ಒಲಿಂಪಿಕ್ಸ್ ಸ್ಪರ್ಧಿಗಳಿಗೆ ತಾವೇ ಅಡುಗೆ ಮಾಡಿ ಔತಣಕೂಟದಲ್ಲಿ ಉಣಬಡಿಸಿದ ಪಂಜಾಬ್ ಸಿಎಂಗೆ ನೀರಜ್ ಚೋಪ್ರಾ ಶ್ಲಾಘನೆ

Update: 2021-09-09 06:50 GMT

ಚಂಡೀಗಢ: ಒಲಿಂಪಿಕ್ಸ್ ಪದಕ ವಿಜೇತರು ಹಾಗೂ ಸ್ಪರ್ಧಿಗಳಿಗೆ ಔತಣಕೂಟ ಏರ್ಪಡಿಸಿದ್ದಕ್ಕಾಗಿ ಹಾಗೂ ಕ್ರೀಡಾಳುಗಳಿಗೆ ಅತ್ಯುನ್ನತ ಗೌರವ ತೋರಿಸಿದ್ದಕ್ಕಾಗಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

"ಯಾವುದೇ ಮುಖ್ಯಮಂತ್ರಿಯೊಬ್ಬರು ಕ್ರೀಡಾಳುಗಳಿಗಾಗಿ ಇಷ್ಟೊಂದು ಸಮಯವನ್ನು ಮೀಸಲಿರಿಸಿರುವುದನ್ನು ಕಂಡು ನನಗೆ ತುಂಬಾ ಖುಷಿಯಾಗಿದೆ. ಅವರು ಕ್ರೀಡೆ ಮತ್ತು ಕ್ರೀಡಾಳುಗಳನ್ನು ಎಷ್ಟು ಪ್ರೀತಿಸುತ್ತಾರೆಂಬುದನ್ನು ಇದು ಸೂಚಿಸುತ್ತದೆ. ಇಷ್ಟೊಂದು ಗೌರವ ನೀಡಿದ್ದಕ್ಕಾಗಿ ಅವರಿಗೆ ಬಹಳಷ್ಟು ಧನ್ಯವಾದಗಳು,'' ಎಂದು ಮುಖ್ಯಮಂತ್ರಿಯ ಮೊಹಾಲಿ ಫಾರ್ಮ್ ಹೌಸ್‍ನಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಭಾಗವಹಿಸಿದ ನಂತರ ಚಂಡೀಗಢದಲ್ಲಿ ಚೋಪ್ರಾ ಅವರು ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದರು.

ಬುಧವಾರ ಮುಖ್ಯಮಂತ್ರಿ ತಾವೇ ಖಾದ್ಯಗಳನ್ನು ಸಿದ್ಧಪಡಿಸಿ ಖುದ್ದಾಗಿ ಅತಿಥಿಗಳಿಗೆ ಔತಣಕೂಟದಲ್ಲಿ ಉಣಬಡಿಸಿದ್ದರು.

"ನಾನು ಬೆಳಿಗ್ಗೆ 11 ಗಂಟೆಗೆ ಪ್ರಾರಂಭಿಸಿದ್ದೆ. ಸಂಜೆ 5 ಗಂಟೆಯೊಳಗಾಗಿ ಎಲ್ಲವೂ ಸಿದ್ಧವಾಗಿತ್ತು ನಂತರ ಕೆಲವೊಂದು ಅಂತಿಮ ಸ್ಪರ್ಶ ಬಾಕಿಯಿತ್ತು. ಪ್ರತಿ ಕ್ಷಣವನ್ನೂ ಆನಂದಿಸಿದೆ,'' ಎಂದು ಅಮರಿಂದರ್ ಸಿಂಗ್ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

"ಅವರು (ಕ್ರೀಡಾಳುಗಳು) ನಮಗೆ ಖ್ಯಾತಿ ತರಲು ಎಷ್ಟೊಂದು ಶ್ರಮವಹಿಸುತ್ತಾರೆ, ಅದಕ್ಕೆ ಹೋಲಿಸಿದಾಗ ನಾನು ಮಾಡಿದ್ದು ಏನೇನೂ ಅಲ್ಲ,'' ಎಂದರು.

ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ಹೊರತಾಗಿ ಒಲಿಂಪಿಕ್ಸ್ ಕಂಚು ವಿಜೇತ ಹಾಕಿ ತಾರೆಯರಾದ ಮನಪ್ರೀತ್ ಸಿಂಗ್ , ಹರ್ಮನ್‍ಪ್ರೀತ್ ಸಿಂಗ್ , ಮನದೀಪ್ ಸಿಂಗ್,  ಹರ್ದಿಕ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸಂಶೇರ್ ಸಿಂಗ್, ದಿಲ್‍ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್, ವರುಣ್ ಕುಮಾರ್ ಹಾಗೂ ಸಿಮ್ರನ್‍ಜಿತ್ ಸಿಂಗ್ ಔತಣಕೂಟದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News