ಗುರುಗ್ರಾಮದಲ್ಲಿ ನಮಾಝ್ ಸಲ್ಲಿಕೆಗೆ ಮತ್ತೆ ವಿರೋಧ : ವಾಲಿಬಾಲ್ ಕೋರ್ಟ್ ನಿರ್ಮಿಸುತ್ತೇವೆ ಎಂದ ಪ್ರತಿಭಟನಾಕಾರರು
ಗುರುಗ್ರಾಮ: ಗುರುಗ್ರಾಮದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶುಕ್ರವಾರದ ನಮಾಝ್ ಸಲ್ಲಿಕೆ ಕುರಿತಂತೆ ಕಳೆದ ಹಲವಾರು ತಿಂಗಳುಗಳಿಂದ ಎದ್ದಿರುವ ವಿವಾದ ಇಂದು ಕೂಡ ಸಮಸ್ಯೆ ಸೃಷ್ಟಿಸಿದೆ. ಗುರುಗ್ರಾಮದ ಸೆಕ್ಟರ್ 12ಎ ಪ್ರದೇಶದಲ್ಲಿ ಇಂದು ನಮಾಝ್ ಸಲ್ಲಿಕೆಯಾಗದಂತೆ ತಡೆಯಲು ಆ ಸ್ಥಳವನ್ನು ಸ್ಥಳೀಯ ಹಿಂದು ಸಂಘಟನೆಯ ಸದಸ್ಯರು ಆಕ್ರಮಿಸಿಕೊಂಡ ಘಟನೆ ನಡೆದಿದೆ.
ಅಲ್ಲಿ ಬೆಳಗ್ಗಿನಿಂದಲೇ ಜಮಾಯಿಸಿದ್ದ ಜನರು ತಾವು ಇಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
‘‘ನಾವಿಲ್ಲಿ ಸುಮ್ಮನೆ ಕುಳಿತಿದ್ದೇವೆ. ನಮಾಝ್ ಗೆ ಅನುಮತಿಸುವುದಿಲ್ಲ, ಇಲ್ಲಿ ಆಟ ಆಡಲು ಬಯಸುತ್ತೇವೆ. ಇಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಿಸುತ್ತೇವೆ, ಏನೇ ಆದರೂ ನಮಾಝ್ ಗೆ ಅವಕಾಶ ಕಲ್ಪಿಸುವುದಿಲ್ಲ,’’ ಎಂದು ಅಲ್ಲಿದ್ದವರು ಹೇಳಿಕೊಂಡಿದ್ದಾರೆ.
ಕಳೆದ ವಾರ ಈ ಸ್ಥಳದಲ್ಲಿ ಒಂದು ಪೂಜೆ ಸಲ್ಲಿಸಿ ಹರಡಲಾಗಿದ್ದ ಬೆರಣಿ ಇನ್ನೂ ಅದೇ ಸ್ಥಳದಲ್ಲಿದೆ.
ಗುರುಗ್ರಾಮದಲ್ಲಿ ಕೆಲವು ನಿಗದಿತ ಸ್ಥಳಗಳಲ್ಲಿ ನಮಾಝ್ ಸಲ್ಲಿಸಲು ಆಡಳಿತ ಅನುಮತಿಸಿತ್ತಾದರೂ ಹಿಂದು ಸಂಘಟನೆಗಳು ಅದಕ್ಕೆ ಆಕ್ಷೇಪಿಸಿವೆ ಹಾಗೂ ಕಳೆದ ಹಲವಾರು ವಾರಗಳಿಂದ ಪ್ರತಿ ಶುಕ್ರವಾರ ನಿರಂತರ ಪ್ರತಿಭಟನೆ ನಡೆಸುತ್ತಿವೆ.