×
Ad

ರಶ್ಯ-ಉಕ್ರೇನ್ ಯುದ್ಧದ ಪರಿಣಾಮಗಳನ್ನು ಎದುರಿಸಲು ಭಾರತ ಸಿದ್ಧವಾಗಿದೆಯೇ?

Update: 2022-02-28 00:10 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಉಕ್ರೇನ್‌ನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಿದ ವಿದ್ಯಾರ್ಥಿಗಳನ್ನು ರಕ್ಷಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ‘‘ನೀವೇಕೆ ವಿದ್ಯಾಭ್ಯಾಸಕ್ಕಾಗಿ ಸಣ್ಣ ದೇಶಗಳಿಗೆ ಹೋಗುತ್ತೀರಿ? ಭಾರತದಲ್ಲೇ ವಿದ್ಯಾಭ್ಯಾಸ ಮಾಡಬಾರದೆ?’’ ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳ ಮುಂದಿಟ್ಟಿದ್ದಾರೆ. ಒಬ್ಬ ಪ್ರಧಾನಿ ಇಂತಹ ಪ್ರಶ್ನೆಯನ್ನು ತನಗೆ ತಾನೇ ಕೇಳಬೇಕಾಗಿದೆ. ‘‘ಭಾರತದಂತಹ ದೊಡ್ಡ ದೇಶದಲ್ಲಿ ಸಾಕಷ್ಟು ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳಿದ್ದೂ ಯಾಕೆ ವಿದ್ಯಾರ್ಥಿಗಳು ಉಕ್ರೇನ್‌ನಂತಹ ಸಣ್ಣ ದೇಶಗಳಿಗೆ ಹೋಗಿ ವಿದ್ಯೆ ಕಲಿಯಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ?’’. ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಶಿಕ್ಷಣ ಅದೆಷ್ಟು ದುಬಾರಿಯಾಗಿದೆ ಎನ್ನುವ ಅಂಶ ಆಗ ಅವರಿಗೆ ಮನವರಿಕೆಯಾಗಬಹುದು ಮತ್ತು ಇದಕ್ಕೆ ಸರಕಾರ ಎಷ್ಟರಮಟ್ಟಿಗೆ ಹೊಣೆಗಾರ ಎನ್ನುವುದನ್ನೂ ಅವರು ವಿಮರ್ಶೆಗೆ ಒಡ್ಡಬೇಕು. ಯುದ್ಧ ಕಾಲದಲ್ಲಿ ಉಪದೇಶಗಳು ಯಾವ ಪರಿಣಾಮವನ್ನೂ ಬೀರುವುದಿಲ್ಲ. ಉಕ್ರೇನ್‌ನಲ್ಲಿ ಆತಂಕದಲ್ಲಿರುವ ವಿದ್ಯಾರ್ಥಿಗಳ ಬಳಿ ‘ನೀವು ಅಲ್ಲಿಗೆ ಹೋಗಿದ್ದೇಕೆ?’ ಎಂದು ಪ್ರಶ್ನಿಸಿ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಪ್ರಯತ್ನವಷ್ಟೇ ಇದು. ಇದೇ ಸಂದರ್ಭದಲ್ಲಿ ಯುದ್ಧದ ಪರಿಣಾಮವನ್ನು ಎದುರಿಸುವವರು ರಶ್ಯ ಮತ್ತು ಉಕ್ರೇನ್ ಮಾತ್ರವಲ್ಲ. ಜಗತ್ತಿನ ಮೇಲೇ ಬೇರೆ ಬೇರೆ ರೀತಿಯಲ್ಲಿ ಅದು ದುಷ್ಪರಿಣಾಮ ಬೀರುತ್ತದೆ. ಭಾರತದ ಮೇಲೆ ಯುದ್ಧ ಬೀರುವ ದುಷ್ಪರಿಣಾಮಗಳೇನು? ಅದರಿಂದ ಭಾರತವನ್ನು ಹೇಗೆ ರಕ್ಷಿಸಬೇಕು ಎನ್ನುವುದರ ಬಗ್ಗೆ ಪ್ರಧಾನಿ ತಲೆಕೆಡಿಸಿಕೊಳ್ಳಬೇಕಾಗಿದೆ. ತನ್ನ ಅಗತ್ಯಗಳಿಗಾಗಿ 85 ಶೇಕಡದಷ್ಟು ತೈಲವನ್ನು ಆಮದು ಮಾಡಿಕೊಳ್ಳುವ ದೇಶವೊಂದಕ್ಕೆ ಹೆಚ್ಚುತ್ತಿರುವ ತೈಲ ಬೆಲೆ ಖಂಡಿತಾ ಒಳ್ಳೆಯ ಸುದ್ದಿಯಲ್ಲ. ಏಳು ವರ್ಷಗಳಿಗೂ ಅಧಿಕ ಅವಧಿಯ ಬಳಿಕ, ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 100 ಡಾಲರ್ ದಾಟಿದೆ. ಹಾಗಾಗಿ, ತೈಲಾಘಾತ ಖಂಡಿತವಾಗಿಯೂ ಸನ್ನಿಹಿತವಾಗಿದೆ. ತೈಲಾಘಾತದ ಜೊತೆಗೆ ಅನಿಲಾಘಾತದ ಅಪಾಯವೂ ಭಾರತದ ಮುಂದಿದೆ. ಯಾಕೆಂದರೆ, ದೇಶದಲ್ಲಿ ಬಳಸಲಾಗುತ್ತಿರುವ ನೈಸರ್ಗಿಕ ಅನಿಲದ ಸುಮಾರು ಅರ್ಧದಷ್ಟನ್ನು ಆಮದು ಮಾಡಲಾಗುತ್ತಿದೆ. ಈ ಪಟ್ಟಿಯಲ್ಲಿ ಕಲ್ಲಿದ್ದಲು ಕೂಡ ಇದೆ. ಭಾರತವು ಕಲ್ಲಿದ್ದಲಿನ ಮೂರನೇ ಅತಿ ದೊಡ್ಡ ಆಮದು ದೇಶವಾಗಿದೆ.

ಕಳೆದೆರಡು ತಿಂಗಳ ಅವಧಿಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ 25 ಶೇಕಡದಷ್ಟು ಹೆಚ್ಚಳವಾಗಿದ್ದರೂ ಕಳೆದ ನವೆಂಬರ್ ಬಳಿಕ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿಲ್ಲ. ಕಾರಣ ಚುನಾವಣೆ. ಈಗ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಗಿದ ಬಳಿಕ ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ನಿರೀಕ್ಷಿಸಬಹುದಾಗಿದೆ. ಇದೇ ಸಂದರ್ಭದಲ್ಲಿ ಅಡುಗೆ ಅನಿಲದ ಬೆಲೆಯೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.
 ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾದಂತೆಲ್ಲ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಲಾಗಿತ್ತು. ಆದರೆ ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆಯ ಪ್ರಯೋಜನವನ್ನು ಜನಸಾಮಾನ್ಯರಿಗೆ ನೀಡಿಲ್ಲ ಎನ್ನುವ ದೊಡ್ಡ ಆರೋಪವೊಂದು ಸರಕಾರದ ಮೇಲಿದೆ. ಮುಂದಿನ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾದಾಗ ಸುಂಕವನ್ನು ಇಳಿಸಿ, ಅಗ್ಗದಲ್ಲಿ ಪೆಟ್ರೋಲ್‌ನ್ನು ಒದಗಿಸಿಕೊಡುವುದು ಸರಕಾರದ ಕರ್ತವ್ಯ. ಚೆನ್ನಾಗಿರುವ ಕಾಲದಲ್ಲಿ ಕೂಡಿಟ್ಟು, ಕಷ್ಟದ ಸಮಯದಲ್ಲಿ ಅದರ ಫಲವನ್ನು ಉಣ್ಣುವುದು ಉತ್ತಮ ವಿಧಾನವಾಗಿದೆ.

ತೈಲ ಬೆಲೆ ಏರಿಕೆಯ ಫರಿಣಾಮವು ಭೀಕರವಾಗಿರುತ್ತದೆ. ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾ ವಸ್ತುಗಳ ವೆಚ್ಚ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತದೆ ಹಾಗೂ ವಿದ್ಯುತ್ ಉತ್ಪಾದಕ ಕಂಪೆನಿಗಳ ಇಂಧನ ವೆಚ್ಚ ಏರುತ್ತದೆ. ಕೈಗಾರಿಕೆಗಳಿಗೆ ಹೆಚ್ಚುವರಿ ವೆಚ್ಚವನ್ನು ಎಷ್ಟು ಪ್ರಮಾಣದಲ್ಲಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದನ್ನು ಮಾರುಕಟ್ಟೆಯ ಲೆಕ್ಕಾಚಾರಗಳು ನಿರ್ಧರಿಸುತ್ತವೆ. ಅದೇ ವೇಳೆ, ವಿದ್ಯುತ್ ವಿತರಣಾ ಕಂಪೆನಿಗಳು (ಹೆಚ್ಚಿನವು ರಾಜ್ಯ ಸರಕಾರಗಳ ಅಧೀನಕ್ಕೆ ಒಳಪಟ್ಟಿವೆ) ಸಾಂಪ್ರದಾಯಿಕವಾಗಿ ಸಬ್ಸಿಡಿ ಹಾದಿಯನ್ನು ಹಿಡಿದಿವೆ. ಹಾಲಿ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಉಚಿತ ವಿದ್ಯುತ್ ಘೋಷಣೆಗಳು ಸದ್ದು ಮಾಡುತ್ತಿರುವುದನ್ನು ಇಲ್ಲಿ ಗಮನಿಸಬೇಕು. ಈವರೆಗೆ, ಹಣದುಬ್ಬರವು ಶೀಘ್ರದಲ್ಲೇ ಕೊನೆಗೊಳ್ಳುವುದು ಎಂಬ ನಿರೀಕ್ಷೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸುಲಭ ಬಡ್ಡಿ ದರವನ್ನು ಕಾಯ್ದುಕೊಂಡು ಬಂದಿತ್ತು. ಆದರೆ, ಈಗ ಅದು ತನ್ನ ನಿಲುವನ್ನು ಬದಲಿಸಬೇಕಾಗಿ ಬರಬಹುದು. ಬಡ್ಡಿ ದರದಲ್ಲಾಗುವ ಕೊಂಚ ಹೆಚ್ಚಳವು ಭವಿಷ್ಯದಲ್ಲಿ ದೊಡ್ಡ ಪರಿಣಾಮವನ್ನೇನೂ ಬೀರದು. ಆದರೆ, ಸರಕಾರ ಸಹಿತ ಸಾಲ ಪಡೆಯುವವರು ಮತ್ತು ಸಾಲ ನೀಡುವವರು ತಮ್ಮ ಲೆಕ್ಕಾಚಾರಗಳನ್ನು ಹೊಸದಾಗಿ ಮಾಡಿಕೊಳ್ಳಬೇಕಾಗುತ್ತದೆ. ಇವುಗಳೆಲ್ಲದರ ಪರಿಣಾಮವಾಗಿ ಒಂದು ತಿಂಗಳ ಹಿಂದೆ ಬಜೆಟ್ ಮಂಡಿಸಿದಾಗ ಇದ್ದ ಪರಿಸ್ಥಿತಿಗಿಂತ ಹಾಲಿ ಪರಿಸ್ಥಿತಿ ಹದಗೆಟ್ಟಿದೆ. ಇದರ ಪರಿಣಾಮವೇನೆಂದರೆ, ಬಳಕೆದಾರರು ಚೇತರಿಸಿಕೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಾರೆ; ಅಭಿವೃದ್ಧಿ ಕುಂಠಿತವಾಗುತ್ತದೆ ಹಾಗೂ ಸಾಂಕ್ರಾಮಿಕದ ಪರಿಣಾಮಗಳಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಅವಧಿ ಇನ್ನಷ್ಟು ವಿಸ್ತರಿಸುತ್ತದೆ. ಈಗಿರುವ ಪ್ರಶ್ನೆಯೆಂದರೆ, ಭವಿಷ್ಯದಲ್ಲಿ ತೈಲ ಬೆಲೆ ಏರಿಕೆ ಎಷ್ಟು ಸಮಯ ಇರುತ್ತದೆ ಎನ್ನುವುದು. ಅಮೆರಿಕ ಅಧ್ಯಕ್ಷ ಜೋ ಬೈಡನ್ ರಶ್ಯಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ ಹಾಗೂ ಪಾಶ್ಚಿಮಾತ್ಯ ದೇಶಗಳು ರಶ್ಯದ ಮೇಲೆ ಸರಣಿ ದಿಗ್ಬಂಧನಗಳನ್ನು ವಿಧಿಸಿವೆ. ಆದರೆ, ಅವುಗಳು ದಿಗ್ಬಂಧನಗಳ ವ್ಯಾಪ್ತಿಯಿಂದ ಇಂಧನ ಕ್ಷೇತ್ರವನ್ನು ಹೊರಗಿಟ್ಟಿವೆ. ಯುರೋಪ್ ಬಳಸುವ ತೈಲದ ಕಾಲು ಭಾಗ ಮತ್ತು ಅದು ಬಳಸುವ ಅನಿಲದ ಮೂರನೇ ಒಂದು ಭಾಗ ರಶ್ಯದಿಂದ ಬರುತ್ತದೆ. ಅಟ್ಲಾಂಟಿಕ್ ಸಾಗರದ ಉಭಯ ಬದಿಗಳಲ್ಲಿರುವ ದೇಶಗಳು ತಮ್ಮ ದಿಗ್ಬಂಧನಗಳ ಕಾರಣದಿಂದ ಇಂಧನ ಕೊರತೆಯ ಹೊಡೆತವನ್ನು ಅನುಭವಿಸಲು ಬಯಸುವುದಿಲ್ಲ. ಇದು ರಶ್ಯಕ್ಕೆ ಪೂರಕ ಪರಿಸ್ಥಿತಿಯನ್ನು ನಿರ್ಮಿಸಿದೆ. ಅದು ಹೆಚ್ಚಿನ ದರದಲ್ಲಿ ಪೆಟ್ರೋಲಿಯಮ್ ಉತ್ಪನ್ನಗಳನ್ನು ನಿರಂತರವಾಗಿ ರಫ್ತು ಮಾಡಬಹುದಾಗಿದೆ. ಭಾರತದಂತಹ ಪೆಟ್ರೋಲಿಯಮ್ ಆಮದು ಮಾಡುವ ದೇಶಗಳು ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಪ್ರಧಾನಿ ಮೋದಿ, ತಮ್ಮ ಎಂದಿನ ‘ಮನ್ ಕಿ ಬಾತ್’ ಉಪನ್ಯಾಸಗಳನ್ನು ನಿಲ್ಲಿಸಿ, ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News