಪಾಸಿಟಿವಿಟಿ ಪ್ರಮಾಣ ಹೆಚ್ಚಾದರೆ' ಮಾತ್ರ ಲಾಕ್‍ಡೌನ್: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

Update: 2021-08-15 12:30 GMT

ಬೆಂಗಳೂರು, ಆ. 15: `ರಾಜಧಾನಿ ಬೆಂಗಳೂರು ನಗರದಲ್ಲಿ ಕೋವಿಡ್ ಸಂಬಂಧ ಪಾಸಿಟಿವಿಟಿ ಪ್ರಮಾಣ ಶೇಕಡಾ 2ರಷ್ಟು ಹೆಚ್ಚಾದರೆ ಮಾತ್ರ, ಲಾಕ್‍ಡೌನ್ ಜಾರಿಗೊಳಿಸುವ ಸಾಧ್ಯತೆ ಉಂಟಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

ರವಿವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ 75ನೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸದ್ಯಕ್ಕೆ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.0.6ರಷ್ಟು ಮಾತ್ರ ಇದೆ. ಹೀಗಾಗಿ, ನಾವು ಮಾರ್ಗಸೂಚನೆಗಳನ್ನು ಪಾಲನೆ ಮಾಡಿಕೊಂಡು ಸಾಗಿದರೆ ಯಾವುದೇ ಕಠಿಣ ನಿರ್ಬಂಧಗಳು ಜಾರಿಗೊಳಿಸುವ ಅಗತ್ಯವಿಲ್ಲ. ಒಂದು ವೇಳೆ ಈ ಪಾಸಿಟಿವಿಟಿ ಪ್ರಮಾಣ ಶೇ.2ರಷ್ಟು ಏರಿಕೆಯಾದರೆ, ಲಾಕ್‍ಡೌನ್ ನಂತಹ ಕಠಿಣ ಕ್ರಮ ಅಗತ್ಯವಿದೆ ಎಂದು ಹೇಳಿದರು.

`ಮುಂದಿನ ದಿನಗಳಲ್ಲಿ ಮೊಹರ್ರಂ, ಗಣೇಶೋತ್ಸವ, ವರಲಕ್ಷ್ಮಿ ಹಬ್ಬ ಸೇರಿದಂತೆ ಅನೇಕ ಕಾರ್ಯಕ್ರಮಗಳು ಬರಲಿವೆ. ಆದರೆ, ಜನರು ಸುರಕ್ಷಿತಾ ಅಂತರ, ಮಾಸ್ಕ್ ಧರಿಸುವಿಕೆ ಕೈಬಿಟ್ಟರೆ, ಕೋವಿಡ್ ಹರಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಎಚ್ಚರವಹಿಸಬೇಕು ಎಂದು ಗುಪ್ತ ತಾಕೀತು ಮಾಡಿದರು.

ಇದೇ ವೇಳೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೋವಿಡ್ ಸಂಕಷ್ಟ ಕಾಲದಲ್ಲಿ ಹಗಲು ರಾತ್ರಿ ಎನ್ನದೆ ಕೆಲಸ ನಿರ್ವಹಿಸಿರುವ ವಿವಿಧ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ವೈದ್ಯರು ಹಾಗೂ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ಪಾಲಿಕೆ ಆಡಳಿತಗಾರ ರಾಕೇಶ್ ಸಿಂಗ್ ಸನ್ಮಾನ ಮಾಡಿದರು.

ಬಿಬಿಎಂಪಿ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ಮನೋಜ್ ಜೈನ್, ಬಸವರಾಜ್, ಡಿ.ರಂದೀಪ್, ದಯಾನಂದ್, ರೆಡ್ಡಿ ಶಂಕರ ಬಾಬು, ರವೀಂದ್ರ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News