ವಿಕಲಚೇತನರಿಗೆ ವಿಶೇಷ ಗುರುತು ಚೀಟಿ ವಿತರಣೆ
Update: 2022-04-19 19:22 IST
ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯ ವಿಕಲಚೇತನರು ಸರಕಾರಿ ಮತ್ತು ಸರಕಾರೇತರ ಸೌಲಭ್ಯ ಪಡೆಯಲು, ವಿಶೇಷ ಗುರುತು ಚೀಟಿ ವಿತರಿಸುವ ಕಾರ್ಯಕ್ರಮವನ್ನು ಸೋಮವಾರ ನಗರದ ನಗರಸಭಾ ಕಚೇರಿಯಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಉದ್ಘಾಟಿಸಿದರು.
ಎ.೨೦ ಮತ್ತು ೨೧ರಂದು ಬಡಗುಬೆಟ್ಟು ಉಪಕಚೇರಿ, ಎ.೨೨ ಮತ್ತು ೨೫ ರಂದು ಮಣಿಪಾಲ ಉಪಕಚೇರಿ, ಎ.೨೬ ಮತ್ತು ೨೭ರಂದು ಹೆರ್ಗಾ ಉಪ ಕಚೇರಿ, ಎ.೨೮ ಮತ್ತು ೨೯ರಂದು ಮಲ್ಪೆ ಉಪಕಚೇರಿ ಹಾಗೂ ಎ.೩೦ ಮತ್ತು ಮೇ ೨ರಂದು ಪುತ್ತೂರು ಉಪಕಚೇರಿಯಲ್ಲಿ ವಿಶೇಷ ಗುರುತು ಚೀಟಿ ನೋಂದಾವಣಾ ಶಿಬಿರ ನಡೆಯಲಿದ್ದು, ವಿಕಲಚೇತನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಸಾಲ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಬಾಲಕೃಷ್ಣ ಶೆಟ್ಟಿ, ವಿಕಲಚೇತನರ ಸಬಲೀಕರಣ ಇಲಾಖೆಯ ತಾಲೂಕು ಸಂಯೋಜನಾಧಿಕಾರಿ ಮಧುಸೂದನ ಹಾಗೂ ನಗರಸಭೆಯ ಸದಸ್ಯರು ಉಪಸ್ಥಿತರಿದ್ದರು.