ಸ್ಥಳೀಯ ಭಾಷೆಗೆ ‘ನ್ಯಾಯ’ ಸಿಗಲಿ

Update: 2022-05-02 04:57 GMT

ಒಂದೆಡೆ ಹಿಂದಿ ಭಾಷೆಯನ್ನು ದೇಶದ ಇತರ ಪ್ರಾದೇಶಿಕ ಭಾಷೆಗಳ ಮೇಲೆ ಹೇರುವ ಭಾರೀ ಪ್ರಯತ್ನಕ್ಕೆ ಕೇಂದ್ರ ಸರಕಾರ ತೊಡಗಿರುವಾಗಲೇ, ಮಹತ್ವದ ವೇದಿಕೆಯೊಂದರಲ್ಲಿ ಪ್ರಧಾನಿ ಮೋದಿಯವರು ‘ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಯನ್ನು ಬಳಸಬೇಕು’ ಎಂದು ಕರೆ ನೀಡಿದ್ದಾರೆ. ದಿಲ್ಲಿಯ ವಿಜ್ಞಾನ ಭವನದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು ‘ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಮಾನ್ಯ ಪ್ರಜೆಯ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ, ಮುಖ್ಯನ್ಯಾಯ ಮೂರ್ತಿ ರಮಣ ಅವರೂ ಮಾತನಾಡಿ , ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸುವ ಕಾಲ ಬಂದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ‘ಸ್ಥಳೀಯ ಭಾಷೆ’ ಎನ್ನುವುದನ್ನು ಪ್ರಧಾನಿ ಮೋದಿಯವರು ಯಾವ ಅರ್ಥದಲ್ಲಿ ಬಳಸಿದ್ದಾರೆ ಎನ್ನುವುದರ ಆಧಾರದಲ್ಲಿ ಈ ಹೇಳಿಕೆಯನ್ನು ನಾವು ಚರ್ಚೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸದ್ಯಕ್ಕೆ ಬಹುತೇಕ ನ್ಯಾಯಾಲಯಗಳಲ್ಲಿ ವಿಚಾರಣೆಗಳು, ಚರ್ಚೆಗಳು ನಡೆಯುತ್ತಿರುವುದು ಇಂಗ್ಲಿಷ್ ಭಾಷೆಯಲ್ಲಿ. ತೀರ್ಪುಗಳನ್ನು ನೀಡುವುದು ಕೂಡ ಇಂಗ್ಲಿಷ್‌ನಲ್ಲೇ. ಪ್ರಧಾನಿಯವರ ‘ಸ್ಥಳೀಯತೆ’ ಎನ್ನುವುದು ಹಿಂದಿ ಭಾಷೆಗಷ್ಟೇ ಸೀಮಿತವಾದರೆ ಅದರಿಂದ ವಿಶೇಷ ಪ್ರಯೋಜನವೇನೂ ಇಲ್ಲ. ಹಿಂದಿಯೇತರ ರಾಜ್ಯಗಳ ಪಾಲಿಗೆ ಇದು ‘ಬಾಣಲೆಯಿಂದ ಬೆಂಕಿಗೆ’ ಬಿದ್ದಂತೆ. ದಕ್ಷಿಣ ಭಾರತಕ್ಕಂತೂ ಹಿಂದಿ ಭಾಷೆ, ಇಂಗ್ಲಿಷ್‌ನಷ್ಟೂ ಪರಿಚಿತವಲ್ಲ. ಹಿಂದಿ ಹೇರಿಕೆಯನ್ನು ಶತಾಯಗತಾಯ ವಿರೋಧಿಸುತ್ತಿರುವ ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಇಂಗ್ಲಿಷ್ ಬದಲಿಗೆ ಹಿಂದಿಯನ್ನು ಅಳವಡಿಸುವ ಹುನ್ನಾರವಿದೆಯೋ ಎನ್ನುವ ಬಗ್ಗೆಯೂ ನಾವು ಜಾಗರೂಕರಾಗಬೇಕಾಗಿದೆ. ಉಳಿದಂತೆ, ಸ್ಥಳೀಯ ಭಾಷೆ ಎನ್ನುವುದು ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಅನ್ವಯವಾಗುತ್ತದೆ ಎನ್ನುವುದಾದರೆ ಪ್ರಧಾನಿ ಮೋದಿಯವರ ಕರೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಬೇಕಾಗುತ್ತದೆ.

ಇಂದಿಗೂ ಭಾಷೆ ಎನ್ನುವುದು ಕಕ್ಷಿದಾರರು ಮತ್ತು ನ್ಯಾಯಾಧೀಶರ ನಡುವೆ ಅತಿ ದೊಡ್ಡ ಗೋಡೆಯಾಗಿ ಉಳಿದು ಬಿಟ್ಟಿದೆ. ಇದರ ಸಂಪೂರ್ಣ ಲಾಭವನ್ನು ನ್ಯಾಯವಾದಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ನ್ಯಾಯಕ್ಕಾಗಿ ಮೆಟ್ಟಿ ಲು ಹತ್ತಿದವರಿಗೆ, ಭಾಷೆಯ ತೊಡಕಿನಿಂದಾಗಿ ತಮ್ಮ ಪರವಾಗಿ ನಡೆಯುತ್ತಿರುವ ವಾದ ವಿವಾದಗಳು ಯಾವ ರೀತಿಯಲ್ಲಿ ನಡೆಯುತ್ತಿವೆ ಎನ್ನುವುದನ್ನು ಅರ್ಥೈಸುವುದಕ್ಕೂ ಸಾಧ್ಯವಿಲ್ಲ. ನ್ಯಾಯವಾದಿ ಸಂಪೂರ್ಣವಾಗಿ ಕಕ್ಷಿದಾರನನ್ನು ಪ್ರತಿನಿಧಿಸುವುದರಿಂದ, ನ್ಯಾಯಾಧೀಶರು ನ್ಯಾಯವಾದಿಯನ್ನು ದಾಟಿ ಕಕ್ಷಿದಾರನ ಬಳಿ ತಲುಪುವುದಿಲ್ಲ. ತನ್ನ ಪರವಾಗಿ ಅಥವಾ ವಿರುದ್ಧ ವಾಗಿ ಬಿದ್ದ ತೀರ್ಪಿನಲ್ಲಿ ಏನಿದೆ ಎನ್ನುವುದು ಕೂಡ ಆತನಿಗೆ ತಿಳಿದಿರುವುದಿಲ್ಲ. ನ್ಯಾಯವಾದಿ ಏನನ್ನು ವ್ಯಾಖ್ಯಾನಿಸುತ್ತಾನೋ ಅದನ್ನೇ ನಂಬಬೇಕಾದ ಸ್ಥಿತಿ ಕಕ್ಷಿದಾರನದು. ತನಗಾದ ಅನ್ಯಾಯವನ್ನು ತನಗೆ ತಿಳಿದಿರುವ ಭಾಷೆಯಲ್ಲಿ ಹೇಳಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಅಥವಾ ತನ್ನ ಪರವಾಗಿ ಬಂದ ತೀರ್ಪನ್ನು ತನ್ನ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುವ ಅವಕಾಶವೇ ನ್ಯಾಯಾಲಯದಲ್ಲಿ ಇಲ್ಲದೇ ಇದ್ದರೆ ಆತ ಅನಿವಾರ್ಯವಾಗಿ ಮಧ್ಯವರ್ತಿಯನ್ನು ಅವಲಂಬಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಕಕ್ಷಿದಾರನನ್ನು ಶೋಷಣೆಗೀಡು ಮಾಡುವುದು ನ್ಯಾಯವಾದಿಗೆ ಸುಲಭ. ಕಕ್ಷಿದಾರ ಸಂಪೂರ್ಣವಾಗಿ ನ್ಯಾಯವಾದಿಯ ಕೈಗೊಂಬೆಯಾಗುತ್ತಾನೆ. ನ್ಯಾಯವ್ಯವಸ್ಥೆಯನ್ನು ಪಾರದರ್ಶಕಗೊಳಿಸುವಲ್ಲಿ ‘ಸ್ಥಳೀಯ ಭಾಷೆ’ ಅಳವಡಿಕೆ ಮಹತ್ತರ ಪಾತ್ರವನ್ನು ವಹಿಸುತ್ತದೆ.

ಕೆಲವೊಮ್ಮೆ ಅತ್ಯುತ್ತಮ ನ್ಯಾಯವಾದಿಯೂ ಭಾಷೆಯ ತೊಡಕಿನಿಂದಾಗಿ ವೈಫಲ್ಯವನ್ನು ಅನುಭವಿಸಬಹುದು. ಇಂಗ್ಲಿಷ್ ಭಾಷೆಯ ಮೂಲಕವೇ ನ್ಯಾಯಾಧೀಶರ ಮೇಲೆ ತಮ್ಮ ಪ್ರಭಾವವನ್ನು ಬೀರುವ ನ್ಯಾಯವಾದಿಗಳಿದ್ದಾರೆ. ತಾನು ಓದಿದ ಕಾನೂನುಗಳನ್ನು, ಸ್ಥಳೀಯ ಕಕ್ಷಿದಾರ ಸ್ಥಳೀಯ ಸಮಸ್ಯೆಗಳನ್ನು ಪರಭಾಷೆಯಲ್ಲಿ ಮಂಡಿಸುವಾಗ ಎದುರಾಗುವ ಸಮಸ್ಯೆಗಳು ಹಲವು. ಅನೇಕ ಸಂದರ್ಭದಲ್ಲಿ ಸಂತ್ರಸ್ತನಿಗೆ ನ್ಯಾಯಾಧೀಶರ ಜೊತೆಗೆ ನ್ಯಾಯವಾದಿಯ ನೆರವಿಲ್ಲದೆಯೇ ಮಾತನಾಡುವ ಅವಕಾಶಗಳು ದೊರಕುತ್ತವೆ. ಇದರಿಂದಾಗಿ ನ್ಯಾಯವಾದಿಗಳು ಮತ್ತು ಪೊಲೀಸರ ಸಹಭಾಗಿತ್ವದಿಂದ ನಡೆಯುವ ಹಲವು ಅನ್ಯಾಯಗಳು ಬೆಳಕಿಗೆ ಬರಬಹುದು. ಜೊತೆಗೆ ಕಕ್ಷಿದಾರರ ಮೇಲೆ ನಡೆಯುವ ಭಾರೀ ಶೋಷಣೆಗಳಿಗೆ ಕಡಿವಾಣ ಬೀಳಬಹುದು. ಹಾಗೆಯೇ ವಿಳಂಬ ನ್ಯಾಯದಾನಗಳಿಗೂ ಸ್ಥಳೀಯ ಭಾಷೆಯ ವಿಚಾರಣೆ ಪರಿಹಾರವನ್ನು ನೀಡಬಹುದು.

ಕನ್ನಡವೂ ಸೇರಿದಂತೆ ಸ್ಥಳೀಯ ಭಾಷೆಗಳು ಬದಿಗೆ ತಳ್ಳಲ್ಪಡುವುದಕ್ಕೆ ಮುಖ್ಯ ಕಾರಣ, ಸಾರ್ವಜನಿಕ ಕ್ಷೇತ್ರಗಳಲ್ಲಿ ಅದರ ಬಳಕೆಗಳು ಕಡಿಮೆಯಾಗುತ್ತಿರುವುದು ಮತ್ತು ಇಂಗ್ಲಿಷ್ ಭಾಷೆಯಿಲ್ಲದೇ ಇದ್ದರೆ ಸಾರ್ವಜನಿಕ ವ್ಯವಹಾರ ಅಸಾಧ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿರುವುದು. ಹಳ್ಳಿಯ ರೈತನೂ ಇಂದು ತನ್ನ ಮಗನನ್ನು ಇಂಗ್ಲಿಷ್ ಮೀಡಿಯಂಗೆ ಸೇರಿಸಲು ಇಚ್ಛಿಸುತ್ತಾನೆ. ಯಾಕೆಂದರೆ, ಸ್ಥಳೀಯ ಭಾಷೆಯಷ್ಟೇ ಗೊತ್ತಿರುವ ಕಾರಣಕ್ಕೆ ಆತ ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ಅನ್ಯಾಯಕ್ಕೊಳಗಾಗಿದ್ದಾನೆ. ತಾನು ಅನುಭವಿಸಿದ ಕೀಳರಿಮೆ ತನ್ನ ಮಕ್ಕಳು ಅನುಭವಿಸಬಾರದು ಎಂದು ರೈತನೊಬ್ಬ ಭಾವಿಸಿದರೆ ಅದರಲ್ಲಿ ತಪ್ಪೇನಿಲ್ಲ. ಇಂದು ರಾಜ್ಯದಲ್ಲಿ ಕನ್ನಡವನ್ನು ಉದ್ಧರಿಸಬೇಕಾದರೆ ಎಲ್ಲ ಬ್ಯಾಂಕ್‌ಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ರೈಲ್ವೇ ಇಲಾಖೆಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಇದರ ಜೊತೆ ಜೊತೆಗೆ ಸ್ಥಳೀಯ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಕಡ್ಡಾಯವಾಗಿ ಕನ್ನಡವನ್ನು ಬಳಕೆ ಮಾಡುವಂತೆ ಆದೇಶ ನೀಡಬೇಕು. ಎಲ್ಲ ತೀರ್ಪುಗಳನ್ನು, ವಿಚಾರಣೆಯ ಪ್ರಕ್ರಿಯೆಗಳನ್ನು ಕನ್ನಡದಲ್ಲೇ ನಡೆಸುವುದಕ್ಕೆ ಆರಂಭಿಸಬೇಕು. ಆಗ ತನ್ನಷ್ಟಕ್ಕೆ ಕನ್ನಡ ಉಳಿಯುತ್ತದೆ. ಯಾವಾಗ ಕನ್ನಡ ಅನ್ನದ ಭಾಷೆಯಾಗುತ್ತದೋ ಆಗ ಅದು ಬದುಕಿನ ಭಾಷೆಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಮತ್ತು ಮುಖ್ಯ ನ್ಯಾಯಾಧೀಶರು ನೀಡಿದ ಕರೆ ಅತ್ಯಂತ ಮಹತ್ವ ಪೂರ್ಣವಾದುದಾಗಿದೆ. ಈ ಕರೆ ಅನುಷ್ಠಾನಕ್ಕೆ ಬಂದದ್ದೇ ಆದಲ್ಲಿ ಸಂವಿಧಾನ ಸ್ಥಳೀಯ ಮಟ್ಟದಲ್ಲಿ ಇನ್ನಷ್ಟು ಗಟ್ಟಿಯಾಗಿ ಅನುಷ್ಠಾನಗೊಳ್ಳಲಿದೆ. ಈ ದೇಶದ ಬಹುತ್ವಕ್ಕೂ ಇದರಿಂದ ಗೌರವ ದೊರಕಿದಂತಾಗುತ್ತದೆ. ಆದುದರಿಂದ ಸ್ಥಳೀಯ ಭಾಷೆ ಎನ್ನುವುದು ಕೇವಲ ಹಿಂದಿಗಷ್ಟೇ ಸೀಮಿತವಾಗದೆ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಅನ್ವಯವಾಗುವ ಮೂಲಕ, ಎಲ್ಲ ನ್ಯಾಯಾಲಯಗಳು ತಮ್ಮ ಕಾರ್ಯ ಕಲಾಪಗಳನ್ನು ಸ್ಥಳೀಯ ಭಾಷೆಯಲ್ಲಿ ನಡೆಸಲು ಆಯಾ ರಾಜ್ಯ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News