ರಾಜ್ಯ ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾಕೂಟ `ನೆನಪು -2022' ಉದ್ಘಾಟನೆ

Update: 2022-01-26 16:45 GMT

ಪಡುಬಿದ್ರಿ: ಹೆಜಮಾಡಿ ಬಸ್ತಿಪಡ್ಪು ರಾಜೀವ್‍ಗಾಂಧಿ ಕ್ರೀಡಾಂಗಣದಲ್ಲಿ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್, ಯುವ ಕಾಂಗ್ರೆಸ್ ಸಮಿತಿ ಹೆಜಮಾಡಿ ಆಯೋಜಿಸಿದ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ ದಿ. ರೇಣುಕಾ ಪುತ್ರನ್ ನೆನೆಪಿಗಾಗಿ ಸಂಘಟಿಸಲಾದ ರಾಜ್ಯ ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾಕೂಟ `ನೆನಪು - 2022ನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ದೇಶದಿಂದ ನನಗೇನು ಅನ್ನುವುದಕ್ಕಿಂತ ದೇಶಕ್ಕೆ ನಾನೇನು ಕೊಡಬಲ್ಲೆ ಎನ್ನುವತ್ತ ಸಂಕಲ್ಪ ಮಾಡುವ ದಿನ ಇಂದಿನ ಗಣರಾಜ್ಯ ದಿನವಾಗಿದೆ. ಸಂವಿಧಾನವನ್ನು ರಚಿಸುವ ಮೂಲಕ ಹರಿದು ಹಂಚಿ ಹೋಗಿದ್ದ ಭಾರತ ರಾಷ್ಟ್ರದಲ್ಲಿ ನಮ್ಮ ಹಕ್ಕುಗಳು ನಮಗೆ ಪ್ರದತ್ತವಾಗುವಂತಾಯಿತು. ನಾವೆಲ್ಲರೂ ಒಂದೇ ಅನ್ನುವ ನಮ್ಮ ಕನಸು ನನಸಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯೂ ಉಳಿಯುವಂತಾ ಯಿತು. ಹಾಗೆನೇ ಮಹಿಳೆಯರೂ ಪುರುಷ ಸಮಾನರಾಗಿ ಮುಂದು ಬರುವಂತಾಯಿತು. ಈ ಭಾಗದ ಕಾಂಗ್ರೆಸ್‍ನ ದಿವ್ಯ ಮಹಿಳೆ, ದಿ| ರೇಣುಕಾ ಪುತ್ರನ್ ನೆನಪಲ್ಲಿ ನಡೆಯುತ್ತಿರುವ ಈ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟವು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಬಿಗ್ ಎಫ್‍ಎಂ92.7ನ ಆರ್‍ಜೆ ಎರೋಲ್ ಮಾತನಾಡಿದರು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ದೀಪಕ್ ಕುಮಾರ್ ಎರ್ಮಾಳು, ಚಿತ್ರನಟ ಮಹಮ್ಮದ್ ನಯೀಬ್, ವೈ. ಸುಕುಮಾರ್, ಕೆಪಿಸಿಸಿ ಕೋ ಆರ್ಡಿನೇಟರ್ ಅಬ್ದುಲ್ ಅಝೀಝ್ ಹೆಜಮಾಡಿ, ರಾಜೀವ್ ಪುತ್ರನ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಯು. ಸಿ. ಶೇಖಬ್ಬ, ದಿನೇಶ್ ಕೋಟ್ಯಾನ್ ಪಲಿಮಾರು, ರಾಜೇಶ್ ಶೆಟ್ಟಿ ಪಾಂಗಾಳ, ಪಿ. ಕೃಷ್ಣ ಬಂಗೇರ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಸರ್ಫುದ್ದೀನ್ ಶೇಖ್, ಜ್ಯೋತಿ ಮೆನನ್, ಗಣೇಶ್ ಆಚಾರ್ಯ ಉಚ್ಚಿಲ, ಸುಧಾಕರ ಕೆ. ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್‍ನ ಅಧ್ಯಕ್ಷ ಸುಧೀರ್ ಕರ್ಕೇರ ಪ್ರಸ್ತಾವಿಸಿ ಸ್ವಾಗತಿಸಿದರು. ಹನೀಫ್ ಕನ್ನಂಗಾರ್ ಕಾರ್ಯಕ್ರಮ ನಿರ್ವಹಿಸಿದರು. ಈ ಕ್ರಿಕೆಟ್ ಪಂದ್ಯಾಕೂಟದಲ್ಲಿ ರಾಜ್ಯ ಮಟ್ಟದ 9 ಶ್ರೇಷ್ಟ ಮಹಿಳಾ ತಂಡಗಳು ಭಾಗವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News