ಗಾಂಧಿ, ಸಾವರ್ಕರ್ ಅವರನ್ನು ಬಿಜೆಪಿ ಅರ್ಥ ಮಾಡಿಕೊಂಡಿಲ್ಲ: ಉದ್ಧವ್ ಠಾಕ್ರೆ
ಹೊಸದಿಲ್ಲಿ, ಅ. 15: ಸ್ವಾತಂತ್ರ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ ವಿವಾದಾತ್ಮಕ ಹೇಳಿಕೆ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತನ್ನ ಮಾಜಿ ಮಿತ್ರ ಪಕ್ಷವಾದ ಬಿಜೆಪಿಯನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿಯವರಿಗೆ ಮಹಾತ್ಮಾ ಗಾಂಧಿ ಆಗಲಿ, ವೀರ ಸಾವರ್ಕರ್ ಆಗಲಿ ಅರ್ಥ ಆಗಿಲ್ಲ ಎಂದು ಉದ್ಧವ್ ಠಾಕ್ರೆ ಅವರು ಷಣ್ಮುಖಾನಂದ ಸಭಾ ಭವನದಲ್ಲಿ ನಡೆದ ಶಿವಸೇನೆಯ ವಾರ್ಷಿಕ ದಸರಾ ರ್ಯಾಲಿ ಉದ್ಘಾಟಿಸಿ ಹೇಳಿದರು. ಮುಂಬರುವ ಮಹಾರಾಷ್ಟ್ರದ ದೆಗ್ಲುರ್ ವಿಧಾನ ಸಭೆಯ ಉಪ ಚುನಾವಣೆಯಲ್ಲಿ ಶಿವಸೇನೆಯ ಮಾಜಿ ಶಾಸಕರನ್ನು ಕಣಕ್ಕೆ ಇಳಿಸುವ ಬಗ್ಗೆ ಬಿಜೆಪಿಯ ಕುರಿತು ಉದ್ಧವ್ ಠಾಕ್ರೆ ಅವರು ತನ್ನ ಭಾಷಣದಲ್ಲಿ ಅಣಕವಾಡಿದರು. ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ ವಿಧಾನ ಸಭೆಯ ಉಪ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯನ್ನು ಕೂಡ ಆಮದು ಮಾಡಿಕೊಳ್ಳುತ್ತಿದೆ ಎಂದು ಅವರು ವ್ಯಂಗ್ಯ ಮಾಡಿದರು.