ಕುವೆಂಪು ಮತ್ತು ಸಾವರ್ಕರ್

Update: 2021-12-26 19:30 GMT

 ಕುವೆಂಪು ಮತ್ತು ಸಾವರ್ಕರ್ ಅವರ ಸಾಹಿತ್ಯಗಳು ಮುಕ್ತವಾಗಿ ಎಲ್ಲ ಕಡೆ ಸಿಗುತ್ತವೆ. ಅವುಗಳನ್ನು ಓದಿದರೆ ಇಬ್ಬರಲ್ಲಿ ಎಲ್ಲಿ ಸಾಮ್ಯವಿದೆ, ಎಲ್ಲಿ ಭಿನ್ನಾಭಿಪ್ರಾಯ ಇದೆ ಎಂಬುದು ಗೊತ್ತಾಗುತ್ತದೆ. ಪೂರ್ವ ಮತ್ತು ಪಶ್ಚಿಮಗಳು ಒಂದೇ ಎಂದು ಹೇಳಲು ಹೇಗೆ ಸಾಧ್ಯವಾಗುವುದಿಲ್ಲವೋ ಅದೇ ರೀತಿ ಕುವೆಂಪು ಮತ್ತು ಸಾವರ್ಕರ್ ಒಂದೇ ಎಂದು ಹೇಳಲು ಆಗುವದಿಲ್ಲ.



ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ವರ್ಣಿಸಿದ ಕುವೆಂಪು ಅವರನ್ನು ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಹೋಲಿಸುವ ಈ ದಿನಗಳಲ್ಲಿ ಮತ್ತೆ ರಾಷ್ಟ್ರಕವಿಯ ಜನ್ಮದಿನ ಬಂದಿದೆ.

 ಸಾವರ್ಕರ್ ಪುಸ್ತಕದ ಬಿಡುಗಡೆಯ ಈ ಕಾರ್ಯಕ್ರಮದಲ್ಲಿ ಶೂದ್ರ ಸಮುದಾಯದ ಒಕ್ಕಲಿಗರ ಮಠದ ಸ್ವಾಮಿಗಳು ಭಾಗವಹಿಸುತ್ತಿರುವ ಬಗ್ಗೆ ಮಂಡ್ಯದ ಲೇಖಕ ರಾಜೇಂದ್ರ ಪ್ರಸಾದ್ ಮತ್ತು ನಾಗೇಗೌಡ ಕಿಲಾರ ಅವರು ಪತ್ರ ಬರೆದಿದ್ದರು. ಭಾರತೀಯ ಸಂವಿಧಾನ ಮತ್ತು ಗಾಂಧಿ, ಅಂಬೇಡ್ಕರ್ ಆಶಯಗಳಿಗೆ ತದ್ವಿರುದ್ಧವಾದ ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಔಚಿತ್ಯದ ಬಗ್ಗೆ ಪ್ರಶ್ನಿಸಿದ್ದರು. ಅದೇನೇ ಇರಲಿ, ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಥವಾ ಭಾಗವಹಿಸದಿರುವುದು ಸ್ವಾಮಿಗಳ ವೈಯಕ್ತಿಕ ತೀರ್ಮಾನ. ಅದನ್ನು ನಾವು ಪ್ರಶ್ನಿಸಬಹುದು. ಆದರೆ, ಆಕ್ಷೇಪಿಸುವಂತಿಲ್ಲ.

ಬದುಕಿನುದ್ದಕ್ಕೂ ವೈಚಾರಿಕ ಬೆಳಕನ್ನು ಚೆಲ್ಲುತ್ತಾ ಬಂದ ಉದಯರವಿಯ ಈ ಮಹಾ ಚೇತನವನ್ನು ಸಾವರ್ಕರ್‌ಗೆ ಹೋಲಿಸಿದವರು ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ. ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತಾಡಿದ ನಿರ್ಮಲಾನಂದರು ಹೀಗೇಕೆ ಹೇಳಿದರು ಅರ್ಥವಾಗಲಿಲ್ಲ. ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾವರ್ಕರ್ ಬಗ್ಗೆ ಮಾತಾಡಲು ಯಾರ ಅಭ್ಯಂತರವೂ ಇಲ್ಲ. ಅವರ ಬಗ್ಗೆ ಮಾತಾಡಲು ಬೇಕಾದಷ್ಟು ವಿಷಯಗಳಿವೆ. ಆದರೆ ಕುವೆಂಪು ಅವರನ್ನು ಸಾವರ್ಕರ್‌ಗೆ ಹೋಲಿಸುವ ಅಗತ್ಯವಿರಲಿಲ್ಲ.

 ಕುವೆಂಪು ಮತ್ತು ಸಾವರ್ಕರ್ ವ್ಯಕ್ತಿತ್ವಗಳು ವಿಭಿನ್ನವಾಗಿವೆ. ಇಬ್ಬರೂ ನಂಬಿದ ಜೀವನ ಮೌಲ್ಯಗಳು, ಸಿದ್ಧಾಂತಗಳು ತದ್ವಿರುದ್ಧವಾಗಿವೆ. ಕುವೆಂಪು ಜಾತಿ, ಮತಗಳ ಮುಳ್ಳು ಬೇಲಿಯನ್ನು ದಾಟಿ ವಿಶ್ವ ಮಾನವತ್ವದ ಸಂದೇಶ ನೀಡಿದವರು. ಸಾವರ್ಕರ್ ಹಿಂದೂಗಳಲ್ಲದವರು ಭಾರತದ ಪ್ರಜೆಗಳಲ್ಲ ಭಾರತ ಹಿಂದೂರಾಷ್ಟ್ರವಾಗಬೇಕು’ ಎಂದು ಹೇಳಿದವರು. ಇಬ್ಬರಿಗೂ ಹೋಲಿಕೆಯಾಗುವುದಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
 ಆದರೆ, ನಿರ್ಮಲಾನಂದನಾಥ ಸ್ವಾಮೀಜಿ ನಮ್ಮ ನಾಡಿನ ನಾಲ್ಕೂವರೆ ಕೋಟಿ ಕನ್ನಡಿಗರ ಹೆಮ್ಮೆಯ ಕವಿಯನ್ನು ಸಾವರ್ಕರರಿಗೆ ಹೋಲಿಸಿದ್ದನ್ನು ಮಾತ್ರ ಆಕ್ಷೇಪಿಸಲೇಬೇಕಾಗಿದೆ. ಸ್ವಾಮೀಜಿ ಸಾವರ್ಕರ್ ಬಗ್ಗೆ ಹೇಳಲು ಬೇಕಾದಷ್ಟು ವಿಷಯಗಳಿದ್ದವು. ಅವುಗಳನ್ನು ಬಿಟ್ಟು ಕುವೆಂಪು ಅವರನ್ನು ಸಾವರ್ಕರ್‌ಗೆ ಹೋಲಿಸುವ ಔಚಿತ್ಯವೇನು? ಇಬ್ಬರಲ್ಲೂ ಸಮಾನವಾಗಿರುವ ಅಂಶ ಯಾವುದು ಎಂದು ವಿವರಿಸಿದರೆ ಚೆನ್ನಾಗಿರುತ್ತಿತ್ತು. ಅಧಿಕಾರದಲ್ಲಿ ಇರುವವರನ್ನು ಒಲೈಸುವುದಕ್ಕಾಗಿ ರಾಷ್ಟ್ರಕವಿಗೆ ಅಪಚಾರ ಮಾಡುವುದು ಸರಿಯಲ್ಲ.
ಪೂರ್ಣಚಂದ್ರ ತೇಜಸ್ವಿಯವರು ಈಗ ಬದುಕಿದ್ದರೆ ಈ ಹೋಲಿಕೆಯ ಮಾತುಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಹಿಂದೊಮ್ಮೆ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಯಾರೋ ಚುನಾವಣೆಗೆ ನಿಂತವರು ಪ್ರಚಾರಕ್ಕಾಗಿ ಕುವೆಂಪು ಫೋಟೊ ಬಳಸಿಕೊಂಡ ಸುದ್ದಿ ಕೇಳಿ ತೇಜಸ್ವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಸವಣ್ಣ, ಅಂಬೇಡ್ಕರ್ ಅವರಂತೆ ಕುವೆಂಪು ಕೂಡ ಇಡೀ ಮಾನವ ಕುಲಕ್ಕೆ ಸೇರಿದವರು. ಇವರು ಯಾವುದೇ ಜಾತಿ, ಮತಕ್ಕೆ ಸೇರಿದವರಲ್ಲ.
 ‘ವಿಶ್ವ ಮಾನವ’ ಎಂದು ಹೆಮ್ಮೆಯಿಂದ ಸಾರಿದವರು. ಆದರೆ, ಸಾವರ್ಕರ್ ತಾನು ಹಿಂದೂ ಅಥವಾ ಬ್ರಾಹ್ಮಣ ಎಂದು ಹೇಳಿಕೊಳ್ಳಲು ಹೆಮ್ಮೆಪಟ್ಟುಕೊಂಡವರು. ಪ್ರೇಕ್ಷಕರ ಚಪ್ಪಾಳೆಗಾಗಿ ನಾವು ಯಾರನ್ನೋ ಇನ್ಯಾರಿಗೋ ಹೋಲಿಸಬಾರದು.
 ‘ಮಗು ಹುಟ್ಟುತ್ತ ವಿಶ್ವ ಮಾನವ. ಬೆಳೆಯುತ್ತ ಸುತ್ತಲಿನವರು ಆ ಮಗುವನ್ನು ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ, ಸಿಖ್ ಎಂದು ಹೆಸರಿಸಿ ಕುಬ್ಜ ಮಾನವನನ್ನಾಗಿ ಮಾಡುತ್ತಾರೆ’ ಎಂದು ಹೇಳುತ್ತಲೇ ಬಂದ ಕುವೆಂಪು ವಿಶ್ವ ಮಾನವರಾಗಲು ಕರೆ ನೀಡಿದರು.
   ಕುವೆಂಪು ಬದುಕಿರುವವರೆಗೆ ಕೋಮುವಾದಿ ಸಂಘಟನೆಗಳ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಕುವೆಂಪು ಅವರನ್ನು ಸಾವರ್ಕರಗೆ ಹೋಲಿಸುವವರು ಈ ಬಗ್ಗೆ ಗಮನಿಸಬೇಕು.
ಹೆಚ್ಚು ಬೆಳಕಿಗೆ ಬಾರದ ಒಂದು ವಿಷಯವನ್ನು ಹೇಳಲೇಬೇಕಾಗಿದೆ. ಆರೆಸ್ಸೆಸ್ ತನ್ನ ಕಾರ್ಯಸೂಚಿಯ ಜಾರಿಗಾಗಿ ಸ್ಥಾಪಿಸಿದ ವಿಶ್ವ ಹಿಂದೂ ಪರಿಷತ್‌ನ ಸ್ಥಾಪನಾ ಸಮ್ಮೇಳನ ಎಪ್ಪತ್ತರ ದಶಕದಲ್ಲಿ ಉಡುಪಿಯಲ್ಲಿ ನಡೆಯಿತು. ಈ ಸಮ್ಮೇಳನದ ಉದ್ಘಾಟನೆಗೆ ಬರುವಂತೆ ಕುವೆಂಪು ಅವರನ್ನು ಆಹ್ವಾನಿಸಲಾಗಿತ್ತು. ಈ ಆಹ್ವಾನವನ್ನು ಒಪ್ಪಿಕೊಳ್ಳದ ಕುವೆಂಪು ಕೆಲವು ಷರತ್ತುಗಳನ್ನು ಹಾಕಿದರು. ಅದರಲ್ಲಿ ಒಂದನೆಯದು ಹಿಂದೂಗಳೆಲ್ಲ ಒಂದೇ ಅನ್ನುವುದಾದರೆ ಉಡುಪಿಯ ಅಷ್ಟ ಮಠಗಳಲ್ಲಿ ಒಂದು ಮಠಕ್ಕಾದರೂ ಬ್ರಾಹ್ಮಣೇತರ ಸಮುದಾಯದ ವ್ಯಕ್ತಿಯನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡಿ ಎಂಬುದಾಗಿತ್ತು. ಹೀಗೆ ಐದಾರು ಷರತ್ತುಗಳನ್ನು ಕುವೆಂಪು ಹಾಕಿದ್ದರು. ಅವುಗಳನ್ನು ಈಡೇರಿಸುವ ಸ್ಥಿತಿಯಲ್ಲಿ ಸಂಘ ಪರಿವಾರ ಆವಾಗಲೂ ಇರಲಿಲ್ಲ. ಈಗಲೂ ಇಲ್ಲ.
ತಮ್ಮ ತಾತ್ವಿಕ ನಿಲುವುಗಳನ್ನು ಕುವೆಂಪು ಅವರು ಎಂದೂ ಮರೆ ಮಾಡಿ ಬಚ್ಚಿಟ್ಟುಕೊಂಡವರಲ್ಲ. ತಮಗೆ ಅನಿಸಿದ್ದನ್ನು ತಮ್ಮ ಪದ್ಯಗಳ ಮೂಲಕ ಕಾದಂಬರಿ, ಕತೆಗಳ ಮೂಲಕ ಹೇಳುತ್ತಲೇ ಬಂದವರು. ಇದು ನಿರ್ಮಲಾನಂದನಾಥ ಸ್ವಾಮೀಜಿಗೆ ಗೊತ್ತಿಲ್ಲವೆಂದಲ್ಲ. ಗೊತ್ತಿದ್ದೂ ಈ ರೀತಿ ಮಾತಾಡಿದ್ದಾರೆ.
  ಬೆಂಗಳೂರಿನಲ್ಲಿ ಸಾವರ್ಕರ್ ಪುಸ್ತಕ ಬಿಡುಗಡೆಯಾದ ಸಂದರ್ಭದಲ್ಲೇ ದೂರದ ಹರಿದ್ವಾರದಲ್ಲಿ ‘ಧರ್ಮ ಸಂಸತ್ ಎಂಬ ದ್ವೇಷ ಸಂಸತ್’ ನಡೆದಿದೆ. ಇದು ಈಗಿರುವ ಚುನಾಯಿತ ಸಂಸತ್ತಿಗೆ ಪ್ರತಿಯಾಗಿ ಕೋಮುವಾದಿಗಳು ರೂಪಿಸಿದ ಸಂವಿಧಾನೇತರ ಸಂಸತ್ ಈ ಸಮಾವೇಶದಲ್ಲಿ ಮಾತಾಡಿದವರೆಲ್ಲ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂ ಯುವಕರು ಶಸ್ತ್ರಗಳನ್ನು ಕೈಗೆ ತೆಗೆದುಕೊಳ್ಳಬೇಕೆಂದು ಬಹಿರಂಗವಾಗಿ ಕರೆ ನೀಡಿದ್ದಾರೆ.
ನಿರ್ಮಲಾನಂದನಾಥ ಸ್ವಾಮೀಜಿ ವೇದಾಂತ, ವಿಜ್ಞಾನ, ಸೂಫಿ ಸಾಹಿತ್ಯ, ಆಧುನಿಕ ಕನ್ನಡ ಸಾಹಿತ್ಯ ಓದಿಕೊಂಡವರೆಂದು ಗೊತ್ತು. ಇವರು ಚಿಕ್ಕ ಬಳ್ಳಾಪುರದ ಶಾಖಾ ಮಠದಲ್ಲಿ ಇದ್ದಾಗ ಇವರ ಉಪನ್ಯಾಸ ಕೇಳಿದ್ದೆ. ಇಂತಹವರನ್ನು ಅವರು ಆಹ್ವಾನಿಸುವುದು ಇವರ ಮೇಲಿನ ಅಭಿಮಾನ ಅಥವಾ ಗೌರವದಿಂದಲ್ಲ. ದಕ್ಷಿಣ ಕರ್ನಾಟಕದಲ್ಲಿ ಇರುವ ಬಹುದೊಡ್ಡ ಸಂಖ್ಯೆಯ ಒಕ್ಕಲಿಗರ ಓಟ್ ಬ್ಯಾಂಕ್‌ಗಾಗಿ ಕರೆದಿದ್ದಾರೆ. ಇದು ಸ್ವಾಮಿಗಳಿಗೂ ಗೊತ್ತು. ಅದೇನೇ ಇರಲಿ ಇನ್ನು ಮುಂದೆ ಹೀಗಾಗಬಾರದೆಂಬುದು ಅವರ ಅನೇಕ ಭಕ್ತರ ಅಭಿಪ್ರಾಯ.
 ಕೋಮುವಾದಿ ಸಂಘಟನೆಗಳು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಧರ್ಮಗುರುಗಳು, ಮಠಾಧೀಶರು ಈ ಬಗ್ಗೆ ಕೊಂಚ ಯೋಚಿಸಬೇಕು. ಎಲ್ಲ ಧರ್ಮಗಳು ಶಾಂತಿ, ಸಹನೆ, ಸಹಬಾಳ್ವೆಯನ್ನು ಬೋಧಿಸುತ್ತವೆ. ಹೊಡಿ, ಬಡಿ, ಕಡಿ ಎಂದು ಅರಚಾಡುವವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ. ಧರ್ಮದ ಹೆಸರನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗ ಮಾಡಿಕೊಳ್ಳುವವರು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
         ಹರಿದ್ವಾರದ ವೇದ ನಿಕೇತನ ಆಶ್ರಯದಲ್ಲಿ ನಡೆದ ಈ ಧರ್ಮಸಂಸತ್‌ನಲ್ಲಿ ಮಾತಾಡಿದ ಧರ್ಮದಾಸ ಮಹಾರಾಜ ಎಂಬ ಸ್ವಾಮಿ ನಾನು ಗೋಡ್ಸೆ ಅನುಯಾಯಿಯಾಗಿದ್ದು ರಾಷ್ಟ್ರೀಯ ಸಂಪನ್ಮೂಲಗಳಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಎಂದು ಹೇಳಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಎದೆಗೆ ಆರು ಗುಂಡುಗಳನ್ನು ಹಾರಿಸುತ್ತಿದ್ದೆ ಎಂದು ಅರಚಾಡಿದ್ದಾನೆ. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬಿಜೆಪಿ ಸೇರಿದ ಹಿಂದೂವಾಗಿ ಮತಾಂತರಗೊಂಡ ಶಿಯಾ ವಕ್ಫ್ ಮಂಡಲಿಯ ಮಾಜಿ ಅಧ್ಯಕ್ಷ ವಾಸಿಂ ರಜ್ವಿ ಅಲಿಯಾಸ್ ಜಿತೇಂದ್ರ ನಾರಾಯಣ ತ್ಯಾಗಿ ಶಸ್ತ್ರ ಹಿಡಿಯಲು ಹಿಂದೂ ಯುವಕರಿಗೆ ಕರೆ ನೀಡಿದ್ದಾನೆ. ಈ ಘಟನೆ ನಡೆದು ಒಂದು ವಾರದ ನಂತರ ಪೊಲೀಸರ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಯಾರನ್ನೂ ಬಂಧಿಸಿಲ್ಲ. ಪ್ರಚೋದಕ ಭಾಷಣ ಮಾಡಿದವರ ಮೇಲೆ ಭಾರತೀಯ ಅಪರಾಧ ಸಂಹಿತೆಯ 153(ಎ) ಅನ್ವಯ ದೂರು ದಾಖಲಿಸಿದ್ದಾರೆ. ಇದು ಸುಲಭವಾಗಿ ಪಾರಾಗಿ ಬರಬಹುದಾದ ಕಲಮು. ನ್ಯಾಯವಾಗಿ ಹಿಂಸೆಗೆ ಬಹಿರಂಗವಾಗಿ ಪ್ರಚೋದಿಸಿದ ಇವರ ಮೇಲೆ ಯುಎಪಿಎ ಅನ್ವಯ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಬೇಕಾಗಿತ್ತು.ಆನಂದ ತೇಲ್ತುಂಬಡೆ, ವರವರರಾವ ಅವರಂತಹ ಲೇಖಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ಹಾಕುವ ನಮ್ಮ ವ್ಯವಸ್ಥೆ ಬಹಿರಂಗವಾಗಿ ಹಿಂಸೆಗೆ ಪ್ರಚೋದಿಸುವವರಿಗೆ ಈ ರಿಯಾಯಿತಿ ನೀಡುವುದೇಕೆ?
 ಉದಾಹರಣೆಗೆ ಗೋಹತ್ಯೆ ನಿಷೇಧ ಬಿಜೆಪಿಯ ರಾಜಕೀಯ ಘೋಷಣೆ. ಅದಕ್ಕೆ ಅವರ ಬದ್ಧತೆ ತೋರಿಕೆಯದು ಮಾತ್ರ. ಕರ್ನಾಟಕ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಗೋಮಾಂಸ ಮಾರಾಟ ನಿಷೇಧಿಸುವ ಈ ಪಕ್ಷ ಅಧಿಕಾರದಲ್ಲಿರುವ ಗೋವಾ ಮತ್ತು ಆಸ್ಸಾಮಿನಲ್ಲಿ ಅದು ಗೋಮಾಂಸ ನಿಷೇಧಕ್ಕೆ ಯಾವುದೇ ಕಾಯ್ದೆ ಮಾಡಿಲ್ಲ. ಕಾರಣ ಅದು ಅಲ್ಲಿ ಅಧಿಕಾರ ಉಳಿಸಿಕೊಳ್ಳಲು ಕ್ರೈಸ್ತರ ಮತಗಳೂ ಬೇಕು. ಕೇರಳದಲ್ಲಿ ಅದು ಗೋ ಮಾಂಸ ಭಕ್ಷಣೆಯನ್ನು ವಿರೋಧಿಸುವುದಿಲ್ಲ. ಅಧಿಕಾರಕ್ಕೆ ಬಂದರೆ ಶುದ್ಧ ಗೋಮಾಂಸ ಒದಗಿಸುವುದಾಗಿ ಮತದಾರರಿಗೆ ಭರವಸೆ ನೀಡುತ್ತದೆ.
 
ಕುವೆಂಪು ಮತ್ತು ಸಾವರ್ಕರ್ ಅವರ ಸಾಹಿತ್ಯಗಳು ಮುಕ್ತವಾಗಿ ಎಲ್ಲ ಕಡೆ ಸಿಗುತ್ತವೆ. ಅವುಗಳನ್ನು ಓದಿದರೆ ಇಬ್ಬರಲ್ಲಿ ಎಲ್ಲಿ ಸಾಮ್ಯವಿದೆ, ಎಲ್ಲಿ ಭಿನ್ನಾಭಿಪ್ರಾಯ ಇದೆೆ ಎಂಬುದು ಗೊತ್ತಾಗುತ್ತದೆ. ಪೂರ್ವ ಮತ್ತು ಪಶ್ಚಿಮಗಳು ಒಂದೇ ಎಂದು ಹೇಳಲು ಹೇಗೆ ಸಾಧ್ಯವಾಗುವುದಿಲ್ಲವೋ ಅದೇ ರೀತಿ ಕುವೆಂಪು ಮತ್ತು ಸಾವರ್ಕರ್ ಒಂದೇ ಎಂದು ಹೇಳಲು ಆಗುವದಿಲ್ಲ.
ಮತಾಂತರ ನಿಷೇಧ ಕಾಯ್ದೆ ಕೂಡ ಕರ್ನಾಟಕದಲ್ಲಿ ಮತ್ತೆ ಚುನಾವಣೆಯಲ್ಲಿ ಗೆಲ್ಲಲು ಹಿಂದೂ ಓಟ್ ಬ್ಯಾಂಕ್ ನಿರ್ಮಿಸಲು ರೂಪಿಸಿದ ಕಾರ್ಯಕ್ರಮ. ನಮ್ಮ ಪಕ್ಕದ ಗೋವಾದಲ್ಲಿ ಬಿಜೆಪಿ ಸರಕಾರ ವಿದ್ದರೂ ಅಲ್ಲಿ ಗೋಮಾಂಸ ಮಾರಾಟ ಮತ್ತು ಸೇವನೆಗೆ ನಿರ್ಬಂಧವಿಲ್ಲ. ಹೀಗೆ ‘ಒಂದೇ ರಾಷ್ಟ್ರ ಒಂದೇ ಧೋರಣೆ’ ಎಂದು ಹೇಳುತ್ತಲೇ ಆಯಾ ರಾಜ್ಯಗಳಲ್ಲಿ ಚುನಾವಣೆ ಗೆಲ್ಲಲು ಅನುಕೂಲ ವಾಗುವ ನೀತಿಯನ್ನು ಅದು ಅನುಸರಿಸುತ್ತದೆ.ಇಂತಹವರ ಜೊತೆ ಸೇರಿ ನಮ್ಮ ಧರ್ಮ ಗುರುಗಳು, ಮಠಾಧೀಶರು ಇಕ್ಕಟ್ಟಿಗೆ ಸಿಲುಕಬಾರದು.
ಕುವೆಂಪು ನನ್ನ ತುಂಬಾ ಇಷ್ಟದ ಸಾಹಿತಿ ಮಾತ್ರವಲ್ಲ ಅವರದು ಬಹುಮುಖಿ ವ್ಯಕ್ತಿತ್ವ. ಜಾತಿ ಮತಗಳನ್ನು ದೂರವಿಟ್ಟು ಅವರು ವಿಶ್ವ ಮಾನವರಾದರು. ಅವರನ್ನು ಯಾರಾರ ಜೊತೆಗೆ ಹೋಲಿಸುವುದು ಸರಿಯಲ್ಲ. ರಸ ಋಷಿಗೆ ಅಪಚಾರ ಮಾಡುವುದು ಬೇಡ. ನಮ್ಮ ಭಾರತವನ್ನು, ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸಿ ಬೆಳೆಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.
ಇದೆಲ್ಲದರ ನಡುವೆ ಹಳೆಯ ವರ್ಷವನ್ನು ಬೀಳ್ಕೊಟ್ಟು ಹೊಸ ವರ್ಷ ಪ್ರವೇಶಿಸುತ್ತಿದ್ದೇವೆ. ನೂತನ ವರ್ಷದಲ್ಲೂ ಕೂಡ ಮನುಷ್ಯರು ಪರಸ್ಪರ ಪ್ರೀತಿಸುವ, ಪ್ರಕೃತಿಯ ಎಲ್ಲ ಜೀವಿಗಳ ಬದುಕುವ ಹಕ್ಕನ್ನು ಗೌರವಿಸಿ ಕಾಪಾಡುವ ಆಶಯಗಳನ್ನು ಜೀವಂತವಾಗಿಡಲು ಸಂಕಲ್ಪ ಮಾಡುವದೊಂದೇ ನಮಗೆ ಉಳಿದ ದಾರಿಯಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News