ಹಿರಿಯ ಅರ್ಥಧಾರಿ ಎಸ್.ಎಂ.ಹೆಗಡೆ ನಿಧನ
ಉಡುಪಿ : ಯಕ್ಷಗಾನ ತಾಳಮದ್ದಲೆಯಲ್ಲಿ ತಮ್ಮ ಭಾವಪೂರ್ಣ ಅರ್ಥಗಾರಿಕೆಯಿಂದ ಕಲಾರಸಿಕರ ಮನಸೂರೆ ಗೊಳ್ಳುತಿದ್ದ ಹೊನ್ನಾವರದ ಎಸ್. ಎಂ.ಹೆಗಡೆ ಮುಡಾರೆ (74) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನ ಹೊಂದಿದರು. ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಹವ್ಯಾಸಿ ವೇಷಧಾರಿ ಮತ್ತು ನಾಟಕದ ಕಲಾವಿದರಾಗಿ ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಎಸ್.ಎಂ.ಹೆಗಡೆ, ಸಂಪ್ರದಾಯಬದ್ಧ ಭಜನೆ ಹಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ಹೊಸಾಕುಳಿಯ ಉಮಾಮಹೇಶ್ವರ ಕಲಾವರ್ಧಕ ಸಂಘದ ಕಾರ್ಯದರ್ಶಿಯಾಗಿ ೪೨ ವರ್ಷಗಳಿಂದ ಅದನ್ನು ಮುನ್ನಡೆಸಿಕೊಂಡು ಬಂದಿದ್ದರು.
ತಾಳಮದ್ದಲೆಯನ್ನು ಉಳಿಸಿ ಬೆಳೆಸುವಲ್ಲಿ ವಿಶಿಷ್ಟ ಕೊಡುಗೆ ನೀಡಿದ್ದ ಹೆಗಡೆ, ತಾಳಮದ್ದಲೆ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಈ ಬಾರಿಯ ಮಟ್ಟಿ ಮುರಲಿಧರ ರಾವ್ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಇವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.