ಮಣ್ಣು ಮುನಿದರೆ...

Update: 2021-12-05 03:33 GMT

ಮೇಲ್ಮಣ್ಣು ಗ್ರಾಮೀಣ ಸಮುದಾಯದ ಆಸ್ತಿ. ಸಮುದಾಯದಲ್ಲಿರುವ ಪ್ರತಿಯೊಂದು ಜೀವಿಯ ಉಳಿವು ಅಳಿವು ಆ ಮೇಲ್ಮಣ್ಣನ್ನೇ ಅವಲಂಬಿಸಿದೆ. ನೂರಾರು ವರ್ಷಗಳ ಕಾಲದಿಂದ ತಲೆತಲಾಂತರದಿಂದ ಕೃಷಿ ಕುಟುಂಬಗಳಿಗೆ ಹಾಗೂ ಸಮುದಾಯದ ಇತರರಿಗೆ, ಜಾನುವಾರುಗಳಿಗೆ, ಗಿಡಮರಗಳಿಗೆ, ಪ್ರಾಣಿಪಕ್ಷಿಗಳಿಗೆ ಹಾಗೂ ತನ್ನ ವಲಯದಲ್ಲಿರುವ ಸಕಲ ಜೀವ ಜಂತುಗಳಿಗೆ ಆಸರೆಯಾಗಿದ್ದು, ಹಸಿವು-ಬಾಯಾರಿಕೆಯನ್ನು ನೀಗಿಸುತ್ತಿದ್ದ ಈ ಮೇಲ್ಮಣ್ಣು, ಇಂದು ತಾನೇ ಹಸಿವು ಮತ್ತು ಬಾಯಾರಿಕೆಗಳಿಂದ ನರಳುತ್ತಿದೆ. ಕಮರುತ್ತಿದೆ. ನಿರ್ನಾಮಗೊಳ್ಳುವ ಹಂತಕ್ಕೆ ತಲುಪಿದೆ.

ನಮ್ಮ ಹೊಲಗಳಲ್ಲಿನ ಮೇಲ್ಮಣ್ಣು ಸವೆದರೆ, ಅದರಿಂದ ಆಗುವ ದುಷ್ಪರಿಣಾಮಗಳು ಒಂದೆರಡಲ್ಲ. ಅವು ಸಮಾಜಕ್ಕೆ ಹಲವು ರೀತಿಯ ಸಮಸ್ಯೆಯನ್ನು ತಂದೊಡ್ಡುತ್ತವೆ. ಯಾವುದೇ ಬೆಳೆಯನ್ನು ಬೆಳೆಯಲು ಮೇಲ್ಮಣ್ಣು ಬಹುಮುಖ್ಯ. ಆ ಮೇಲ್ಮಣ್ಣಿನಲ್ಲಿನ ಮೂರು ಅಂಶಗಳು ಬೆಳೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವೇ ಸಾವಯವ ಅಂಶ. ತೇವಾಂಶ ಮತ್ತು ಜೀವಾಂಶ. ಈ ಮೂರೂ ಆಂಶಗಳಿರುವ ಮೇಲ್ಮಣ್ಣು ಸಂರಕ್ಷಣೆ ಅತೀ ಮುಖ್ಯ. ಒಂದು ಸಮುದಾಯದ ದುರ್ಗತಿ ಪ್ರಾರಂಭವಾಗುವುದೇ ಆ ಪ್ರದೇಶದಲ್ಲಿರುವ ಮೇಲ್ಮಣ್ಣು ನಾಶವಾಗುವುದರಿಂದ. ಅದರ ಮೊದಲ ಸೂಚನೆಯೇ ಬೆಳೆ ಇಳುವರಿಯಲ್ಲಿ ಕುಸಿತ. ಒಂದು ಹೊಲದ ಮೇಲ್ಮಣ್ಣು ನಾಶವಾದರೆ, ಆ ಹೊಲ ತಾನು ಬೆಳೆಯುತ್ತಿದ್ದ ಆಹಾರ ಬೆಳೆಗಳ ಉತ್ಪಾದನಾ ಶಕ್ತಿಯನ್ನೇ ಕಳೆದುಕೊಳ್ಳುತ್ತದೆ. ಇದರಿಂದ ಆಹಾರದ ಕೊರತೆ ಸೃಷ್ಟಿಯಾಗುತ್ತದೆ. ಹೊರಗಿನಿಂದ ಕೊಂಡು ತರುವ ಆಹಾರ ಸಾಮಗ್ರಿಗಳ ಬೆಲೆ ಏರುತ್ತದೆ. ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆ ಎದ್ದು ಕಾಣುತ್ತದೆ.

ಮೇಲ್ಮಣ್ಣಿಲ್ಲದ ಹೊಲಗಳು ಬಯಲುಗಳಾಗುತ್ತವೆ. ಬಯಲುಗಳು ಕ್ರಮೇಣ ಬರಡಾಗುತ್ತದೆ. ಬರಡು ಹೊಲಗಳನ್ನು ಮತ್ತೆ ಫಲವತ್ತಾಗಿಸುವುದು ದುಬಾರಿ ಯಾಗುತ್ತದೆ. ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಬೆಳೆ ಇಳುವರಿಯಲ್ಲಾದ ನಷ್ಟದಿಂದ ಕೃಷಿ ಮೂಲದ ಆದಾಯವೂ ಕಡಿಮೆಯಾಗುತ್ತದೆ. ಇದರಿಂದ ರಾಜ್ಯಕ್ಕೆ ಆರ್ಥಿಕ ನಷ್ಟವುಂಟಾಗುತ್ತದೆ. ಈ ಸ್ಥಿತಿಯಲ್ಲಿ ಆಡಳಿತವು ಆಹಾರ ಬೆಳೆಗಳನ್ನು ಬೆಳಸುವತ್ತ ರೈತರನ್ನು ಪ್ರೋತ್ಸಾಹಿಸುವ ಬದಲು, ವಾಣಿಜ್ಯ ಬೆಳೆಗಳನ್ನು ಬೆಳೆಸಲು ಪ್ರಚೋದಿಸುತ್ತದೆ. ಇದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಹಾರದ ಅಭಾವ ವ್ಯಾಪಕವಾಗತೊಡಗುತ್ತದೆ. ನಿರುದ್ಯೋಗ ಹೆಚ್ಚಾಗುತ್ತದೆ. ಗ್ರಾಮೀಣ ಸಮುದಾಯದ ಜನಜೀವನದಲ್ಲಿ ಏರುಪೇರಾಗುತ್ತದೆ. ಬಹುತೇಕರು ಜೀವನ ನಿರ್ವಹಣೆಗಾಗಿ ಉದ್ಯೋಗವನ್ನು ಹುಡುಕುತ್ತಾ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ.

ಒಂದು ಸಮುದಾಯದ ಉಳಿವು ಅಳಿವು, ಆ ಪ್ರದೇಶದಲ್ಲಿರುವ ಮೇಲ್ಮಣ್ಣಿನ ಗುಣಮಟ್ಟದ ಮೇಲೆ ಅವಲಂಬಿಸಿದೆ. ಹಲವು ಶತಮಾನಗಳ ಕಾಲ ಸಮೃದ್ಧಿಯಿಂದ ವಿಜೃಂಭಿಸಿದ್ದ ಅನೇಕ ಸಮುದಾಯಗಳು/ನಾಗರಿಕತೆಗಳು ತನ್ನಲ್ಲಿದ್ದ ಮೇಲ್ಮಣ್ಣನ್ನು ಕಡೆಗಣಿಸಿದ್ದರಿಂದಲೇ ಕೆಲವೇ ದಶಕಗಳಲ್ಲಿ ನಾಮಾವಶೇಷವಾದ ನಿದರ್ಶನಗಳು ಚರಿತ್ರೆಯಲ್ಲಿ ದಾಖಲಾಗಿವೆ. ಹೀಗೆ ನಾಮಾವಶೇಷಗೊಂಡ ಸಮುದಾಯಗಳಲ್ಲಿ ಮಾಯನ್ ಸಮುದಾಯವೂ ಒಂದು. ಈಗಿನ ಗ್ವಾಟೆಮಾಲಾವಿರುವ ಪ್ರದೇಶದಲ್ಲಿ ಒಂದು ಕಾಲಘಟ್ಟದಲ್ಲಿ ಮಾಯನ್ ಸಮುದಾಯ 1,700 ವರ್ಷಗಳ ಕಾಲ ವಿಜೃಂಭಿಸಿತ್ತು. ಏರುತ್ತಿದ್ದ ಜನಸಂಖ್ಯೆಗೆ ಆಹಾರ ಪೂರೈಸುವ ಸಲುವಾಗಿ ಕಾಡನ್ನು ಕಡಿದು ಕೃಷಿಭೂಮಿಯಾಗಿ ಪರಿವರ್ತಿಸಿದ ನಂತರ, ಅಲ್ಲಿನ ಮೇಲ್ಮಣ್ಣು ನಿಧಾನವಾಗಿ ಸವೆಯತೊಡಗಿತು. ಸವೆದುಹೋದ ಮಣ್ಣಲ್ಲಿ ಬೆಳೆ ಉತ್ಪಾದನೆ ಕುಂಠಿತಗೊಳ್ಳತೊಡಗಿತು. ಸವೆಯುತ್ತಿದ್ದ ಮೇಲ್ಮಣ್ಣನ್ನು ಸಂರಕ್ಷಿಸುವ ಕೆಲಸ ನಡೆಯಲಿಲ್ಲ. ತನ್ನಲ್ಲಿದ್ದ ಮೇಲ್ಮಣ್ಣನ್ನು ನಿರ್ಲ್ಯಕ್ಷಿಸಿದ್ದೇ, ಆ ಸಮುದಾಯ ಅವನತಿ ಹೊಂದಲು ಮೂಲಕಾರಣ ಎನ್ನುತ್ತಾರೆ ಪ್ರೊಫೆಸರ್ ಮೇರಿ ಸ್ಕೋಲ್ಸ್ ಮತ್ತು ಡಾ. ಬಾಬ್ ಸ್ಕೋಲ್ಸ್.

ಇತಿಹಾಸವೂ ಅದನ್ನೇ ಪದೇ ಪದೇ ನಮಗೆ ಮನಗಾಣಿಸಲು ಪ್ರಯತ್ನಿಸುತ್ತಿದೆ. ಈ ಹಿಂದೆ ನಮ್ಮ ಜಗತ್ತಿನ ಹಲವು ಭಾಗಗಳಲ್ಲಿ ನೂರಾರು ವರ್ಷಗಳ ಕಾಲ ವಿಜೃಂಭಿಸಿ ಮೆರೆದಿದ್ದ ಹತ್ತುಹಲವು ಸಮುದಾಯಗಳು ಅಥವಾ ನಾಗರಿಕತೆಗಳು ಕ್ರಮೇಣ ನಾಶವಾಗಿದ್ದು ನಮಗೆ ಗೊತ್ತೇ ಇದೆ. ಈ ಸಮುದಾಯಗಳು /ನಾಗರಿಕತೆಗಳು ನಾಶವಾಗಿದ್ದಕ್ಕೆ ಕಾರಣಗಳು ಏನೇ ಇದ್ದರೂ, ಇತರರಿಗೆ ಮಾದರಿಯಾಗಿ ಬದುಕಿದ್ದ, ಬಾಳಿದ್ದ ಈ ಸಮುದಾಯಗಳು ಒಂದು ಕಾಲಘಟ್ಟದಲ್ಲಿ ತಮ್ಮಲ್ಲಿದ್ದ ಫಲವತ್ತು ಹಾಗೂ ಉತ್ಪಾದಕ ಮೇಲ್ಮಣ್ಣನ್ನು ನಿರ್ಲ್ಯಕ್ಷಿಸಿದ್ದರಿಂದಲೇ, ಅವು ನಾಶವಾದ ವೆಂದು ಕೆಲವು ಅಧ್ಯಯನಗಳು ಹೇಳುತ್ತವೆ.

ನಮ್ಮ ಹೊಲಗಳಲ್ಲಿರುವ ಮೇಲ್ಮಣ್ಣಿನ ಸವೆತದಿಂದಾಗುತ್ತಿರುವ ಹಲವುಬಗೆಯ ಮೇಲ್ಮಣ್ಣು ಸವೆತದ ಮೊದಲ ಸೂಚನೆಯೇ ಬೆಳೆಯುವ ಬೆಳೆಗಳ ಇಳುವರಿಯಲ್ಲಿ ಭಾರೀ ಇಳಿಕೆ. ನಂತರ, ಬೀಳುವ ಮಳೆನೀರು ಮಣ್ಣೊಳಗೆ ಇಳಿಯದೆ, ಹೊಲದಿಂದಾಚೆಗೆ ಹರಿದುಹೋಗುತ್ತಾ, ತನ್ನೊಡನೆ ಟನ್ನುಗಟ್ಟಲೆ ತೂಕದಲ್ಲಿ ಅಪಾರ ಪ್ರಮಾಣದ ಮೇಲ್ಮಣ್ಣನ್ನೂ ಕೊಂಡೊಯ್ಯುತ್ತದೆ. ಸಮುದಾಯಗಳ ಆಧಾರವಾಗಿರುವ ಮೇಲ್ಮಣ್ಣು ಮತ್ತು ಜೀವನಾಡಿಯಾಗಿರುವ ಮಳೆನೀರು ನಿರ್ಲಕ್ಷದಿಂದ ಮೇಲ್ಮಣ್ಣಿನ ಸವೆತದಿಂದ ಜನಸಮುದಾಯಗಳ ಸುಗಮ ಜೀವನವನ್ನು ಸುಧಾರಿಸುವುದು ಕಷ್ಟವಾಗಿಬಿಡುತ್ತದೆಯಲ್ಲದೆ ಸಮುದಾಯ ಬದುಕುಳಿಯಲು ದೊಡ್ಡ ಸಾಹಸಪಡಬೇಕಾದೀತು.

Writer - ಪಿ. ಶ್ರೀನಿವಾಸ್

contributor

Editor - ಪಿ. ಶ್ರೀನಿವಾಸ್

contributor

Similar News

ಜಗದಗಲ
ಜಗ ದಗಲ