ಉಡುಪಿ: ಗುರುರಾಜ ಮಾರ್ಪಳ್ಳಿ ಅವರ ಕೃತಿ ಬಿಡುಗಡೆ
Update: 2022-02-20 15:56 GMT
ಉಡುಪಿ, ಫೆ.20: ಹಿರಿಯ ಸಾಹಿತಿ ಗುರುರಾಜ ಮಾರ್ಪಳ್ಳಿ ಅವರ 'ಕೊಳಲಿನ ಸ್ವರಗಳು' ಅನುಭವ ಕಥನ ಪುಸ್ತಕವನ್ನ ಇತ್ತೀಚಿಗೆ ಹಿರಿಯ ಸಾಹಿತಿ ವೈದೇಹಿ ಅವರು ಮಣಿಪಾಲದ ತಮ್ಮ ಸ್ವಗೃಹ 'ಇರುವಂತಿಗೆ'ಯಲ್ಲಿ ಬಿಡುಗಡೆಗೊಳಿಸಿದರು.
ಕಲಾ ಪ್ರಪಂಚದ ಉನ್ನತ ಸಾಧಕರ ಅನುಭವಗಳ ದಾಖಲೆಗಳು ವರ್ತಮಾನ ಜಗತ್ತಿಗೆ ಅಗತ್ಯವಾಗಿದ್ದು, ಅವುಗಳಿಂದ ಹೊಸ ಜನಾಂಗ ಪ್ರೇರಣೆ ಪಡೆಯಲು ಸಾಧ್ಯವಿದೆ ಎಂದು ಕೃತಿ ಬಿಡುಗಡೆಗೊಳಿಸಿ ವೈದೇಹಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೃತಿಕಾರ ಗುರುರಾಜ ಮಾರ್ಪಳ್ಳಿ ಮಾತನಾಡಿ, ತಾನು ಬರೆಯಲು ವೈದೇಹಿ ಅವರ ಪ್ರೇರಣೆಯೇ ಕಾರಣವಾಗಿತ್ತು ಎಂದರಲ್ಲದೇ, ಕಲಾ ಪ್ರಪಂಚದಲ್ಲಿ ಕೆಲಸ ಮಾಡಿದ ಉದ್ದಾಮ ವ್ಯಕ್ತಿತ್ವದ ಕಾರಂತ, ಬಿ.ವಿ.ಕಾರಂತ, ಕೆ.ವಿ.ಸುಬ್ಬಣ್ಣ, ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ ಮುಂತಾದವರ ಜೊತೆಗೆ ಪಡೆದ ನೆನಪುಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.