​ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ವಿತರಣೆ: ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Update: 2022-04-25 15:34 GMT
ಕೂರ್ಮಾರಾವ್ ಎಂ.

ಉಡುಪಿ: ಕೇಂದ್ರ ಸರಕಾರ ಆಝಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಆಚರಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯ ಜೊತೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಸಾರ್ವಜನಿಕರಿಗೆ ಉಚಿತ ಪಡಿತರ ವಿತರಿಸುವ ಯೋಜನೆ ಜಾರಿಗೊಳಿಸಿದೆ.

ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಎನ್.ಎಫ್.ಎಸ್.ಎ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಬಿಡುಗಡೆಯಾದ ಆಹಾರ ಧಾನ್ಯವನ್ನು ಎಪ್ರಿಲ್‌ನಿಂದ ಅಂತ್ಯೋದಯ (ಎಎವೈ) ಚೀಟಿದಾರರಿಗೆ ಎನ್.ಎಫ್.ಎಸ್.ಎ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಹಾಗೂ ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆಜಿ. ಅಕ್ಕಿ, ಆದ್ಯತಾ ಪಡಿತರ ಚೀಟಿದಾರರಿಗೆ ಎನ್.ಎಫ್.ಎಸ್.ಎ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ, ಒ.ಎಮ್.ಎಸ್.ಎಸ್ ಯೋಜನೆಯಡಿ ಪ್ರತಿ ಸದಸ್ಯರಿಗೆ ಹೆಚ್ಚುವರಿ 1 ಕೆ.ಜಿ ಅಕ್ಕಿ ಹಾಗೂ ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ವಿತರಿಸಲಾಗುವುದು.

ಆದ್ಯತೇತರ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಪ್ರತಿ ಕೆ.ಜಿ ಗೆ 15 ರೂ.ನಂತೆ ಏಕ ಸದಸ್ಯ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ ಹಾಗೂ ಒಂದಕ್ಕಿಂತ ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿ ವಿತರಿಸಲಾಗುವುದು.

ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಪೋರ್ಟಬಿಲಿಟಿ ಜಾರಿಯಲ್ಲಿರು ವುದರಿಂದ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಬಹುದಾಗಿದೆ. ಬೇರೆ ರಾಜ್ಯದ ಪಡಿತರ ಚೀಟಿದಾರರು ಎನ್.ಎಫ್.ಎಸ್.ಎ ಯೋಜನೆಯಡಿ ಪ್ರತಿ ಕೆ.ಜಿಗೆ 3ರೂ. ಪಾವತಿಸಿ ಪಡಿತರ ಪಡೆಯಬಹುದಾಗಿದೆ.

ಪಡಿತರ ಚೀಟಿದಾರರು ಹಂಚಿಕೆ ಮಾಡಿದ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದು. ಪಡಿತರ ವಿತರಣೆ ಕುರಿತು ದೂರು ಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ: 1967, ತಹಶೀಲ್ದಾರ್ ಕಚೇರಿ ಅಥವಾ ಉಪ ನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News