ಪೆಗಾಸಸ್ ತನಿಖೆಗೆ ಸಮಿತಿ: ಗೃಹ ಸಚಿವರ ರಾಜೀನಾಮೆ ಅಗತ್ಯವಿಲ್ಲವೇ?

Update: 2021-10-29 04:13 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಪೆಗಾಸಸ್’ ತಂತ್ರಾಂಶ ಬಳಸಿ ಗಣ್ಯರ ಮೇಲೆ ಬೇಹುಗಾರಿಕೆ ನಡೆಸಿದ ಆರೋಪ ಕೊನೆಗೂ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಗ್ಗೆ ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಸ್ವತಂತ್ರ ತನಿಖೆಗೆ ಸಮಿತಿಯೊಂದನ್ನು ರಚಿಸಿದೆ. ‘ರಾಷ್ಟ್ರೀಯ ಭದ್ರತೆ’ಯ ಹೆಸರಿನಲ್ಲಿ ತನಿಖೆ ನಡೆಯದಂತೆ ಸರಕಾರ ಮಾಡಿದ ಪ್ರಯತ್ನವೆಲ್ಲ ವಿಫಲವಾಗಿದೆ. ಪೆಗಾಸಸ್ ಗೂಢಚಾರಿಕೆಯೇ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ಒಡ್ಡಿದೆ ಎನ್ನುವ ಅಂಶವನ್ನು ಸುಪ್ರೀಂಕೋರ್ಟ್ ಬೊಟ್ಟು ಮಾಡಿದೆ. ಸರಕಾರ ಹಿಂದಿನ ರಫೇಲ್ ಯುದ್ಧ ವಿಮಾನ ಹಗರಣವನ್ನು ‘ರಾಷ್ಟ್ರೀಯ ಭದ್ರತೆ’ಯನ್ನು ಮುಂದೊಡ್ಡಿ ತನಿಖೆ ನಡೆಯದಂತೆ ನೋಡಿಕೊಂಡಿತು. ಸುಪ್ರೀಂಕೋರ್ಟ್ ಕೂಡ ತನಿಖೆ ಅಗತ್ಯವಿಲ್ಲ ಎಂದು ಘೋಷಿಸಿ, ಸರಕಾರವನ್ನು ರಕ್ಷಿಸಿತು. ಆದರೆ ಪೆಗಾಸಸ್ ಪ್ರಕರಣದಲ್ಲಿ ಮಾತ್ರ ಸರಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ಯಾಕೆಂದರೆ, ಇಲ್ಲಿ ಗೂಢಚಾರಿಕೆಗೆ ಒಳಗಾದವರಲ್ಲಿ ನ್ಯಾಯಾಧೀಶರೂ ಸೇರಿದ್ದಾರೆ ಎನ್ನುವ ಆರೋಪಗಳಿವೆ. ಆದುದರಿಂದಲೇ ಸುಪ್ರೀಂಕೋರ್ಟ್ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತಾಯಿತು. ಇಸ್ರೇಲ್‌ನ ಗೂಢಚರ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಮೂವರು ಸೇರಿ ರಚಿಸಿದ ಎನ್‌ಎಸ್‌ಒ ಸಂಸ್ಥೆಯು ಯಾವ ಸರಕಾರಕ್ಕೂ ಅಧಿಕೃತ ಗೂಢಚಾರಿಕೆಗೆ ನೆರವು ನೀಡುತ್ತದೆ. ಅವರ ಪೆಗಾಸಸ್ ತಂತ್ರಜ್ಞಾನ ಈ ಗೂಢಚಾರಿಕೆಗೆ ಬಳಕೆಯಾಗುತ್ತದೆ. ಭಯೋತ್ಪಾದಕರನ್ನು ಪತ್ತೆ ಹಚ್ಚಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಎಂದು ಸಂಸ್ಥೆ ಹೇಳಿದ್ದರೂ, ಭಯೋತ್ಪಾದಕರಿಗಿಂತ ಇದು ಇನ್ನಿತರ ರಾಜಕೀಯ ಗೂಢಚಾರಿಕೆಗಳಿಗೆ ಬಳಕೆಯಾದದ್ದೇ ಹೆಚ್ಚು.

ಸರ್ವಾಧಿಕಾರಿ ಆಡಳಿತವಿರುವ ದೇಶಗಳು, ತಮ್ಮ ವಿರೋಧಿಗಳನ್ನು ಬಗ್ಗು ಬಡಿಯಲು ಇದನ್ನು ಬಳಸಿಕೊಂಡ ಬಗ್ಗೆ ವರದಿಗಳಿವೆ. ಭಾರತವೂ ಸೇರಿದಂತೆ ಮೆಕ್ಸಿಕೊ, ಸೌದಿ, ಬಹರೈನ್, ಟರ್ಕಿ, ಕಿನ್ಯಾ, ಮೊರೊಕ್ಕೊ, ರುವಾಂಡದಂತಹ ದೇಶಗಳು ಪೆಗಾಸಸ್‌ನ್ನು ಖರೀದಿಸಿವೆ ಎಂದು ತನಿಖೆ ಹೇಳುತ್ತದೆ. ಈ ತಂತ್ರಜ್ಞಾನವನ್ನು ಮೊಬೈಲ್‌ಗಳಲ್ಲಿ ಅಳವಡಿಸಿದರೆ, ಅದು ಎಲ್ಲ ರೀತಿಯ ಸಂದೇಶಗಳು ಮತ್ತು ಖಾಸಗಿ ಡೇಟಾಗಳನ್ನು ಸಂಗ್ರಹಿಸುತ್ತದೆ. ಒಬ್ಬರ ಮೂಲಕ ಇನ್ನೊಬ್ಬರ ಮೊಬೈಲ್‌ಗಳಿಗೆ ಪ್ರವೇಶಿಸಲು ಇದರಿಂದ ಸಾಧ್ಯ. ಸರಕಾರದ ಒಪ್ಪಿಗೆಯ ಮೂಲಕವೇ ಈ ತಂತ್ರಜ್ಞಾನವನ್ನು ಮಾರಲಾಗುತ್ತದೆ. 2017ರಿಂದಲೇ ಭಾರತೀಯ ಸಂವಿಧಾನ ತಜ್ಞರು, ಪತ್ರಕರ್ತರು, ರಾಜಕಾರಣಿಗಳು, ಮಾನವಹಕ್ಕು ಹೋರಾಟಗಾರರು ಅಷ್ಟೇ ಏಕೆ ಪೊಲೀಸ್ ಅಧಿಕಾರಿಗಳನ್ನೂ ಪೆಗಾಸಸ್ ಬಳಸಿಕೊಂಡು ಅವರನ್ನು ಗೂಢಚಾರಿಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇಷ್ಟಕ್ಕೂ ಆರೋಪವನ್ನು ಯಾವುದೋ ರಾಜಕಾರಣಿಗಳೋ ಅಥವಾ ಇನ್ನಾವುದೋ ಗುಂಪುಗಳು ಮಾಡಿರುವುದು ಅಲ್ಲ. ಜಗತ್ತಿನ 16 ಮಾಧ್ಯಮ ಸಂಸ್ಥೆಗಳ 80 ಪತ್ರಕರ್ತರು ಜೊತೆಗೂಡಿ ಸಿದ್ಧಪಡಿಸಿ ಬಿಡುಗಡೆ ಮಾಡಿದ ತನಿಖಾ ವರದಿಗಳು ಇವು. ಕೇವಲ ಭಾರತವನ್ನು ಗುರಿಯಾಗಿಸಿ ಈ ತನಿಖೆಯನ್ನು ಮಾಡಿಲ್ಲ. ಇನ್ನೂ ಹತ್ತು ಹಲವು ದೇಶಗಳು ಇಂತಹ ಗೂಢಚಾರಿಕೆಯಲ್ಲಿ ಭಾಗಿಯಾಗಿವೆ ಎನ್ನುವ ಆರೋಪವನ್ನು ತನಿಖೆ ಹೇಳುತ್ತದೆ.

   ಅಷ್ಟೇ ಅಲ್ಲ, ಈ ಗೂಢಚಾರಿಕೆಯ ಮಾಹಿತಿಯ ಮೂಲಕ, ತನಗೆ ಅಪಾಯಕಾರಿಯಾದ ಹಲವರನ್ನು ಸರಕಾರಗಳು ಕೊಂದಿವೆ. ಸರಕಾರಗಳನ್ನು ಉರುಳಿಸಿವೆ. ಬ್ಲಾಕ್‌ಮೇಲ್‌ಗಳನ್ನು ಮಾಡಿ ಅವರನ್ನು ತನ್ನ ಮೂಗಿನ ನೇರಕ್ಕೆ ಕುಣಿಸಿವೆ ಎನ್ನುವಂತಹ ಗಂಭೀರ ಆರೋಪಗಳನ್ನು ವರದಿ ಮಾಡಿವೆ. ಈ ವರದಿಯ ಪ್ರಾಥಮಿಕ ಹಂತದಲ್ಲಿ, ಜಗತ್ತಿನ 20 ದೇಶಗಳಲ್ಲಿ ವಾಸವಾಗಿರುವ ಸುಮಾರು 50,000 ಜನರ ಫೋನ್ ನಂಬರ್‌ಗಳು ಗೂಢಚಾರಿಕೆಯ ಪಟ್ಟಿಯಲ್ಲಿತ್ತು. ಅದರಲ್ಲಿ 1,000 ನಂಬರ್‌ಗಳು ಭಾರತಕ್ಕೆ ಸೇರಿವೆ. ಈಗ ಅವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುವ ಸಾಧ್ಯತೆಗಳೂ ಇಲ್ಲದಿಲ್ಲ. ಸೌದಿಯಲ್ಲಿ ಜಮಾಲ್ ಖಶೋಗಿ ಎಂಬ ಪತ್ರಕರ್ತನ ಹತ್ಯೆಗೂ ಈ ಪೆಗಾಸಸ್ ಗೂಢಚರ್ಯೆಯಲ್ಲಿ ಸಿಕ್ಕಿದ ಮಾಹಿತಿ ಕಾರಣ ಎನ್ನಲಾಗುತ್ತಿದೆ. ಸರಕಾರ ಮತ್ತು ಡ್ರಗ್ಸ್ ಮಾಫಿಯಾಗಳ ನಡುವೆ ಇದ್ದ ಸಂಬಂಧವನ್ನು ತನಿಖೆ ಮಾಡಿದ್ದ ಮೆಕ್ಸಿಕೊದ ಸಿಸಿಲಿಯೋ ಪಿನೆಡಾ ಎಂಬ ಪತ್ರಕರ್ತ 2017ರಲ್ಲಿ ಕೊಲೆಯಾಗುವುದರ ಹಿಂದೆಯೂ ಪೆಗಾಸಸ್ ನೀಡಿದ ಮಾಹಿತಿಗಳಿದ್ದವು ಎಂದು ವರದಿ ಹೇಳುತ್ತದೆ. ರಫೇಲ್ ಹಗರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಸುಶಾಂತ್ ಸಿಂಗ್ ಎಂಬ ಪತ್ರಕರ್ತನ ಮೊಬೈಲ್‌ನಲ್ಲೂ ಪೆಗಾಸಸ್ ತಂತ್ರಜ್ಞಾನ ಪತ್ತೆಯಾಗಿದೆ.

ಚುನಾವಣಾ ಆಯೋಗದ ಹಿರಿಯ ಸದಸ್ಯರಾಗಿದ್ದ ಅಶೋಕ್ ಲಾವಾಸ, ಇದೀಗ ಮೋದಿ ಸಂಪುಟದಲ್ಲಿ ಸಚಿವರಾಗಿರುವ ಅಶ್ವಿನಿ ವೈಷ್ಣವ್ ಅವರ ಮೊಬೈಲ್‌ನ್ನೂ ಗೂಢಚಾರಿಕೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ಹೆಸರೂ ಪೆಗಾಸಸ್‌ನಲ್ಲಿ ಸೇರಿಕೊಂಡಿದೆ. ಭಯೋತ್ಪಾದಕರ ಮೂಲ ನೆಲೆಗಳನ್ನು ತನಿಖೆ ನಡೆಸುವುದಕ್ಕೆ ಬಳಸಬಹುದಾದ ತಂತ್ರಜ್ಞಾನ ಇದಾಗಿದ್ದರೂ ಬಹುತೇಕ ಸರಕಾರಗಳು ಈ ತಂತ್ರಜ್ಞಾನವನ್ನು ಬಳಸಿದ್ದು ತಮ್ಮ ವಿರೋಧಿಗಳನ್ನು ಬಗ್ಗು ಬಡಿಯುವುದಕ್ಕಾಗಿ. ಕರ್ನಾಟಕದ ಸರಕಾರವನ್ನೇ ಉರುಳಿಸುವುದಕ್ಕಾಗಿ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಅಂದರೆ ಈ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ರಾಜಕೀಯ ಎದುರಾಳಿಗಳನ್ನು ಗೂಢಚಾರಿಕೆ ಮಾಡಲಾಗಿದೆ. ಭಾರತದ ಸಂವಿಧಾನ, ಪ್ರಜಾಸತ್ತೆಯನ್ನು ದುರ್ಬಲಗೊಳಿಸುವುದಕ್ಕೆ ಗೂಢಚಾರಿಕೆಯನ್ನು ಬಳಸಲಾಗಿದೆ. ಅಂದರೆ, ಪೆಗಾಸಸ್ ಹಗರಣ, ನಮ್ಮದೇ ಆಳುವವರು ನಡೆಸಿದ ದೇಶದ್ರೋಹಕ್ಕೆ ಸಂಬಂಧಪಟ್ಟ ಹಗರಣವಾಗಿದೆ. ಸರಕಾರ ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿದೆ. ಯಾಕೆಂದರೆ, ತಂತ್ರಜ್ಞಾನವನ್ನು ಸರಕಾರದ ಅನುಮತಿಯ ಮೇರೆಗೇ ಮಾರಲಾಗುತ್ತದೆ ಎಂದು ಈಗಾಗಲೇ ಇಸ್ರೇಲ್ ಸಂಸ್ಥೆ ಹೇಳಿಕೊಂಡಿದೆ.

ಇದೇ ಸಂದರ್ಭದಲ್ಲಿ ಈ ತಂತ್ರಾಂಶವನ್ನು ದುರುಪಯೋಗ ಮಾಡಿಕೊಂಡಿಲ್ಲ ಎಂದಿದ್ದರೆ, ಸರಕಾರವೇ ಮುಂದೆ ನಿಂತು ತನಿಖೆಗೆ ಆದೇಶ ನೀಡಬೇಕಾಗಿತ್ತು. ಆದರೆ ತನಿಖೆ ನಡೆಸುವ ಬದಲು, ಪೆಗಾಸಸ್ ಗೂಢಚಾರಿಕೆ ನಡೆದೇ ಇಲ್ಲ ಎಂದು ವಾದಿಸಿತು. ಅಷ್ಟೇ ಅಲ್ಲ, ಸಂಸತ್ ಅಧಿವೇಶನದ ಹಳಿತಪ್ಪಿಸಲು ವಿರೋಧಪಕ್ಷಗಳು ನಡೆಸಿದ ಸಂಚು ಎಂದು ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದರು. ಆದರೆ ಇದೀಗ ಸುಪ್ರೀಂಕೋರ್ಟ್ ಪ್ರಕರಣದ ಗಂಭೀರತೆಯನ್ನು ಅರಿತು, ತನಿಖೆಗೆ ಸಮಿತಿ ರಚಿಸಿದೆ. ಸುಪ್ರೀಂಕೋರ್ಟ್ ಆದೇಶ ಕೇಂದ್ರ ಸರಕಾರಕ್ಕೆ ಬಹುದೊಡ್ಡ ಮುಖಭಂಗವಾಗಿದೆ. ಈ ಲಜ್ಜೆಯಿಂದ ತಕ್ಷಣಕ್ಕೆ ಪಾರಾಗಲು ಕನಿಷ್ಠ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡುವುದು ಅತ್ಯಗತ್ಯವಾಗಿತ್ತು. ಆದರೆ ಲಜ್ಜೆ ಕಳೆದುಕೊಂಡವ ಎಲ್ಲವನ್ನೂ ಕಳೆದುಕೊಂಡ ಎಂಬಂತೆ, ಸುಪ್ರೀಂಕೋರ್ಟ್ ತಪರಾಕಿಯನ್ನು, ತನಗೆ ಸಂದ ಗೌರವವೋ ಎಂಬಂತೆ ಸ್ವೀಕರಿಸಿದೆ. ತೀರ್ಪನ್ನು ವಿವಿಧ ಪಕ್ಷಗಳು ಸ್ವಾಗತಿಸಿವೆಯಾದರೂ, ಗೃಹ ಸಚಿವರ ರಾಜೀನಾಮೆಯನ್ನು ಆಗ್ರಹಿಸುವ ಧೈರ್ಯವನ್ನು ಯಾವ ಪಕ್ಷವೂ ತೋರಿಸದೇ ಇರುವುದು ವಿಪರ್ಯಾಸ. ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ ಸಮಿತಿಯು ಯಾವುದೇ ಒತ್ತಡಕ್ಕೆ ಬಲಿಯಾಗದೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿ ನಡೆಸಬೇಕಾದರೆ ಗೃಹಸಚಿವರ ರಾಜೀನಾಮೆಯ ಅಗತ್ಯವಂತೂ ಇದ್ದೇ ಇದೆ. ಅದೇನೇ ಇರಲಿ, ತಮ್ಮ ಸ್ವಾರ್ಥ ರಾಜಕೀಯಗಳಿಗಾಗಿ ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟವರು ಎಷ್ಟೇ ಉನ್ನತ ಪದವಿಯಲ್ಲಿರಲಿ, ಅವರನ್ನು ಗುರುತಿಸುವ ಕೆಲಸವನ್ನು ಸಮಿತಿ ಮಾಡಬೇಕು. ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News