ಗರಿಗೆದರಿದ ಕಲಾರಂಗ- ಕಣ್ಮನ ಸೆಳೆದ ಗಾಯನಶೆಟ್ಟಿಯ ನರ್ತನ
ಕೊರೋನದ ಸಂಕೀರ್ಣ ದಿನಗಳ ಆತಂಕವನ್ನು ಕೊಂಚಮಟ್ಟಿಗೆ ದಾಟಿರುವ ಕಲಾರಂಗ ನಿಧಾನವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಂದ ಗರಿಗೆದರುತ್ತಿದೆ. ರಂಗಮಂದಿರಗಳಲ್ಲಿ ಗಲ್ ಗಲ್ ಗೆಜ್ಜೆ ಅನುರಣಿಸುತ್ತಿದೆ. ಕಳೆದೆರಡು ವರ್ಷಗಳಿಂದ ವೇದಿಕೆಯೇರಲು ಸಿದ್ಧವಾಗಿದ್ದು, ಸ್ಥಗಿತಗೊಂಡಿದ್ದ ಹಾಗೂ ರದ್ದಾಗಿದ್ದ ಅನೇಕ ಕಾರ್ಯಕ್ರಮಗಳು ಈಗ ಆಶಾಕಿರಣದೊಂದಿಗೆ ಮತ್ತೆ ಪುನರಾರಂಭಗೊಂಡಿವೆ. ಕಲಾರಸಿಕರು ಮೊದಲಿನಷ್ಟು ಸಂಖ್ಯೆಯಲ್ಲಿ ಅಲ್ಲದಿದ್ದರೂ ನಿಧಾನವಾಗಿ ರಂಗಮಂದಿರದತ್ತ ಬರುತ್ತಿದ್ದು, ಆಶಾದಾಯಕ ವಾತಾವರಣ ನಿರ್ಮಾಣವಾಗುತ್ತಿದೆ.
ಇತ್ತೀಚೆಗೆ ಎ.ಡಿ.ಎ. ರಂಗಮಂದಿರದಲ್ಲಿ ನಂದಿ ಭರತನಾಟ್ಯ ಕಲಾಶಾಲೆಯು ಆಯೋಜಿಸಿದ್ದ ಗುರು ಗೀತಾಲಕ್ಷ್ಮಿ ಅವರ ಶಿಷ್ಯೆ ಗಾಯನಾ ಪಿ. ಶೆಟ್ಟಿ ಅವರ ರಂಗಪ್ರವೇಶ ಕಾರ್ಯಕ್ರಮ ತುಂಬಿದ ಸಭಾಗೃಹದ ವೀಕ್ಷಣೆಯಿಂದ ಯಶಸ್ವಿಯಾಯಿತು. ಎರಡೂವರೆಗಂಟೆಗಳ ಕಾಲ ಅತ್ಯಂತ ಲವಲವಿಕೆ ಯಿಂದ ನರ್ತಿಸಿದ ಗಾಯನ ತನ್ನ ಅಪೂರ್ವ ಯೋಗದ ಭಂಗಿಗಳಿಂದ ಕಣ್ಮನ ಸೆಳೆದಳು. ಮೊದಲಿಗೆ ಸಾಂಪ್ರದಾಯಕ ‘ಪುಷ್ಪಾಂಜಲಿ’ -ವಿವಿಧ ನವನವೀನ ನೃತ್ಯವಿನ್ಯಾಸಗಳ ಅರ್ಚನೆಯಿಂದ ಕಲಾವಿದೆ ಸಭೆಗೆ ನಮನ ಸಲ್ಲಿಸಿ, ಪ್ರಥಮವಂದಿತ ಗಣಪತಿಯ ಸುಂದರ ಕೃತಿಯನ್ನು ಅರ್ಪಿಸಿದಳು. ನಗುಮೊಗದ, ಪಾದರಸದ ಹೆಜ್ಜೆಗಳು ಗಾಯನಳ ವೈಶಿಷ್ಟ್ಯವಾಗಿತ್ತು. ಹೆತ್ತ ತಾಯಿ-ತಂದೆಗಳೇ ನಿಜವಾದ ದೇವರು ಎಂಬುದನ್ನು ಸಂಚಾರಿ ಘಟನೆಯಲ್ಲಿ ಸಾಕ್ಷೀಕರಿಸಿದ ಗಣೇಶ- ಷಣ್ಮುಖರ ನಡುವೆ ಜ್ಞಾನಫಲಕ್ಕಾಗಿ ನಡೆದ ಸ್ಪರ್ಧೆಯ ಸನ್ನಿವೇಶವನ್ನು ಕಲಾವಿದೆ ಬಹು ಸ್ಫುಟವಾಗಿ ತನ್ನ ಭಾವಪೂರಿತ ಮುಖಭಾವ, ಆಂಗಿಕ ಚಲನೆಗಳಿಂದ ಕಟ್ಟಿಕೊಟ್ಟಳು. ಆಕೆಯ ನಾಟ್ಯದ ಸೊಗಡು ಪ್ರಥಮ ಕೃತಿಯಲ್ಲೇ ಪರಿಚಯವಾಯಿತು. ನಂತರದ ‘ಶಿವಕೀರ್ತನೆ’- ಚಿದಂಬರದಲ್ಲಿ ಶಿವನಾಡಿದ ಆನಂದ ತಾಂಡವ ನೃತ್ಯ ಆಕರ್ಷಕವಾಗಿತ್ತು.ಆದ್ಯಂತರಹಿತ ನಟರಾಜನ ಮಹಿಮೆಯನ್ನು ಸಾರುವ ಬ್ರಹ್ಮ ಹಾಗೂ ವಿಷ್ಣುವಿನ ಮಧ್ಯೆ ನಡೆಯುವ ಸ್ಪರ್ಧೆಯ ಘಟನೆಯಿಂದ ಶಿವನ ಬ್ರಹ್ಮಾಂಡ ಸ್ವರೂಪದ ಅಗಾಧತೆಯನ್ನು ಕಲಾವಿದೆ ತನ್ನ ಸೊಗಸಾದ ಆಂಗಿಕಾಭಿನಯದಿಂದ ಮನಗಾಣಿಸಿದಳು. ಶಿವನ ನಾಟ್ಯವೈವಿಧ್ಯವನ್ನು ಗಾಯನ ತನ್ನ ಮನಮೋಹಕ ಆಕಾಶಚಾರಿ, ಮಂಡಿ ಅಡವು, ಸುಂದರ ಹಸ್ತವಿನಿಯೋಗಗಳ ಕಲಾರತಿಯೊಂದಿಗೆ ಅರ್ಪಿಸಿದಳು. ಅಂತ್ಯದ ಅಪೂರ್ವ ಯೋಗದಭಂಗಿಗಳು ಮನೋಜ್ಞವಾಗಿದ್ದವು. ತಿರುಪತಿಯ ಅದಿದೈವ ವೆಂಕಟೇಶ್ವರನ ಹಲವು ಅವತಾರಗಳ ಸೌಂದರ್ಯವನ್ನು ಕಣ್ಮುಂದೆ ಹರಡಿದ ಶ್ರೀ ಪುರಂದರದಾಸರ ದೇವರನಾಮ ‘ವೆಂಕಟಾಚಲ ನಿಲಯಂ ವೈಕುಂಠಪುರವಾಸಂ..’- ಸೊಗಸಾಗಿ ಮೂಡಿಬಂತು. ಕ್ಲಿಷ್ಟದ ಜತಿಗಳನ್ನುಳ್ಳ -ಸಂಕೀರ್ಣ ದೀರ್ಘಬಂಧ, ಭಕ್ತಿರಸಪ್ರಧಾನ ವರ್ಣವನ್ನು ಕಲಾವಿದೆ ಸಮರ್ಥವಾಗಿ ನಿರೂಪಿಸಿದಳು.
ಮುರುಗನ ಜನ್ಮರಹಸ್ಯ ‘ವರ್ಣ’ದ ಕೇಂದ್ರವಸ್ತು. ಒಮ್ಮೆ, ಪಾರ್ವತಿ ಮಗು ಬೇಡಿದಾಗ, ಶಿವನು ತನ್ನ ಮೂರನೆಯಕಣ್ಣನ್ನು ತಾವರೆಯ ಹೂವಿನೊಳಗೆ ನೆಟ್ಟಾಗ, ಆ ತಾವರೆಯ ಆರುದಳದೊಳಗೆ ಆರು ಶಿಶುಗಳು ಜನ್ಮಿಸುತ್ತವಂತೆ. ಕಡೆಗೆ ಅವು ಆರು ಸೇರಿ ಆರುತಲೆಗಳ ಅರ್ಮುಗ- ಷಣ್ಮುಖನಾಗುತ್ತಾನಂತೆ. ಮುಂದೆ ಅವನು ತಂದೆ ಶಿವನಿಗೆ ಓಂಕಾರ ಪ್ರಣವ ಮಂತ್ರ ಬೋಧಿಸುತ್ತಾನೆ.ಸೂರ್ಯಪದ್ಮ ವೃಕ್ಷ ಎರಡಾಗಿ ಸೀಳಿದಾಗ, ಅದರಿಂದ ಕೋಳಿ ಮತ್ತು ನವಿಲು ಹೊರಬರುತ್ತವಂತೆ, ಷಣ್ಮುಗ ಕೋಳಿಯನ್ನು ತನ್ನ ಲಾಂಛನದಲ್ಲಿ ಸೇರಿಸಿಕೊಂಡು, ಮಯೂರವನ್ನು ವಾಹನವನ್ನಾಗಿ ಮಾಡಿಕೊಳ್ಳುವ ಇವೇ ಮುಂತಾದ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸುವ ಸಂಚಾರಿಗಳನ್ನು ಗಾಯನ ತನ್ನ ಪರಿಣತ ಅಭಿನಯದಿಂದ ಸಾಕ್ಷಾತ್ಕರಿಸಿದಳು. ಕಥಾನಿರೂಪಣೆಯ ನಡುನಡುವೆ ಮೂಡಿಬಂದ ನೃತ್ತಾವಳಿಗಳ ವಿನ್ಯಾಸ, ನೃತ್ಯಸಂಯೋಜನೆಯಲ್ಲಿ ಗೀತಾಲಕ್ಷ್ಮೀ ಕಲ್ಪನಾ ಶಕ್ತಿ ಸುವ್ಯಕ್ತವಾಗಿತ್ತು. ಮುಂದೆ ಮೂಡಿಬಂದ ‘ಶಿವನ್ ಚಿಂದು’-ವಿಶಿಷ್ಟ ಅಪರೂಪದ ಕೃತಿ, ಪಾರಂಪರಿಕ ಜಾನಪದ ಶೈಲಿಯನ್ನೊಳಗೊಂಡ ಸಾಮಾಜಿಕ ಆಯಾಮದ ಕಥೆ. ಪಾಂಡ್ಯರಾಜ್ಯದ ಒಂದೆಡೆ ರಸ್ತೆ ಕಾಮಗಾರಿ ನಡೆದಿದೆ. ಮುದುಕಿಯೊಬ್ಬಳು ಕೈಲಾಗದೆ ಸುಸ್ತಾಗಿ ಕುಳಿತಿದ್ದ ಸನ್ನಿವೇಶದಲ್ಲಿ, ಶಿವನು ಕಟ್ಟಿಗೆ ಮಾರುವವನ ವೇಷದಲ್ಲಿ ಬಂದು, ಅವಳಿತ್ತ ತಿನಿಸನ್ನು ತಿಂದು ಅವಳಿಗೆ ಸಹಾಯ ಮಾಡುತ್ತಾನೆ. ಅಷ್ಟುಹೊತ್ತಿಗೆ ಅಲ್ಲಿಗೆ ಬಂದ ಮೇಸ್ತ್ರೀ, ಅಪರಿಚಿತ ಕೆಲಸಗಾರ ಶಿವನನ್ನು ಹೊಡೆಯಲಾರಂಭಿಸಿದಾಗ, ಆ ಹೊಡೆತ ಅಲ್ಲಿದ್ದ ಎಲ್ಲರ ಬೆನ್ನಿನ ಮೇಲೂ ಬಿದ್ದಾಗ ಅವನು ಶಿವನೆಂದು ಎಲ್ಲರಿಗೂ ಅರಿವಾಗುತ್ತದೆ. ಜಾನಪದ ಲಹರಿಯ ಈ ಕಥಾರೂಪದ ಸನ್ನಿವೇಶವನ್ನು ಗಾಯನ, ತನ್ನ ಲೀಲಾಜಾಲ ಚಲನೆಯಲ್ಲಿ ನಿರೂಪಿಸಿದಳು. ಅಂತ್ಯದಲ್ಲಿ ಸಂಭ್ರಮದ ತಿಲ್ಲಾನದೊಂದಿಗೆ ಪ್ರಸ್ತುತಿ ಸಂಪನ್ನ ಗೊಂಡಿತು. ‘ಕಣ್ಣ ಮಣಿವಣ್ಣ ಕಮಲಕಣ್ಣ’- ಮುರುಗನ ಸ್ತುತಿಯ ಮಂಗಳ, ಕಡೆಯಲ್ಲಿ ಶೋಭಿಸಿತು.