‘ಕಿಸಾನ್ ಸತ್ಯಾಗ್ರಹ’ ಒಂದು ಐತಿಹಾಸಿಕ ಹೋರಾಟದ ದಾಖಲೆ

Update: 2021-12-06 19:30 GMT

ಮೋದಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದರ ಹಿಂದೆ ರಾಜಕೀಯ ಕಾರಣಗಳೇನೇ ಇರಬಹುದು. ಮೇಲ್ನೋಟಕ್ಕೆ ಮೋದಿ ಸೋಲು, ರೈತರ ಗೆಲುವಿನಂತೆ ಕಾಣಬಹುದು. ಆದರೆ, ದೇಶದ ರೈತ ಬಂಧುಗಳು ವಿರಮಿಸುವ ಕಾಲವಂತೂ ಖಂಡಿತ ಅಲ್ಲ. ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಹೋರಾಟವನ್ನು ಇನ್ನಷ್ಟು ಬಲಗೊಳಿಸಬೇಕಾಗಿದೆ. ಸರಕಾರದ ಪ್ರತಿ ನಡೆಯನ್ನು ಬಹಳ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.


‘‘ನನ್ನ ಪರಿಸರ ಪ್ರೀತಿ, ಭೂಮಿಗಂಟಿ ಬದುಕುವ ಜನರ ಜೊತೆಗಿನ ನಂಟು ರೈತ ಹೋರಾಟವನ್ನು ಹತ್ತಿರದಿಂದ ಕಂಡು, ಜಗತ್ತಿನ ಮುಂದಿರಿಸಲು ನನ್ನನ್ನು ಪ್ರೇರೇಪಿಸಿತು. ಅದಕ್ಕಾಗಿ ‘ಕಿಸಾನ್ ಸತ್ಯಾಗ್ರಹ’ ಎಂಬ ಸಾಕ್ಷಚಿತ್ರ ಮಾಡಿದೆ. ಅದು ಬರೀ ತೋರಿಕೆಗಲ್ಲ, ಲಾಭಕ್ಕಲ್ಲ, ಪ್ರಚಾರಕ್ಕಲ್ಲ. ನಾನು ಮಾಡಬೇಕಾದ್ದು, ಮಾಡಿದೆ. ಇದು ಐತಿಹಾಸಿಕ ರೈತ ಹೋರಾಟದ ಮೊದಲ ಭಾಗ. ಇದನ್ನು ದೇಶದ ಜನತೆಯ ಮುಂದಿರಿಸಿ, ಅಲ್ಲಿಂದ ಬರುವ ಪ್ರಶ್ನೆಗಳು, ಪ್ರತಿಕ್ರಿಯೆಗಳು ಮತ್ತು ಪ್ರೋತ್ಸಾಹದಿಂದ ಎರಡನೇ ಭಾಗ ನಿರ್ಮಿಸಬೇಕೆಂದಿದ್ದೇನೆ.. ನೋಡೋಣ’’ ಎಂದರು ಕೇಸರಿ ಹರವೂ.

ಕೇಸರಿ ಹರವೂ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಸೃಜನಶೀಲ ಚಿತ್ರನಿರ್ದೇಶಕ. ಅದಕ್ಕಿಂತಲೂ ಮುಖ್ಯವಾಗಿ ಪರಿಸರಪ್ರೇಮಿ. ಅಪ್ಪಟ ಮನುಷ್ಯಪ್ರೇಮಿ. ರೈತರು, ಕಾರ್ಮಿಕರು, ಮಹಿಳೆಯರ ಪರ ನಿಂತವರು. ವರ್ಷಕಾಲ ನಡೆದ ಬಾಗೂರು-ನವಿಲೆ ರೈತ ಹೋರಾಟದ ಭಾಗವಾಗಿ, ಅವರೊಂದಿಗೇ ಬದುಕಿದವರು. ಗುಂಡ್ಯಾ ಜಲವಿದ್ಯುತ್ ಯೋಜನೆ ಕುರಿತು ಸಾಕ್ಷ ಚಿತ್ರ ನಿರ್ಮಿಸಿ, ಜನರ ಮುಂದಿರಿಸಿ, ಪ್ರಭುತ್ವವನ್ನು ಪ್ರಶ್ನಿಸುವಂತೆ ಮಾಡಿದವರು. ಪಶ್ಚಿಮಘಟ್ಟವನ್ನು ಉಳಿಸಿದವರು. ಅಘನಾಶಿನಿಯ ಮಕ್ಕಳನ್ನು ನಾಡಿಗೆ ಪರಿಚಯಿಸಿದವರು. ರೈತನಾಯಕ ಪುಟ್ಟಣ್ಣಯ್ಯನವರನ್ನು ಹಾಗೂ ಕರ್ನಾಟಕದ ರೈತ ಹೋರಾಟವನ್ನು ಬೇರೆಯದೇ ರೀತಿ ಬಗೆದು ತೋರಿದವರು. ಹಾಗೆಯೇ ಅನ್ಯಾಯದ ವಿರುದ್ಧ ತಮ್ಮ ಇತಿಮಿತಿಯಲ್ಲಿಯೇ ಧ್ವನಿ ಎತ್ತಿ, ತಮ್ಮದೇ ಆದ ಅಭಿವ್ಯಕ್ತಿಯಲ್ಲಿ ಅನಾವರಣಗೊಳಿಸಿದವರು. ತನ್ನ ಪೊರೆದ ಸಮಾಜಕ್ಕೆ ತಾನೇನಾದರೂ ಕೊಡಬೇಕು ಎಂಬ ತುಡಿತವುಳ್ಳವರು. ಸರಳ-ಆದರ್ಶ ಬದುಕನ್ನು ಅಪ್ಪಿಕೊಂಡವರು. ಇಷ್ಟೆಲ್ಲ ಇತಿಹಾಸವಿರುವ ಹರವೂ ದೂರದ ದಿಲ್ಲಿ ಗಡಿಯಲ್ಲಿ ರೈತರು ಧರಣಿ ಕೂತರೆ, ಸುಮ್ಮನೆ ಕೂರುವುದುಂಟೆ? ದಿಲ್ಲಿಗೂ ಹೋದರು. ರೈತ ಹೋರಾಟದಲ್ಲಿ ಭಾಗಿಯಾದರು. ಅವರ ಕಷ್ಟ-ಕಾರ್ಪಣ್ಯಗಳನ್ನು ಅರಿತು ಅರಗಿಸಿಕೊಂಡರು. ಆ ಹೋರಾಟವನ್ನು ‘ಕಿಶನ್ ಸತ್ಯಾಗ್ರಹ’ ಎಂಬ ಸಾಕ್ಷಚಿತ್ರದ ಮೂಲಕ ಸೆರೆ ಹಿಡಿದು, ಇಡೀ ಜಗತ್ತಿನ ಮುಂದೆ ಇಟ್ಟರು. ಐತಿಹಾಸಿಕ ದಾಖಲೆಗೆ ಕಾರಣಕರ್ತರಾದರು. ಕಳೆದ ವರ್ಷ ಜೂನ್‌ನಲ್ಲಿ ದೇಶ ಕೋವಿಡ್ ಕಷ್ಟಕ್ಕೆ ಸಿಕ್ಕು ದಿಕ್ಕೆಟ್ಟು ಕೂತಿದ್ದಾಗ, ಜನಪ್ರತಿನಿಧಿಗಳು ಮಾಸ್ಕ್ ಏರಿಸಿಕೊಂಡು ಮಾತನಾಡದಂತಹ ಸ್ಥಿತಿಯಲ್ಲಿದ್ದಾಗ, ಕೇಂದ್ರದ ಎನ್‌ಡಿಎ ಸರಕಾರ ಮೂರು ಕರಾಳ ಕೃಷಿ ಕಾಯ್ದೆ(ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ(ಸಬಲೀಕರಣ ಮತ್ತು ರಕ್ಷಣೆ) ಒಪ್ಪಿಗೆ ಕಾಯ್ದೆ, ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ(ಉತ್ತೇಜನ ಮತ್ತು ನೆರವು)ಕಾಯ್ದೆ, ಅಗತ್ಯ ವಸ್ತುಗಳ (ತಿದ್ದುಪಡಿ)ಕಾಯ್ದೆ)ಗಳನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿಟ್ಟು ತರಾತುರಿಯಲ್ಲಿ ಪಾಸು ಮಾಡಿಕೊಂಡಿತ್ತು. ಮುಂದುವರಿದು ಸೆಪ್ಟಂಬರ್‌ನಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ದೇಶದ ರೈತರ ಬದುಕಿಗೆ ಬಿಸಿನೀರು ಸುರಿದಿತ್ತು. ಈ ಕರಾಳ ಕಾಯ್ದೆಗಳಿಂದ ಕೃಷಿ ಕ್ಷೇತ್ರಕ್ಕೆ ಕತ್ತಲಾವರಿಸಿ, ರೈತ ಸಮೂಹ ಒಕ್ಕಲೆದ್ದುಹೋಗುವುದು ನಿಶ್ಚಿತ ಎಂದರಿತ ಪಂಜಾಬ್ ರೈತರು ಮೊದಲಿಗೆ ಕೇಂದ್ರ ಸರಕಾರದ ವಿರುದ್ಧ ಹೋರಾಟಕ್ಕಿಳಿದರು.

ಹಸಿರು ಕ್ರಾಂತಿಯ ಕಾಲದಲ್ಲಿ ಪಂಜಾಬ್ ಮತ್ತು ಹರ್ಯಾಣ ರೈತರಿಗೆ ಸರಕಾರವೇ ಶಕ್ತಿ ತುಂಬಿತ್ತು, ದೇಶದ ಅನ್ನದಾತರು ನೀವು ಎಂದು ಹಾಡಿ ಹೊಗಳಿತ್ತು. ಆದರೆ ಇಂದು ಅದೇ ಸರಕಾರ ಅದೇ ರೈತರನ್ನು ನಿರ್ಲಕ್ಷಿಸಿ, ಕೃಷಿ ಕ್ಷೇತ್ರಕ್ಕೆ ಮಾರಕವಾಗುವ ಮೂರು ಕಾಯ್ದೆಗಳನ್ನು ತಂದು ರೈತರ ಭವಿಷ್ಯವನ್ನು ಬರಿದು ಮಾಡಿತ್ತು. ಈ ಕಾಯ್ದೆಗಳಿಂದ ಕೃಷಿ ನಂಬಿದ ನಮ್ಮ ಮಕ್ಕಳಿಗೆ ಭವಿಷ್ಯವಿಲ್ಲ ಎಂಬುದನ್ನು ಅರಿತ ಪಂಜಾಬ್ ರೈತರು, ಅಕ್ಟೋಬರ್ 25, 2020ರಂದು ‘ಪಂಜಾಬ್ ಬಂದ್’ಗೆ ಕರೆ ಕೊಟ್ಟರು. ಒಡೆದು ಚೂರಾಗಿ ಹೋಗಿದ್ದ ರೈತ ಸಂಘಟನೆಗಳು ಒಂದಾದವು. ಪಕ್ಷಭೇದ ಮರೆತು ರಾಜಕೀಯ ಪಕ್ಷಗಳು ಬೆಂಬಲಿಸಿದವು. ಕ್ರೀಡಾಪಟುಗಳು, ಕಲಾವಿದರು, ಸಾಹಿತಿಗಳು, ಬುದ್ಧಿಜೀವಿಗಳು, ಅನಿವಾಸಿ ಭಾರತೀಯರು, ಸಾಮಾನ್ಯರು ರೈತರ ಪರ ನಿಂತರು. ಧಾರ್ಮಿಕ ಗುರುಗಳು ಕೈಜೋಡಿಸಿದರು. ‘ಪಂಜಾಬ್ ಬಂದ್’ ಯಶಸ್ವಿಯಾಯಿತು. ಇದು ಕೃಷಿಯ ಅಸ್ತಿತ್ವವನ್ನೇ ಅಲ್ಲಾಡಿಸಲು ಹವಣಿಸಿದ ಕೇಂದ್ರ ಸರಕಾರಕ್ಕೆ ಎದುರಾದ ದೇಶದ ಮೊದಲ ಪ್ರತಿರೋಧ. ರೈತ ಹೋರಾಟಕ್ಕೆ ಸಿಕ್ಕ ನಿಜವಾದ ಜಯ. ಸಂಘಟನೆಯಲ್ಲಿ ಶಕ್ತಿಯಿದೆ, ಒಟ್ಟಾದರೆ ಒಳಿತಿದೆ, ಭವಿಷ್ಯದ ಬದುಕಿದೆ ಎಂಬುದನ್ನು ತೆರೆದು ತೋರಿದ ಹೋರಾಟ.

ಈ ಹೋರಾಟ ರೈತರಲ್ಲಿ ಧೈರ್ಯವನ್ನು, ಉತ್ಸಾಹವನ್ನು ತಂದುಕೊಟ್ಟಿತು. ದಿಲ್ಲಿ ಚಲೋಗೆ ಪ್ರೇರಣೆ ನೀಡಿತು. ರೈತರ ಟ್ರಾಕ್ಟರ್‌ಗಳು ರಸ್ತೆಗಿಳಿದವು. ಅತ್ತ ಕಡೆಯಿಂದ ಹರ್ಯಾಣ ರೈತರು ದಿಲ್ಲಿಯತ್ತ ಹೆಜ್ಜೆ ಹಾಕಿದರು. ಆದರೆ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಹೆದ್ದಾರಿಗೆ ಪೊಲೀಸರನ್ನು ನಿಯೋಜಿಸಿ ಬ್ಯಾರಿಕೇಡ್ ಹಾಕಿಸಿ, ರಸ್ತೆಗೆ ಗುಂಡಿ ತೋಡಿಸಿ, ರೈತರತ್ತ ರಬ್ಬರ್ ಬುಲೆಟ್ ಹಾರಿಸಿ, ಜಲಫಿರಂಗಿ ಮಾಡಿಸಿ ದಿಕ್ಕೆಡಿಸಲು ನೋಡಿದರು. ಇದು ರೈತರು ಒಗ್ಗೂಡಲು, ಸರಕಾರದ ವಿರುದ್ಧ ಒಂದಾಗಿ ಹೋರಾಡಲು ಅನುಕೂಲ ಮಾಡಿಕೊಟ್ಟಿತು. ಪ್ರಭುತ್ವದ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ರೈತರು ನವೆಂಬರ್ 27ರ ಮುಂಜಾನೆ ದಿಲ್ಲಿಯ ಸಿಂಘು, ಟಿಕ್ರಿ ಗಡಿಯಲ್ಲಿ ಜಮಾವಣೆಗೊಳ್ಳುವಂತಾಯಿತು. ಇವರನ್ನು ನೋಡಿ ಅತ್ತ ಕಡೆಯಿಂದ ಉತ್ತರ ಪ್ರದೇಶ, ಉತ್ತರಾಖಂಡದ ರೈತರೂ ಘಾಝಿಪುರ್, ಪಲ್ವಲ್ ಗಡಿಗೆ ಬಂದು ನೆಲೆಯಾದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡಿನ ರೈತರೂ ಜೊತೆಗೂಡಿದರು. ಎಲ್ಲರೂ ಸೇರಿ ಲಕ್ಷಾಂತರವಾದರು.

ಇದು ನನ್ನಲ್ಲಿ ಚಡಪಡಿಕೆ ಹುಟ್ಟಿಸಿತು, ನಾನು ಅಲ್ಲಿಗೆ ಹೋಗಲೇಬೇಕು ಎನಿಸಿತು. ಆದರೆ ಕೈಯಲ್ಲಿ ಕಾಸಿಲ್ಲ. ಸ್ನೇಹಿತರು ಒಂದಷ್ಟು ಹಣ ಹೊಂದಿಸಿಕೊಟ್ಟರು. ಜೊತೆಗೆ ಪ್ರವೀಣ್ ಕುಮಾರ್‌ನ್ನು ಕರೆದುಕೊಂಡು ಹೊರಟೆ. ನಮ್ಮ ತಂಡವೆಂದರೆ- ಇಬ್ಬರೇ. ಕ್ಯಾಮರಾಮನ್ ಪ್ರವೀಣ್ ಕುಮಾರ್, ಮಿಕ್ಕ ಕೆಲಸವೆಲ್ಲ ನನ್ನದು. ಸರಿಯಾಗಿ ಕಳೆದ ವರ್ಷದ ಇದೇ ಡಿಸೆಂಬರ್ ಮೊದಲ ವಾರ ರೈತರ ಸತ್ಯಾಗ್ರಹವನ್ನು ಚಿತ್ರೀಕರಿಸಲು ಶುರು ಮಾಡಿದೆವು. ರಾತ್ರಿ ಹಗಲೆನ್ನದೆ ಚಿತ್ರೀಕರಿಸಿದೆವು. ಹತ್ತಾರು ಹಳ್ಳಿಗಳನ್ನು ಸುತ್ತಾಡಿದೆವು. ನೂರಾರು ಜನರನ್ನು ಕಂಡು ಮಾತನಾಡಿಸಿದೆವು. ನಮ್ಮ ಕೆಲಸ ಕಂಡು ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಪುರುಷೋತ್ತಮ್ ಬಿಳಿಮಲೆ ಜೊತೆಗಿನ ಜೆಎನ್‌ಯು ಪ್ರೊಫೆಸರ್‌ಗಳು ನೆರವಾದರು. ರೈತರ ಬಗ್ಗೆ ಬಹಳ ಆಳವಾಗಿ ಅಧ್ಯಯನ ಮಾಡಿದ ಡಾ.ನೌಶರಣ್ ಸಿಂಗ್ ಎಂಬ ಹೆಣ್ಣುಮಗಳ ಸಂದರ್ಶನ ಮಾಡಿದ ಮೇಲೆ, ರೈತ ಹೋರಾಟದ ಹಿಂದಿನ ಶ್ರಮ, ಸಂಘಟನೆ ಮತ್ತು ಮಹತ್ವ ಅರ್ಥವಾಯಿತು. ದೇಶದ ರೈತರ ಬದುಕಿನ ಸಂಪೂರ್ಣ ಚಿತ್ರಣ ಸಿಕ್ಕಿತು. ನನ್ನ ದಾರಿಗೊಂದು ಗುರಿ ಸಿಕ್ಕಿತು.

ಆದರೆ, ಕೇಂದ್ರದ ಮೋದಿ ಸರಕಾರ, ಮನೆ ಮಠ ಬಿಟ್ಟು ಬಂದು ದಿಲ್ಲಿ ಚಳಿಯಲ್ಲಿ ಧರಣಿ ಕುಳಿತ ಅನ್ನದಾತರನ್ನು ಅರ್ಬನ್ ನಕ್ಸಲರು, ಖಲಿಸ್ತಾನಿ ಉಗ್ರರು, ಬಾಡಿಗೆ ಪ್ರತಿಭಟನಾಕಾರರು, ಅವರಾರೂ ರೈತರೇ ಅಲ್ಲ ಎಂಬ ಅಪಪ್ರಚಾರದಲ್ಲಿ ನಿರತವಾಯಿತು. ಸೋಷಿಯಲ್ ಮೀಡಿಯಾದಲ್ಲಿ ಕ್ಷಣಕ್ಕೊಂದು ಕತೆ ಕಟ್ಟಿ ಹಂಚತೊಡಗಿತು. ದುರದೃಷ್ಟಕರ ಸಂಗತಿ ಎಂದರೆ, ಅನ್ನ ಉಣ್ಣುವ ಪತ್ರಕರ್ತರು ಕೂಡ, ಪ್ರಭುತ್ವದ ಪರವಾಗಿ ನಿಂತು ರೈತರ ವಿರುದ್ಧ ದೇಶದ ಜನರನ್ನು ಎತ್ತಿಕಟ್ಟತೊಡಗಿದರು. ದೂಷಣೆ, ಆರೋಪ, ಅಪಮಾನ, ಮಳೆ, ಚಳಿಯ ಜೊತೆಗೆ ಕೊರೋನದ ಭಯಾತಂಕಗಳನ್ನೂ ಬದಿಗಿಟ್ಟ ರೈತರು ಜನವರಿ 26ರಂದು ದಿಲ್ಲಿ ಕೆಂಪುಕೋಟೆ ಮುತ್ತಿಗೆಯತ್ತ ಗಮನವನ್ನು ಕೇಂದ್ರೀಕರಿಸಿದರು. ಈ ಐತಿಹಾಸಿಕ ಗಳಿಗೆಯನ್ನು ಸೆರೆ ಹಿಡಿಯಬೇಕೆನ್ನುವ ನನ್ನ ಮಹದಾಸೆಗೆ ಮತ್ತೆ ತಣ್ಣೀರೆರಚುವಂತೆ ಹಣದ ಮುಗ್ಗಟ್ಟು ಎದುರಾಯಿತು. ಸಾಲ ಮಾಡಿದೆ. ಮತ್ತೆ ಸ್ನೇಹಿತರ ಮೊರೆಹೋದೆ. ಸೋಷಿಯಲ್ ಮೀಡಿಯಾದಲ್ಲಿ ಕ್ರೌಡ್ ಫಂಡಿಂಗ್‌ಗೆ ಕರೆ ಕೊಟ್ಟರು. ನಮ್ಮ ಜನ ಕೊಂಚ ಉದಾರವಾಗಿಯೇ ಧನಸಹಾಯ ಮಾಡಿದರು. ಮತ್ತೆ ಚಿತ್ರೀಕರಣ ಮುಂದುವರಿಸಿದೆ. ಜನವರಿ 26ರ ಕೆಂಪು ಕೋಟೆಯ ಮುತ್ತಿಗೆ ಸಂದರ್ಭದಲ್ಲಿ ರೈತ ಹೋರಾಟವನ್ನು ದಾರಿ ತಪ್ಪಿಸಲು ಕೇಂದ್ರ ಸರಕಾರವೇ ಕೆಲವು ದುಷ್ಕರ್ಮಿಗಳನ್ನು ಕಳುಹಿಸಿತ್ತು ಎಂಬ ಆರೋಪವಿದೆ. ಕೆಂಪು ಕೋಟೆಯ ಮೇಲೆ ಖಲಿಸ್ತಾನಿ ಬಾವುಟ ಹಾರಿಸುವ, ಹಲ್ಲೆ-ದೊಂಬಿ ಎಬ್ಬಿಸಿ ರೈತರ ಹೋರಾಟಕ್ಕೆ ಕೆಟ್ಟ ಹೆಸರು ತರುವಂತೆ ನೋಡಿಕೊಳ್ಳಲಾಯಿತು ಎನ್ನಲಾಗುತ್ತಿದೆ. ಆದರೆ ಸತ್ಯಾಗ್ರಹದ ರೂವಾರಿಗಳಾದ ರಾಕೇಶ್ ಟಿಕಾಯತ್, ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್- ದೊಂಬಿಯಲ್ಲಿದ್ದವರು ನಿಜವಾದ ರೈತರಲ್ಲ ಎನ್ನುವುದನ್ನು ದೇಶದ ಜನಕ್ಕೆ ಮನದಟ್ಟು ಮಾಡಿಸಿದರು. ಚಿತ್ರೀಕರಣದುದ್ದಕ್ಕೂ ನನಗೆ ಬಹಳ ಮುಖ್ಯವಾಗಿ ಕಂಡದ್ದು, ದೇಶದ ವೈವಿಧ್ಯತೆ, ಸೌಹಾರ್ದ, ಸಮಾನತೆ. ಎರಡುಮೂರು ಟ್ರಾಕ್ಟರ್‌ಗಳನ್ನು ಒಟ್ಟಿಗೆ ಜೋಡಿಸಿ, ಅದರಡಿ ಹಾಸಿಗೆ ಹಾಕಿ ತಾತ್ಕಾಲಿಕ ಮನೆ ಮಾಡಿಕೊಂಡು ಬದುಕಿದ ರೀತಿ, ನನಗೆ ನನ್ನೂರಿನ ದನಗಳ ಜಾತ್ರೆಯನ್ನು ನೆನಪಿಗೆ ತಂದಿತು. ಜಾತಿ ಮತ ಭೇದವಿಲ್ಲದೆ ಒಟ್ಟಿಗೆ ಕೂತು ಉಣ್ಣುವ, ಕಷ್ಟ ಹಂಚಿಕೊಳ್ಳುವ ಅವರ ಭಾಷೆ, ಭಾವುಣಿಕೆ ನನಗೆ ಭಾರತವನ್ನು ಪರಿಚಯಿಸಿತು. ಗಾಂಧಿ ನೆನಪಾದರು. ನನಗೆ ಇನ್ನೂ ವಿಶೇಷವಾಗಿ ಕಂಡಿದ್ದು, ಪಂಜಾಬಿನ ಮಹಿಳೆಯರ ದಿಟ್ಟತನ. ಆದರೆ ಉತ್ತರಾಖಂಡದ ಹೆಂಗಸರು ಮನೆ ಬಿಟ್ಟೇ ಹೊರಬರುವುದಿಲ್ಲ. ಇಂತಹ ಹೋರಾಟದಲ್ಲಿ ಮಹಿಳೆಯರಿದ್ದಾರೆಂದರೆ, ಅದನ್ನು ನೋಡುವ ದೃಷ್ಟಿಕೋನವೇ ಬೇರೆಯಾಗುತ್ತದೆ. ಈ ರೈತ ಹೋರಾಟದಲ್ಲಿ ಅದಿತ್ತು.

ಟಿಕ್ರಿ, ಸಿಂಘು, ಘಾಝಿಯಾಬಾದ್ ಮತ್ತು ಪಲ್ವಲ್ ಗಡಿಯಲ್ಲಿ ಬೀಡುಬಿಟ್ಟ ರೈತರಲ್ಲಿ ಶ್ರೀಮಂತರು, ಬಡವರು, ಕೂಲಿ ಕಾರ್ಮಿಕರು ಎಲ್ಲರೂ ಇದ್ದರು. ಇವರ ಜೊತೆಗೆ ಸಾಹಿತಿಗಳು, ಕಲಾವಿದರು, ಬುದ್ಧಿಜೀವಿಗಳು, ಪತ್ರಕರ್ತರು, ರಾಜಕೀಯ ನಾಯಕರೂ ಇದ್ದರು. ಅಲ್ಲಿ ಎಲ್ಲರೂ ಸಮಾನರು. ಕೆಲವರು ಅಡುಗೆ ತಯಾರಿಸಿದರೆ, ಇನ್ನು ಕೆಲವರು ತರಕಾರಿ ಹೆಚ್ಚುತ್ತಿದ್ದರು, ಕಸ ಗುಡಿಸುತ್ತಿದ್ದರು, ಶೂ ಪಾಲಿಶ್, ಇಸ್ತ್ರಿ ಮಾಡಿಕೊಡುತ್ತಿದ್ದರು. ಅಲ್ಲಿ ಅತ್ಯಾಧುನಿಕ ವಾಷಿಂಗ್ ಮೆಷಿನ್, ಫ್ರಿಡ್ಜ್, ಟಿವಿಗಳಿದ್ದವು. ದಿನದ 24 ಗಂಟೆಯೂ ಇಂಟರ್‌ನೆಟ್ ಸೌಲಭ್ಯವಿತ್ತು. ಶಸ್ತ್ರ ಚಿಕಿತ್ಸೆಯೊಂದು ಬಿಟ್ಟು ಮಿಕ್ಕೆಲ್ಲ ವೈದ್ಯಕೀಯ ಸೇವೆ ಸಿಗುತ್ತಿತ್ತು. ಅದೆಲ್ಲಕ್ಕಿಂತ ಸಿಖ್ ಧರ್ಮಗುರುಗಳು, ‘‘ರೈತಾಪಿ ಮಕ್ಕಳೆಲ್ಲ ಬೀದಿಗೆ ಬಂದಿದ್ದಾರೆ, ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು’’ ಎಂದು ಲಂಗರು(ದಾಸೋಹ) ಸೇವೆಯಲ್ಲಿ ನಿರತರಾಗಿದ್ದರು. ಇದೆಲ್ಲವೂ ಸುಮಾರು 29 ದಿನಗಳ ಕಾಲ ಚಿತ್ರೀಕರಣ ಮಾಡಿ, 89 ನಿಮಿಷಗಳಿಗೆ ಇಳಿಸಿದ ನಮ್ಮ ‘ಕಿಸಾನ್ ಸತ್ಯಾಗ್ರಹ’ದಲ್ಲಿ ದಾಖಲಾಗಿದೆ. 700ಕ್ಕೂ ಹೆಚ್ಚು ರೈತರ ಬಲಿದಾನ, ಒಂದು ವರ್ಷ ನಿರಂತರವಾಗಿ ನಡೆದ ರೈತ ಹೋರಾಟಕ್ಕೆ ಮಣಿದ ಮೋದಿ ನೇತೃತ್ವದ ಕೇಂದ್ರ ಸರಕಾರ ನ.19ರಂದು, ಕರಾಳ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಂಡಿದೆ. ಇದು ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಬೆಲೆ ಇದೆ, ಸಂವಿಧಾನದ ಆಶಯದಂತೆ ನಡೆದ ಸತ್ಯಾಗ್ರಹಕ್ಕೆ ನ್ಯಾಯ ಸಿಗುತ್ತದೆ ಎಂಬುದನ್ನು ಸಾಬೀತು ಮಾಡಿದೆ. ದೇಶ ಕಂಡ ಸ್ವಾತಂತ್ರ್ಯಾನಂತರದ ಈ ಬೃಹತ್ ರೈತ ಹೋರಾಟ ಚರಿತ್ರೆಯಲ್ಲಿ ದಾಖಲಾಗಲಿದೆ. ಅಂತಹ ಹೋರಾಟವನ್ನು ಚಿತ್ರೀಕರಣದ ಮೂಲಕ ದಾಖಲಿಸುವ, ಜಗತ್ತಿನ ಮುಂದಿಡುವ ಸಣ್ಣ ಕೆಲಸ ನನ್ನಿಂದಾಗಿದ್ದು, ಸಮಾಧಾನ ತಂದಿದೆ. ನನಗೆ ಈ ಕ್ಷಣದಲ್ಲಿ ಅನ್ನಿಸುವುದು, ಮೋದಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದರ ಹಿಂದೆ ರಾಜಕೀಯ ಕಾರಣಗಳೇನೇ ಇರಬಹುದು. ಮೇಲ್ನೋಟಕ್ಕೆ ಮೋದಿ ಸೋಲು, ರೈತರ ಗೆಲುವಿನಂತೆ ಕಾಣಬಹುದು. ಆದರೆ, ದೇಶದ ರೈತ ಬಂಧುಗಳು ವಿರಮಿಸುವ ಕಾಲವಂತೂ ಖಂಡಿತ ಅಲ್ಲ. ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಹೋರಾಟವನ್ನು ಇನ್ನಷ್ಟು ಬಲಗೊಳಿಸಬೇಕಾಗಿದೆ. ಸರಕಾರದ ಪ್ರತಿ ನಡೆಯನ್ನು ಬಹಳ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಏಕೆಂದರೆ, ಈ ಕಾಯ್ದೆ ಜಾರಿಗೆ ತಂದ ಸರಕಾರ ಕಾರ್ಪೊರೇಟ್ ವಲಯಕ್ಕೆ ಅನುಕೂಲ ಮಾಡಿಕೊಡುವ ಕಾಯ್ದೆ-ಕಾನೂನುಗಳನ್ನು ರೂಪಿಸಿತ್ತು. ಅವರು ಆಗಲೇ ಕೋಟಿಗಟ್ಟಲೆ ಬಂಡವಾಳ ಸುರಿದು ಕೃಷಿ ವಲಯವನ್ನು ಆಪೋಶನ ತೆಗೆದುಕೊಳ್ಳಲು ಸಿದ್ಧರಾಗಿದ್ದರು. ಈಗ ಅವರು ಸುಮ್ಮನಿರುತ್ತಾರೆಯೇ? ಚುನಾವಣೆಯ ನಂತರ ಮೋದಿ ಸರಕಾರ ಮತ್ತೆ ಕಾಯ್ದೆಗಳನ್ನು ಜಾರಿಗೆ ತರುವುದಿಲ್ಲ ಎನ್ನುವುದಕ್ಕೆ ಏನಾದರೂ ಖಾತ್ರಿ ಇದೆಯೇ? ಹಾಗಾಗಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಹೇಸದವರ ವಿರುದ್ಧ ಸೆಡ್ಡು ಹೊಡೆದು ನಿಲ್ಲಬೇಕಾದರೆ, ಒಡೆದು ಚೂರಾಗಿರುವ ರೈತ ಸಂಘಟನೆಗಳು, ಜಾತ್ಯತೀತ ಶಕ್ತಿಗಳು, ರಾಜಕೀಯ ಪಕ್ಷಗಳು ಒಂದಾಗುವುದು ಇವತ್ತಿನ ಅನಿವಾರ್ಯ. ಆ ಮೂಲಕ ದೇಶ ಮತ್ತೆ ಮಾನವೀಯ, ಗಾಂಧಿ ಗ್ರಾಮಭಾರತ ಕಾಣಲು ಸಾಧ್ಯ.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News