×
Ad

2021-22ನೆ ಸಾಲಿನ ಜನವರಿವರೆಗೆ 105 ಕೋಟಿ ರೂ. ರಾಜಸ್ವ ಸಂಗ್ರಹ: ಉಡುಪಿ ಆರ್‌ಟಿಓ ಜೆ.ಪಿ.ಗಂಗಾಧರ

Update: 2022-01-29 18:58 IST

ಉಡುಪಿ, ಜ.29: ಉಡುಪಿ ಪ್ರಾದೇಶಿಕ ಸಾರಿಗೆ ಕಛೇರಿಯಿಂದ 2021- 22ನೇ ಸಾಲಿನ ಆರ್ಥಿಕ ವರ್ಷದಲ್ಲಿ 151ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನೀಡಲಾಗಿದ್ದು, ಜನವರಿ 27ರ ವರೆಗೆ 105.70ಕೋಟಿ ರೂ. ರಾಜಸ್ವ ಸಂಗ್ರಹ ಮಾಡಲಾಗಿದೆ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ತಿಂಗಳ ಮಾಧ್ಯಮ ಸಂವಾದದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

2020-21ನೆ ಆರ್ಥಿಕ ವರ್ಷದಲ್ಲಿ ಮಾರ್ಚ್ 2021ರ ಅಂತ್ಯಕ್ಕೆ 128.77 ಕೋಟಿ ರೂ.(ಶೇ.91.95) ಮತ್ತು 20201-22ನೇ ಸಾಲಿನಲ್ಲಿ 2021ರ ಡಿಸೆಂಬರ್ ಅಂತ್ಯಕ್ಕೆ 93.55ಕೋಟಿ ರೂ.(ಶೇ.82.31) ಹಾಗೂ ಜ.27ರವರೆಗೆ 12,14,34,361ರೂ. ರಾಜಸ್ವ ಸಂಗ್ರಹಿಸಲಾಗಿದೆ ಎಂದರು.

2020-21ನೆ ಸಾಲಿನಲ್ಲಿ ವಿವಿಧ ವರ್ಗದ 22,492 ಹೊಸ ವಾಹನಗಳು ನೋಂದಣಿಯಾಗಿವೆ. 2,884 ಹೊಸ ಚಾಲನಾ ಅನುಜ್ಞಾ ಪತ್ರಗಳನ್ನು ನೀಡಲಾಗಿದೆ. 2021-22ನೆ ಸಾಲಿನಲ್ಲಿ ಡಿಸೆಂಬರ್ ಅಂತ್ಯಕ್ಕೆ ಒಟ್ಟು 2138 ವಾಹನಗಳನ್ನು ತಪಾಸಣೆ ಮಾಡಿ 266 ಪ್ರಕರಣ ದಾಖಲಿಸಿ 50 ವಾಹನಗಳನ್ನು ಮುಟ್ಟುಗೋಲು ಹಾಕಿ, 13,97,686ರೂ. ತೆರಿಗೆ ಹಾಗೂ 13,21,000ರೂ. ದಂಡ ಸೇರಿದಂತೆ ಒಟ್ಟು 27,18,686ರೂ. ವಸೂಲು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪೇಪರ್ ಶೀಟ್ ಆರ್‌ಸಿಆರ್‌ಟಿಓ ಇಲಾಖೆಯನ್ನು ಶೇ.100ರಷ್ಟು ಕಾಗದ ರಹಿತ ಇಲಾಖೆ ಮಾಡುವುದು ತುಂಬಾ ಕಷ್ಟ. ಆರ್‌ಸಿ ಸ್ಮಾರ್ಟ್ ಕಾರ್ಡ್‌ನಲ್ಲಿ ಲೋಪ ದೋಷಗಳು ಮತ್ತು ಸಾಕಷ್ಟು ದಂಧೆಗಳು ನಡೆಯುತ್ತಿರುವುದರಿಂದ ರಾಜ್ಯ ಸರಕಾರದ ಆದೇಶದಂತೆ ಕಳೆದ ನವೆಂಬರ್ ತಿಂಗಳಿನಿಂದ ಪೇಪರ್ ಶೀಟ್ ಮೂಲಕವೇ ಆರ್‌ಸಿ ನೀಡುತ್ತಿದ್ದೇವೆ ಎಂದು ಆರ್‌ಟಿಓ ತಿಳಿಸಿದರು.

ಈ ವಾರದಲ್ಲಿ ತೆರಿಗೆ ಪಾವತಿಸದೆ ಓಡಾಡುತ್ತಿದ್ದ 25-30 ಬಸ್‌ಗಳನ್ನು ಮುಟ್ಟುಗೋಲು ಹಾಕಲಾಗಿದೆ. ಅಪಘಾತದಿಂದ ಸಂಪೂರ್ಣ ನಿರುಪಯುಕ್ತ (ಟೋಟಲ್ ಲಾಸ್) ಆದ ವಾಹನಗಳನ್ನು ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಅದು ಗುಜರಿ(ಸ್ಕ್ರಾಬ್)ಗೆ ಅರ್ಹವಾಗಿರುತ್ತದೆ. ಈ ಸಂಬಂಧ ಇನ್ಸೂರೆನ್ಸ್ ಕಂಪೆನಿಗಳಿಗೆ ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಅಧಿಕ ದರ ವಸೂಲಿಗೆ ಕ್ರಮ ಈಗಾಗಲೇ ಪರಿಷ್ಕೃತ ಬಸ್ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ. ಈ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಿದರೆ ಆ ಬಸ್ಸಿನ ಅಂದಿನ ಟಿಕೆಟ್, ಬಸ್ ಫೋಟೋದೊಂದಿಗೆ ದೂರು ನೀಡಬೇಕು. ಅಂತಹ ಬಸ್‌ಗಳಿಗೆ ಪ್ರಯಾಣ ದರ ಉಲ್ಲಂಘನೆ ನಿಯಮದಡಿ 5000ರೂ. ದಂಡ ವಿಧಿಸಬಹುದಾಗಿದೆ ಎಂದು ಆರ್‌ಟಿಓ ತಿಳಿಸಿದರು.

ಜ.27ರವರೆಗೆ ಅದ್ಯರ್ಪಣ(ಸರೆಂಡರ್) ವಾಹನಗಳಲ್ಲಿ 21 ಒಪ್ಪಂದ ವಾಹನ ಗಳು, 170 ಬಸ್‌ಗಳು, 69 ಸರಕು ಸಾಗಾಣಿಕೆ ವಾಹನಗಳು, 9 ಪ್ರಯಾಣಿಕರ ವಾಹನಗಳು, 6 ಖಾಸಗಿ ಸೇವಾ ವಾಹನಗಳು, 32 ಮ್ಯಾಕ್ಸಿಕ್ಯಾಬ್, 21 ಶಾಲಾ ವಾಹನಗಳು ಸೇರಿದಂತೆ ಒಟ್ಟು 329 ವಾಹನಗಳು ಬಾಕಿ ಇದೆ ಎಂದು ಅವರು ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ಪತ್ರಕರ್ತೆ ಪಲ್ಲವಿ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

36 ಹುದ್ದೆಗಳಲ್ಲಿ 14 ಮಾತ್ರ ಭರ್ತಿ!

ಉಡುಪಿ ಆರ್‌ಟಿಓ ಕಚೇರಿಯಲ್ಲಿ ಮಂಜೂರಾದ ಒಟ್ಟು 36 ಹುದ್ದೆಗಳ ಪೈಕಿ ಕೇವಲ 14 ಹುದ್ದೆಗಳು ಮಾತ್ರ ಭರ್ತಿಯಾಗಿವೆ ಎಂದು ಆರ್‌ಟಿಓ ಜೆ.ಪಿ. ಗಂಗಾಧರ ತಿಳಿಸಿದ್ದಾರೆ. ಎಆರ್‌ಟಿಓ ಹುದ್ದೆ ಇನ್ನೂ ಖಾಲಿಯಾಗಿಯೇ ಇವೆ. ಹಿರಿಯ ಮೋಟಾರು ವಾಹನ ನಿರೀಕ್ಷಕರ ಎರಡು ಹುದ್ದೆಗಳು ತುಂಬಿಲ್ಲ. ಮೋಟಾರು ವಾಹನ ನಿರೀಕ್ಷಕರ ಐದು ಹುದ್ದೆಯಲ್ಲಿ ನಾಲ್ಕು ಮಂದಿ ಇದ್ದಾರೆ. ಗ್ರೂಪ್ ಡಿ ನೌಕರರ ನಾಲ್ಕು ಹುದ್ದೆಗಳು ಕೂಡ ಖಾಲಿಯಾಗಿಯೇ ಇವೆ ಎಂದು ಅವರು ಮಾಹಿತಿ ನೀಡಿದರು.

ಅಲೆವೂರಿನಲ್ಲಿ ಡ್ರೈವಿಂಗ್ ಟ್ರಾಕ್ ನಿರ್ಮಾಣ

ಉಡುಪಿ ಆರ್‌ಟಿಓ ಕಛೇರಿಗೆ ಗಣಕೀಕೃತ ಚಾಲನಾ ಪಥ(ಡ್ರೈವಿಂಗ್ ಟ್ರಾಕ್) ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಂದ ಅಲೆವೂರಿನಲ್ಲಿ 5 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ ಎಂದು ಆರ್‌ಟಿಓ ಜೆ.ಪಿ.ಗಂಗಾಧರ ತಿಳಿಸಿದರು.ಈ ಜಾಗ ಡೀಮ್ಸ್ ಫಾರೆಸ್ಟ್ ಆಗಿರುವುದರಿಂದ ಅರಣ್ಯ ಇಲಾಖೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದುದರಿಂದ ಈ ಬಗ್ಗೆ ಅರಣ್ಯ ಇಲಾಖೆಯ ಪೋರ್ಟಲ್‌ನಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದೆ. ಸದ್ಯವೇ ಸಮಸ್ಯೆ ಬಗೆಹರಿಯಲಿದೆ ಎಂದರು. ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ದಿಂದ ಕೆಎಸ್‌ಆರ್‌ಟಿಸಿಯವರಿಗೆ 30 ಸಿಟಿ ಬಸ್(ನರ್ಮ್) ಪರವಾನಿಗೆಗಳ ನ್ನೊಳಗೊಂಡ ಒಟ್ಟು 131 ಬಸ್‌ಗಳಿಗೆ ಪರವಾನಿಗೆಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News