ಮುಂದಿನ ಮೂರು ವರ್ಷಗಳಲ್ಲಿ ಎನ್ಎಂಪಿಯಡಿ 25 ವಿಮಾನ ನಿಲ್ದಾಣಗಳ ಆಸ್ತಿ ನಗದೀಕರಣ: ಕೇಂದ್ರ ಸರಕಾರ

Update: 2021-12-12 12:23 GMT

ಹೊಸದಿಲ್ಲಿ,ಡಿ.12: ರಾಷ್ಟ್ರೀಯ ಹಣಗಳಿಕೆ ಯೋಜನೆ (ಎನ್ಎಂಪಿ)ಯಡಿ 2022 ಮತ್ತು 2025ರ ನಡುವಿನ ನಾಲ್ಕು ವರ್ಷಗಳಲ್ಲಿ ಆಸ್ತಿ ನಗದೀಕರಣಕ್ಕಾಗಿ ಒಟ್ಟು 25 ವಿಮಾನ ನಿಲ್ದಾಣಗಳನ್ನು ಕೇಂದ್ರವು ಗುರುತಿಸಿದೆ ಎಂದು ಸಹಾಯಕ ವಾಯುಯಾನ ಸಚಿವ ವಿ.ಕೆ.ಸಿಂಗ್ ತಿಳಿಸಿದ್ದಾರೆ. 

ಸಚಿವರ ಹೇಳಿಕೆಯಂತೆ ಈ 25 ವಿಮಾನ ನಿಲ್ದಾಣಗಳು ಭುವನೇಶ್ವರ, ವಾರಣಾಸಿ, ಅಮೃತಸರ, ತಿರುಚ್ಚಿ, ಇಂದೋರ್,ರಾಯಪುರ, ಕಲ್ಲಿಕೋಟೆ,‌ ಕೊಯಮತ್ತೂರು, ನಾಗಪುರ, ಪಾಟ್ನಾ, ಮದುರೈ, ಸೂರತ್, ರಾಂಚಿ, ಜೋಧಪುರ, ಚೆನ್ನೈ, ವಿಜಯವಾಡಾ, ವಡೋದರಾ, ಭೋಪಾಲ, ತಿರುಪತಿ, ಹುಬ್ಬಳ್ಳಿ, ಇಂಫಾಲ, ಅಗರ್ತಲಾ, ಉದಯಪುರ, ಡೆಹ್ರಾಡೂನ್ ಮತ್ತು ರಾಜಮಂಡ್ರಿಗಳಲ್ಲಿವೆ.

ವಿತ್ತವರ್ಷ 2019-20ರಲ್ಲಿ ವಾರ್ಷಿಕ ನಾಲ್ಕು ಲಕ್ಷಕ್ಕೂ ಅಧಿಕ ಪ್ರಯಾಣಿಕರ ಸಂಖ್ಯೆ ಮತ್ತು ರಾಷ್ಟ್ರೀಯ ಮೂಲಸೌಕರ್ಯ ಯೋಜನೆ (ಎನ್ಐಪಿ)ಯಂತೆ ಗಣನೀಯ ಹಾಲಿ ಪ್ರಗತಿಯಲ್ಲಿರುವ ಅಥವಾ ಉದ್ದೇಶಿತ ಬಂಡವಾಳ ವೆಚ್ಚ ಯೋಜನೆಯಂತಹ ಮಾನದಂಡಗಳ ಆಧಾರದಲ್ಲಿ ಈ 25 ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ.

ವಿತ್ತವರ್ಷ 2025ರವರೆಗಿನ ನಾಲ್ಕು ವರ್ಷಗಳಲ್ಲಿ ದೇಶಾದ್ಯಂತ 25 ವಿಮಾನ ನಿಲ್ದಾಣಗಳ ಆಸ್ತಿ ನಗದೀಕರಣದ ಮೂಲಕ 20,782 ಕೋ.ರೂ.ಗಳನ್ನು ಸಂಗ್ರಹಿಸಲು ತಾನು ಯೋಜಿಸಿರುವುದಾಗಿ ಸರಕಾರವು ಈ ವರ್ಷದ ಆಗಸ್ಟ್ನಲ್ಲಿ ಹೇಳಿತ್ತು.

ಸರಕಾರದ ಯೋಜನೆಯಂತೆ 2022ರಲ್ಲಿ ಆರು,2023ರಲ್ಲಿ ಎಂಟು,2024ರಲ್ಲಿ ಆರು ಮತ್ತು 2025ರಲ್ಲಿ ಐದು ವಿಮಾನ ನಿಲ್ದಾಣಗಳನ್ನು ಆಸ್ತಿಗಳು ನಗದೀಕರಣಗೊಳ್ಳಲಿವೆ.

ಹಿಂದಿನ ಹಣಕಾಸು ವರ್ಷದಲ್ಲಿ ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿಯ 137 ವಿಮಾನ ನಿಲ್ದಾಣಗಳ ಪೈಕಿ 133 ಭಾರೀ ನಷ್ಟವನ್ನು ಅನುಭವಿಸಿವೆ.ಕಾಂಡ್ಲಾ (0.11 ಕೋ.ರೂ.),ಕಾನ್ಪುರ ಚಕೇರಿ(6.07 ಕೋ.ರೂ),ಬರೇಲಿ (0.68 ಕೋ.ರೂ.) ಮತ್ತು ಪೋರಬಂದರ್ (1.54 ಕೋ.ರೂ.) ಹೊರತುಪಡಿಸಿ ಇತರ ಎಲ್ಲ ವಿಮಾನ ನಿಲ್ದಾಣಗಳು ಭಾರೀ ನಷ್ಟದಲ್ಲಿವೆ ಎಂದು ಸಚಿವ ಸಿಂಗ್ ತಿಳಿಸಿದರು.

ದಿಲ್ಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳು ಅನುಕ್ರಮವಾಗಿ 317 ಕೋ.ರೂ. ಮತ್ತು 331 ಕೋ.ರೂ.ಗಳ ಭಾರೀ ನಷ್ಟವನ್ನು ಅನುಭವಿಸಿವೆ. 2019-20ರಲ್ಲಿ 146 ಕೋ.ರೂ.ಗಳ ಲಾಭವನ್ನು ಗಳಿಸಿದ್ದ ಮತ್ತು 2020-21ರಲ್ಲಿ 118 ಕೋ.ರೂ.ಗಳ ನಷ್ಟ ಅನುಭವಿಸಿರುವ ಗೋವಾದಂತಹ ಕೆಲವು ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲ ವಿಮಾನ ನಿಲ್ದಾಣಗಳು ಕಳೆದ ಮೂರು ವಿತ್ತ ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿವೆ ಎಂದೂ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News