ಮಂಗಳೂರು ವಿ.ವಿ. ಕ್ರೈಸ್ತ ಅಧ್ಯಯನ ಪೀಠದ ಮುಖ್ಯಸ್ಥರಾಗಿ ವಂ.ಡಾ. ಐವನ್ ಡಿಸೋಜ
ಮಂಗಳೂರು, ಜ.27: ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ಅಧ್ಯಯನ ಪೀಠದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಮಂಗಳೂರು ಧರ್ಮ ಪ್ರಾಂತದ ಧರ್ಮಗುರು ವಂ.ಡಾ. ಐವನ್ ಡಿಸೋಜ ನೇಮಕಗೊಂಡಿದ್ದಾರೆ.
ಗುರುವಾರ ನಗರದ ಬಜ್ಜೋಡಿಯ ಶಾಂತಿ ಕಿರಣ್ ಪ್ಯಾಸ್ಟೋರಲ್ ಸೆಂಟರ್ನಲ್ಲಿರುವ ಅಧ್ಯಯನ ಪೀಠದ ಕಚೇರಿಯಲ್ಲಿಅವರು ಅಧಿಕಾರ ವಹಿಸಿಕೊಂಡರು.
ಪೀಠದ ನಿರ್ಗಮನ ಮುಖ್ಯಸ್ಥ ಹಾಗೂ ಧರ್ಮ ಪ್ರಾಂತದ ಛಾನ್ಸಲರ್ ವಂ. ಡಾ. ವಿಕ್ಟರ್ ಜಾರ್ಜ್ ಡಿಸೋಜ ನೂತನ ಮುಖ್ಯಸ್ಥರಿಗೆ ಅಧಿಕಾರ ಹಸ್ತಾಂತರಿಸಿದರು.
ವಂ.ಡಾ. ಐವನ್ ಡಿಸೋಜ ಪೂನಾದ ಜ್ಞಾನ ದೀಪ ಇನ್ಸ್ಟಿಟ್ಯೂಟ್ ಆಫ್ ಫಿಲಾಸಫಿ ಆ್ಯಂಡ್ ಥಿಯೋಲಜಿಯಿಂದ ಪಿಎಚ್ಡಿ ಪದವಿ ಪಡೆದಿದ್ದು, ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯಲ್ಲಿ ಇಂಡಿಯನ್ ಫಿಲಾಸಫಿ ವಿಭಾಗದ ಪ್ರಾಧ್ಯಾಪಕರಾಗಿರುತ್ತಾರೆ.
ಈ ಸಂದರ್ಭ ಸೆಂಟರ್ನ ನಿರ್ದೇಶಕ ವಂ. ಸಂತೋಷ್ ರಾಡ್ರಿಗಸ್, ಸೈಂಟ್ ಜೋಸೆಫ್ ಸೆಮಿನರಿಯ ರೆಕ್ಟರ್ ವಂ. ಡಾ. ರೊನಾಲ್ಡ್ ಸೆರಾವೊ, ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ ಆ್ಯಂಟನಿ ಸೆರಾವೊ ಉಪಸ್ಥಿತರಿದ್ದರು.