ಕುಲಭೂಷಣ್ ಯಾದವ್ ಪ್ರಕರಣ: ವಕೀಲರ ನೇಮಕಕ್ಕೆ ಹೆಚ್ಚುವರಿ ಕಾಲಾವಕಾಶ ನೀಡಿದ ಪಾಕ್
Update: 2021-10-06 22:50 IST
ಇಸ್ಲಮಾಬಾದ್, ಅ.6: ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆ ಘೋಷಿಸಲ್ಪಟ್ಟಿರುವ ಭಾರತದ ಪ್ರಜೆ ಕುಲಭೂಷಣ್ ಯಾದವ್ ಗೆ ಶಿಕ್ಷೆಯ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಲು ವಕೀಲರನ್ನು ನೇಮಿಸುವ ಬಗ್ಗೆ ಹೆಚ್ಚುವರಿ ಸಮಯಾವಕಾಶ ನೀಡಿರುವುದಾಗಿ ಇಸ್ಲಮಾಬಾದ್ ಹೈಕೋರ್ಟ್ ಹೇಳಿದೆ.
ಯಾದವ್ ಗೆ ವಕೀಲರನ್ನು ನೇಮಿಸಲು ಅವಕಾಶ ನೀಡುವಂತೆ ಕಾನೂನು ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಅಥರ್ ಮಿನಾಲ್ಲಾ, ನ್ಯಾಯಾಧೀಶರಾದ ಅಮೀರ್ ಫಾರೂಕ್ ಮತ್ತು ಮಿನಾಗುಲ್ ಹಸನ್ ಅವರಿದ್ದ ಹೈಕೋರ್ಟ್ನ ವಿಸ್ತತ ಪೀಠ ಈ ಆದೇಶ ನೀಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಯಾದವ್ ಗೆ ವಕೀಲರ ನೇಮಕದ ವಿಷಯದಲ್ಲಿ ಭಾರತ ಮತ್ತು ಪಾಕ್ ನಡುವೆ ನಡೆದ ಪತ್ರವ್ಯವಹಾರದ ದಾಖಲೆಯನ್ನು ವಿಚಾರಣೆ ಸಂದರ್ಭ ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.