ಪ್ರತಿಭಟನೆ ಮತ್ತು ಪ್ರಜಾಪ್ರಭುತ್ವ

Update: 2021-11-21 19:30 GMT

ಕೊರೆಯುವ ಚಳಿಯಲ್ಲಿ, ಉರಿವ ಬಿಸಿಲಲ್ಲಿ, ಸುರಿವ ಮಳೆಯಲ್ಲಿ ರೈತರು ನಡೆಸಿರುವ ಹೋರಾಟ ಇತಿಹಾಸವನ್ನು ನಿರ್ಮಿಸಿದೆ. ಚಳವಳಿ ಮಾಡುವ ಜನರನ್ನು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಎಂದು ಬೇರ್ಪಡಿಸಲು, ಒಡೆಯಲು ಅವಕಾಶ ನೀಡದೆ ನಾವೆಲ್ಲ ರೈತರು, ನಾವೆಲ್ಲ ಮಣ್ಣಿನ ಮಕ್ಕಳು, ನಾವೆಲ್ಲ ನೇಗಿಲ ಯೋಗಿಗಳು, ನಮಗೆ ಜಾತಿ ಮತ ಭೇದವಿಲ್ಲ ಎಂದು ಒಕ್ಕೊರಲಿಂದ ಹೋರಾಡಿ ಜಯ ಗಳಿಸಿದ ಬಹುದೊಡ್ಡ ವರ್ಗ ಹೋರಾಟವಿದು.


ಯಾವುದೇ ದೇಶದಲ್ಲಿ ಪ್ರಜಾಪ್ರಭುತ್ವ ಅವನತಿಯ ಅಂಚಿಗೆ ಬಂದು ನಿಂತಾಗ ಅದನ್ನು ಕಾಪಾಡುವ ದಾರಿ ಯಾವುದು? 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಿಂದ ಜನತಂತ್ರವನ್ನು ಉಳಿಸಿಕೊಳ್ಳಬಹುದೇ? ಉಳಿಸಿಕೊಳ್ಳಬಹುದು. ಆದರೆ, ಜಾತಿ ಮತವನ್ನು ಮೀರಿ ನಿಂತು ಪಕ್ಷಗಳ ಪ್ರಣಾಳಿಕೆ, ಅಭ್ಯರ್ಥಿಗಳ ಪ್ರಾಮಾಣಿಕತೆಯನ್ನು ಮಾನದಂಡವಾಗಿ ಇಟ್ಟುಕೊಂಡು ಮತದಾನ ಮಾಡುವ ಮತದಾರರಿದ್ದಾಗ ಇದು ಸಾಧ್ಯ. ಆದರೆ, ಇಂದಿನ ಚುನಾವಣೆಗಳು ಹೇಗೆ ನಡೆಯುತ್ತವೆ? ಎಂಥವರು ಗೆದ್ದು ಬರುತ್ತಾರೆ? ಯಾರ ಪಾದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಹಾಗಿದ್ದರೆ ಪ್ರಜೆಗಳು ತಮ್ಮ ಹೆಸರಿನಲ್ಲಿರುವ ಪ್ರಭುತ್ವವನ್ನು ಉಳಿಸಿಕೊಳ್ಳುವುದು ಹೇಗೆ ಸಾಧ್ಯ? ಈ ಪ್ರಶ್ನೆಗೆ ಕಳೆದ ಒಂದು ವರ್ಷದಿಂದ ರಾಜಧಾನಿ ದಿಲ್ಲಿಯಲ್ಲಿ ನಡೆದ ಐತಿಹಾಸಿಕ ರೈತ ಚಳವಳಿ ಒಂದು ಪ್ರತ್ಯಕ್ಷ ಉದಾಹರಣೆ. ಭಾರತ ಸ್ವತಂತ್ರಗೊಂಡ ನಂತರ ನಡೆದ ಅತ್ಯಂತ ಮಹತ್ವದ ಹೋರಾಟವಿದು. ಅನೇಕರು ಭಾವಿಸಿದಂತೆ 1975-76ರಲ್ಲಿ ನಡೆದ ಜೆಪಿ ಚಳವಳಿಯು ಮಹತ್ವದ ಚಳವಳಿ ಎಂದು ನನಗೆಂದೂ ಅನ್ನಿಸಿಲ್ಲ.

ಆ ಚಳವಳಿ ಹೆಸರಿಗೆ ಇಂದಿರಾ ಗಾಂಧಿ ಸರ್ವಾಧಿಕಾರದ ವಿರುದ್ಧ ನಡೆದ ಚಳವಳಿಯಾಗಿದ್ದರೂ ಅದರ ಆಂತರ್ಯದಲ್ಲಿ ಅದು ಪ್ರಜಾಪ್ರಭುತ್ವ ವಿರೋಧಿಯಾದ ಫ್ಯಾಶಿಸ್ಟ್ ಶಕ್ತಿಗಳನ್ನು ಒಳಗೊಂಡಿತ್ತು. ಭಾರತ ಇಂದು ಈ ಪರಿ ಜನಾಂಗ ದ್ವೇಷದ ಉನ್ಮಾದಕ್ಕೆ ಒಳಗಾಗಲು ಕಾರಣ ಜೆಪಿ ಚಳವಳಿಯಲ್ಲಿ ಸೇರಿಕೊಂಡು ರಾಜಕೀಯ ಪ್ರಾಬಲ್ಯ ಗಳಿಸಿದ ಫ್ಯಾಶಿಸ್ಟ್ ಶಕ್ತಿಗಳಿಗೆ ಪ್ರಭುತ್ವದ ಅಧಿಕಾರ ಸೂತ್ರ ಹಿಡಿಯಲು ಅವಕಾಶ ದೊರಕಿತು.

7 ವರ್ಷಗಳ ಹಿಂದೆ ಅಣ್ಣಾ ಹಝಾರೆಯವರನ್ನು ಮುಂದಿಟ್ಟುಕೊಂಡು ಕಾರ್ಪೊರೇಟ್ ಲಾಬಿ, ಬಾಬಾ ರಾಮ್‌ದೇವ್ ಮತ್ತು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಸೂತ್ರದಾರರು ಅಂದಿನ ಯುಪಿಎ ಸರಕಾರದ ವಿರುದ್ಧ ಒಂದು ಚಳವಳಿ ಸಂಘಟಿಸಿದರು. ಅಂಬಾನಿ, ಅದಾನಿ ಪ್ರಾಯೋಜಕತ್ವದ ಈ ಚಳವಳಿ 2 ಜಿ ಹಗರಣದ ಕಟ್ಟುಕತೆ ಕಟ್ಟಿ ಕೋಲಾಹಲ ಎಬ್ಬಿಸಿತು. ಇದಕ್ಕಾಗಿ ಕಾಯುತ್ತಿದ್ದ ನಮ್ಮ ಸಾಮಾಜಿಕ ಜೀವನದ ಸಾಮಾಜಿಕ ನ್ಯಾಯದ ವಚನ ವಿರೋಧಿ ಕೋಮುವಾದಿ ಶಕ್ತಿಗಳು ಇದನ್ನು ರಾಷ್ಟ್ರ ವ್ಯಾಪಿಗೊಳಿಸಿದವು.

ವಿಷಾದದ ಸಂಗತಿಯೆಂದರೆ, ಕೆಲ ಎಡಪಂಥೀಯ ಪಕ್ಷಗಳು ಕಾರ್ಪೊರೇಟ್ ಖೆಡ್ಡಾದಲ್ಲಿ ಬಿದ್ದವು. ಇದೆಲ್ಲದರ ಪರಿಣಾಮ ಬಲಪಂಥೀಯ ಫ್ಯಾಶಿಸ್ಟ್ ಶಕ್ತಿಗಳು ಪ್ರಭುತ್ವದ ಅಧಿಕಾರ ಸೂತ್ರ ಹಿಡಿದವು. 2ಜಿ ಹಗರಣ ಯುಪಿಎ ಸರಕಾರ ಉರುಳಿಸಲು ಹೆಣೆದ ಬಲೆ ಎಂಬ ಸುಳ್ಳು ಸಂಗತಿ ಇತ್ತೀಚೆಗೆ ಬಯಲಿಗೆ ಬಂದಿದೆ.
 ಜನರು ನೀಡಿದ ಅಧಿಕಾರವನ್ನು ಜನರ ದಮನಕ್ಕೆ ಬಳಸಿಕೊಳ್ಳುವ, ಉಳ್ಳವರ ಪಾದ ಬುಡದಲ್ಲಿ ಉರುಳಾಡುವ, ತಮ್ಮ ವೈಫಲ್ಯಗಳನ್ನು ಮರೆ ಮಾಚಲು ದೇವರು, ಧರ್ಮ, ಜಾತಿ ಮತಗಳನ್ನು ಬಳಸಿಕೊಳ್ಳುವ ರಾಜಕಾರಣಿಗಳಿರುವ ಈ ದಿನಗಳಲ್ಲಿ ಪ್ರಜಾಪ್ರಭುತ್ವದ ಉಳಿವು ಬರೀ ಚುನಾವಣೆಗಳಿಂದ ಮಾತ್ರ ಸಾಧ್ಯವಿಲ್ಲ. 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯೊಂದೇ ಒಂದು ದೇಶದ ಪ್ರಜಾಪ್ರಭುತ್ವದ ಆರೋಗ್ಯದ ಲಕ್ಷಣವಲ್ಲ.

ಅದೇನೇ ಇರಲಿ, 2014ರ ನಂತರ ಅಂದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಒಕ್ಕೂಟ ಸರಕಾರದ ಅಧಿಕಾರ ಸೂತ್ರ ಹಿಡಿದ ನಂತರ ಕಾಂಗ್ರೆಸ್ ಮುಕ್ತ ಭಾರತದ ಘೋಷಣೆ ಮಾಡುತ್ತ್ತಾ ಪ್ರತಿಪಕ್ಷ ಮುಕ್ತ ಭಾರತವನ್ನು ಮತ್ತು ನವ ಪ್ರತಿಭಟನೆ ಮುಕ್ತ ಭಾರತವನ್ನು ನಿರ್ಮಿಸಲು ಸರಕಾರ ತನ್ನ ಬಳಿ ಇರುವ ಎಲ್ಲ ಅಸ್ತ್ರಗಳನ್ನು ಬಳಸಿಕೊಳ್ಳುತ್ತಾ ಬಂತು. ಆದರೆ, ರೈತ ಚಳವಳಿ ಪಕ್ಷಾತೀತವಾಗಿತ್ತು. ಪಂಜಾಬ್, ಹರ್ಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ರೈತರನ್ನೇ ಬಹುತೇಕ ಒಳಗೊಂಡಿದ್ದರೂ ಇದು ಯಾವುದೇ ಜಾತಿ, ಮತ, ಕೋಮು, ಕಂದಾಚಾರದ ಜೊತೆ ಗುರುತಿಸಿಕೊಂಡಿರಲಿಲ್ಲ.

ಇದನ್ನು ವಿಫಲಗೊಳಿಸಲು ನಾನಾ ಕಸರತ್ತುಗಳನ್ನು ನಡೆಸಿ ವಿಫಲಗೊಂಡ ನಂತರ ಹತಾಶರಾದ ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ ಉತ್ತರ ಪ್ರದೇಶ ಸೇರಿದಂತೆ ಮತ್ತಿತರ ರಾಜ್ಯಗಳ ವಿಧಾನ ಸಭಾ ಚುನಾವಣೆ ಹಾಗೂ 2023ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಫಲಿತಾಂಶ ಎಲ್ಲಿ ಉಲ್ಟಾ ಆದೀತೆಂದು ಹೆದರಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಕಟಿಸಿದರು. ಹಾಗೆಂದು ಅವರ ಮನ ಪರಿವರ್ತನೆ ಆಗಿದೆಯೆಂದಲ್ಲ. ಈಗಲೂ ಮೂರು ಕರಾಳ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ. ಕಾಯ್ದೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗದಿರುವುದಕ್ಕೆ ದೇಶದ ಕ್ಷಮೆಯನ್ನು ಯಾಚಿಸಿದರು.

ಈ ಚಳವಳಿಯಲ್ಲಿ ಸುಮಾರು 700 ರೈತರು ಅಸುನೀಗಿರುವ ಬಗ್ಗೆ ಅವರು ಪಶ್ಚಾತ್ತಾಪ ಮತ್ತು ವಿಷಾದವನ್ನು ವ್ಯಕ್ತಪಡಿಸಲಿಲ್ಲ. ಈಗ ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಘೋಷಿಸಿದ್ದೇನೋ ಸರಿ. ಆದರೆ, ರೈತರ ಉತ್ಪನ್ನಗಳಿಗೆ ಎಲ್ಲಿಯವರೆಗೆ ಕನಿಷ್ಠ ಬೆಂಬಲ ಬೆಲೆಯನ್ನು ರೈತರ ಕಾನೂನು ಬದ್ಧ್ದ ಹಕ್ಕನ್ನಾಗಿ ಮಾಡುವುದಿಲ್ಲವೋ ಅಲ್ಲಿಯವರಗೆ ರೈತರ ಸಂಕಷ್ಟದ ಬದುಕಿಗೆ ಕೊನೆ ಎಂಬುದಿಲ್ಲ. ಆದರೆ, ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ನಡೆದ ಚಳವಳಿಯಲ್ಲಿ ಕೋಮುವಾದಿ ಶಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವಿರಲಿಲ್ಲ. ಹೀಗೆ ಫ್ಯಾಶಿಸ್ಟ್ ಶಕ್ತಿಗಳನ್ನು ದೂರವಿಟ್ಟು ನಡೆದ ಮೊದಲ ಚಳವಳಿ ಇದು.

ಈ ಶಾಂತಿಯುತ ರೈತ ಚಳವಳಿಯನ್ನು ಹಿಂಸಾತ್ಮಕಗೊಳಿಸಿ ಹತ್ತಿಕ್ಕಲು ಸರಕಾರ ಸಾಕಷ್ಟು ಮಸಲತ್ತು ನಡೆಸಿತು. ಆದರೆ ರೈತರು ತಾಳ್ಮೆ ಕಳೆದುಕೊಳ್ಳಲಿಲ್ಲ. ಪ್ರಚೋದನೆಗೆ ಬಲಿಯಾಗಲಿಲ್ಲ. ರೈತ ಸತ್ಯಾಗ್ರಹದಲ್ಲಿ ಕೋಮುವಾದಿಗಳು ಸೇರಿಕೊಂಡು ದಾರಿ ತಪ್ಪಿಸಲು ಯತ್ನಿಸಿದರು. ಕೆಂಪು ಕೋಟೆಯ ಬಳಿ ಹಿಂಸಾತ್ಮಕ ವಾತಾವರಣ ನಿರ್ಮಿಸಿದರು.

ಆದರೂ ರೈತರು ಧೃತಿಗೆಡಲಿಲ್ಲ. ಈ ರೈತರ ಹೋರಾಟ ಎಷ್ಟು ಅದ್ಭುತವಾಗಿತ್ತೆಂದರೆ ಅದನ್ನು ನೋಡಿ ಬರಲು ದೂರದ ಕರ್ನಾಟಕ, ತಮಿಳುನಾಡು , ತೆಲಂಗಾಣ, ಆಂಧ್ರಪ್ರದೇಶದ ರೈತರು ದಿಲ್ಲಿಗೆ ಹೋಗಿ ಬಂದರು. ಅದೇ ಸಂದರ್ಭದಲ್ಲಿ ಕೊರೋನ ಸೋಂಕು ವ್ಯಾಪಕವಾಗಿದ್ದರಿಂದ ನಾನು ದಿಲ್ಲಿಗೆ ಹೊರಟವನು ಪ್ರಯಾಣವನ್ನು ರದ್ದುಗೊಳಿಸಿದೆ. ಆದರೆ ಅಲ್ಲಿ ಹೋಗಿ ಬಂದವರು ಹೇಳುತ್ತಿದ್ದ ಸ್ಫೂರ್ತಿದಾಯಕ ಸುದ್ದಿಗಳನ್ನು ಕೇಳುತ್ತಿದ್ದೆ.
 ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಧ್ವನಿಯೆತ್ತುವವರನ್ನೆಲ್ಲ ದೇಶ ದ್ರೋಹಿಗಳು, ನಕ್ಸಲರು, ಜಿಹಾದಿಗಳು, ಮಾವೋವಾದಿಗಳು ಎಂದೆಲ್ಲಾ ಹೆಸರಿಸುತ್ತಾ ಅವರ ಧ್ವನಿಯನ್ನು ಅಡಗಿಸಲು ಪೊಲೀಸ್, ಎನ್‌ಐಎ, ಸಿಬಿಐ, ಜಾರಿ ನಿರ್ದೇಶನಾಲಯಗಳ ಬಲವನ್ನು ಉಪಯೋಗಿಸುತ್ತಾ ಬಂತು. ದೇಶದಲ್ಲಿ ಪ್ರತಿಭಟನೆಯೇ ಇಲ್ಲದ ವಾತಾವರಣ ನಿರ್ಮಾಣವಾಯಿತು. ಚಳವಳಿಗಳು ನಡೆಯಲೇ ಇಲ್ಲವೆಂದಲ್ಲ. ಆದರೆ, ಅವೆಲ್ಲ ಸಾಂಕೇತಿಕ ಪ್ರತಿಭಟನೆಗಳಾಗಿದ್ದವು. ಕಾರ್ಮಿಕ ಸಂಘಟನೆಗಳು ವರ್ಷಕ್ಕೊಮ್ಮೆ ದಿಲ್ಲಿ ಚಲೋ ಮಾಡಿ ಸರಕಾರಕ್ಕೆ ಅಹವಾಲುಗಳನ್ನು ಸಲ್ಲಿಸುತ್ತಾ ಬಂದರೂ ಅದು ಸರಕಾರದ ಕುರುಡು ಕಿವಿಗೆ ತಲುಪಲೇ ಇಲ್ಲ. ದಿಲ್ಲಿ ಚಲೋ ಮಾಡಿದವರು ಒಂದೆರಡು ದಿನ ಅಲ್ಲಿ ಬೀಡು ಬಿಟ್ಟು ತಮ್ಮ ಊರಿಗೆ ವಾಪಸ್ ಬರುತ್ತಿದ್ದರು. ಚುನಾವಣೆಗಳು ಬಂದಾಗ ಎಂದಿನಂತೆ ಬಿಜೆಪಿಗೆ ಮತ ಹಾಕುತ್ತಿದ್ದರು.

ಆದರೆ, ರೈತ ಚಳವಳಿ ಇಂತಹ ಸಾಂಪ್ರದಾಯಿಕ ಹೋರಾಟಗಳ ಸಾಲಿಗೆ ಸೇರಲಿಲ್ಲ. ಮೂರು ಕೃಷಿ ಕಾಯ್ದೆಗಳನ್ನು ತಂದು ಕೃಷಿ ವಲಯವನ್ನು ಕಾರ್ಪೊರೇಟ್ ಕಂಪೆನಿಗಳ ಮಡಿಲಿಗೆ ಹಾಕಲು ಸರಕಾರ ಮುಂದಾದಾಗ ಪಂಜಾಬ್ ಮತ್ತು ಹರ್ಯಾಣದ ರೈತರು ದಿಲ್ಲಿಗೆ ಧಾವಿಸಿದರು. ದಿಲ್ಲಿಗೆ ಬಂದವರು ತಮ್ಮ ಊರಿಗೆ ವಾಪಸ್ ಹೋಗಲಿಲ್ಲ. ರಾಜಧಾನಿಯಲ್ಲೇ ಬೀಡು ಬಿಟ್ಟರು. ಒಬ್ಬರಲ್ಲ, ಇಬ್ಬರಲ್ಲ, ಸಾವಿರವಲ್ಲ ಎರಡು ಸಾವಿರವಲ್ಲ, ಲಕ್ಷಾಂತರ ಸಂಖ್ಯೆಯಲ್ಲಿ ದಿಲ್ಲಿಯಲ್ಲಿ ಜಂಡಾ ಊರಿ ಟೆಂಟ್‌ಗಳನ್ನು ಹಾಕಿಕೊಂಡು ಕರಾಳ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೆ ಊರಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕೂತರು. ಒಕ್ಕೂಟ ಸರಕಾರದ ಜೊತೆ ಹನ್ನೊಂದು ಸುತ್ತಿನ ಮಾತುಕತೆ ನಡೆದರೂ ಹಗ್ಗ ‘ಹರಿಯಲಿಲ್ಲ, ಕೋಲು ಮುರಿಯಲಿಲ್ಲ’.

ಬಸವಣ್ಣನವರಂತೆ ಗುರು ನಾನಕ್‌ರು ‘ಕಾಯಕವೇ ಕೈಲಾಸ’ ( ಕೀರತ್ ಕರೋ ) ಎಂಬ ಸಂದೇಶ ನೀಡಿದವರು. ಸಿಖ್ಖರು ಎಂದೂ ಮನುವಾದಿ ಕೋಮುವಾದಿ ಶಕ್ತಿಗಳ ಮೋಸದ ಬಲೆಗೆ ಬೀಳಲಿಲ್ಲ. ಸಿಖ್ ಧರ್ಮ ಹಿಂದೂ ಧರ್ಮದ ಉಪಶಾಖೆಯಲ್ಲ ಎಂದು ಸಾರಿ ಹೇಳಿದರು. ಆದರೆ, ಕರ್ನಾಟಕದ ನಾವು ಬಸವಣ್ಣನವರ ಅನುಯಾಯಿಗಳು ಕಾಯಕ ಜೀವಿಗಳ ನೆಲದಲ್ಲಿ ವಚನ ಚಳವಳಿಯನ್ನು ದಮನ ಮಾಡಿದ ಮನುವಾದಿ ಶಕ್ತಿಗಳು ಬಾಲ ಬಿಚ್ಚಲು ಅವಕಾಶ ನೀಡಿದೆವು. ಅದರ ಚರ್ಚೆ ಈಗ ಬೇಡ. ಆದರೆ ಗುರು ನಾನಕ್ ಜಯಂತಿ ದಿನವೇ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಘೋಷಿಸಿದ್ದು ಗಮನಾರ್ಹವಾಗಿದೆ.

 ಚಳವಳಿಗಳ ಕಾಲವೇ ಮುಗಿಯಿತೆನ್ನುವ ನಿರಾಸೆಯ ವಾತಾವರಣದಲ್ಲಿ ದಿಲ್ಲಿಯಲ್ಲಿ ನಡೆದ ರೈತ ಹೋರಾಟ ಜಾಗತಿಕ ಮಹತ್ವವನ್ನು ಪಡೆದಿದೆ. ಕೊರೆಯುವ ಚಳಿಯಲ್ಲಿ, ಉರಿವ ಬಿಸಿಲಲ್ಲಿ, ಸುರಿವ ಮಳೆಯಲ್ಲಿ ರೈತರು ನಡೆಸಿರುವ ಹೋರಾಟ ಇತಿಹಾಸವನ್ನು ನಿರ್ಮಿಸಿದೆ. ಚಳವಳಿ ಮಾಡುವ ಜನರನ್ನು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಎಂದು ಬೇರ್ಪಡಿಸಲು, ಒಡೆಯಲು ಅವಕಾಶ ನೀಡದೆ ನಾವೆಲ್ಲ ರೈತರು, ನಾವೆಲ್ಲ ಮಣ್ಣಿನ ಮಕ್ಕಳು, ನಾವೆಲ್ಲ ನೇಗಿಲ ಯೋಗಿಗಳು, ನಮಗೆ ಜಾತಿ ಮತ ಭೇದವಿಲ್ಲ ಎಂದು ಒಕ್ಕೊರಲಿಂದ ಹೋರಾಡಿ ಜಯ ಗಳಿಸಿದ ಬಹುದೊಡ್ಡ ವರ್ಗ ಹೋರಾಟವಿದು.

ಎಡಪಂಥೀಯ ಪಕ್ಷಗಳನ್ನು ಹೊರತುಪಡಿಸಿ ಬಹುತೇಕ ರಾಜಕೀಯ ಪಕ್ಷಗಳು ಫ್ಯಾಶಿಸ್ಟ್ ಬಿಜೆಪಿ ಸರಕಾರದ ದಮನಕಾರಿ ನೀತಿಯ ವಿರುದ್ಧ ಪ್ರತಿರೋಧವನ್ನು ಒಡ್ಡುವಲ್ಲಿ ವಿಫಲಗೊಂಡಿದ್ದವು. ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯನವರಂಥವರ ಧ್ವನಿ ಮಾತ್ರ ಕೇಳುತ್ತಿತ್ತು. ಇಂತಹ ಸನ್ನಿವೇಶದಲ್ಲಿ ರೈತರು ಪಕ್ಷಾತೀತ, ಜಾತ್ಯತೀತ ಹೋರಾಟ ನಡೆಸಿದರು.

ಎಡಪಂಥೀಯ ಪಕ್ಷಗಳು ನೇರವಾಗಿ ನಾಯಕತ್ವ ವಹಿಸದಿದ್ದರೂ ಈ ಪಕ್ಷಗಳ ಕಿಸಾನ್ ಸಭಾ ನಾಯಕರಾದ ಹನನ್ ಮೊಲ್ಲಾ, ಅಶೋಕ ಧವಳೆ, ವಿಜೂ ಕೃಷ್ಣ ಹಾಗೂ ಪಂಜಾಬಿನ ಎಡಪಂಥೀಯ ಚಿಂತಕ ಡಾ.ದರ್ಶನ ಪಾಲ್, ಲೋಹಿಯಾವಾದಿ ಚಿಂತಕ ಯೋಗೇಂದ್ರ ಯಾದವ್ ಮುಂತಾದವರು ರೈತಾಂದೋಲನದ ನಾಯಕ ರಾಕೇಶ್ ಟಿಕಾಯತ್ ಮುಂತಾದವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತರು.

ಈ ಹೋರಾಟ, ಪ್ರತಿಭಟನೆ ಇಲ್ಲಿಗೆ ಮುಗಿಯುವುದಿಲ್ಲ. ಫ್ಯಾಶಿಸ್ಟ್ , ಕಾರ್ಪೊರೇಟ್ ಕರಾಳ ಶಕ್ತಿಗಳಿಂದ ಪ್ರಭುತ್ವದ ಸೂತ್ರಗಳನ್ನು ಕಿತ್ತುಕೊಳ್ಳುವವರೆಗೆ ಹೋರಾಟ ಮುನ್ನಡೆಯಬೇಕು. ಜನಸಾಮಾನ್ಯರ ನೋವು ಸಂಕಟಗಳಿಗೆ ಮಿಡಿಯುವ ಕವಿ ವರವರರಾವ್, ಚಿಂತಕ ಆನಂದ್ ತೇಲ್ತುಂಬ್ಡೆ, ನ್ಯಾಯವಾದಿ ಸುಧಾ ಭಾರದ್ವಾಜ್, ಲೇಖಕ ಗೌತಮ್ ನವ್ಲಾಖಾ ಅವರಂತಹ ಇಪ್ಪತ್ತಕ್ಕೂ ಹೆಚ್ಚು ಅಪರೂಪದ ಜೀವಿಗಳನ್ನು ಸೆರೆಮನೆಯಿಂದ ಮುಕ್ತಗೊಳಿಸುವುದಕ್ಕಾಗಿಯೂ ಹೋರಾಟಗಳು ರೂಪುಗೊಳ್ಳಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯರಿಗೆಲ್ಲ ಜಾತಿ ಮತವೆನ್ನದೆ ಸಮಾನ ಅವಕಾಶ ನೀಡಿದ, ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ, ಮಹಿಳೆಯರು ಮತ್ತು ತಳ ಸಮುದಾಯಗಳ ರಕ್ಷಾ ಕವಚವಾದ ಬಾಬಾಸಾಹೇಬರ ಸಂವಿಧಾನವನ್ನು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಹೋರಾಟವನ್ನು ಮುನ್ನಡೆಸಬೇಕಾಗಿದೆ. ಪ್ರತಿರೋಧ, ಪ್ರತಿಭಟನೆ, ಹೋರಾಟಗಳಿಂದ ಮಾತ್ರ ನಮ್ಮ ಸ್ವಾತಂತ್ರ, ಸಮಾನತೆ, ಜನತಂತ್ರ ಮತ್ತು ಬಹುತ್ವ ಭಾರತವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂಬುದನ್ನು ಮರೆಯಬಾರದು

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News