ಬಿಜೆಪಿ ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ ಒಂದೂ ದಂಗೆ ಸಂಭವಿಸಿಲ್ಲ: ಆದಿತ್ಯನಾಥ್

Update: 2021-09-19 18:01 GMT

ಲಕ್ನೋ,ಸೆ.19: ಈ ಹಿಂದೆ ದಂಗೆಗಳು ಮಾಮೂಲಾಗಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರದ ನಾಲ್ಕೂವರೆ ವರ್ಷಗಳ ಆಡಳಿತಾವಧಿಯಲ್ಲಿ ಒಂದೇ ಒಂದು ದಂಗೆ ಸಂಭವಿಸಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರವಿವಾರ ಇಲ್ಲಿ ಹೇಳಿದರು. ಈ ಅವಧಿಯಲ್ಲಿ ದೇಶಾದ್ಯಂತ ಉ.ಪ್ರದೇಶದ ಕುರಿತು ದೃಷ್ಟಿಕೋನ ಬದಲಾಗಿದೆ ಎಂದೂ ಅವರು ತಿಳಿಸಿದರು.

ಉ.ಪ್ರದೇಶದಲ್ಲಿ ಬಿಜೆಪಿ ಸರಕಾರವು ನಾಲ್ಕೂವರೆ ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಭದ್ರತೆ ಮತ್ತು ಉತ್ತಮ ಆಡಳಿತದ ದೃಷ್ಟಿಯಿಂದ ಉ.ಪ್ರದೇಶದಂತಹ ರಾಜ್ಯದಲ್ಲಿ ನಾಲ್ಕೂವರೆ ವರ್ಷಗಳ ಆಡಳಿತವನ್ನು ಪೂರೈಸಿರುವುದು ಅತ್ಯಂತ ಮಹತ್ವದ್ದಾಗಿದೆ. ಜಾತಿ,ಸ್ಥಳ ಮತ್ತು ಧರ್ಮಗಳನ್ನು ಪರಿಗಣಿಸದೆ ಕ್ರಿಮಿನಲ್ಗಳನ್ನು ಮತ್ತು ಮಾಫಿಯಾಗಳನ್ನು ಕಾನೂನಿನ ಚೌಕಟ್ಟಿನಡಿ ಕಟುನಿಟ್ಟಾಗಿ ನಿಭಾಯಿಸಿದ್ದೇವೆ. 1,800 ಕೋ.ರೂ.ಗೂ ಅಧಿಕ ವೌಲ್ಯದ ಸರಕಾರಿ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಕ್ರಿಮಿನಲ್ಗಳ ಅತಿಕ್ರಮಣಗಳನ್ನೂ ನೆಲಸಮಗೊಳಿಸಲಾಗಿದೆ ಎಂದರು.

ತನ್ನ ಅಧಿಕಾರಾವಧಿಯಲ್ಲಿ ಉ.ಪ್ರದೇಶವು ಸುಲಲಿತ ಉದ್ಯಮದ ಪೂರಕ ರಾಜ್ಯಗಳ ರಾಷ್ಟ್ರೀಯ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. 42 ಲಕ್ಷ ಬಡವರಿಗೆ ಮನೆಗಳನ್ನು ಒದಗಿಸಲಾಗಿದೆ. ಸಂತ್ರಸ್ತರಿಗೆ 24 ಗಂಟೆಗಳಲ್ಲಿ ಪರಿಹಾರವನ್ನೊದಗಿಸಲು ಪ್ರಯತ್ನಿಸಲಾಗುತ್ತಿದೆ. ನೇರ ಸೌಲಭ್ಯ ವರ್ಗಾವಣೆಯಡಿ ರಾಜ್ಯದ ಜನತೆಗೆ ಐದು ಲ.ಕೋ.ರೂ.ಗೂ ಅಧಿಕ ಮೊತ್ತವನ್ನು ವಿತರಿಸಲಾಗಿದೆ. ಪಾರದರ್ಶಕ ವ್ಯವಸ್ಥೆಯ ಮೂಲಕ 4.5ಲಕ್ಷ.ಕ್ಕೂ ಅಧಿಕ ಯುವಜನರಿಗೆ ಸರಕಾರಿ ಉದ್ಯೋಗಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದ ಅವರು,ಅಯೋಧ್ಯೆ ಮತ್ತು ಕಾಶಿಯಲ್ಲಿ ದೀಪೋತ್ಸವ ಮತ್ತು ದೀಪಾವಳಿಯನ್ನು ಆಯೋಜಿಸುವ ಮೂಲಕ ಉ.ಪ್ರದೇಶವು ದೇಶ ಮತ್ತು ವಿಶ್ವದ ಎದುರು ತನ್ನ ಸಂಪ್ರದಾಯವನ್ನು ಮೆರೆದಿದೆ. ಪ್ರತಿಪಕ್ಷ ಎಂದಿಗೂ ಈ ಉತ್ಸವಗಳನ್ನು ನಡೆಸಿರಲಿಲ್ಲ,ಹಾಗೆ ಮಾಡಿದರೆ ತಮಗೆ ಕೋಮುವಾದಿ ಎಂಬ ಹಣೆಪಟ್ಟಿ ಅಂಟಿಸಲಾಗುತ್ತದೆ ಎಂದು ಅವರು ಭಾವಿಸಿದ್ದರು ಎಂದರು.

ಉ.ಪ್ರದೇಶದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News