×
Ad

ಉಡುಪಿ: ಸಾಮಾಜಿಕ, ಧಾರ್ಮಿಕ ಮುಂದಾಳು ಶೇಖ್ ಶರ್ಫುದ್ದೀನ್ ದಾವೂದ್ ನಿಧನ

Update: 2022-03-23 13:27 IST

ಉಡುಪಿ, ಮಾ.23: ಉಡುಪಿಯ ಹಿರಿಯ ಸಾಮಾಜಿಕ, ಧಾರ್ಮಿಕ ಮುಖಂಡ, ಶೇಖ್ ಶರ್ಫುದ್ದೀನ್ ದಾವೂದ್(75) ಇಂದು ಬೆಳಗ್ಗೆ ಬೆಂಗಳೂರಿನ ತನ್ನ ಪುತ್ರನ ಮನೆಯಲ್ಲಿ ನಿಧನರಾದರು. 

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಉಡುಪಿಯ ವಿವಿಧ ಸಾಮಾಜಿಕ, ಸಾಮುದಾಯಿಕ ಸಂಘ ಸಂಸ್ಥೆಗಳ ಜೊತೆಗೂಡಿ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಶೇಖ್ ಶರ್ಫುದ್ದೀನ್ ದಾವೂದ್ ಅವರು ಎಂಭತ್ತರ ದಶಕದ ಆರಂಭದಲ್ಲಿ ಉಡುಪಿಯಲ್ಲಿ ಅಸ್ತಿತ್ವಕ್ಕೆ ಬಂದ ಬಡ್ಡಿರಹಿತ ಹಣಕಾಸು ವ್ಯವಹಾರ ಸಂಸ್ಥೆ ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸುಮಾರು 25 ವರ್ಷಗಳ ಕಾಲ ಈ ಸಂಸ್ಥೆಯ ಕೋಶಾಧಿಕಾರಿಯಾಗಿದ್ದ ಅವರು ಯಾವುದೇ ಸಂಬಳ ಪಡೆಯದೆ ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿದಿದ್ದರು. ಮುಂದೆ ಈ ಸಂಸ್ಥೆ ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೊಪರೇಟಿವ್ ಸೊಸೈಟಿ(ರಿ) ಎಂದು ಪರಿವರ್ತನೆಗೊಂಡಾಗಲು ಅದರೊಂದಿಗೆ ಅವರು ತನ್ನ ಕೊನೆಯ ದಿನಗಳ ತನಕ ಕಾರ್ಯಪ್ರವೃತ್ತರಾಗಿದ್ದರು.

ಉಡುಪಿ ಜಾಮಿಯ ಮಸೀದಿಯ  ಕೋಶಾಧಿಕಾರಿಯಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ ಸುಮಾರು ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಜಮಾಅತೆ ಇಸ್ಲಾಮಿ ಹಿಂದ್ ಇದರ ಉಡುಪಿ ನಗರ ವರ್ತುಲ, ಮಾನವೀಯ ಸೇವೆ ಮತ್ತು ಪರಿಹಾರ ಸಂಸ್ಥೆ ಎಚ್.ಆರ್.ಎಸ್'ನ ಆರಂಭಿಕ ಸಮಯದಲ್ಲಿ ರಾಜ್ಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಎಂಭತ್ತರ ದಶಕದಲ್ಲಿ ಉಡುಪಿಯ ಮುಸ್ಲಿಮರ ಪ್ರತಿಷ್ಠಿತ ಸಮಾಜ ಸೇವೆ ಸಂಸ್ಥೆ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್(ರಿ) ನ ಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News