ಹೈದರಾಬಾದ್ ಅನ್ನು ʼಭಾಗ್ಯನಗರʼ ಎಂದು ಉಲ್ಲೇಖಿಸಿದ ಆರೆಸ್ಸೆಸ್: ಮರುನಾಮಕರಣದ ಗುಮಾನಿ
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಹೈದರಾಬಾದ್ನ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿದೆ. ಮುಂದಿನ ವರ್ಷದ ಜನವರಿ ಮೊದಲ ವಾರದಲ್ಲಿ ತೆಲಂಗಾಣದ 'ಭಾಗ್ಯನಗರ'ದಲ್ಲಿ ಮೂರು ದಿನಗಳ ಸಮನ್ವಯ ಸಭೆಯನ್ನು ಈ ಸಂಘಟನೆಯು ಆಯೋಜಿಸಿದೆ. ಈ ನಡುವೆ ಹೈದಾರಾಬಾದ್ ಹೆಸರು ಬದಲಾಯಿಸಲಾಗುವುದೇ ಎಂಬ ಗುಮಾನಿ ಸಾಮಾಜಿಕ ತಾಣದಾದ್ಯಂತ ಹಬ್ಬಿದೆ.
‘ಸಮನ್ವಯ ಬೈಠಕ್’ನಲ್ಲಿ ಸಂಘದೊಂದಿಗೆ ನಂಟು ಹೊಂದಿರುವ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವರದಿಗಳ ಪ್ರಕಾರ ಬಿಜೆಪಿ ನಾಯಕರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಬಿಜೆಪಿ ಸೇರಿದಂತೆ ತನ್ನ ಅಂಗಸಂಸ್ಥೆಗಳ ಕಾರ್ಯನಿರ್ವಹಣೆ ಮತ್ತು ಮುಂದಿನ ವರ್ಷ ಐದು ರಾಜ್ಯಗಳಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ಸಂಘವು ಪರಿಶೀಲಿಸುವ ಸಾಧ್ಯತೆಯಿದೆ.
"ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೆಸ್ಸೆಸ್ ಪ್ರೇರಿತವಾಗಿರುವ ವಿವಿಧ ಸಂಘಟನೆಗಳ ಪ್ರಮುಖರ ʼಸಮನ್ವಯ ಬೈಠಕ್ʼ (ಸಮನ್ವಯ ಸಭೆ) 2022 ರ ಜನವರಿ 5 ರಿಂದ 7 ರವರೆಗೆ ತೆಲಂಗಾಣದ ಭಾಗ್ಯನಗರದಲ್ಲಿ ನಡೆಯಲಿದೆ" ಎಂದು ಆರೆಸ್ಸೆಸ್ ಟ್ವೀಟ್ನಲ್ಲಿ ತಿಳಿಸಿದೆ.
ಆರೆಸ್ಸೆಸ್ ಮಾಡಿರುವ ಟ್ವೀಟ್ನಲ್ಲಿ, ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲು ಸರ್ಕಾರವನ್ನು ಒತ್ತಾಯಿಸುತ್ತಿದೆ ಎಂದು ಉಲ್ಲೇಖಿಸಿಲ್ಲ. ಆದರೆ ಟ್ವೀಟ್ ನಲ್ಲಿ ಹೈದರಾಬಾದ್ ಬದಲು ‘ಭಾಗ್ಯನಗರ’ ಎಂದು ನಮೂದಿಸಿರುವುದು ಹಲವು ಗುಮಾನಿಗಳನ್ನು ಎಬ್ಬಿಸಿದೆ.
ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವಂತೆ ಆರೆಸ್ಸೆಸ್ ಮತ್ತು ಹಲವಾರು ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ ಎಂಬುದು ಉಲ್ಲೇಖಾರ್ಹ.
ಕಳೆದ ವರ್ಷ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು "ಫೈಜಾಬಾದ್ ಅನ್ನು ಅಯೋಧ್ಯೆ ಮತ್ತು ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದು ಮರುನಾಮಕರಣ ಮಾಡಿದರೆ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಬಹುದು" ಎಂದು ಹೇಳಿದ್ದರು.
The Samanvay Baithak (coordination meeting) of the chief functionaries of various organizations inspired by the RSS working in different areas of social life will be held from 5th to 7th Jan. 2022 at Bhagyanagar, Telangana. - Sunil Ambekarhttps://t.co/tchPgyCo2W
— RSS (@RSSorg) December 21, 2021