ಅಂದಿನ ಭಾರತ - ಇಂದಿನ ಭಾರತ

Update: 2021-12-05 19:30 GMT

 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಜಯಗಳಿಸಲು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವುದು ಅವರಿಗೆ ಅನಿವಾರ್ಯವಾಗಿದೆ. ಅದಕ್ಕಾಗಿ ಮತಾಂತರ, ಗೋ ಹತ್ಯೆ ನಿಷೇಧ, ಲವ್ ಜಿಹಾದ್ , ಪಾಕಿಸ್ತಾನ ಧ್ವಜ ಹಾರಾಟ, ನಾಗಬನ ಧ್ವಂಸದಂತಹ ದುಷ್ಕೃತ್ಯಗಳಿಗೆ ಮೊರೆ ಹೋಗುವುದು ಅವರಿಗೆ ಅನಿವಾರ್ಯವಾಗಿದೆ. ಬಹುಸಂಖ್ಯಾತರೆಂದು ನಂಬಿಸಲಾದ ಜನ ಸದಾ ಮತದ ಮತ್ತೇರಿಸಿಕೊಂಡಿರಬೇಕೆಂದು ಅವರು ಬಯಸುತ್ತಾರೆ.


ಮಸೀದಿ ಕೆಡವಲು ಬಾಬಾಸಾಹೇಬರ ಪರಿನಿರ್ವಾಣದ ದಿನವನ್ನೇ ಆರಿಸಿಕೊಂಡವರು ದೇಶದ ಅಧಿಕಾರ ಸೂತ್ರ ಹಿಡಿದಿದ್ದಾರೆ. ಮಸೀದಿಯ ಗುಮ್ಮಟಗಳು ಉರುಳಿದಾಗ ಪ್ರಧಾನಿಯಾಗಿದ್ದ ಕಾಂಗ್ರೆಸ್‌ನ ಪಿ.ವಿ.ನರಸಿಂಹರಾವ್ ಈಗಿಲ್ಲ. ಮಸೀದಿಯೊಂದಿಗೆ ತನಗೆ ಪ್ರಧಾನಿ ಪಟ್ಟ ನೀಡಿದ ಕಾಂಗ್ರೆಸ್‌ನ್ನೇ ಮುಗಿಸಿ ಅವರು ನಿರ್ಗಮಿಸಿದರು. ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈಗ ಲೋಕಸಭೆಯಲ್ಲಿ ಎರಡಂಕಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಾಗದೆ ಪರದಾಡುತ್ತಿದೆ.

ಕೋಮುವಾದಿಗಳು ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲಸಮಗೊಳಿಸಿ ಇಂದಿಗೆ ಬರೋಬ್ಬರಿ 30 ವರ್ಷಗಳು ಗತಿಸಿವೆ. ಈ ಮೂರು ದಶಕಗಳಲ್ಲಿ ಭಾರತ ಸಾಕಷ್ಟು ಅಹಿತಕರ ಬದಲಾವಣೆ ಕಂಡಿದೆ. ಆ ನಂತರ ಜನಿಸಿದ ಪೀಳಿಗೆಗೆ ಅಂದಿನ ಭಾರತದ ಅರಿವಿರಲು ಸಾಧ್ಯವಿಲ್ಲ. ಈಗ ನಾವು ನೋಡುತ್ತಿರುವ ಭಾರತಕ್ಕೂ ಹಿಂದಿನ ಭಾರತಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡಲು ಮುಖ್ಯ ಅಡ್ಡಿಯಾಗಿರುವ ಕಾಂಗ್ರೆಸ್‌ನ್ನು ಹೊಸಕಿ ಹಾಕಲು ಎಲ್ಲ ಶಕ್ತಿಗಳನ್ನು ಬಳಸಿಕೊಳ್ಳುತ್ತ್ತಾ ಬಂದವರು ಈಗ ಮಮತಾ ಬ್ಯಾನರ್ಜಿಗೆ ಸುಪಾರಿ ನೀಡಿದ್ದಾರೆ. ಆಕೆಯೂ ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳ ಏಕತೆಗೆ ಅಡ್ಡಿಯಾಗಿದ್ದಾರೆ. ಆದರೆ ಭಾರತದ ಎಲ್ಲಾ ರಾಜ್ಯಗಳಲ್ಲಿ, ಜಿಲ್ಲೆ ತಾಲೂಕುಗಳಲ್ಲಿ ಎಲ್ಲ ಸಮುದಾಯಗಳ ಜನರನ್ನು ಒಳಗೊಂಡ ಪಕ್ಷ ಕಾಂಗ್ರೆಸ್ ಎಂಬುದು ವಾಸ್ತವ ಸಂಗತಿ.

ಅಯೋಧ್ಯೆಯ ಬಾಬರಿ ಮಸೀದಿ ನೆಲಸಮದ ಘಟನೆ ಈಗ ಇತಿಹಾಸದ ಪುಟ ಸೇರಿದೆ. ಮಸೀದಿ ಕೆಡವಿದ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದ ಸುದ್ದಿ ಹಳೆಯದಾಗಿದೆ. ಹಿಂದೂ ಓಟ್ ಬ್ಯಾಂಕ್‌ಗೆ ಹೆದರಿದ ಕಾಂಗ್ರೆಸ್ ಕೂಡ ಮಂದಿರ ನಿರ್ಮಾಣದ ಶಿಲಾನ್ಯಾಸದ ದಿನದಂದು ಸಂಭ್ರಮಿಸಿತು. ಆ ಮಟ್ಟಿಗೆ ವಾತಾವರಣ ಬದಲಾಗಿದೆ.

ಬುದ್ಧ ವಿಹಾರ ಮತ್ತು ಜೈನ ಬಸದಿಗಳನ್ನು ಕಡವಿ ಮಂದಿರಗಳನ್ನು ನಿರ್ಮಿಸಿದ ಚರಿತ್ರೆಯ ವಿಕೃತಿಯ ಬಗ್ಗೆ ಮೌನ ತಾಳುವ ಕೋಮುವಾದಿ ಶಕ್ತಿಗಳು ಅಯೋಧ್ಯೆಯ ಆ ಮಸೀದಿ ಹಿಂದೆ ಮಂದಿರವಾಗಿತ್ತೆಂದು ನೆಪ ಮುಂದೆ ಮಾಡಿ ಅದನ್ನು ಕೆಡವಿದ್ದು ಶ್ರೀ ರಾಮಚಂದ್ರನ ಮೇಲಿನ ಭಕ್ತಿಯಿಂದಲ್ಲ, ರಾಜಕೀಯ ಕಾರಣಗಳಿಗಾಗಿ ಅದನ್ನು ಕೆಡವಿ ರಾಜಕೀಯ ಬೇಳೆ ಬೇಯಿಸಿಕೊಂಡರು.

ಬಾಬರಿ ಮಸೀದಿ ನೆಲಕ್ಕುರುಳಿದ 1992ರ ಡಿಸೆಂಬರ್ 6ರ ದಿನ ನಾನು ಬೆಂಗಳೂರಿನಲ್ಲಿದ್ದೆ. ಈ ಕರಾಳ ಘಟನೆ ನಡೆದ ಮಾರನೇ ದಿನ ಟೌನ್ ಹಾಲ್ ಎದುರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆ. ಅಂದು ಗಿರೀಶ್ ಕಾರ್ನಾಡ್, ಲಂಕೇಶ್, ಶೂದ್ರ ಶ್ರೀನಿವಾಸ ಸೇರಿದಂತೆ ನಾವೆಲ್ಲ ಸಮಾನ ಮನಸ್ಕರು ಶಾಂತಿಯುತ ಮೌನ ಪ್ರತಿಭಟನೆ ನಡೆಸಿದರೆ, ನಮ್ಮ ಎದುರು ಗಾಯಕ ಸಿ.ಅಶ್ವತ್ಥ ಮತ್ತು ಅವರ ಬೆಂಬಲಿಗರು ಮಸೀದಿ ಕೆಡವಿದ್ದನ್ನು ಬೆಂಬಲಿಸಿ ಘೋಷಣೆ ಕೂಗುತ್ತಿದ್ದರು. ಆ ದಿನಗಳನ್ನು ನೆನೆಸಿಕೊಂಡರೆ ಮನಸ್ಸು ಭಾರವಾಗುತ್ತದೆ.

ಹಿಂದುಳಿದ ಜನ ವರ್ಗಗಳಿಗೆ ಮೀಸಲು ನೀಡಲು ಹೊರಟ ವಿ.ಪಿ.ಸಿಂಗ್ ಅಧಿಕಾರ ಕಳೆದುಕೊಂಡರು. ಮಂಡಲ ಆಯೋಗದ ಫಲಾನುಭವಿ ವರ್ಗಗಳ ಯುವಕರು ಅದನ್ನು ವಿಫಲಗೊಳಿಸಲು ಮಸಲತ್ತು ನಡೆಸಿದ ಮನುವಾದಿ, ಕೋಮುವಾದಿ ಶಕ್ತಿಗಳ ಬೆಂಗಾವಲು ಪಡೆಗಳನ್ನು ಸೇರಿದ್ದು ಚರಿತ್ರೆಯ ವ್ಯಂಗ್ಯವಲ್ಲದೆ ಬೇರೇನೂ ಅಲ್ಲ.

ಎಂಭತ್ತರ ದಶಕದ ಕೊನೆಯಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದರು. ಆಗ ಅವರು ಧೂಳು ಹಿಡಿದುಕೊಂಡು ಬಿದ್ದಿದ್ದ ಮಂಡಲ ಆಯೋಗದ ವರದಿಯನ್ನು ಜಾರಿಗೆ ತರಲು ಮುಂದಾದರು. ಇತರ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲು ಒದಗಿಸುವ ಮಂಡಲ ವರದಿ ವಿರುದ್ಧ ಮೇಲ್ಜಾತಿ, ಮೇಲ್ವರ್ಗಗಳ ಕುತಂತ್ರದಿಂದ ದೊಡ್ಡ ಆಂದೋಲನವೇ ನಡೆಯಿತು. ಮಂಡಲ ಆಯೋಗ ಜಾರಿ ವಿರುದ್ಧ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಕಮಂಡಲ ಅಸ್ತ್ರವನ್ನು ಪ್ರಯೋಗಿಸಿತು. ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಗುಜರಾತಿನ ಸೋಮನಾಥದಿಂದ ಅಯೋಧ್ಯೆಗೆ ರಥಯಾತ್ರೆ ಹೊರಟರು. ಈ ರಥಯಾತ್ರೆ ಹೊರಡುವಾಗ ಲೋಕಸಭೆಯಲ್ಲಿ ಕೇವಲ ಇಬ್ಬರು ಸದಸ್ಯರನ್ನು ಹೊಂದಿದ್ದ ಬಿಜೆಪಿ ರಥಯಾತ್ರೆಯ ನಂತರ ನಡೆದ ಚುನಾವಣೆಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿತು. ಎಂಭತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ನಂತರ ಭಾರತ ಸರಕಾರದ ಅಧಿಕಾರ ಸೂತ್ರ ಹಿಡಿದುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಹಿಂದುತ್ವದ ಧಾರ್ಮಿಕ ಸ್ವರೂಪವನ್ನು ನೀಡಲಾಯಿತು. ಬರೀ ಅಷ್ಟು ನೀಡಿದರೆ ಸಾಲದು, ತಳ ಸಮುದಾಯಗಳ ಜನರನ್ನು ಬುಟ್ಟಿಗೆ ಹಾಕಿಕೊಳ್ಳಲು ಹಿಂದುತ್ವಕ್ಕೆ ಅಪಾಯ ಎಂಬ ಕಟ್ಟುಕಥೆಯ ಜಾಲವನ್ನು ಹೆಣೆಯಲಾಯಿತು. ಧರ್ಮದ ಹೆಸರಿನಲ್ಲಿ ವಿಭಿನ್ನ ಶ್ರೇಣಿಗೆ ಸೇರಿದ ಜನರನ್ನು ಒಟ್ಟುಗೂಡಿಸಲು ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ನಂಬಿಸಿ ಕಲ್ಪಿತ ಶತ್ರುಗಳನ್ನು ಸೃಷ್ಟಿ ಸಲಾಯಿತು. ಮುಸ್ಲಿಮರು, ಕ್ರೈಸ್ತರು, ಕಮ್ಯುನಿಸ್ಟರು ಮತ್ತು ಅವರನ್ನು ಬೆಂಬಲಿಸುವ ಜಾತ್ಯತೀತ ಮನೋಭಾವದ ಎಲ್ಲರೂ ಹಿಂದೂ ಧರ್ಮದ ಶತ್ರುಗಳೆಂದು ತೋರಿಸಿ ಧರ್ಮದ ಹೆಸರಿನಲ್ಲಿ ಒಂದುಗೂಡಿಸಲು ನಾನಾ ಕುತಂತ್ರಗಳ ಜಾಲ ಹೆಣೆದಿರುವುದು ಎಲ್ಲರಿಗೂ ತಿಳಿದ ಸಂಗತಿ.

ಹೀಗೆ ಅಯೋಧ್ಯೆಯ ಮಸೀದಿ ನಿರ್ನಾಮ ಮತ್ತು ಮಂದಿರ ನಿರ್ಮಾಣ ವಿವಾದಗಳು ಅಂದುಕೊಂಡಷ್ಟು ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿ ವ್ಯಾಖ್ಯಾನಕ್ಕೆ ಸಿಗುವುದಿಲ್ಲ. ಒಂದು ಸ್ಥಳೀಯ ಮಸೀದಿ ನಿರ್ನಾಮ ಬಹುತ್ವ ಭಾರತದ ಮುನ್ನಡೆಯ ಪಥವನ್ನೇ ಬದಲಿಸಿತು. ಇದು ಬರೀ ಸ್ಥಳೀಯ ಸಮಸ್ಯೆಯಾಗಿದ್ದರೆ, ಅಲ್ಲಿಗೆ ಮುಗಿಯುತ್ತಿತ್ತು. ಆದರೆ, ಮತ ನಿರಪೇಕ್ಷ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಬದಲಿಸಿ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬೇರುಗಳನ್ನು ಬಲಗೊಳಿಸುವ ಅತ್ಯಂತ ನಾಜೂಕಾದ ಕುತಂತ್ರದ ಕಾರ್ಯ ಸೂಚಿ ಇದರ ಆಳದಲ್ಲಿ ಇರುವುದು ಮತ್ತೆ ಮತ್ತೆ ಸ್ಪಷ್ಟವಾಗುತ್ತಲೇ ಇದೆ.

ಈ ಮಸಲತ್ತುಗಳನ್ನು ನಡೆಸಿ ಒಕ್ಕೂಟ ಸರಕಾರದ ಅಧಿಕಾರವನ್ನೇನೋ ಹಿಡಿಯಲಾಯಿತು. ಆದರೆ ಭಾರತದಂತಹ ವಿಭಿನ್ನ ಜನಸಮುದಾಯಗಳಿಂದ ಕೂಡಿದ ಹಲವಾರು ಭಾಷೆ, ಸಂಸ್ಕೃತಿಗಳನ್ನು ಹೊಂದಿದ ಭೂ ಪ್ರದೇಶವನ್ನು ಆಳಲು ಬರೀ ಕಲ್ಪಿತ ಧರ್ಮವೊಂದೇ ಸಾಕಾಗುವುದಿಲ್ಲ. ಜನರ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಕ್ರಮ, ನೈಪುಣ್ಯ ಬೇಕಾಗುತ್ತದೆ. ಈಗ ಕೋಮು ಉನ್ಮಾದ ಕೆರಳಿಸಿ ಅಧಿಕಾರ ಹಿಡಿದು ಕೂತವರಿಗೆ ಅಂತಹ ಯಾವುದೇ ಕಾರ್ಯಕ್ರಮವಿಲ್ಲ. ಅದಕ್ಕಾಗಿ ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಜಯಗಳಿಸಲು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವುದು ಅವರಿಗೆ ಅನಿವಾರ್ಯವಾಗಿದೆ. ಅದಕ್ಕಾಗಿ ಮತಾಂತರ, ಗೋ ಹತ್ಯೆ ನಿಷೇಧ, ಲವ್ ಜಿಹಾದ್ , ಪಾಕಿಸ್ತಾನ ಧ್ವಜ ಹಾರಾಟ, ನಾಗಬನ ಧ್ವಂಸದಂತಹ ದುಷ್ಕೃತ್ಯಗಳಿಗೆ ಮೊರೆ ಹೋಗುವುದು ಅವರಿಗೆ ಅನಿವಾರ್ಯವಾಗಿದೆ. ಬಹುಸಂಖ್ಯಾತರೆಂದು ನಂಬಿಸಲಾದ ಜನ ಸದಾ ಮತದ ಮತ್ತೇರಿಸಿಕೊಂಡಿರಬೇಕೆಂದು ಅವರು ಬಯಸುತ್ತಾರೆ.

ದುಡಿಯುವ ದಲಿತ ಸಮುದಾಯಗಳಲ್ಲಿ ರಾಜಕೀಯ, ಸೈದ್ಧಾಂತಿಕ ಜಾಗೃತಿ ಮೂಡುವವರೆಗೆ ಭಾರತದ ಇಂದಿನ ಪರಿಸ್ಥಿತಿಯಲ್ಲಿ ಅಂತಹ ಬದಲಾವಣೆ ಸಾಧ್ಯವಿಲ್ಲ. ಆದರೆ ಭಾರತದ ಅದರಲ್ಲೂ ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನದ ರೈತ ಸಮುದಾಯ ಮಾತ್ರ ಇವರ ಮೋಸದ ಜಾಲಕ್ಕೆ ಬಲಿ ಬೀಳದೆ ಒಗ್ಗಟ್ಟಿನ ಸುದೀರ್ಘವಾದ ಹೋರಾಟವನ್ನು ನಡೆಸಿ ಇವರ ಮತಾಂಧತೆಯಿಂದ ಸಂಪಾದಿಸಿದ ಅಹಂಕಾರಕ್ಕೆ ಅಂಕುಶದಿಂದ ತಿವಿಯಿತು. ಇದರ ಪರಿಣಾಮವಾಗಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಸರಕಾರ ವಾಪಸ್ ಪಡೆಯಬೇಕಾಯಿತು.

ಆದರೂ ಮಸೀದಿ ಧ್ವಂಸದ ಮುಂಚಿನ ಭಾರತ ಹಾಗೂ ಆ ನಂತರದ ಭಾರತಗಳ ನಡುವೆ ಬಹುದೊಡ್ಡ ವ್ಯತ್ಯಾಸ ಎದ್ದು ಕಾಣುತ್ತದೆ. ಕಳೆದ 30 ವರ್ಷಗಳಲ್ಲಿ ಜನಿಸಿದ ಹೊಸ ಪೀಳಿಗೆಯ ಯುವಕರ ಮೆದುಳಿಗೆ ಮುಸ್ಲಿಂ ದ್ವೇಷದ ವಿಷದ ಸೂಜಿ ಚುಚ್ಚುವ ದುಷ್ಟ ಕಾರ್ಯ ನಿರಂತರವಾಗಿ ನಡೆದಿದೆ. ಭಾರತದ ಬಹುತೇಕ ಊರುಗಳಲ್ಲಿ ಮನಸ್ಸುಗಳು ಒಡೆದಿವೆ. ಒಡೆದ ಮನಸ್ಸುಗಳನ್ನು ಒಂದುಗೂಡಿಸಿ ಹೊಸ ಕನಸುಗಳನ್ನು ಕಾಣುವ ದಿನಗಳು ಬರಲಿ ಎಂಬ ಸದಾಶಯದ ಧ್ವನಿಗಳಿಗೆ ಬಲ ಬರಬೇಕಾಗಿದೆ.

ಬಹುತ್ವ ಭಾರತ ಕುವೆಂಪು ಬಯಸಿದ ಸರ್ವಜನಾಂಗದ ಸುಂದರ ತೋಟವಾಗಿ ಉಳಿಯಬೇಕೆಂದರೆ ಬಾಬಾಸಾಹೇಬರ ಸಂವಿಧಾನ ಸುರಕ್ಷಿತವಾಗಿ ಇರಬೇಕು. ಸಂವಿಧಾನವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ.

ಹೀಗೆ ಅಂದಿನ ಭಾರತ ಮತ್ತು ಇಂದಿನ ಭಾರತದ ಸಿಹಿ ಕಹಿ ನೆನಪುಗಳ ಜೊತೆಗೆ ಪ್ರೀತಿ,ವಿಶ್ವಾಸ, ಆತ್ಮೀಯತೆ, ಸಹಬಾಳ್ವೆಯಿಂದ ಕೂಡಿದ ಮುಂದಿನ ಭಾರತವನ್ನು ಕಟ್ಟುವ ಸವಾಲು ಹೊಸ ಪೀಳಿಗೆಯ ಮುಂದಿದೆ. ಈ ಭಾರತದ ಎಲ್ಲ ಸಮುದಾಯಗಳ ಯುವಕರು ಈ ಸವಾಲನ್ನು ಸ್ವೀಕರಿಸಿ ಸರ್ವ ಜನಾಂಗದ ಶಾಂತಿಯ ತೋಟವನ್ನು ಕಾಪಾಡಿಕೊಳ್ಳುತ್ತಾರೆಂಬ ವಿಶ್ವಾಸವೇ ನಮ್ಮ ಮುಂದಿನ ಬೆಳಕಾಗಿದೆ.

ನಮ್ಮ ಮನಸ್ಸು ಕಟ್ಟುವ ಕಾರ್ಯವನ್ನು ವಿಫಲಗೊಳಿಸಲು ಅವರು ನಾನಾ ಮಸಲತ್ತು ಮಾಡುತ್ತಿರುತ್ತಾರೆ. ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿರುವ ಸರಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆ ಮೊಟ್ಟೆ ಕೊಡುವುದನ್ನು ವಿರೋಧಿಸುವ ಹೊಸ ಅಸ್ತ್ರ ಅವರಿಗೆ ವರದಾನವಾಗಿ ಬಂದಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸೀಮಿತವಾದ ಈ ಯೋಜನೆಯನ್ನು ವಿರೋಧಿಸಲು ಕೆಲ ಮಠಾಧೀಶರು ಮತ್ತು ಸ್ವಾಮಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆಹಾರದ ಹೆಸರಿನಲ್ಲಿ ಬಡವರನ್ನು ವಿಭಜಿಸಿ ಆಳುವ ಹುನ್ನಾರ ನಡೆದಿದೆ

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News