ಬಾಬಾಬುಡಾನ್ ದರ್ಗಾ: ಸಂಘೀ ಕುತಂತ್ರಗಳು ಮತ್ತು ನ್ಯಾಯಾಲಯಗಳಿಂದ ಬಚ್ಚಿಟ್ಟ ಸತ್ಯಗಳು

Update: 2021-10-20 04:58 GMT

1992ರಲ್ಲಿ ಬಾಬರಿ ಮಸೀದಿ ನಾಶದ ನಂತರದಲ್ಲಿ ದರ್ಗಾ ಅಲ್ಲ- ದೇವಸ್ಥಾನ ಎಂಬ ದುರುದ್ದೇಶಿತ ವಾದವನ್ನು ಯಾವುದೇ ಪುರಾವೆಯಿಲ್ಲದೆ ಸಂಘಪರಿವಾರಿಗರು ಮುಂದಿಡತೊಡಗಿದರು. ಅದಕ್ಕೆ ಪೂರಕವಾಗಿ ಅವರು ಪ್ರಾರಂಭಿಸಿದ ದತ್ತ ಜಯಂತಿ ಹಾಗೂ ದತ್ತಾಮಾಲಾಗಳಂತಹ ಹೊಸ ಆಚರಣೆಗಳಿಗೆ ಆಗ ಅಧಿಕಾರದಲ್ಲಿದ್ದ ಜೆಡಿಎಸ್, ಕಾಂಗ್ರೆಸ್ ಸರಕಾರಗಳು ಅವಕಾಶ ಮಾಡಿಕೊಡುತ್ತಾ ಸಂಘಿಗಳ ಸುಳ್ಳುಗಳಿಗೆ ಆಡಳಿತಾತ್ಮಕ ಮಾನ್ಯತೆ ತಂದುಕೊಟ್ಟುಬಿಟ್ಟರು.

ಭಾಗ-2


ಸುಳ್ಳು-1- ಬಾಬಾಬುಡಾನ್ ದರ್ಗಾ ಇರುವುದು ನಾಗೇನಹಳ್ಳಿಯಲ್ಲಿ-ದತ್ತಾತ್ರೇಯ ಪೀಠದಲ್ಲಲ್ಲ! ಸತ್ಯ: 

ವಾಸ್ತವವಾಗಿ ಇಂತಹ ವಾದವನ್ನು ತೀರಾ ಇತ್ತೀಚಿನವರೆಗೆ ಸಂಘಪರಿವಾರದವರೇ ಮುಂದಿಟ್ಟಿರಲಿಲ್ಲ. ಹಾಗೆ ನೋಡಿದರೆ, 1975ರಲ್ಲಿ ಹಿಂದೂ ಭಕ್ತಾದಿಗಳು ಹೂಡಿದ ಮೂಲ ದಾವೆಯಾದ ಒ.ಎಸ್. 25/78ರಲ್ಲಾಗಲೀ ಅಥವಾ 1986-89ರ ನಡುವೆ ಜಿಲ್ಲಾ ಮುಜರಾಯಿ ಅಧಿಕಾರಿ ಹಾಗೂ ರಾಜ್ಯ ಮುಜರಾಯಿ ಕಮಿಷನರ್ ಮುಂದಿಟ್ಟ ವಿವಿಧ ಪ್ರಕರಣಗಳಲ್ಲಿ ಕೂಡ ಆಗ್ರಹವಿದ್ದದ್ದು ಹಿಂದೂ ಭಕ್ತಾದಿಗಳಿಗೂ ಕೂಡ ಪ್ರಾರ್ಥನೆ ಸಲ್ಲಿಸುವ ಅವಕಾಶವನ್ನು ಉಳಿಸಿಕೊಳ್ಳಬೇಕು ಎಂಬುದೇ ವಿನಾ ಈ ಸಂಸ್ಥೆಯು ದರ್ಗಾ ಅಲ್ಲ ಎಂಬುದಲ್ಲ ಅಥವಾ ಹಿಂದೂ ಅರ್ಚಕರ ನೇಮಕಾತಿಯನ್ನೂ ಅಲ್ಲ. ಹಿಂದೂ ಆಗಮ ಪದ್ಧತಿಯ ಪೂಜೆಗಳನ್ನೂ ಅಲ್ಲ. 1992ರಲ್ಲಿ ಬಾಬರಿ ಮಸೀದಿ ನಾಶದ ನಂತರದಲ್ಲಿ ದರ್ಗಾ ಅಲ್ಲ- ದೇವಸ್ಥಾನ ಎಂಬ ದುರುದ್ದೇಶಿತ ವಾದವನ್ನು ಯಾವುದೇ ಪುರಾವೆಯಿಲ್ಲದೆ ಸಂಘಿಗಳು ಮುಂದಿಡತೊಡಗಿದರು. ಅದಕ್ಕೆ ಪೂರಕವಾಗಿ ಅವರು ಪ್ರಾರಂಭಿಸಿದ ದತ್ತ ಜಯಂತಿ ಹಾಗೂ ದತ್ತಾಮಾಲಾಗಳಂತಹ ಹೊಸ ಆಚರಣೆಗಳಿಗೆ ಆಗ ಅಧಿಕಾರದಲ್ಲಿದ್ದ ಜೆಡಿಎಸ್, ಕಾಂಗ್ರೆಸ್ ಸರಕಾರಗಳು ಅವಕಾಶ ಮಾಡಿಕೊಡುತ್ತಾ ಸಂಘಿಗಳ ಸುಳ್ಳುಗಳಿಗೆ ಆಡಳಿತಾತ್ಮಕ ಮಾನ್ಯತೆ ತಂದುಕೊಟ್ಟುಬಿಟ್ಟರು.

ಅದರಿಂದ ಮತ್ತಷ್ಟು ಉತ್ತೇಜಿತರಾದ ಈ ಸುಳ್ಳಿಗರು 2003ರ ನಂತರ ದರ್ಗಾ ಇರುವುದು ಚಿಕ್ಕಮಗಳೂರಿನ ನಾಗೇನಹಳ್ಳಿಯ ಸರ್ವೇ ನಂಬರ್ 57ರಲ್ಲಿ ಹಾಗೂ ಸರ್ವೇ ನಂಬರ್ 195ರಲ್ಲಿರುವುದು ದತ್ತಾತ್ರೇಯ ದೇವರ ದೇವಸ್ಥಾನ ಎಂಬ ಅಪಪ್ರಚಾರ ಪ್ರಾರಂಭಿಸಿದರು. ಇದಕ್ಕೆ ಪೂರಕವಾಗಿ ರೆವೆನ್ಯೂ ದಾಖಲೆಗಳ ತಪ್ಪುವ್ಯಾಖ್ಯಾನವನ್ನು ಪ್ರಚಾರಮಾಡಲಾರಂಭಿಸಿದರು. ಆದರೆ ವಾಸ್ತವವೆಂದರೆ ನಾಗೇನಹಳ್ಳಿ, ಸುರಗುಪ್ಪೆಮತ್ತು ಇನಾಂ ದತ್ತಾತ್ರೇಯ ಪೀಠ ಎಂಬ ಮೂರು ಗ್ರಾಮಗಳನ್ನು ಬಾಬಾಬುಡಾನ್ ದರ್ಗಾದ ನಿರ್ವಹಣೆಗೆ ಇನಾಂ ಅರ್ಥಾತ್ ಉಂಬಳಿಯಾಗಿ ನೀಡಿರುವುದು 1890ರಿಂದ ಲಭ್ಯವಿರುವ ಮುಜರಾಯಿ ಮ್ಯಾನುಯಲ್‌ಗಳು, ಮೈಸೂರು ಸಂಸ್ಥಾನಕ್ಕೆ ಸಂಬಂಧಪಟ್ಟ ವಿವಿಧ ಗೆಜಟೆಯರುಗಳು, ಮೈಸೂರು ಪುರಾತತ್ವ ಇಲಾಖೆಯ ದಾಖಲೆಗಳು, ಬ್ರಿಟಿಷರ ಜಿಲ್ಲಾ ಮತ್ತು ಮುಜರಾಯಿ ಇಲಾಖಾ ವರದಿಗಳು, ಮೈಸೂರು ಆಡಳಿತದ ವರದಿಗಳು ಹಾಗೂ ಇನ್ನಿತರ ಎಲ್ಲಾ ದಾಖಲೆಗಳೂ ಸ್ಪಷ್ಟಪಡಿಸುತ್ತವೆ. (ಆಸಕ್ತರು ರಾಜ್ಯ ಪತ್ರಾಗಾರದಲ್ಲಿರುವ 1901ರ Proceedings Of Government Of Mysore, No. 683- P.F. 32-01, Ist October 1901, Proceedings Of Government Of Mysore, Petition Dated 16th August 1902.. ಇತ್ಯಾದಿಗಳನ್ನು ಪರಿಶೀಲಿಸಬಹುದು)

ಹಾಗೆಯೇ 1955ರಲ್ಲಿ ಇನಾಂ ರದ್ದತಿಯಾದ ನಂತರ ಧಾರ್ಮಿಕ ಕೇಂದ್ರಗಳ ನಿರ್ವಹಣೆಗೆ ತಸ್ದೀಕ್ ಅನ್ನು ನಿಗದಿ ಮಾಡಲಾಯಿತು. ಅದರ ಮೊತ್ತವನ್ನು ಆ ಸಂಸ್ಥೆಗಳಿಗೆ ಒಟ್ಟಾರೆ ದೊರಕುತ್ತಿದ್ದ ಇನಾಂತಿ ಆದಾಯವನ್ನು ಆಧರಿಸಿ ನಿರ್ಧರಿಸಲಾಗುತ್ತಿತ್ತು. ದರ್ಗಾಗೆ ನಿಗದಿಯಾದ ತಸ್ದೀಕ್ ಸಹ ನಾಗೇನಹಳ್ಳಿ, ಸುರಗುಪ್ಪೆ ಮತ್ತು ಇನಾಂದತ್ತಾತ್ರೆಯ ಪೀಠ ಗ್ರಾಮದ ಆದಾಯಗಳನ್ನು ಆಧರಿಸಿಯೇ ತೀರ್ಮಾನಿಸಲಾಯಿತು. ಹೀಗಾಗಿ ಸರ್ವೇ ನಂಬರ್ 57ರಲ್ಲಿರುವ ನಾಗೇನಹಳ್ಳಿಯು ಸರ್ವೇ ನಂಬರ್ 195ರಲ್ಲಿರುವ ಬಾಬಾಬುಡಾನ್ ದರ್ಗಾಕ್ಕೆ ನೀಡಲ್ಪಟ್ಟ ಇನಾಮೇ ಹೊರತೂ ದರ್ಗಾ ಇರುವುದೇ ನಾಗೇನಹಳ್ಳಿಯಲ್ಲಲ್ಲ. ಈಗಲೂ ಸರ್ವೇ ನಂಬರ್ 195ರಲ್ಲಿರುವ ಈ ಧಾರ್ಮಿಕ ಸಂಸ್ಥೆಯ ಅಧಿಕೃತ ಹೆಸರು, ಎಲ್ಲಾ ಐತಿಹಾಸಿಕ ಹಾಗೂ ಸ್ವಾತಂತ್ರ್ಯೋತ್ತರ ರೆವೆನ್ಯೂ ದಾಖಲೆಗಳಲ್ಲಿರುವ ಹೆಸರು ‘‘ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ’’ ಎಂದೇ ಹೊರತು ದತ್ತಾತ್ರೇಯ ದೇವಸ್ಥಾನ ಎಂದಲ್ಲ. ಆದರೂ 1997ರಲ್ಲಿ ಹಾಗೂ 2012ರಲ್ಲಿ ಮುಜರಾಯಿ ಇಲಾಖೆಯು ತಸ್ದೀಕ್ ಫಲಾನುಭವಿ ‘‘ದತ್ತಾತ್ರೇಯ ದೇವರು’’ ಎಂದು ಬದಲಾಯಿಸಿ ಸಂಸ್ಥೆಯನ್ನು ‘‘ದತ್ತಾತ್ರೇಯ ದೇವಸ್ಥಾನ’’ ಎಂದು ಬದಲಿಸಿತ್ತು. ಆದರೆ ಹಿಂದೂ ದೇವಸ್ಥಾನಗಳ ಪಟ್ಟೀಕರಣದ ಪ್ರಕ್ರಿಯೆಯನ್ನೇ ಬೇರೊಂದು ಕಾರಣಕ್ಕೆ ಕೋರ್ಟ್ ರದ್ದು ಪಡಿಸಿದ್ದರಿಂದ ಈ ಸಂಸ್ಥೆಯನ್ನು ದೇವಸ್ಥಾನ ಎಂದು ವರ್ಗೀಕರಿಸಿದ್ದ ಪಟ್ಟಿಯೂ ರದ್ದಾಯಿತು. ಇದಲ್ಲದೆ ಯಾವುದೇ ಕಾನೂನು ಅಥವಾ ಸರಕಾರದ ಸುತ್ತೋಲೆಯಿಲ್ಲದೆ ಕಳೆದ ಹತ್ತು-ಹದಿನೈದು ವರ್ಷಗಳಿಂದ ಪ್ರವಾಸೋದ್ಯಮ ಜಾಹೀರಾತು ಮತ್ತು ಮೈಲಿಗಲ್ಲುಗಳ ಮೇಲೆ ಇದ್ದ ಬಾಬಾಬುಡಾನ್ ದರ್ಗಾ ಎಂಬ ಹೆಸರನ್ನು ಬದಲಾಯಿಸಿ ‘ದತ್ತಪೀಠ’ ಎಂದು ಬರೆಸಲಾಗಿದೆ. ವಿಪರ್ಯಾಸವೆಂದರೆ ಸಂಘಪರಿವಾರದ ಇತಿಹಾಸ ತಜ್ಞರು ಸದರಿ ಧಾರ್ಮಿಕ ಸಂಸ್ಥೆ ದರ್ಗಾ ಅಲ್ಲ ಎಂಬುದಕ್ಕೆ ಈ ಮೈಲಿಗಲ್ಲುಗಳನ್ನೂ ಸಹ ಒಂದು ಐತಿಹಾಸಿಕ ದಾಖಲೆಯಾಗಿ ಒದಗಿಸುತ್ತಿದ್ದಾರೆ.!

ಸುಳ್ಳು-2- 1818ರ ಖೇತುವಾರು ದಾಖಲೆಯಲ್ಲೂ ಸಂಸ್ಥೆಯ ಹೆಸರು ‘‘ದತ್ತಾತ್ರೇಯ ದೇವಸ್ಥಾನ’’ ಎಂದಿದೆ
ಸತ್ಯ: ಬ್ರಿಟಿಷರು ಭಾರತವನ್ನು ಸಂಪೂರ್ಣವಾಗಿ ತಮ್ಮ ಕಬ್ಜಕ್ಕೆ ತೆಗೆದುಕೊಂಡ ಮೇಲೆ ತಮ್ಮ ಆಡಳಿತದಡಿಯಿದ್ದ ಪ್ರದೇಶಗಳ ಸರ್ವೇ ಮತ್ತು ಸೆಟ್ಲ್‌ಮೆಂಟ್ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಅದರ ಅರ್ಥ ಯಾವ್ಯಾವ ಭೂಮಿಯಲ್ಲಿ ಏನೇನು ಬೆಳೆಯಲಾಗುತ್ತಿದೆ ಎಂಬ ಸರ್ವೇಕ್ಷಣೆ ಮತ್ತು ಅದನ್ನು ಆಧರಿಸಿ ಅದಕ್ಕೆ ಭೂ ಕಂದಾಯ ನಿಗದಿ ಮಾಡುವ ವ್ಯವಸ್ಥೆ. ಹಾಗೆ ಮಾಡುವಾಗ ಈ ಹಿಂದಿನ ರಾಜರುಗಳು ನೀಡಿದ ದೇವಾದಾಯ ಇನಾಮು ಜಮೀನುಗಳಿಗೆ ಕಂದಾಯ ವಿನಾಯಿತಿ ನೀಡಿದರು. ಅಂತಹ ಜಮೀನುಗಳನ್ನು ಪ್ರತ್ಯೇಕವಾಗಿ Quit Rent Registerನಲ್ಲಿ ನಮೂದಿಸಿದರು. ಹಾಗೂ ಹೀಗೆ ಕಂದಾಯ ವಿನಾಯಿತಿ ಪಡೆದ ಜಮೀನುಗಳ ಒಡೆತನ ಯಾರಿಗೆ ಸೇರಿದ್ದು ಎಂಬುದನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ.

ಮೈಸೂರು ಸಂಸ್ಥಾನದಲ್ಲಿ ಸರ್ವೇ ಮತ್ತು ಸೆಟ್ಲ್‌ಮೆಂಟ್ ಪ್ರಕ್ರಿಯೆ 1863ರಲ್ಲಿ ಆರಂಭವಾಗಿ 1890ರಲ್ಲಿ ಮುಕ್ತಾಯವಾಯಿತು. ಅದನ್ನು ಆಧರಿಸಿ ಆಕಾರ್‌ಬಂದ್ ದಾಖಲೆಗಳನ್ನೂ ಹಾಗೂ ಅದನ್ನು ಅಧರಿಸಿ ಖೇತುವಾರು ದಾಖಲೆಗಳನ್ನೂ ತಯಾರಿಸಲಾಯಿತು. ಹೀಗಾಗಿ ಮೈಸೂರು ಸಂಸ್ಥಾನದಲ್ಲಿ ಮೊದಲ ಖೇತುವಾರು ದಾಖಲೆ ತಯಾರಾದದ್ದೇ 1886ರಲ್ಲಿ! ಅದ್ದರಿಂದ 1818ರ ಖೇತುವಾರು ದಾಖಲೆಯಿತ್ತೆಂಬುದಾಗಲೀ, ಅದರಲ್ಲಿ ‘‘ದತ್ತಾತ್ರೇಯ ದೇವಸ್ಥಾನ’’ ಎಂದು ದಾಖಲಿಸಲಾಗಿದೆಯೆಂಬುದಾಗಲೀ ಹಸಿ ಸುಳ್ಳು. ಮೈಸೂರು ಸಂಸ್ಥಾನಕ್ಕೆ ಸಂಬಂಧಪಟ್ಟಂತೆ 1886-87, 1903-04, 1822-23, 1934-35ಗಳಲ್ಲಿ ತಯಾರಿಸಲಾದ ನಾಲ್ಕು ಖೇತುವರು ದಾಖಲೆಗಳಿವೆ. ಅದ್ಯಾವುದರಲ್ಲೂ ಸಂಸ್ಥೆಯ ಹೆಸರು ದತ್ತಾತ್ರೇಯ ದೇವಸ್ಥಾನ ಎಂದಿಲ್ಲ. ದರ್ಗಾ ಎಂದೇ ಇದೆ. ಖೇತುವಾರು ದಾಖಲೆಗಳನ್ನು ಆಧರಿಸಿಯೇ ನಂತರದಲ್ಲಿ Record Of Rights (RR) ಮತ್ತು ಪಹಣಿಗಳನ್ನು ಸಿದ್ಧಪಡಿಸಲಾಯಿತು. ಅವಕ್ಕೆ ಮೂಲತಾಯಿ ಖೇತುವಾರು. ಅದರಲ್ಲಿ ಇಲ್ಲದ ದತ್ತಾತ್ರೇಯ ದೇವರು ಪಹಣಿಯಲ್ಲಿ ಪ್ರತ್ಯಕ್ಷವಾಗಬಹುದೇ?

ಸುಳ್ಳು-3: ‘‘ಖಲಂದರ್-ಎ-ಬರ್ಹಾಕ್’’ ಎಂಬ ಶಾಖಾದ್ರಿ ಪ್ರಕಟಿತ ಪುಸ್ತಕದಲ್ಲಿ ಇದು ದೇವಸ್ಥಾನವಾಗಿತ್ತು ಎಂಬ ಹೇಳಿಕೆಗಳಿವೆ:

ಸತ್ಯ: ಈ ಸಂಸ್ಥೆಯು ದೇವಸ್ಥಾನವಾಗಿತ್ತೆಂಬ ಹಾಗೂ ಇಲ್ಲಿ ಹಿಂದೂ ಅಗಮ ಪದ್ಧತಿಯ ರೀತಿಯಲ್ಲಿ ಪೂಜೆ ನಡೆಯುತ್ತಿತ್ತೆಂಬ ಒಂದು ಅಧಿಕೃತ ಪುರಾವೆಯನ್ನೂ ನೀಡಲಾಗದ ಸಂಘಪರಿವಾರ, ಬದಲಿಗೆ ಜಬ್ಬಾರ್ ಎಂಬವರು ಬರೆದಿರುವ ‘‘ಖಲಂದರ್-ಎ-ಬರ್ಹಾಕ್’’ ಎಂಬ ‘‘ಸ್ಥಳಪುರಾಣ’’ವನ್ನು ಒಂದು ಐತಿಹಾಸಿಕ ದಾಖಲೆಯನ್ನಾಗಿ ನೀಡಿದ್ದಾರೆ. ಅದರಲ್ಲಿ ದಾದಾ ಹಯಾತ್ ಮೀರ್ ಖಲಂದರ್ ಅವರು ಈ ಗುಹೆಗೆ ಬರುವ ಮುನ್ನ ಜಂಗಮ-ಬ್ರಾಹ್ಮಣರು ಅರ್ಚನೆ ಮಾಡಲು ಬರುತ್ತಿದ್ದರು ಎಂಬ ವಾಕ್ಯವಿದೆ. ಅದಕ್ಕೆ ಯಾವುದೇ ಪೂರಕ ಪುರಾವೆಗಳು ಇಲ್ಲದಿದ್ದರೂ ಈ ವಾಕ್ಯಗಳನ್ನೇ ದಾದಾ ಹಯಾತ್ ಅವರ ಆಗಮನಕ್ಕೆ ಮುನ್ನ ಇದು ಒಂದು ಹಿಂದೂ ಕೇಂದ್ರವಾಗಿತ್ತು ಎಂಬುದಕ್ಕೆ ಐತಿಹಾಸಿಕ ಪುರಾವೆಯೆಂಬಂತೆ ಅಹವಾಲುದಾರರು ಮುಂದಿಡುತ್ತಾರೆ. ಆದರೆ ಸಂಘಿಗಳೇ ಒದಗಿಸುವ ಮತ್ತೊಂದು ‘ಐತಿಹಾಸಿಕ ಪುರಾವೆ’ಯಾದ ಸೂರ್ಯನಾಥ್ ಕಾಮತ್‌ರು ಪತ್ರಿಕೆಯೊಂದರ ವಿಜಯ ದಶಮಿ ಸಂಚಿಕೆಗೆ ಬರೆದ ಲೇಖನದಲ್ಲಿ ‘‘ಕರ್ನಾಟಕದಲ್ಲಿ ದತ್ತಾತ್ರೇಯ ಪಂಥವು 14ನೇ ಶತಮಾನದಲ್ಲಿ ಪ್ರವೇಶಿಸಿತು’’ ಎಂದು ಹೇಳುತ್ತಾರೆ.

ಆದರೆ ‘ಖಲಂದರ್’ ಪುಸ್ತಕದಲ್ಲಿ ದಾದಾ ಹಯಾತ್ ಮೀರ್ ಖಲಂದರ್ ಒಂದು ಸಾವಿರ ವರ್ಷದ ಹಿಂದೆ ಬಂದರೆಂದು ಬರೆಯಲಾಗಿದೆ. ಆ ಪುಸ್ತಕದಲ್ಲಿರುವ ಎಲ್ಲವನ್ನೂ ಒಪ್ಪಿಕೊಳ್ಳುವುದಾದರೆ ಇದನ್ನು ಕೂಡ ಇತಿಹಾಸವೆಂದೇ ಒಪ್ಪಿಕೊಳ್ಳಬೇಕಾಗುತ್ತದೆ. ಆಗ ದತ್ತಪಂಥವು ಕರ್ನಾಟಕಕ್ಕೆ ಬರುವ ಮುಂಚೆ ದಾದಾ ಹಯಾತ್ ಇಲ್ಲಿ ನೆಲೆಸಿದ್ದರು ಎಂದಾಗುವುದಿಲ್ಲವೇ? ಒಂದು ಪುಸ್ತಕದಲ್ಲಿ ತನಗೆ ಬೇಕಿದ್ದನ್ನು ಮಾತ್ರ ಆಯ್ದು ತೆಗೆದುಕೊಳ್ಳುವುದು, ಅದನ್ನು ತನ್ನ ವಾದಕ್ಕೆ ಬೇಕಾದಂತೆ ವ್ಯಾಖ್ಯಾನಿಸಿಕೊಳ್ಳುವುದು ಮತ್ತದನ್ನು ಕೋರ್ಟ್ ಪುರಾವೆಯೆಂಬಂತೆ ಒಪ್ಪಿಕೊಳ್ಳುವುದು ಹೇಗೆ ಸಾಧ್ಯ? ಸ್ಥಳಪುರಾಣಗಳು ಉತ್ಪ್ರೇಕ್ಷಿತ ಭಾವನೆಗಳೇ ವಿನಾ ಐತಿಹಾಸಿಕ ಪುರಾವೆಗಳಲ್ಲ.

ಸುಳ್ಳು-4: ಮೆಕೆಂಜಿ ದಾಖಲೆಗಳಲ್ಲೂ ಇದು ದೇವಸ್ಥಾನವಾಗಿತ್ತೆಂಬ ಉಲ್ಲೇಖಗಳಿವೆ
ಸತ್ಯ: ಕರ್ನಲ್ ಮೆಕೆಂಜಿ ಎಂಬ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿ 1782ಕ್ಕೆ ಭಾರತಕ್ಕೆ ಬಂದು 1818ರ ತನಕ ಇಡೀ ದಕ್ಷಿಣ ಭಾರತವನ್ನು ಸುತ್ತಾಡಿ ತಾನು ಕಂಡ ಭಾರತದ ಸಾಮಾಜಿಕ, ಭೌಗೋಳಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವಿವರಗಳನ್ನು ದಾಖಲಿಸುತ್ತಾನೆ. 1821ರಲ್ಲಿ ಮೆಕೆಂಜಿ ನಿಧನನಾದ ನಂತರ ಆತನು ಸಂಗ್ರಹಿಸಿದ ದಾಖಲೆಗಳನ್ನು ಈಸ್ಟ್ ಇಂಡಿಯಾ ಕಂಪೆನಿಯು ಮೂರು ಹಡಗುಗಳಲ್ಲಿ ಬ್ರಿಟನ್‌ಗೆ ಸಾಗಿಸುತ್ತದೆ. ಸ್ಥಳೀಯ ಭಾಷೆಯಲ್ಲಿ ದಾಖಲಾಗಿದ್ದ ಒಂದಷ್ಟನ್ನು ಮದ್ರಾಸ್ ವಿಶ್ವವಿದ್ಯಾನಿಲಯದ ಗ್ರಂಥಾಲಯಗಳಲ್ಲಿ ಸಂಗ್ರಹಿಸಿಡಲಾಗಿದೆ. ಹೀಗೆ ಲಭವಿರುವ ಸಂಗ್ರಹವನ್ನು ಆಧರಿಸಿ ಟಿವಿ ಮಾಹಾಲಿಂಗಂ ಎನ್ನುವವರು “Summary Of The Historical Manuscripts in the Mackenzie Collections”  ಎಂಬ ಶೀರ್ಷಿಕೆಯಲ್ಲಿ ಎರಡು ಸಂಪುಟಗಳಲ್ಲಿ ದಾಖಲಿಸಿದ್ದಾರೆ.

ಆ ನಂತರದಲ್ಲಿ ಅದರಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ‘‘ಕರ್ನಾಟಕದ ಕೈಫಿಯತ್ತುಗಳು’’ ಎಂಬ ಶೀರ್ಷಿಕೆಯಲ್ಲಿ ಪ್ರೊ. ಎಂ.ಎಂ. ಕಲಬುರಗಿಯವರು ಒಂದು ಸಮಗ್ರ ಸಂಪುಟವನ್ನು ಸಂಪಾದಿಸಿದ್ದಾರೆ. ಈಗ ಸಂಘಪರಿವಾರದ ವಾದವೇನೆಂದರೆ ‘‘ಮೆಕೆಂಜಿಯವರು ತಮ್ಮ ದಾಖಲೆಗಳಲ್ಲಿ ಹೈದರ್ ಅಲಿಯ ಕಾಲದ ನಂತರವೇ ಈ ಸಂಸ್ಥೆಯು ಮುಸ್ಲಿಮರ ಒಡತೆನಕ್ಕೆ ಬಂದಿತೆಂದು ದಾಖಲಿಸಿದ್ದಾರೆ.’’ ಇದನ್ನೇ 2010ರಲ್ಲಿ ಮುಜರಾಯಿ ಕಮಿಷನರ್ ಅವರು ಒಂದು ಪುರಾವೆಯಾಗಿ ಒಪ್ಪಿಕೊಂಡಿದ್ದಾರೆ ಹಾಗೂ ದುರದೃಷ್ಟವಶಾತ್ ಕರ್ನಾಟಕ ಹೈಕೋರ್ಟ್ ಕೂಡ ತನ್ನ ನಿಲುವಿಗೆ ಇದನ್ನು ಒಂದು ಪುರಾವೆಯಾಗಿ ಒಪ್ಪಿಕೊಂಡಿದೆ. ಆದರೆ ವಾಸ್ತವವೇನೆಂದರೆ ಕಲಬುರಗಿಯವರ ಸಂಪುಟದಲ್ಲಾಗಲೀ, ಮಹಾಲಿಂಗಂ ಅವರ ಸಂಪುಟಗಳಲ್ಲಾಗಲೀ ಎಲ್ಲೂ ಕೂಡ ಬಾಬಾಬುಡಾನ್ ದರ್ಗಾದ ಬಗ್ಗೆಯಾಗಲೀ, ದತ್ತಪೀಠದ ಬಗ್ಗೆಯಾಗಲೀ ಪ್ರಸ್ತಾಪವೇ ಇಲ್ಲ!

ಅಷ್ಟು ಮಾತ್ರವಲ್ಲ, ಮುಜರಾಯಿ ಕಮಿಷನರ್ ಅವರ ವರದಿಯನ್ನು ಉಲ್ಲೇಖಿಸಿ ಈ ಸಂಬಂಧ ಮುಜರಾಯಿ ಕಚೇರಿಯಲ್ಲಿರುವ ಮೆಕೆಂಜಿ ದಾಖಲೆಯನ್ನು ಒದಗಿಸಬೇಕೆಂಬ ಆರ್‌ಟಿಐ ಅರ್ಜಿಗೆ ‘‘ಇಲಾಖೆಯಲ್ಲಿ ಅಂತಹ ಯಾವುದೇ ದಾಖಲೆಯೂ ಇಲ್ಲ’’ವೆಂದು 2015ರ ಅಕ್ಟೊಬರ್ 15ರಂದು ಉತ್ತರಿಸಿದ್ದಾರೆ..!!

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News