ಸಾಮಾಜಿಕ ನ್ಯಾಯಕ್ಕೆ ದ್ರೋಹ

Update: 2022-05-03 00:49 GMT

ರಾಜ್ಯದ ಬಿಜೆಪಿ ಸರಕಾರದ ಹಗರಣಗಳು ಒಂದೊಂದಾಗಿ ಹೊರಬರತೊಡಗಿವೆ. ಈ ಸರಕಾರದಲ್ಲಿ ಸಾಮಾಜಿಕ ನ್ಯಾಯ ಎಂಬುದು ಹೆಸರಿಗೆ ಮಾತ್ರವಿದೆ. ಸಮಾಜದ ಬಲಿಷ್ಠ ಜಾತಿಗಳ ಅಭಿವೃದ್ಧಿಗಾಗಿ ಮತ್ತು ಆ ಜಾತಿಗಳ ಮಠ, ಪೀಠಗಳ ಏಳಿಗೆಗಾಗಿ ಆಯವ್ಯಯದಲ್ಲಿ ನೂರಾರು ಕೋಟಿ ರೂಪಾಯಿಯನ್ನು ವಿನಿಯೋಗಿಸುವ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ/ಎಸ್‌ಟಿ) ಕಲ್ಯಾಣದ ಸಲುವಾಗಿ ಮೀಸಲಾಗಿರಿಸಿದ್ದ 7,885 ಕೋಟಿ ರೂಪಾಯಿಗಳಷ್ಟು ಭಾರೀ ಮೊತ್ತವನ್ನು ಬೇರೆ ಉದ್ದೇಶಕ್ಕಾಗಿ ಬಳಕೆ ಮಾಡಿಕೊಂಡ ಸಂಗತಿ ಬಯಲಿಗೆ ಬಂದಿದೆ.

ಶತಮಾನಗಳಿಂದ ಅನ್ಯಾಯಕ್ಕೊಳಗಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಾಗಿರಿಸಿದ್ದ ಹಣವನ್ನು ಆ ಕೆಲಸಕ್ಕೆ ವಿನಿಯೋಗಿಸದೇ ಅದನ್ನು ಭಾರೀ ಮೊತ್ತದ ಮೂಲ ಸೌಕರ್ಯ ಯೋಜನೆಗಳಿಗಾಗಿ ವರ್ಗಾಯಿಸುವ ಮೂಲಕ ಸಾಮಾಜಿಕ ನ್ಯಾಯದ ತತ್ವ ಮತ್ತು ಬದ್ಧತೆಗೆ ವ್ಯತಿರಿಕ್ತವಾಗಿ ನಡೆದುಕೊಂಡಿದೆ. ತಾನೇ ರೂಪಿಸಿದ ಕಾನೂನನ್ನು ತಾನೇ ಉಲ್ಲಂಘನೆ ಮಾಡಿದೆ. ಕರ್ನಾಟಕ ಎಸ್‌ಸಿ, ಎಸ್‌ಟಿ ಕಾನೂನು 2013ರ ಪ್ರಕಾರ ರಾಜ್ಯ ಸರಕಾರ ತನ್ನ ವಾರ್ಷಿಕ ಮುಂಗಡ ಪತ್ರದ ಶೇಕಡಾ 24.1ರಷ್ಟು ಮೊತ್ತವನ್ನು ಪರಿಶಿಷ್ಟ ಸಮುದಾಯಗಳಿಗಾಗಿ ಖರ್ಚು ಮಾಡಬೇಕು.

ಪರಿಶಿಷ್ಟ ಸಮುದಾಯಕ್ಕೆ ಶೇಕಡಾ 17.15ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇಕಡಾ 6.95ರಷ್ಟು ವೆಚ್ಚ ಮಾಡಬೇಕು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಸದರಿ ಕಾಯ್ದೆಯ ಸೆಕ್ಷನ್ 7(ಡಿ) ಅಡಿಯಲ್ಲಿ ಇರುವ ಪರಿಗಣಿತ ವೆಚ್ಚದ ಅವಕಾಶವನ್ನು ದುರುಪಯೋಗ ಮಾಡಿಕೊಂಡ ಸರಕಾರ 2018ರಿಂದ 2020ರ ಕಾಲಾವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಾಗಿರಿಸಿದ್ದ ನಿಧಿಯಲ್ಲಿ ಬಹುದೊಡ್ಡ ಪ್ರಮಾಣದ ಮೊತ್ತವನ್ನು ಅನ್ಯ ಯೋಜನೆಗಳಿಗಾಗಿ ಬಳಸಿಕೊಂಡಿದೆ. ರಸ್ತೆ ದುರಸ್ತಿ, ಕುಡಿಯುವ ನೀರಿನ ಪೂರೈಕೆ ಯೋಜನೆ, ನೀರಾವರಿ ಮತ್ತು ಇತರ ಕಾರ್ಯಗಳಿಗಾಗಿ ಈ ಮೊತ್ತವನ್ನು ಉಪಯೋಗಿಸಲಾಗಿದೆ.

ನೂರಾರು ವರ್ಷಗಳಿಂದ ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಬಡತನದ ಕೂಪದಿಂದ ಮೇಲೆತ್ತಿ ಸಮಾಜದ ಮುಖ್ಯ ವಾಹಿನಿಯೊಂದಿಗೆ ಬೆರೆಯಲಿ ಎಂದು ರೂಪಿಸಲಾದ ಕಾಯ್ದೆಯನ್ನು ನಿರರ್ಥಕಗೊಳ್ಳುವಂತೆ ಮಾಡುವುದು ಈ ಸರಕಾರದ ದಲಿತ ವಿರೋಧಿ ಧೋರಣೆಗೆ ಉದಾಹರಣೆಯಾಗಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಈ ಹಣವನ್ನು ವಿನಿಯೋಗಿಸುವುದಿದ್ದರೆ ತಳ ಸಮುದಾಯಗಳ ಜನರು ಹೆಚ್ಚಾಗಿ ವಾಸಿಸುವ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಇದನ್ನು ಬಳಸಿಕೊಂಡಿದ್ದರೆ ಅಭ್ಯಂತರವಿರಲಿಲ್ಲ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಏಳಿಗೆಗಾಗಿ ನಿಗದಿಪಡಿಸಲಾದ ಹಣ ಸರಿಯಾಗಿ ವ್ಯಯಿಸಲ್ಪಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಲೇ ಇವೆ. ಬೇರೆ ಉದ್ದೇಶಗಳಿಗಾಗಿ ಈ ಹಣವನ್ನು ವರ್ಗಾವಣೆ ಮಾಡುತ್ತಿರುವ ಬಗ್ಗೆ ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪವಾಗಿತ್ತು. ಆಗ ಈ ಯೋಜನೆಯ ಐದು ಸಾವಿರ ಕೋಟಿ ರೂಪಾಯಿಯನ್ನು ಬೇರೆ ಯೋಜನೆಗಳಿಗಾಗಿ ಬಳಸುವ ನಿರ್ಧಾರವನ್ನು ಸರಕಾರ ಕೈ ಬಿಟ್ಟಿತ್ತು.

ಶೋಷಣೆಗೊಳಗಾದ ತಳ ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಾಗಿರಿಸಿದ್ದ ಹಣ ಈ ರೀತಿ ಅನ್ಯ ಉದ್ದೇಶಗಳಿಗಾಗಿ ಬಳಕೆಯಾಗುತ್ತಿದ್ದರೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಮಂತ್ರಿಗಳು ಬಾಯಿ ಮುಚ್ಚಿಕೊಂಡು ಕುಳಿತಿರುವುದು ಮತ್ತು ಈ ಸಮುದಾಯಗಳ ಜನ ಪ್ರತಿನಿಧಿಗಳು ತೆಪ್ಪಗಿರುವುದು ವಿಷಾದದ ಸಂಗತಿಯಾಗಿದೆ.

ತಳ ಸಮುದಾಯಗಳ ಜನರಿಗೆ ಇಷ್ಟೆಲ್ಲ ಅನ್ಯಾಯ ನಡೆಯುತ್ತಿದ್ದರೂ ಆ ಸಮುದಾಯಗಳ ಶಾಸಕರು ಮೌನವಾಗಿ ಕುಳಿತುಕೊಳ್ಳುವ ಮೂಲಕ ಈ ಅನ್ಯಾಯದಲ್ಲಿ ಪರೋಕ್ಷವಾಗಿ ಅವರೂ ಕೈಜೋಡಿಸಿದಂತಾಗಿದೆ ಅಂದರೆ ಅತಿಶಯೋಕ್ತಿಯಲ್ಲ. ನಿರ್ಲಕ್ಷಿತ ಸಮುದಾಯಗಳ ಏಳಿಗೆಗಾಗಿ ಮೀಸಲಾಗಿರಿಸಿದ್ದ ಹಣದ ವರ್ಗಾವಣೆಯಲ್ಲಿ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಇನ್ನಾದರೂ ಕಠಿಣ ಕ್ರಮ ಕೈಗೊಳ್ಳಬೇಕು.

ಇಷ್ಟೆಲ್ಲ ರಾದ್ದಾಂತವಾದ ನಂತರ ಈ ವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಾಗಿರಿಸಿದ ಹಣವನ್ನು ಬೇರೆ ಯೋಜನೆಗಳಿಗೆ ಉಪಯೋಗಿಸುವುದಿಲ್ಲ ಎಂದು ಸರಕಾರ ಭರವಸೆಯನ್ನು ನೀಡಿದೆ. ಆದರೆ ಹಿಂದಿನ ವರ್ಷಗಳಲ್ಲಿ ನಡೆದಿರುವ ಅನ್ಯಾಯ ಮತ್ತು ನಿಧಿ ದುರ್ಬಳಕೆಯ ಉದಾಹರಣೆಗಳು ನಮ್ಮ ಎದುರಿಗಿವೆ. ಹೀಗಾಗಿ 'ಈ ವರ್ಷ ದುರ್ಬಳಕೆ ಮಾಡುವುದಿಲ್ಲ' ಎಂಬ ಸರಕಾರದ ಮಾತನ್ನು ನಂಬುವುದಾದರೂ ಹೇಗೆ? ಇನ್ನು ಮುಂದಾದರೂ ಈ ದುರ್ಬಳಕೆಯನ್ನು ತಡೆಯಲು ಕಾನೂನಿನ ಲೋಪಗಳನ್ನು ಸರಿಪಡಿಸುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News