ಬೆಂಗಳೂರು: ಮನೆಯ ಹಿತ್ತಲಲ್ಲಿಯೇ ವೃದ್ಧೆಯ ಅಂತ್ಯಸಂಸ್ಕಾರ ನಡೆಸಿದ್ದಕ್ಕೆ ಸಾರ್ವಜನಿಕರ ಆಕ್ರೋಶ
ಬೆಂಗಳೂರು, ಫೆ.2: ಮನೆಯ ಹಿತ್ತಲಲ್ಲಿಯೇ ಅಂತ್ಯಸಂಸ್ಕಾರ ನಡೆಸಿದ್ದಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿರುವ ಘಟನೆ ವರದಿಯಾಗಿದೆ.
ಇಲ್ಲಿನ ಪುಟ್ಟೇನಹಳ್ಳಿಯ ಪಾಂಡುರಂಗ ನಗರದಲ್ಲಿ ಕಳೆದ 3 ದಿನಗಳ ಹಿಂದೆ 80 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದರು. ಸ್ವಂತ ಮನೆಯ ಜಾಗದಲ್ಲಿಯೇ ಕುಟುಂಬದವರು ಅಂತ್ಯಕ್ರಿಯೆ ಮಾಡಿದ್ದಾರೆ ಎನ್ನಲಾಗಿದೆ.
ಅಂತ್ಯಸಂಸ್ಕಾರ ಸ್ಥಳದ ಪಕ್ಕದಲ್ಲಿ ಅಪಾರ್ಟ್ಮೆಂಟ್ಗಳು ವಾಸದ ಮನೆಗಳು ಇವೆ. ಹೀಗಾಗಿ ಅಂತ್ಯಸಂಸ್ಕಾರ ನಡೆಸಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೂಡ ಮಾಡಿಲ್ಲ. ಮೊದಲು ಶವ ಹೊರತೆಗೆದು ಬೇರೆಡೆ ಹೋಗಿ ಅಂತ್ಯಸಂಸ್ಕಾರ ಮಾಡಿ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
ವಿರೋಧ ಹೆಚ್ಚಾಗುತ್ತಿದ್ದಂತೆ ಮೃತರ ಕುಟುಂಬದವರು ಲೇಔಟ್ ಅಸೋಸಿಯೇಷನ್ ಅಧ್ಯಕ್ಷರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ತದನಂತರ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.