ಹಿಂದಿ ರಾಷ್ಟ್ರಭಾಷೆಯಲ್ಲ

Update: 2021-09-13 19:30 GMT

ಮೊದಲನೆಯದಾಗಿ ನಮ್ಮ ದೇಶದ ಸಂವಿಧಾನದಲ್ಲಿ ರಾಷ್ಟ್ರಭಾಷೆಯೆಂಬ ಪರಿಕಲ್ಪನೆಯೇ ಇಲ್ಲ. ಏಕೆಂದರೆ ಅಖಂಡ ಭಾರತದ ವಿಭಿನ್ನ ಜನಜೀವನದಲ್ಲಿ ಹಾಗೂ ನಾಗರಿಕತೆಯಲ್ಲಿ ಹಲವು ಸಾಮ್ಯತೆಗಳಿರುವುದು ನಿಜ. ಆದರೆ ಒಂದು ಆಧುನಿಕ ಅರ್ಥದಲ್ಲಿ ಭಾರತವು ಎಂದಿಗೂ ಒಂದು ರಾಷ್ಟ್ರೀಯತೆಯೂ ಆಗಿರಲಿಲ್ಲ. ರಾಷ್ಟ್ರವೂ ಆಗಿರಲಿಲ್ಲ. ಆದ್ದರಿಂದಲೇ ಇಡೀ ಭಾರತಕ್ಕೆ ಒಂದು ಎಂಬ ಯಾವ ರಾಷ್ಟ್ರಭಾಷೆಯೂ ವಿಕಸಿತಗೊಳ್ಳಲಿಲ್ಲ. ಹಾಗೆ ನೋಡಿದರೆ ಭಾರತ ಎಂಬ ಈ ಉಪಖಂಡದಲ್ಲಿ ಕನ್ನಡ, ತಮಿಳು, ಬಂಗಾಳಿ, ತೆಲುಗು, ಮರಾಠಿಯಂತಹ ಭಾಷೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೇ ಹೊರತು ಹಿಂದಿಗಲ್ಲ. ವಾಸ್ತವವಾಗಿ ಈಗ ನಾವು ಬಳಸುತ್ತಿರುವ ದೇವನಾಗರಿ ಲಿಪಿಯ ಮತ್ತು ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿಗೆ ಇರುವುದು ಕೇವಲ 120 ವರ್ಷಗಳ ಇತಿಹಾಸ ಮಾತ್ರ.



‘‘ವಿವಿಧ ಭಾಷೆಗಳುಳ್ಳ ಭಾರತವು ವಿಶ್ವಮಾನ್ಯ ಸ್ಥಾನ ಪಡೆಯಬೇಕಾದರೆ ಒಂದೇ ಭಾಷೆಯ ಅಗತ್ಯವಿದೆ. ಈ ದೇಶದಲ್ಲಿ ಅತಿ ಹೆಚ್ಚಿನ ಜನ ಹಿಂದಿ ಭಾಷೆಯನ್ನು ಮಾತನಾಡುವುದರಿಂದ ಮತ್ತು ಅದಕ್ಕೆ ದೇಶವನ್ನು ಒಂದುಗೂಡಿಸುವ ಶಕ್ತಿ ಇರುವುದರಿಂದ ದೇಶದ ಜನರು ತಮ್ಮ ಮಾತೃಭಾಷೆಯ ಜೊತೆಜೊತೆಗೆ ಹಿಂದಿಯನ್ನು ಬಳಸಬೇಕು. ಹೀಗೆ ಮಾಡಿದಲ್ಲಿ 2022ರ ಹೊತ್ತಿಗೆ ಹಿಂದಿಗೆ ಜಗತ್ತಿನಲ್ಲಿ ಚಿರಸ್ಥಾಯಿಯಾದ ಸ್ಥಾನ ದಕ್ಕುತ್ತದೆ’’ ಇದು ಪ್ರತಿ ಸೆಪ್ಟಂಬರ್ 14 ರಂದು ‘ಹಿಂದಿ ದಿವಸ’ದ ಹೆಸರಿನಲ್ಲಿ ಕೇಂದ್ರದ ಬಿಜೆಪಿ ಸರಕಾರ ಹಿಂದಿಗಿಂತ ಪ್ರಾಚೀನ ಹಾಗೂ ಬಹುಸಂಖ್ಯಾತವಾದ ಭಾರತದ ಇನ್ನಿತರ ರಾಷ್ಟ್ರೀಯ ಭಾಷೆಗಳು ಮತ್ತು ರಾಷ್ಟ್ರೀಯತೆಗಳೂ ಆದ ಕನ್ನಡ, ತೆಲುಗು, ತಮಿಳು, ಮಳಯಾಳಂ, ಮರಾಠಿ, ಒಡಿಯಾ, ಬಂಗಾಳಿ, ಅಸ್ಸಾಮಿ, ಮಣಿಪುರಿ, ಕಾಶ್ಮೀರಿ, ಪಂಜಾಬಿ, ಮೈಥಿಲಿ, ಮಗಧಿಗಳ ಮೇಲೆ ನಡೆಸುವ ಯೋಜಿತ ಹಿಂದುತ್ವ ದಾಳಿ. ಇದರ ವಿರುದ್ಧ ಸಕಾರಣವಾಗಿ ಕರ್ನಾಟಕದಲ್ಲಿ ಹಾಗೂ ದೇಶಾದ್ಯಂತ ಪ್ರತಿರೋಧ ವ್ಯಕ್ತವಾಗುತ್ತಿದೆ.

ಹಾಗೆ ನೋಡಿದರೆ, ಈ ನಮ್ಮ ಬಹುಭಾಷಿಕ ಭಾರತದ ಮೇಲೆ ಹಿಂದಿಯನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೇರುವ ಹುನ್ನಾರಗಳನ್ನು ಬಿಜೆಪಿ ಸರಕಾರ ನಿರಂತರವಾಗಿ ಮಾಡಿಕೊಂಡೇ ಬರುತ್ತಿದೆ. ಎರಡನೇ ಬಾರಿ ಅಧಿಕಾರಕ್ಕೆ ಏರಿದ ತರುಣದಲ್ಲೇ ಅದು ಮುಂದಿಟ್ಟ ‘ನವ ಶಿಕ್ಷಣ ನೀತಿ’ ಕರಡಿನಲ್ಲಿ ಹಿಂದಿಯೇತರ ರಾಜ್ಯದ ಮಕ್ಕಳು ಹಿಂದಿಯನ್ನು ಆರನೇ ತರಗತಿಯಿಂದ ಕಡ್ಡಾಯವಾಗಿ ಕಲಿಯಬೇಕೆಂಬ ಪ್ರಸ್ತಾಪವನ್ನು ಮಾಡಿತ್ತು. ಆದರೆ ಅದರ ವಿರುದ್ಧ ದಕ್ಷಿಣ ಹಾಗೂ ಪೂರ್ವ ಭಾರತದಲ್ಲಿ ಭುಗಿಲೆದ್ದ ಬಂಡಾಯದ ಕಾರಣದಿಂದಾಗಿ ಆ ಪ್ರಸ್ತಾಪವನ್ನು ಕರಡಿನಿಂದ ಹಿಂದೆೆಗೆದುಕೊಂಡರೂ ಅಂತಿಮ ನೀತಿಯಲ್ಲಿ ಸಂಸ್ಕೃತ ಮತ್ತು ಹಿಂದಿಯನ್ನು ಕಲಿಯುವ ಅನಿವಾರ್ಯ ಸೃಷ್ಟಿಸಿದೆ. ಅದೇ ರೀತಿ 2018ರಲ್ಲಿ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಹಿಂದಿಯನ್ನೂ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಲು 400 ಕೋಟಿ ರೂ.ಗಳ ಅಭಿಯಾನವೊಂದನ್ನು ಬಿಜೆಪಿ ಸರಕಾರ ಪ್ರಾರಂಭಿಸಿತ್ತು. ಜಗತ್ತಿನಲ್ಲಿ ಭಾರತವು ಎರಡನೇ ಅತಿದೊಡ್ಡ ಜನಸಂಖ್ಯೆಯುಳ್ಳ ದೇಶವಾಗಿದ್ದು, ಅವರೆಲ್ಲರ ಭಾಷೆ ಹಿಂದಿಯೇ ಆಗಿದೆಯೆಂದು ಬಿಜೆಪಿ ಇಡೀ ಜಗತ್ತಿನ ಎದುರು ಪ್ರತಿಪಾದಿಸಲು ಮುಂದಾಗಿತ್ತು. ಆದರೆ ಆಗಲೂ ದೊಡ್ಡ ಪ್ರತಿರೋಧ ಎದುರಾಗಿದ್ದರಿಂದ ಆ ಪ್ರಯತ್ನದಿಂದ ಹಿಂದೆ ಸರಿದಿತ್ತು. ಹಿಂದಿಯನ್ನು ಹಿಂದಿಯೇತರರ ಮೇಲೆ ಹೇರುವ ನಿರಂತರ ಪ್ರಯತ್ನಗಳಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಪಟಾಲಂ ದೇಶದ ಮುಂದೆ ಹಲವು ದೊಡ್ಡ ಸುಳ್ಳುಗಳನ್ನು ಹೇಳುತ್ತಿದೆ. ಅವುಗಳಲ್ಲಿ ಅ) ಹಿಂದಿ ಮಾತ್ರ ರಾಷ್ಟ್ರ ಭಾಷೆ. ಆ) ಹಿಂದಿ ದೇಶದಲ್ಲಿ ಅತಿ ಹೆಚ್ಚು ಜನರು ಆಡುವ ಭಾಷೆ ಇ) ಒಂದು ದೇಶಕ್ಕೆ ಒಂದೇ ಭಾಷೆ ಇದ್ದರೆ ವಿಶ್ವಮಾನ್ಯವಾಗಬಹುದು..ಇತ್ಯಾದಿ. ಪರೋಕ್ಷವಾಗಿ ಹಿಂದಿ ಹೇರಿಕೆಯನ್ನು ಒಪ್ಪಿಸುವ ಈ ಕುತಂತ್ರದ ಜೊತೆಜೊತೆಗೆ ‘‘ಹಿಂದಿಯನ್ನು ಎರಡನೇ ಭಾಷೆಯಾಗಿಯಾದರೂ ಕಲಿಯಬೇಕೆಂದು’’ ಮತ್ತೊಂದು ಪ್ಲಾನ್ ಬಿ ಯೋಜನೆಯನ್ನು ದೇಶದ ಮುಂದಿಡುತ್ತಿದೆ. ಆದರೆ ಇವೆಲ್ಲವೂ ಹಸಿಸುಳ್ಳು ಮತ್ತು ಅರ್ಧಸತ್ಯಗಳಿಂದ ಕೂಡಿದ ಪ್ರಚಾರವಾಗಿದೆ ಹಾಗೂ ಅವೈಜ್ಞಾನಿಕ, ಅಪ್ರಜಾತಾಂತ್ರಿಕ ಮತ್ತು ವಿದ್ಯಾರ್ಥಿ-ಶಿಕ್ಷಣ ವಿರೋಧಿ ಪ್ರಸ್ತಾಪಗಳೂ ಆಗಿವೆ.

ಹಿಂದಿ ರಾಷ್ಟ್ರಭಾಷೆಯಲ್ಲ 

ಮೊದಲನೆಯದಾಗಿ ನಮ್ಮ ದೇಶದ ಸಂವಿಧಾನದಲ್ಲಿ ರಾಷ್ಟ್ರಭಾಷೆಯೆಂಬ ಪರಿಕಲ್ಪನೆಯೇ ಇಲ್ಲ. ಏಕೆಂದರೆ ಅಖಂಡ ಭಾರತದ ವಿಭಿನ್ನ ಜನಜೀವನದಲ್ಲಿ ಹಾಗೂ ನಾಗರಿಕತೆಯಲ್ಲಿ ಹಲವು ಸಾಮ್ಯತೆಗಳಿರುವುದು ನಿಜ. ಆದರೆ ಒಂದು ಆಧುನಿಕ ಅರ್ಥದಲ್ಲಿ ಭಾರತವು ಎಂದಿಗೂ ಒಂದು ರಾಷ್ಟ್ರೀಯತೆಯೂ ಆಗಿರಲಿಲ್ಲ. ರಾಷ್ಟ್ರವೂ ಆಗಿರಲಿಲ್ಲ. ಆದ್ದರಿಂದಲೇ ಇಡೀ ಭಾರತಕ್ಕೆ ಒಂದು ಎಂಬ ಯಾವ ರಾಷ್ಟ್ರಭಾಷೆಯೂ ವಿಕಸಿತಗೊಳ್ಳಲಿಲ್ಲ. ಹಾಗೆ ನೋಡಿದರೆ ಭಾರತ ಎಂಬ ಈ ಉಪಖಂಡದಲ್ಲಿ ಕನ್ನಡ, ತಮಿಳು, ಬಂಗಾಳಿ, ತೆಲುಗು, ಮರಾಠಿಯಂತಹ ಭಾಷೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೇ ಹೊರತು ಹಿಂದಿಗಲ್ಲ. ವಾಸ್ತವವಾಗಿ ಈಗ ನಾವು ಬಳಸುತ್ತಿರುವ ದೇವನಾಗರಿ ಲಿಪಿಯ ಮತ್ತು ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿಗೆ ಇರುವುದು ಕೇವಲ 120 ವರ್ಷಗಳ ಇತಿಹಾಸ ಮಾತ್ರ. ಹಾಗೆಯೇ ತಮಿಳು, ತೆಲುಗು, ಬಂಗಾಳಿ ಭಾಷೆಯಾಧಾರಿತ ರಾಷ್ಟ್ರೀಯತೆಗಳು ವಿಕಸನಗೊಂಡು ನೂರಾರು ವರ್ಷಗಳಾಗಿವೆ. ಆದರೆ ಭಾರತ ಎಂಬ ರಾಷ್ಟ್ರದ ಪರಿಕಲ್ಪನೆ ಉಗಮಗೊಂಡಿದ್ದೇ ಬ್ರಿಟಿಷ್ ವಿರೋಧಿ ಹೋರಾಟದ ಪ್ರಕ್ರಿಯೆಯಲ್ಲಿ. ಅಂದರೆ ಕೇವಲ 200 ವರ್ಷಗಳಿಂದೀಚೆಗೆ. ಹೀಗಾಗಿ ಕರ್ನಾಟಕವು ಭಾರತ ಜನನಿಯ ತನುಜಾತೆಯಲ್ಲ. ಬದಲಿಗೆ ಭಾರತವೇ ಕರ್ನಾಟಕವನ್ನೂ ಒಳಗೊಂಡಂತೆ ಈ ಉಪಖಂಡದ ಹಲವಾರು ರಾಷ್ಟ್ರೀಯತೆಗಳು ಒಟ್ಟುಗೂಡಿ ಜನ್ಮವಿತ್ತ ರಾಷ್ಟ್ರವಾಗಿದೆ. ಇಂದು ನಮ್ಮ ಸಂವಿಧಾನದಲ್ಲಿ ಬಳಸುತ್ತಿರುವ ಹಿಂದಿ ಭಾಷೆಯ ಹುಟ್ಟು ಸಹ ಭಾರತವನ್ನು ಆವರಿಸಿಕೊಂಡ ಕೋಮುವಾದಿ ರಾಜಕಾರಣದ ಫಲಿತಾಂಶವೇ ಆಗಿದೆ. ಹಿಂದಿಯ ಮೂಲ ಆಗಿನ ಮೊಘಲ್ ಸಂಸ್ಥಾನದ ರಾಜಧಾನಿಯಾಗಿದ್ದ ದಿಲ್ಲಿಯಲ್ಲಿ ಬೀಡುಬಿಟ್ಟಿದ ಸೈನಿಕರು ಮತ್ತು ಜನಸಾಮಾನ್ಯರು ಮಾತನಾಡುತ್ತಿದ್ದ ಖರಿಬೋಲಿ ಅಥವಾ ಹಿಂದೂಸ್ಥಾನಿಯಾಗಿದೆ. ಖರಿಬೋಲಿ ಅಂದರೆ ಕಟ್ಟರ್ ಭಾಷೆ ಎಂದರ್ಥ.

ಇದು ಒಂದು ರೀತಿಯಲ್ಲಿ ಪರ್ಶಿಯನ್ ಹಾಗೂ ಸ್ಥಳೀಯ ಭಾಷೆಗಳ ಮಿಶ್ರಣವೇ ಆಗಿತ್ತು. ಆದರೆ ದೇಶದ ಕೋಮುವಾದಿ ರಾಜಕಾರಣದ ರಾಜಕೀಯ ಪ್ರಭಾವ ಹೆಚ್ಚಾಗುತ್ತಿದ್ದಂತೆ ಖರಿಬೋಲಿಯ ಪರ್ಷಿಯನೀಕರಣ ಹೆಚ್ಚಾಗಿ ಉರ್ದು ಭಾಷೆ ಹುಟ್ಟಿಕೊಂಡು ಪಾಕಿಸ್ತಾನದ ಆಡಳಿತ ಭಾಷೆಯಾಯಿತು. ಹಾಗೆಯೇ ಖರಿಬೋಲಿಯ ಸಂಸ್ಕೃತ ಭಾಶೀಕರಣದ ಮೂಲಕ ಹಿಂದಿ ಹುಟ್ಟುಕೊಂಡಿತು. ಹಾಗೆ ನೋಡಿದರೆ ಸ್ವಾತಂತ್ರ್ಯಾನಂತರದ ಇತ್ತೀಚಿನ ದಶಕಗಳವರೆಗೂ ಹಿಂದಿಯ ಖ್ಯಾತ ಬರಹಗಾರರೆಲ್ಲಾ ಉರ್ದು ವಿದ್ವಾಂಸರೂ ಆಗಿರುತ್ತಿದ್ದರು. ಆದರೆ ಭಾರತದ ಕೋಮುವಾದಿ ರಾಜಕಾರಣ ಭಾಷಿಕ ವಿಶ್ವಕ್ಕೂ ಹರಡಿ ಭಾರತದ ಗುರುತಿಗೆ ಒಂದು ಭಾಷೆಯ ಅಗತ್ಯವಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿತು. ಈ ಐತಿಹಾಸಿಕ ಕಾರಣದಿಂದಾಗಿಯೇ ಸಂವಿಧಾನ ರಚನಾ ಸಭೆಯಲ್ಲೂ ಈ ಪ್ರಶ್ನೆ ಗಂಭೀರವಾಗಿ ಚರ್ಚೆಯಾಯಿತು. ಇದರ ಬಗ್ಗೆ ಅಧ್ಯಯನ ಮಾಡಿ ಸಲಹೆ ಕೊಡಲು ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಕೆ.ಎಂ. ಮುನ್ಷಿಯವರ ಸಮಿತಿಯೊಂದನ್ನು ರಚಿಸಲಾಗಿತ್ತು. ಆ ಸಮಿತಿಯು ಭಾರತದಲ್ಲಿ ಯಾವ ಒಂದು ಭಾಷೆಯೂ ಅದರಲ್ಲೂ ಹಿಂದಿ ಭಾಷೆಯು ರಾಷ್ಟ್ರ ಭಾಷೆಯಾಗುವ ಅಗತ್ಯವಿಲ್ಲ, ಸಾಧ್ಯವೂ ಇಲ್ಲ ಎಂದು ವರದಿ ಕೊಟ್ಟಿತು.

ಈ ಎಲ್ಲಾ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನವು ಹಿಂದಿ ಮತ್ತು ಇಂಗ್ಲಿಷನ್ನು ರಾಜ್‌ಭಾಷೆಯನ್ನಾಗಿ ಅಂಗೀಕರಿಸಿತು. ರಾಷ್ಟ್ರಭಾಷೆಯಾಗಿ ಅಲ್ಲ. ಸಂವಿಧಾನದ ಆರ್ಟಿಕಲ್ 343ರಿಂದ 351ರವರೆಗಿನ ವಿಧಿಗಳು ಇದನ್ನು ಸ್ಪಷ್ಟಪಡಿಸುತ್ತವೆೆ. ಅದು ‘‘ದೇವನಾಗರಿ ಲಿಪಿಯಲ್ಲಿ ಬರೆಯಲ್ಪಡುವ ಹಿಂದಿಯನ್ನು ಸರಕಾರದ ಅಧಿಕೃತ ಭಾಷೆಯನ್ನಾಗಿಯೂ, ಮುಂದಿನ 15 ವರ್ಷಗಳವರೆಗೆ ಇಂಗ್ಲಿಷನ್ನು ಸಹ ಹಿಂದಿಯ ಜೊತೆಗೆ ಅಧಿಕೃತ ಭಾಷೆಯನ್ನಾಗಿ ಮುಂದುವರಿಸಬೇಕು’’ ಎಂದು ಸ್ಪಷ್ಟಪಡಿಸುತ್ತದೆ. 1963ರ ಅಧಿಕೃತ ಭಾಷಾ ಮಸೂದೆಯು ಜಾರಿಯಾದ ನಂತರ ಇಂಗ್ಲಿಷನ್ನೂ ಕಾಲಾವಧಿಯ ಮಿತಿಯಲ್ಲದೆ ಅಧಿಕೃತ ಭಾಷೆಯಾಗಿ ಮುಂದುವರೆಸಲು ಆದೇಶಿಸಲಾಗಿದೆ. ಅಷ್ಟು ಮಾತ್ರವಲ್ಲ. ಆರ್ಟಿಕಲ್ 348ರ ಪ್ರಕಾರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನ ವ್ಯವಹಾರದ ಅಧಿಕೃತ ಭಾಷೆ ಇಂಗ್ಲಿಷೇ ಆಗಿದೆ. ಅಲ್ಲದೆ ಎಲ್ಲಾ ಶಾಸನಸಭೆಗಳಲ್ಲೂ ಆಯಾ ರಾಜ್ಯಗಳ ಮಾತೃಭಾಷೆಯೊಂದಿಗೆ ಇಂಗ್ಲಿಷಿನಲ್ಲೂ ಮಸೂದೆಯನ್ನು ಮಂಡಿಸಬೇಕಿದೆ. ಹಾಗೂ ಕೇಂದ್ರದ ಸಂಸತ್ತಿನಲ್ಲಿ ಮಸೂದೆಗಳು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಂಡಿಸಬೇಕಾಗುತ್ತದೆ. ಆದರೆ ಮಸೂದೆಯ ಮೂಲ ಅಧಿಕೃತ ರೂಪ ಇಂಗ್ಲಿಷೇ ಆಗಿದ್ದು ಹಿಂದಿ ಅದರ ಅನುವಾದವಾಗಿರುತ್ತದೆ. ಹೀಗೆ ಸಾರಾಂಶದಲ್ಲಿ ಹಿಂದಿಯು ಸರಕಾರಗಳ ನಡುವಿನ ಮತ್ತು ಸರಕಾರ ಹಾಗೂ ಜನರ ನಡುವಿನ ಸಂಪರ್ಕದ ಅಧಿಕೃತ ಭಾಷೆಯಾಗಿದೆಯೇ ವಿನಾ ಸಂವಿಧಾನದಲ್ಲಿ ಎಲ್ಲೂ ಅದನ್ನು ರಾಷ್ಟ್ರಭಾಷೆಯೆಂದು ಹೆಚ್ಚುಗಾರಿಕೆಯನ್ನು ನೀಡಿಲ್ಲ.

ಗುಜರಾತ್ ಹೈಕೋರ್ಟಿನ ತೀರ್ಮಾನ

ಅಷ್ಟು ಮಾತ್ರವಲ್ಲ. ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಿ ಎಲ್ಲಾ ಮಾರಾಟದ ಸರಕುಗಳ ಮೇಲೆ ಕಡ್ಡಾಯವಾಗಿ ಹಿಂದಿಯಲ್ಲಿ ಅದರ ವಿವರಗಳನ್ನು ನಮೂದಿಸಬೇಕೆಂದು ಆಗ್ರಹಿಸಿ 2010ರಲ್ಲಿ ಸುರೇಶ್ ಕಚ್ಚಡಿಯಾ ಎಂಬವರು ಗುಜರಾತ್‌ನ ಹೈಕೋರ್ಟ್‌ನಲ್ಲಿ ದಾವೆಯೊಂದನ್ನು ಸಲ್ಲಿಸಿದ್ದರು. ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ದ್ವಿಸದಸ್ಯ ಪೀಠವು ಹಿಂದಿಯು ಭಾರತದ ಒಂದು ಭಾಷೆಯೇ ಹೊರತು ರಾಷ್ಟ್ರಭಾಷೆಯಲ್ಲವೆಂದೂ ಹಾಗೂ ರಾಷ್ಟ್ರಭಾಷೆಯೆಂಬ ವರ್ಗೀಕರಣವೇ ಸಂವಿಧಾನದಲ್ಲಿಲ್ಲವೆಂದು ಸ್ಪಷ್ಟವಾದ ತೀರ್ಮಾನ ನೀಡಿದೆ. ಇದಲ್ಲದೆ ಸಂವಿಧಾನದ 8ನೇ ಶೆಡ್ಯೂಲಿನಲ್ಲಿ ಕನ್ನಡ, ತೆಲುಗು, ತಮಿಳು, ಮರಾಠಿ, ಬಂಗಾಳಿ, ಅಸ್ಸಾಮಿ ಇನ್ನಿತರ 22 ಭಾಷೆಗಳನ್ನು ಮಾನ್ಯ ಮಾಡಲಾಗಿದೆ. ಅದರಲ್ಲಿ ಹಿಂದಿ ಭಾಷೆ ಕೂಡ ಇಪ್ಪತ್ತೆರಡರಲ್ಲಿ ಒಂದು ಅಷ್ಟೆ. ಈ ಎಲ್ಲಾ ಭಾಷೆಗಳನ್ನು ಅಭಿವೃದ್ಧಿ ಮಾಡಲು ಸರಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಸಂವಿಧಾನವು ನಿರ್ದೇಶನವನ್ನೂ ನೀಡಿದೆ. ಹೀಗೆ ರಾಜ್ ಭಾಷೆ ಮತ್ತು ಶೆಡ್ಯೂಲ್ 8ರ ಭಾಷೆ ಎಂಬ ಎರಡು ವರ್ಗೀಕರಣಗಳನ್ನು ಬಿಟ್ಟರೆ ನಮ್ಮ ಸಂವಿಧಾನದಲ್ಲೆಲ್ಲೂ ರಾಷ್ಟ್ರ ಭಾಷೆಯೆಂಬ ವರ್ಗೀಕರಣವಿಲ್ಲ.

ಹಿಂದಿಯು ಅತಿ ಹೆಚ್ಚು ಜನರು ಆಡುವ ಭಾಷೆಯೂ ಅಲ್ಲ

 ಹಿಂದಿಯನ್ನು ಏಕೈಕ ರಾಷ್ಟ್ರಭಾಷೆಯನ್ನಾಗಿ ಹೇರಲು ಅಮಿತ್ ಶಾ ಹಾಗೂ ಇತರ ಆರೆಸ್ಸೆಸ್ಸಿಗರೆಲ್ಲರೂ ಬಳಸುವ ಮತ್ತೊಂದು ವಾದವೆಂದರೆ ಹಿಂದಿಯನ್ನು ಭಾರತದಲ್ಲಿ ಅತಿ ಹೆಚ್ಚು ಜನ ಬಳಸುತ್ತಾರೆ ಎಂಬುದು. 2011ರ ಭಾಷಿಕ ಸೆನ್ಸಸ್‌ನಲ್ಲಿ ಹಿಂದಿ ಮಾತನಾಡುವವರ ಭಾಷೆ ಶೇ.43 ಎಂದು ತೋರಿಸಲಾಗಿರುವುದನ್ನೂ ಅವರು ಅದಕ್ಕೆ ಪುರಾವೆಯಾಗಿ ನೀಡುತ್ತಾರೆ. ಆದರೆ, ಈ ಭಾಷಾ ಸೆನ್ಸಸ್ ಮಾಡುವಾಗ ಜನರನ್ನು ಹಿಂದಿ ತಿಳಿದಿದೆಯೇ ಎಂದು ಕೇಳಲಾಗಿದೆಯೇ ವಿನಾ ಹಿಂದಿ ಮಾತೃಭಾಷೆಯೇ ಅಥವಾ ಮಾತನಾಡಬಲ್ಲರೇ ಎಂದಲ್ಲ. ಎರಡನೆಯದಾಗಿ 1950ರಲ್ಲಿ ಶೇ.20ರಷ್ಟು ಮಾತ್ರ ಹಿಂದಿ ಭಾಷಿಕರಿದ್ದದ್ದು 2011ರ ವೇಳೆಗೆ ಅದರ ಪ್ರಮಾಣ ಶೇ.43 ಆಗಿದ್ದರ ಹಿಂದೆ ದೊಡ್ಡ ಭಾಷಿಕ ವಸಾಹತು ರಾಜಕಾರಣವಿದೆ. ಉದಾಹರಣೆಗೆ, ಉತ್ತರ ಭಾರತದಲ್ಲಿ ಎಲ್ಲಾ ಕಡೆ ಹಿಂದಿಯೇ ಮಾತೃ ಭಾಷೆ ಎಂಬ ಅಭಿಪ್ರಾಯವನ್ನು ಹರಿಬಿಡಲಾಗಿದೆ. ಆದರೆ 2011ರ ಬಿಹಾರದ ಭಾಷಿಕ ಸೆನ್ಸಸ್‌ನ ವರದಿಯನ್ನೇ ಗಮನಿಸಿದರೆ ಸಾಕು. ಅದು ಎಂತಹ ರಾಜಕೀಯ ಮಿಥ್ಯೆ ಎಂಬುದು ಅರ್ಥವಾಗುತ್ತದೆ. ಬಿಹಾರದಲ್ಲಿ ಶೇ.31 ಭಾಗ ಭೋಜ್‌ಪುರಿಯನ್ನೂ, ಶೇ.25 ಭಾಗ ಮಗಹಿಯನ್ನೂ ಮಾತನಾಡುತ್ತಾರೆ. ಆದರೆ ಶೇ.21 ಭಾಗ ಮಾತ್ರ ಹಿಂದಿ ಮಾತನಾಡುತ್ತಾರೆ.


ಆದರೆ ಭೋಜ್‌ಪುರಿ ಮತ್ತು ಮಗಹಿ ಭಾಷೆಗಳು ಶೆಡ್ಯೂಲ್ 8ರಲ್ಲಿಲ್ಲ. ಆದರೆ ಭಾಷಿಕ ಸೆನ್ಸಸ್ ನಡೆಸುವಾಗ ತಮ್ಮ ತಮ್ಮ ಮಾತೃಭಾಷೆಯನ್ನು ನೋಂದಾಯಿಸುವಾಗ ಶೆಡ್ಯೂಲ್ 8ರಲ್ಲಿರುವ ಭಾಷೆಯನ್ನು ಮಾತ್ರ ದಾಖಲಿಸಲಾಗುತ್ತದೆ!. ಹೀಗಾಗಿ ಭಾಷಿಕ ಸೆನ್ಸಸ್‌ನಲ್ಲಿ ಇವರೆಲ್ಲರ ಮಾತೃಭಾಷೆಗಳೂ ಹಿಂದಿಯೆಂದೇ ನೋಂದಾಯಿತವಾಗುತ್ತದೆ.

ಶೆಡ್ಯೂಲ್ 8ರಲ್ಲಿ ಕೇವಲ 25,000 ಜನರು ಮಾತ್ರ ತಮ್ಮ ಮಾತೃಭಾಷೆಯೆಂದು ನೋಂದಾಯಿಸಿಕೊಂಡಿರುವ ಸಂಸ್ಕೃತಕ್ಕೂ ಸ್ಥಾನವಿದೆ. ಆದರೆ ತಲಾ 2 ಕೋಟಿ ಭಾಷಿಕರಿರುವ ಭೋಜ್‌ಪುರಿ ಮತ್ತು ಮಗಹಿಗಳಿಗೆ ಶೆಡ್ಯೂಲ್ 8ರಲ್ಲಿ ಸ್ಥಾನ ನೀಡಲಾಗಿಲ್ಲ. ಇತ್ತೀಚೆಗೆ ಭೋಜ್‌ಪುರಿಗೆ ಶೇಡ್ಯೂಲ್ 8ರಲ್ಲಿ ಸ್ಥಾನಮಾನ ಸಿಗಬೇಕೆಂದು ನಡೆಸಿದ ಹೋರಾಟವನ್ನು ಬಿಜೆಪಿ ವಿರೋಧಿಸಿದೆ. ಕಾರಣ ಹಿಂದಿ ಭಾಷಿಕರ ಅಧಿಕೃತ ಸಂಖ್ಯೆ ಕಡಿಮೆಯಾಗುತ್ತದೆಂದು! ಈ ಕಾರಣದಿಂದಲೇ ಬಿಹಾರ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಕೋಟ್ಯಂತರ ಜನ ಮಾತನಾಡುತ್ತಿದ್ದ ಅವಧಿ ಭಾಷೆಯೂ ಸೆನ್ಸಸ್‌ನಿಂದ ಕಣ್ಮರೆಯಾಗಿದೆ. ಅದೇರೀತಿ ಬುಂದೇಲ್‌ಖಂಡಿ, ಛತ್ತೀಸ್‌ಘರಿ, ರಾಜಸ್ಥಾನಿ, ಹರ್ಯಾಣ್ವಿ ಭಾಷೆಗಳು ಉತ್ತರ ಭಾರತದ ಕೋಟ್ಯಂತರ ಜನರ ಮಾತೃಭಾಷೆಯಾದರೂ ಅವುಗಳು ಶೆಡ್ಯೂಲ್ 8ರಲ್ಲಿ ಇಲ್ಲವಾದ್ದರಿಂದ ಅವೆಲ್ಲವೂ ಹಿಂದಿ ಎಂದೇ ನೋಂದಾಯಿತವಾಗುತ್ತವೆ. ಶೆಡ್ಯೂಲ್ 8ರಲ್ಲಿರುವ ಭಾಷೆಗಳಿಗೆ ಮಾತ್ರ ಸರಕಾರದ ಮನ್ನಣೆ ಮತ್ತು ಉತ್ತೇಜನ ಸಿಗುವುದರಿಂದ ಅವು ಸೆನ್ಸಸ್‌ನಿಂದ ಮಾತ್ರವಲ್ಲದೆ ನಿಧಾನಕ್ಕೆ ಒಂದೆರಡು ಪೀಳಿಗೆಯ ನಂತರದಲ್ಲಿ ಇತಿಹಾಸದಿಂದಲೇ ಮರೆಯಾಗುತ್ತವೆ. ಪ್ರಖ್ಯಾತ ಭಾಷಾ ಶಾಸ್ತ್ರಜ್ಞರಾದ ಗಣೇಶ್ ದೇವಿಯವರ ಪ್ರಕಾರ ಭಾರತದಲ್ಲಿ 750 ಭಾಷೆಗಳಿದ್ದು ಇಂತಹ ವಸಾಹತುಶಾಹಿ ಪ್ರಕ್ರಿಯೆಗಳಿಂದಾಗಿ ಈಗಾಗಲೇ 120 ಭಾಷೆಗಳು ಮೃತವಾಗಿವೆ. ಇದಲ್ಲದೆ ಉತ್ತರಭಾರತದ ಜನಸಂಖ್ಯಾ ಏರಿಕೆಯ ಪ್ರಮಾಣ ದಕ್ಷಿಣ ಭಾರತಕ್ಕೆ ಹೋಲಿಸಿ ನೋಡಿದಲ್ಲಿ ಹೆಚ್ಚು. ಹೀಗಾಗಿಯೂ ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಇತರ ಭಾಷಿಕರ ಸಂಖ್ಯೆ ಕಡಿಮೆಯಾಗಿ ‘‘ಹಿಂದಿ ಭಾಷಿಕರ’’ ಸಂಖ್ಯೆ ಹೆಚ್ಚಾಗಿ ನಮೂದಾಗಿಬಿಡುತ್ತದೆ. ಆದ್ದರಿಂದಲೇ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವುದರ ಹಿಂದೆ ಹಾಗೂ ಹಿಂದಿಯನ್ನು ಅತಿ ಹೆಚ್ಚು ಜನರು ಮಾತನಾಡುತ್ತಾರೆ ಎನ್ನುವ ಹಿಂದೆ ಕೋಮುವಾದಿ ಹಾಗೂ ಭಾಷಿಕ ವಸಾಹತುಶಾಹಿ ಹುನ್ನಾರಗಳಿವೆ. ಹಿಂದಿ ಎರಡನೇ ಭಾಷೆಯೂ ಆಗಲಾರದು
ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಏರತೊಡಗಿದೊಡನೆ ಅಮಿತ್ ಶಾ ಅವರು ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಬೇಕೆಂಬ ಹೊಸ ಪ್ರತಿಪಾದನೆ ಪ್ರಾರಂಭಿಸಿದ್ದಾರೆ. ಆದರೆ ಮಕ್ಕಳು ಮಾತೃಭಾಷೆಯನ್ನು ‘‘ಪಡೆದುಕೊಳ್ಳುತ್ತಾರೆ’’ (First Language Acquisition). ಆದರೆ ಎರಡನೇ ಭಾಷೆಯನ್ನು ‘‘ಕಲಿಯಬೇಕಾಗುತ್ತದೆ’’ (Second Language Learning).

ಎರಡನೇ ಭಾಷಾ ಕಲಿಕೆಯೆಂಬುದು ರಾಜಕೀಯ ಪ್ರೇರಿತವಾದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿಯುತ್ತದೆ. ಎರಡನೇ ಭಾಷಾ ಕಲಿಕೆಯು ಸಹಜ ಆಸಕ್ತಿ, ಪೂರಕ ವಾತಾವರಣ ಮತ್ತು ಬದುಕಿನ ಅಗತ್ಯವನ್ನು ಆಧರಿಸಿದ್ದರೆ ಮಾತ್ರ ಯಶಸ್ವಿಯಾಗುತ್ತದೆಂದು ಜಗತ್ತಿನಾದ್ಯಂತ ಸಾಬೀತಾಗಿದೆ. ಅಲ್ಲದೆ ಮೊದಲ ಅಥವಾ ಮಾತೃಭಾಷೆಯ ಬಲವಾದ ಬುನಾದಿಯಿಲ್ಲದೆ ಎರಡನೇ ಭಾಷಾ ಕಲಿಕೆಯೂ ಹೊರೆಯೇ ಆಗುತ್ತದೆಂಬುದು ಸಹ ಈಗಾಗಲೇ ಭಾರತದಲ್ಲೂ ರುಜುವಾತಾಗಿದೆ. ಭಾರತದ ವಸಾಹತುಶಾಹಿ ಹಿನ್ನೆಲೆ ಮತ್ತು ಇಂದಿನ ಜಾಗತೀಕರಣಗಳ ಹಿನ್ನೆಲೆಯಿಂದಾಗಿ ಇಂಗ್ಲಿಷ್ ಎರಡನೇ ಭಾಷೆಯ ಶೈಕ್ಷಣಿಕ ಪೂರ್ವಗತ್ಯಗಳನ್ನು ಪೂರೈಸುತ್ತಿದೆ. ಆ ಜಾಗದಲ್ಲಿ ಹಿಂದಿಯನ್ನು ಪರಿಚಯಿಸುವುದು ಕೃತಕ ಮಾತ್ರವಲ್ಲ ಹಿಂದಿಯೇತರ ರಾಜ್ಯದ ಮಕ್ಕಳಿಗೆ ಮತ್ತು ಜನರಿಗೆ ಮಾಡುವ ತಾರತಮ್ಯ ಹಾಗೂ ಅನ್ಯಾಯವೂ ಆಗುತ್ತದೆ. ಹೀಗಾಗಿ ಹಿಂದಿಯು ಎರಡನೇ ಭಾಷೆಯಾಗಿ ಸಲ್ಲ.

ಭಾರತಕ್ಕೆ ವಿಶ್ವಮಾನ್ಯತೆ ಹೆಚ್ಚಲು ಬೇಕಿರುವುದು ಹಿಂದಿಯೋ? ಹೆಚ್ಚು ಪ್ರಜಾತಂತ್ರವೋ?

ಭಾರತಕ್ಕೆ ವಿಶ್ವಮಾನ್ಯತೆ ಹೆಚ್ಚಬೇಕೆಂದರೂ ಒಂದೇ ಭಾಷೆಯ ಅಗತ್ಯವಿದೆಯೆಂದು ಅಮಿತ್ ಶಾ ಹೇಳಿದ್ದಾರೆ. ಆದರೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಭಾರತವು ವಿಶ್ವಗುರುವಾಗುವುದಿರಲಿ ‘‘ವಿಫಲ ಪ್ರಜಾತಂತ್ರವಾಗುತ್ತಿದೆ’’ಯೆಂದು ವಿಶ್ವಸಮುದಾಯ ಒಕ್ಕೊರಲಿಂದ ಹೇಳುತ್ತಿದೆ. ಅದಕ್ಕೆ ಭಾರತ ಸರಕಾರವೂ ಸದಸ್ಯ ರಾಷ್ಟ್ರವಾಗಿರುವ ಜಾಗತಿಕ ಪ್ರಜಾತಂತ್ರ ಅಧ್ಯಯನ ಸಂಸ್ಥೆಯು ಇತ್ತೀಚೆಗೆ ಹೊರತಂದಿರುವ ವಾರ್ಷಿಕ ವರದಿಯೇ ಸಾಕ್ಷಿ. ಅದಕ್ಕೆ ಕಾರಣ ಭಾರತದ ಜನರ ಬದುಕಿನ ಪರಿಸ್ಥಿತಿ, ನಾಗರಿಕ ಸ್ವಾತಂತ್ರ್ಯಗಳ ಮಾನದಂಡಗಳಲ್ಲಿ ಭಾರತವು ತನ್ನ ನೆರೆಹೊರೆಯ ರಾಷ್ಟ್ರಗಳಿಗಿಂತ ಮಾತ್ರವಲ್ಲ ಆಫ್ರಿಕಾದ ರಾಷ್ಟ್ರಗಳಿಗಿಂತ ಕಳೆದ ಐದು ವರ್ಷಗಳಲ್ಲಿ ಕೆಳಗಿಳಿದಿದೆ. ಅಷ್ಟು ಮಾತ್ರವಲ್ಲ ಪುಟಿನ್‌ನ ರಶ್ಯದಂತೆ, ಎರ್ದೋಗಾನ್‌ರ ಟರ್ಕಿಯಂತೆ, ಒರ್ಬಾನ್‌ನ ಹಂಗೆರೆಯಂತೆ, ಡ್ಯುಟಿರಾಟೆಯ ಫಿಲಿಪ್ಪೀನ್ಸ್ ನಂತೆ, ಬೊಲ್ಸನಾರೋನ ಬ್ರೆಝಿಲ್‌ನಂತೆ ನರೇಂದ್ರ ಮೋದಿಯವರ ಭಾರತವೂ ಸರ್ವಾಧಿಕಾರಿಯಾಗುತ್ತಿದೆಯೆಂದು ಜಾಗತಿಕ ವರದಿಗಳು ಸ್ಪಷ್ಟವಾಗಿ ಹೇಳುತ್ತಿವೆ. ಇವೆಲ್ಲಕ್ಕೂ ಬಿಜೆಪಿಯ ಹಿಂದುತ್ವವಾದಿ, ಕಾರ್ಪೊರೇಟ್ ಬಂಡವಾಳಶಾಹಿ ಪರ ನೀತಿಗಳು ಕಾರಣವೇ ಹೊರತು ಭಾರತಕ್ಕೆ ಒಂದು ರಾಷ್ಟ್ರ ಭಾಷೆ ಇರದಿರುವುದಲ್ಲ ಅಥವಾ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಬಿಟ್ಟರೆ ಇವೆಲ್ಲವೂ ಬದಲಾಗುವುದಿಲ್ಲ. ಹಿಂದಿ-ಹಿಂದೂ-ಹಿಂದುತ್ವ- ಹಿಂದೂರಾಷ್ಟ್ರದ ಹುನ್ನಾರ

ಹಿಂದಿ ರಾಷ್ಟ್ರಭಾಷೆಯೆಂಬ ಅಜೆಂಡಾ ಜೊತೆಜೊತೆಗೆ ಭಾರತಕ್ಕೆ ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಬೇಡ, ಒಂದು ದೇಶ ಒಂದು ಚುನಾವಣೆ..ಇತ್ಯಾದಿ ಅಜೆಂಡಾಗಳನ್ನು ಒಂದೊಂದಾಗಿ ಆರೆಸ್ಸೆಸ್-ಬಿಜೆಪಿ ಮುನ್ನೆಲೆಗೆ ತರುತ್ತಿದೆ. ಎರಡನೇ ಬಾರಿ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರಕಾರ ತನ್ನ ಹಿಂದಿ-ಹಿಂದೂ-ಹಿಂದೂರಾಷ್ಟ್ರದ ಅಜೆಂಡಾವನ್ನು ವೇಗಗತಿಯಲ್ಲಿ ಜಾರಿ ಮಾಡಲು ಹೊರಟಿರುವುದು ಸುಸ್ಪಷ್ಟವಾಗಿದೆ. ಒಂದು ದೇಶ- ಒಂದು ತೆರಿಗೆ ಆರ್ಥಾತ್ ಬಡವರಿಗೆ ಹೆಚ್ಚುವರಿ ತೆರಿಗೆ. ಒಂದು ದೇಶ- ಒಂದು ಧರ್ಮ ಅರ್ಥಾತ್ ಮನುವಾದಿ ಹಿಂದೂ ಧರ್ಮ. ಒಂದು ದೇಶ- ಒಂದು ಭಾಷೆ ಅರ್ಥಾತ್ ದೇವನಾಗರಿ ಲಿಪಿಯ ಹಾಗೂ ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿ ಭಾಷೆ. ಒಂದು ದೇಶ- ಒಂದು ಪಕ್ಷ ಅರ್ಥಾತ್ ಬಿಜೆಪಿ ಪಕ್ಷ. ಒಂದು ದೇಶ- ಒಬ್ಬ ನಾಯಕ ಅರ್ಥಾತ್ ಮೋದಿ (ಅಥವಾ ಶಾ!) ಇದು ಈ ಆಜೆಂಡಾದ ತಾತ್ಪರ್ಯ. ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದದ್ದೂ ಇದೇ ಸರ್ವಾಧಿಕಾರಿ ಪ್ರಣಾಳಿಯ ಮೇಲೆ. ಆದ್ದರಿಂದಲೇ ಹಿಂದಿಯನ್ನು ರಾಷ್ಟ್ರಭಾಷೆ ಮಾಡಬೇಕೆಂಬ ಪ್ರಸ್ತಾಪವನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News