ಮತದಾರರ ಪಟ್ಟಿಯೊಂದಿಗೆ ಮನೆ-ಮನೆಗೆ ಭೇಟಿ ನೀಡಲು ಬಿಎಲ್‌ಒಗಳಿಗೆ ದ.ಕ. ಡಿಸಿ ಸೂಚನೆ

Update: 2022-01-21 15:26 GMT

ಮಂಗಳೂರು, ಜ.21: ದ.ಕ.ಜಿಲ್ಲೆಯಲ್ಲಿ 17.53 ಲಕ್ಷಕ್ಕೂ ಹೆಚ್ಚಿನ ಮತದಾರರಿದ್ದು, ಬಿಎಲ್‌ಒ (ಬೂತ್ ಮಟ್ಟದ ಅಧಿಕಾರಿ)ಗಳು ಮತದಾರರ ಪಟ್ಟಿಯೊಂದಿಗೆ ತಮ್ಮ ವ್ಯಾಪ್ತಿಗೊಳಪಡುವ ಮನೆ-ಮನೆಗಳಿಗೆ ಭೇಟಿ ನೀಡಿ ಕೋವಿಡ್ ಲಸಿಕೆ ಪಡೆಯದವರನ್ನು ಪತ್ತೆ ಹಚ್ಚಿ ಅವರಿಗೆ ಲಸಿಕೆ ಕೊಡಿಸಲು ಕ್ರಮ ಜರಗಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣವನ್ನು ತೀವ್ರಗೊಳಿಸುವ ಕುರಿತು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ವರ್ಚುವಲ್ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 1,861 ಬಿಎಲ್‌ಒಗಳಿದ್ದಾರೆ. ಅವರ ಮೇಲ್ವಿಚಾರಣೆಗಾಗಿ 186 ಸೂಪರ್‌ವೈಸರ್‌ಗಳಿದ್ದಾರೆ, ಬಿಎಲ್‌ಒಗಳು ತಮ್ಮಲ್ಲಿರುವ ಮತದಾರರ ಪಟ್ಟಿಯೊಂದಿಗೆ ಬೂತ್ ವ್ಯಾಪ್ತಿಯ ಮನೆ-ಮನೆಗಳಿಗೆ ಭೇಟಿ ನೀಡಬೇಕು. ಆ ಮನೆಗಳಲ್ಲಿ 18 ವರ್ಷ ತುಂಬಿದವರ ಹೆಸರನ್ನು ಅರ್ಜಿ ನಮೂನೆ 6ರಲ್ಲಿ ನಮೂದಿಸಿ ಮತದಾರರ ಪಟ್ಟಿಗೆ ಅವರ ಹೆಸರನ್ನು ಸೇರ್ಪಡೆ ಮಾಡುವ ಪ್ರಕ್ರಿಯೆ ಮಾಡಬೇಕು, ಅದೇ ಮನೆಯಲ್ಲಿ 15 ವರ್ಷ ಮೇಲ್ಪಟ್ಟವರಿದ್ದಲ್ಲಿ ಅವರಲ್ಲಿ ಕೋವಿಡ್ ಲಸಿಕೆಯ ಮಾಹಿತಿ ಪಡೆಯಬೇಕು. ಲಸಿಕೆ ಪಡೆಯದಿದ್ದಲ್ಲಿ ಅವರಿಗೆ ಲಸಿಕೆ ನೀಡಲು ಸಂಬಂಧಿಸಿದ ವೈದ್ಯಾಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ ಲಸಿಕೆ ಕೊಡಿಸುವ ವ್ಯವಸ್ಥೆ ಮಾಡಬೇಕು. ಅದೇ ಮನೆಯಲ್ಲಿ ಮರಣ ಹೊಂದಿದವರ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಅದನ್ನು ಪಟ್ಟಿಯಿಂದ ತೆಗೆಯುವ ಕ್ರಮ ವಹಿಸಬೇಕು. ಅನಾರೋಗ್ಯ ಪೀಡಿತರಿದ್ದರೆ ಅವರು ವ್ಯಾಕ್ಸಿನ್ ಪಡೆದ ಬಗ್ಗೆ ಮಾಹಿತಿ ಸಂಗ್ರಸಬೇಕು. ಲಸಿಕೆ ಪಡೆಯದಿದ್ದರೆ ಸಂಬಂಧಿಸಿದವರನ್ನು ಸಂಪರ್ಕಿಸಿ ವ್ಯಾಕ್ಸಿನ್‌ಕೊಡಿಸಬೇಕು ಎಂಬ ಡಿಸಿ ಸೂಚನೆಗಳನ್ನು ನೀಡಿದರು.

ಪ್ರತಿ ಮಂಗಳವಾರ ಹಾಗೂ ಶುಕ್ರವಾರ ವ್ಯಾಕ್ಸಿನ್ ಮೇಳವನ್ನು ಹಮ್ಮಿಕೊಳ್ಳುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಡಿಸಿ ಮೇಳದಲ್ಲಿ ಮೊದಲ ಅಥವಾ ಎರಡನೇ ಡೋಸ್ ಲಸಿಕೆ ಕೊಡಿಸಬೇಕು. ಅದರ ಹೊರತಾಗಿ ಅಧಿಕಾರಿಗಳು ಮೈಕ್ರೋ ಯೋಜನೆಗಳನ್ನು ರೂಪಿಸಿಕೊಂಡು ಲಸಿಕೆ ಕೊಡಿಸಬೇಕು. ಕೋವಿಡ್ ಲಸಿಕಾಕರಣದಲ್ಲಿ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಗದಿತ ಗುರಿ ಸಾಧಿಸದ ವೈದ್ಯಕೀಯ ಅಧಿಕಾರಿಗಳಿಗೆ ತಾಲೂಕು ಮಟ್ಟದಲ್ಲಿ ನೋಟಿಸ್ ನೀಡಬೇಕು. ಗುರಿ ಸಾಧಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಶಿಪಾರಸ್ಸು ಮಾಡಿ ಪತ್ರ ಬರೆಯುವುದಾಗಿ ಡಿಸಿ ಎಚ್ಚರಿಕೆ ನೀಡಿದರು.

ಎರಡನೇ ಡೋಸ್ ಪಡೆದ ಬಳಿಕ 9 ತಿಂಗಳ ಅವಧಿ ಪೂರೈಸಿರುವ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಕೊಡಿಸಬೇಕು ಎಂದರು. ದ.ಕ.ಜಿಪಂ ಸಿಇಒ ಡಾ.ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ತಾಲೂಕುಗಳ ತಹಶೀಲ್ದಾರರು, ಕ್ಷೇತ್ರಗಳ ಶಿಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಲ್ಲಾ ಬಿಎಲ್‌ಒ ಸೂಪರ್ ವೈಜರ್‌ಗಳು, ಕಂದಾಯ ನಿರೀಕ್ಷಕರು ಹಾಗೂ ಸಂಬಂಧಿಸಿದವರು ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News