ಆಪ್ತಕವಿ ಜರಗನಹಳ್ಳಿ ಶಿವಶಂಕರ್: ಒಂದು ನೆನಪು

Update: 2022-05-05 18:41 GMT

ನಾನು ಕಂಡಂತೆ ಅವರೊಬ್ಬ ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿ. ಎಲ್ಲಾ ರೀತಿಯ ಜನರೊಂದಿಗೆ ಒಡನಾಟ ಇಟ್ಟುಕೊಂಡಿದ್ದವರು. ಸಾಹಿತ್ಯ, ಸಿನೆಮಾ, ರಾಜಕೀಯ ಮಂದಿ ಹಾಗೂ ಅಧಿಕಾರಿಗಳು ಮತ್ತು ಸಾಮಾನ್ಯರಲ್ಲಿ ಸಾಮಾನ್ಯರು ಅವರ ಬಳಗದಲ್ಲಿದ್ದರು. ಇಪ್ಪತ್ತಮೂರು ವರ್ಷಗಳ ಹಿಂದೆ ಪರಿಚಯವಾಗಿದ್ದ ಅವರನ್ನು ನಾನು ಬೆಂಗಳೂರಿನಲ್ಲಿದ್ದಾಗ ತಿಂಗಳಿಗೆ ಎರಡು ಮೂರು ಸಲ ಸಂಧಿಸುತ್ತಿದ್ದೆ. ಕೇಂದ್ರ ಸರಕಾರದ ಜಿಎಸ್‌ಐನಲ್ಲಿ ಭೂವಿಜ್ಞಾನಿಯಾಗಿ ಹೊರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾಗ ಫೋನ್‌ನಲ್ಲಿ ಮಾತನಾಡುತ್ತಿದ್ದೆ.




ಶಿವಶಂಕರ್ ಅವರನ್ನು ಕೊರೋನ ನುಂಗಿಕೊಂಡು ಇಂದಿಗೆ ಒಂದು ವರ್ಷ ಸಂದಿದೆ. ಶಿವಶಂಕರ್ ಅವರು ನನ್ನ ಅತ್ಯಂತ ಆಪ್ತರು ಎನ್ನುವುದು ತೀರಾ ಬಾಲಿಶ. ಅವರು ಇನ್ನಷ್ಟು ವರ್ಷಗಳ ಕಾಲ ನಮ್ಮ ನಡುವೆ ಇರಬೇಕಾಗಿತ್ತು. ನಾನು ಕಂಡಂತೆ ಅವರೊಬ್ಬ ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿ. ಎಲ್ಲಾ ರೀತಿಯ ಜನರೊಂದಿಗೆ ಒಡನಾಟ ಇಟ್ಟುಕೊಂಡಿದ್ದವರು. ಸಾಹಿತ್ಯ, ಸಿನೆಮಾ, ರಾಜಕೀಯ ಮಂದಿ ಹಾಗೂ ಅಧಿಕಾರಿಗಳು ಮತ್ತು ಸಾಮಾನ್ಯರಲ್ಲಿ ಸಾಮಾನ್ಯರು ಅವರ ಬಳಗದಲ್ಲಿದ್ದರು. ಇಪ್ಪತ್ತಮೂರು ವರ್ಷಗಳ ಹಿಂದೆ ಪರಿಚಯವಾಗಿದ್ದ ಅವರನ್ನು ನಾನು ಬೆಂಗಳೂರಿನಲ್ಲಿದ್ದಾಗ ತಿಂಗಳಿಗೆ ಎರಡು ಮೂರು ಸಲ ಸಂಧಿಸುತ್ತಿದ್ದೆ. ಕೇಂದ್ರ ಸರಕಾರದ ಜಿಎಸ್‌ಐನಲ್ಲಿ ಭೂವಿಜ್ಞಾನಿಯಾಗಿ ಹೊರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾಗ ಫೋನ್‌ನಲ್ಲಿ ಮಾತನಾಡುತ್ತಿದ್ದೆ.

ನಮ್ಮ ನಡುವಿನ ಕೆಲವು ಸ್ವಾರಸ್ಯಕರ ವಿಷಯಗಳನ್ನು ನಿಮ್ಮ ಮುಂದೆ ಇಡಲು ಇಚ್ಛಿಸುತ್ತೇನೆ. ಅವರ ತಾಯಿಯ ಬಗ್ಗೆ ಅವರು ಯಾವಾಗಲೂ ಒಂದು ವಿಷಯ ಹೇಳುತ್ತಿದ್ದು ಆ ಮಾತು ನನ್ನನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ. ಒಂದು ದಿನ ಶಿವಶಂಕರ್ ಅವರ ತಾಯಿ, ಸಹೋದರರಾದ ಬಸವರಾಜು ಮತ್ತು ಚಂದ್ರಶೇಖರ್, ರಾಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರಂತೆ. ಹಳ್ಳಿಯ ಯುವಕನೊಬ್ಬ ಹತ್ತಿರಕ್ಕೆ ಬಂದು, 'ಅಮ್ಮ ನಾನು ಪಕ್ಕದ ಊರಿನವನು, ತುಂಬಾ ಕಷ್ಟದಲ್ಲಿದ್ದೀನಿ, ನೀವು ಎರಡೊತ್ತು ಊಟ ಹಾಕಿದರೆ ಸಾಕು. ನಿಮ್ಮ ಹೊಲದಲ್ಲಿ ಕೆಲಸ ಮಾಡಿಕೊಂಡು ಇಲ್ಲೇ ಇದ್ದುಬಿಡ್ತೀನಿ' ಎಂದನಂತೆ. ಅವರ ತಾಯಿ 'ಆಯಿತು ಕೂತ್ಕೊ' ಅಂದರು. ಯುವಕ ಹರಳೆ ಎಲೆಗಳನ್ನು ಕಿತ್ತುಕೊಂಡು ನೆಲದಲ್ಲಿ ಕುಳಿತುಕೊಂಡ. ಶಿವಶಂಕರ್ ಅವರ ತಾಯಿ ಯುವಕನಿಗೆ ಸರಿಯಾದ ಒಂದು ರಾಗಿಮುದ್ದೆ ಜೊತೆಗೆ ಸಾರು ಹಾಕಿದರು. ಯುವಕ ತಿಂದ. ಶಿವಶಂಕರ್ ಅವರ ತಾಯಿ ಇನ್ನೊಂದು ಮುದ್ದೆ ಹಾಕುವುದಕ್ಕೆ ಹೋದರು. 'ಅಯ್ಯೆ ಸಾಕಮ್ಮ. ಹೊಟ್ಟೆ ತುಂಬೋಯಿತು' ಅಂತ ಎದ್ದು ನಿಂತ ಯುವಕ, ಕೈ ತೊಳೆದುಕೊಂಡು 'ಕೆಲಸ' ಅಂದನಂತೆ. 'ಕೆಲಸ ಇಲ್ಲ, ನಡಿ' ಎಂದರಂತೆ. ಯುವಕ ಏನೂ ಮಾತನಾಡದೇ ಹೊರಟುಹೋದ.

 ಶಿವಶಂಕರ್, 'ಅಲ್ಲಮ್ಮ, ಆ ಯುವಕನಿಗೆ ಊಟ ಹಾಕಿದೆ. ತಿಂದ ಮೇಲೆ ಕೆಲಸ ಇಲ್ಲ ಅಂತೀಯಲ್ಲ? ಯಾರೋ ಬಡವ, ಇಲ್ಲೇ ಕೆಲಸ ಮಾಡಿಕೊಂಡು ನಮ್ಮ ತೋಟದಲ್ಲೇ ಇರ್ತಾಇದ್ದನಲ್ಲ' ಅಂದರಂತೆ. ಅದಕ್ಕೆ ಅವರ ತಾಯಿ, 'ನೀನು ಸುಮ್ಮನೆ ಇರಪ್ಪ. ಅವನಿಂದ ಸರಿಯಾಗಿ ಒಂದು ಮುದ್ದೆ ತಿನ್ನುವುದಕ್ಕೆ ಆಗಲಿಲ್ಲ. ಅವನೇನು ಕೆಲಸ ಮಾಡ್ತಾನೆ' ಅಂದರಂತೆ. ಒಬ್ಬ ಮಹಿಳೆ ಒಂದು ಮನೆಯನ್ನು ಕಟ್ಟುವ ಕೆಲಸದಲ್ಲಿ ಹೇಗೆಲ್ಲ ಆಲೋಚಿಸುತ್ತಾಳೆ ಎನ್ನುವ ವಿಷಯ ಸೋಜಿಗ ಹುಟ್ಟಿಸುತ್ತದೆ. 2004ರಲ್ಲಿ ನನಗೆ 1.40 ಲಕ್ಷ ರೂ. ಕಾರು ಲೋನ್‌ಗಾಗಿ ಕಚೇರಿಯಲ್ಲಿ ಮಂಜೂರಾಗಿತ್ತು. ಆಗ ಮಾರುತಿ-800 ಕಾರಿಗೆ 1.80 ಲಕ್ಷ ಬೆಲೆ ಇದ್ದು ನನಗೆ ಸಾಲ ಮಾಡಲು ಇಷ್ಟವಿಲ್ಲದೆ ಒಂದು ಹಳೆ ಕಾರು ಕೊಡಿಸುವಂತೆ ಶಿವಶಂಕರ್ ಅವರ ಹಿಂದೆ ಬಿದ್ದೆ. ಒಂದು ಸಾಯಂಕಾಲ ನಾನು, ಶಿವಶಂಕರ್ ಮತ್ತು ಒಬ್ಬ ಮೆಕ್ಯಾನಿಕ್ ಮಾನೋಟೈಪ್ ಹತ್ತಿರದ ಮನೆಯಲ್ಲಿ ಹಳೆ ಕಾರು ನೋಡಲು ಹೋದೆವು. ಮನೆಯಲ್ಲಿ ಮಾರ್ವಾಡಿ ವೃದ್ಧ ದಂಪತಿ ಇದ್ದು, ಶೆಡ್‌ನಲ್ಲಿ ನಿಲ್ಲಿಸಿದ್ದ ಬಾಟಲ್ ಗ್ರೀನ್ ಕಾರನ್ನು ತೋರಿಸಿದರು. ಅದ್ಯಾಕೋ ಆ ಕಾರು ನನಗೆ ದೆವ್ವದಂತೆ ಕಾಣಿಸಿ, 'ಈ ಕಾರು ಯಾರ ಹೆಸರಲ್ಲಿದೆ?' ಎಂದೆ. ವೃದ್ಧ, 'ಕಾರಿನ ಮಾಲಕರು ಕಳೆದ ವರ್ಷ ಹೊಸಪೇಟೆಯ ಹತ್ತಿರ ಅಪಘಾತದಲ್ಲಿ ತೀರಿಹೋದರು' ಎಂದ. ನಾನು, ಶಿವಶಂಕರ್ ಒಬ್ಬರ ಮುಖ ಒಬ್ಬರು ನೋಡಿಕೊಂಡು ಹೊರಕ್ಕೆ ಬಂದುಬಿಟ್ಟೆವು. ವೃದ್ಧ ಹಿಂದಿನಿಂದ ಕೂಗುತ್ತಲೇ ಇದ್ದ. ಹೊರಕ್ಕೆ ಬಂದ ಶಿವಶಂಕರ್, 'ವೆಂಕಟಸ್ವಾಮಿ, ಇದ್ಯಾಕೋ ದೆವ್ವದ ಕಾರು ತರಹ ಕಾಣಿಸುತ್ತೆ ಅಲ್ಲವ?' ಎಂದರು.

'ನನಗೂ ಹಾಗೇ ಅನ್ನಿಸಿತು ಸರ್' ಎಂದೆ. ಶಿವಶಂಕರ್, 'ಹೊಸ ಕಾರು ಕೊಂಡುಕೊಳ್ಳುವುದಕ್ಕೆ ಇನ್ನೆಷ್ಟು ಹಣ ಬೇಕು? ನಿಮಗೆ' ಎಂದರು. 'ಮೂವತ್ತು ಸಾವಿರ ಬೇಕಾಗುತ್ತೆ ಸರ್' ಎಂದೆ. 'ನಾಳೆ ಬೆಳಗ್ಗೆ ಬಾರಪ್ಪ ಕೊಡ್ತೀನಿ' ಎಂದರು. ಮರು ದಿನ ಬ್ಯಾಂಕ್‌ಗೆ ಕರೆದುಕೊಂಡು ಹೋಗಿ 30 ಸಾವಿರ ತೆಗೆದುಕೊಟ್ಟರು. ಆ ಹಣವನ್ನು ನಾನು ಎರಡೋ ಮೂರೋ ಕಂತುಗಳಲ್ಲಿ ಹಿಂದಿರುಗಿಸಿದೆ. ಈ ನಡುವೆ 'ಕೋಲಾರ ಚಿನ್ನದ ಗಣಿಗಳು' ಬಗ್ಗೆ ಒಂದು ಮಹಾಪ್ರಬಂಧ ರಚಿಸಿ ಅದಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್ ಸಿಕ್ಕಿತ್ತು. ಅದನ್ನು ಪರಿಷ್ಕರಣೆ ಮಾಡಿ ನಿಡಸಾಲೆ ಪುಟ್ಟಸ್ವಾಮಯ್ಯ ಅವರಿಗೆ ಕೊಟ್ಟು ಅವರು ಅದನ್ನು ಹಾರ್ಡ್ ಬೈಂಡ್ ಕವರ್‌ನೊಂದಿಗೆ ಸೊಗಸಾಗಿ ಮುದ್ರಣ ಮಾಡಿದ್ದರು. ಪುಸ್ತಕ ಬಿಡುಗಡೆ ಮಾಡಲು ಜರಗನಹಳ್ಳಿ ಅವರನ್ನು ಹಿಡಿದುಕೊಂಡೆ. ಒಂದು ದಿನ ಜರಗನಹಳ್ಳಿ ಅವರನ್ನು ಪ್ರೊ.ನಿಸಾರ್ ಅಹ್ಮದ್ ಅವರ ಮನೆಗೆ ಕರೆದುಕೊಂಡು ಹೋದರು. ನಮ್ಮ ಜೊತೆಗೆ ವೀರಭದ್ರಪ್ಪ, ಪಂಡಿತ್ ಇದ್ದರು. ಕಾಫಿ ಕುಡಿದ ಮೇಲೆ ಜರಗನಹಳ್ಳಿ ಅವರು ಮೆತ್ತಗೆ ನನ್ನನ್ನು ಪರಿಚಯಿಸಿ, ನಾನು ಪುಸ್ತಕದ ಒಂದು ಪ್ರತಿಯನ್ನು ಪ್ರೊಫೆಸರ್ ಕೈಗೆ ಕೊಟ್ಟೆ. ಅವರು ಅದರ ಪುಟಗಳನ್ನು ತಿರುವಿ ನೋಡಿ 'ಓ ನಮ್ಮ ಪ್ರಬೇಧಾನೆ ವೆಂಕಟಸ್ವಾಮಿ' ಎಂದರು. ಅಂದರೆ ಅವರೂ ಕೂಡ ಭೂವಿಜ್ಞಾನಿ ಎನ್ನುವುದು ಅದರ ಅರ್ಥ. ಒಂದಷ್ಟು ಮಾತುಕತೆ ನಡೆದ ಮೇಲೆ ಜರಗನಹಳ್ಳಿ ಮೆತ್ತಗೆ 'ಈ ಪುಸ್ತಕ ಬಿಡುಗಡೆಗೆ ನೀವು ಅಧ್ಯಕ್ಷತೆಯನ್ನು ವಹಿಸಬೇಕು ಸರ್' ಅಂದರು.

ಪ್ರೊಫೆಸರ್, 'ನೀವು ಗುಂಪು ಕಟ್ಟಿಕೊಂಡು ಬಂದಾಗಲೇ ನಮ್ಮ ಜರಗನಹಳ್ಳಿ ಏನೋ ತಲೆಗೆ ತಂದಿದ್ದಾನೆ ಅಂತ ಗೊತ್ತಾಯಿತು. ಇಲ್ಲಪ್ಪ ನಾನೀಗ ಎಲ್ಲಿಗೂ ಬರುವುದಿಲ್ಲ. ನನಗೆ ಆರೋಗ್ಯ ಬೇರೆ ಚೆನ್ನಾಗಿಲ್ಲ' ಅಂದರು. ಅವರ ಕಾಲುಗಳ ಮೇಲೆ ಹುಳ ಕಾಟ ಆಗಿ, ಹುಣ್ಣುಗಳಾಗಿರುವುದನ್ನು ತೋರಿಸುತ್ತ ಪರ..ಪರ.. ಅಂತ ಕೆರೆದುಕೊಳ್ಳುತ್ತ, 'ಈ ಕೆರೆಯುವುದರಲ್ಲಿ ಇರೋ ಸುಖ ಯಾವುದರಲ್ಲೂ ಇರುವುದಿಲ್ಲ ನೋಡಿ. ಒಂದು ಸಲ ಶುರು ಮಾಡಿಕೊಂಡರೆ ಕೆರಕೊಳ್ತಾನೆ ಇರಬೇಕೆನಿಸುತ್ತೆ' ಅಂತ ನಕ್ಕರು. ನನಗೆ ಅಯ್ಯೋ ಪಾಪ ಎನಿಸಿತು. ಕೊನೆಗೆ ಒಪ್ಪಿಕೊಂಡು ನಯನಾ ಸಭಾಂಗಣಕ್ಕೆ ಬಂದಿದ್ದರು. ಅವರ ಜೊತೆಗೆ ಡಾ.ಯಲ್ಲಪ್ಪರೆಡ್ಡಿ, ನಾಗೇಶ್ ಹೆಗಡೆ, ಪ್ರೊ.ಜಿ.ಎಚ್.ಸಾಹುಕಾರ್ (ನನ್ನ ಗುರುಗಳು), ನಿಡಸಾಲೆ ಪುಟ್ಟಸ್ವಾಮಯ್ಯ ಎಲ್ಲರೂ ಇದ್ದರು. ಇಂತಹ ಯಾವುದೇ ಕೆಲಸ ಆಗಬೇಕಾಗಿದ್ದರೂ ನಾನು ಜರಗನಹಳ್ಳಿ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡುಬಿಡುತ್ತಿದ್ದೆ. ಇನ್ನು ಅವರ ಮನೆ ಆತಿಥ್ಯದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಲೇಬೇಕಿದೆ. ಅವರ ಮನೆಗೆ ಯಾವಾಗ ಹೋದರೂ, ಮನೆಯ ಒಳಗೆ ಒಂದಷ್ಟು ಜನ ಇದ್ದೇ ಇರುತ್ತಿದ್ದರು. ಅದು, ಅವರ ಅಭಿಮಾನಿಗಳಾಗಿರಬಹುದು, ಗೆಳೆಯರಾಗಿರಬಹುದು, ಸಿನೆಮಾದವರು, ಸಾಹಿತಿಗಳು ಹೀಗೆ. ಅವರ ಮನೆಗೆ ಯಾರೇ ಬಂದರು, ಮೊದಲು ಅವರು ಆರಾಮವಾಗಿ ಕುಳಿತುಕೊಳ್ಳಬೇಕು. ಒಂದಷ್ಟು ಮಾತುಕತೆ ಆದಮೇಲೆ ಜರಗನಹಳ್ಳಿ ಅವರು, ಅವರ ಶ್ರೀಮತಿ ಅವರನ್ನು ಶೈಲಜಾ ಅಥವಾ ಮಗಳನ್ನು ಶುಭಾ ಎಂದು ಕರೆದು 'ನೋಡಮ್ಮ ನಮ್ಮ ವೆಂಕಟಸ್ವಾಮಿ ಅಂಕಲ್ ಬಂದಿದ್ದಾರೆ. ಕಾಫಿ ಕೊಡಮ್ಮ ಎನ್ನುತ್ತಿದ್ದರು. ಯಾರೇ ಆಗಲಿ ಜರಗನಹಳ್ಳಿ ಅವರು, ಬಂದಿರುವವರ ಹೆಸರಿನ ಮೊದಲಿಗೆ 'ನಮ್ಮ' ಪದವನ್ನು ಬಳಸುತ್ತಿದ್ದರು. ಹಿಂದೂ, ಮುಸ್ಲಿಮ್, ಕ್ರೈಸ್ತರು ಯಾರೇ ಆದರೂ ಸರಿ, ಯಾವ ಭೇದಭಾವವೂ ಇರುವುದಿಲ್ಲ. ಎಲ್ಲರಿಗೂ ಒಂದೇ ಟ್ರೀಟ್‌ಮೆಂಟ್, ಬಸವಣ್ಣನ ಮಾದರಿ. ಇನ್ನು ಊಟದ ಸಮಯ ಆಗಿದ್ದರೆ 'ನಮ್ಮ ಜೊತೆಯಲ್ಲಿ ಸ್ವಲ್ಪ ಮುದ್ದೆ ತಿನ್ತೀರ' ಎನ್ನುತ್ತಿದ್ದರು ಮೃದುವಾಗಿ. ಅವರು ಹೇಳುವ ರೀತಿಯಲ್ಲಿ ಯಾರೇ ಆಗಲಿ ಇಲ್ಲ ಎನ್ನದೆ ಸಮ್ಮೋಹನಗೊಂಡ ರೀತಿಯಲ್ಲಿ ಅವರ ಹಿಂದೆಯೇ ಎದ್ದು ಅಡುಗೆ ಮನೆಯ ಕಡೆಗೆ ಹೋಗುತ್ತಿದ್ದರು, ಅವರ ಜೊತೆಗೆ ಇನ್ನಷ್ಟು ಸಮಯ ಕಾಲ ಕಳೆಯಬಹುದು ಎನ್ನುವ ಖುಷಿಯಿಂದ. ಊಟ ರಾಗಿಮುದ್ದೆ, ಬಿಳಿ ಅನ್ನ ಸೊಪ್ಪುಸಾರು, ಬಸ್ಸಾರು ಇತ್ಯಾದಿ. ಸಾಧಾರಣದಲ್ಲಿ ಸಾಧಾರಣ ಹಳ್ಳಿಶೈಲಿ. ಅವರು ಎಷ್ಟು ಸರಳ ಅಂದರೆ ಬಹುಶಃ ನನ್ನ ಆಪ್ತರ ಬಳಗದಲ್ಲಿ ನಾನು ಬೇರೆ ಯಾರನ್ನೂ ಆ ರೀತಿ ನೋಡಲಿಲ್ಲ. 2008ರಲ್ಲಿ ಬಂದ ಅವರ ಅಭಿನಂದನ ಗ್ರಂಥ 'ತುಂತುರು' ಪುಸ್ತಕದಲ್ಲಿ ನನ್ನದೊಂದು ಲೇಖನ ಇದೆ. ಅದರ ಶೀರ್ಷಿಕೆ ''ಸಿಂಪ್ಲಿಸಿಟಿ ಈಸ್ ಬ್ಯೂಟಿಫುಲ್'' ಅಂತ. ಅವರನ್ನು ನಾನು ಅನೇಕ ಸಲ ನಿಮ್ಮ ಆತ್ಮಕತೆ ಬರೆಯಿರಿ ಎಂದು ಹಿಂದೆ ಬಿದ್ದಿದ್ದೆ. ಆದರೆ ಅವರು, ಪದೇಪದೇ ನಿರಾಕರಿಸುತ್ತಿದ್ದರು. 'ಯಾಕೆ?' ಎಂದರೆ 'ನಾನು ಆತ್ಮಕತೆ ಬರೆದರೆ ಎಷ್ಟು ಜನರು ಜಗಳಗಳಿಗೆ ಬರುತ್ತಾರೋ ಗೊತ್ತಿಲ್ಲ. ನನ್ನದು ಒಬ್ಬನದೇ ಬರೆದುಕೊಂಡರೆ ಪ್ರಯೋಜನ ಏನು?' ಎನ್ನುತ್ತಿದ್ದರು. ಬಹಳ ದೊಡ್ಡದೊಡ್ಡ ಲೇಖಕರು, ಸಿನೆಮಾ ನಟರು, ಪೊಲೀಸರು, ರಾಜಕಾರಣಿಗಳ ವಿಷಯಗಳನ್ನು ಬಹಳ ಸ್ವಾರಸ್ಯವಾಗಿ ಹೇಳುತ್ತಿದ್ದರು. ಅವರ ಮನೆ ಪಕ್ಕದಲ್ಲಿಯೇ ಇರುವ ಅವರದೇ ಕಲ್ಯಾಣ ಮಂಟಪದಲ್ಲಿ ಸುಮಾರು 225ಕ್ಕಿಂತ ಹೆಚ್ಚು ಬೆಳದಿಂಗಳ ಕೂಟಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದರು. ಈ 225 ಕೂಟಗಳಲ್ಲಿ ಕನಿಷ್ಠ ಒಂದು ಕೂಟದಲ್ಲಿ ಮೂವರು ಅತಿಥಿಗಳು ಎಂದರೆ 675 ಅತಿಥಿಗಳನ್ನು ಕರೆದು ಸನ್ಮಾನಿಸಿದ್ದಾರೆ. ಅಂದರೆ ಅವರ ಗೆಳೆತನದ ಬಳಗ ಎಷ್ಟು ದೊಡ್ಡದು ಎನ್ನುವುದನ್ನು ನಾವು ಇಲ್ಲಿ ಊಹಿಸಿಕೊಳ್ಳಬಹುದು. ನಾನು ನಿವೃತ್ತಿಯಾಗಿ ಬೆಂಗಳೂರಿನಲ್ಲಿ ನೆಲೆನಿಂತಾಗಿನಿಂದ ವಾರದಲ್ಲಿ ಕಡಿಮೆಯೆಂದರೆ ಎರಡು ಸಲವಾದರೂ ಅವರ ಜೊತೆಗೆ ಫೋನ್‌ನಲ್ಲಿ ಮಾತನಾಡುತ್ತಿದ್ದೆ. ಕಳೆದ ವರ್ಷ ಇದೇ ಮೇ ತಿಂಗಳು ಮೂರನೇ ತಾರೀಕು ಬೆಳಗ್ಗೆ ಫೋನ್ ಮಾಡಿದ್ದೆ. ಫೋನ್ ತೆಗೆದುಕೊಂಡ ಜರಗನಹಳ್ಳಿ ಅವರು ನಿಧಾನವಾಗಿ 'ಫೋರ್ಟೀಸ್ ಆಸ್ಪತ್ರೆಯಲ್ಲಿ ಇದ್ದೀನಿ ಸರ್. ಕೊರೋನ ಆಗಿಬಿಟ್ಟಿದೆ' ಎಂದರು. ಆಘಾತಗೊಂಡ ನಾನು ಒಂದೆರಡು ಮಾತುಗಳನ್ನಾಡಿ, ಸರ್, ರೆಸ್ಟ್ ತೆಗೊಳ್ಳಿ ಆಮೇಲೆ ಮಾತಾಡ್ತೀನಿ ಎಂದೆ. ಅವರು ಮಾತನಾಡುವಾಗ ಕಷ್ಟಪಡುತ್ತಿದ್ದರು. ಬಹುಶಃ ಬಾಯಿಗೆ ಹಾಕಿದ್ದ ವೆಂಟಿಲೇಟರ್ ತೆಗೆದು ಮಾತನಾಡಿದಂತಿತ್ತು. ಅವರು ಮಾತನಾಡಿದ ರೀತಿಯಿಂದಲೇ ನನ್ನೊಳಗೆ ಒಂದು ಅವೇದನೆ ಪ್ರಾರಂಭವಾಗಿಬಿಟ್ಟಿತು. ಅವರಿಗೆ ಮತ್ತೆ ಫೋನ್ ಮಾಡುವುದೋ ಬೇಡವೋ ನನಗೆ ಅರ್ಥವಾಗಲಿಲ್ಲ. ನನ್ನಿಂದ ಸುಮ್ಮನೆ ಇರಲೂ ಆಗಲಿಲ್ಲ. ಅವರ ಸಂಬಂಧಿ ಸಂಜಯ್‌ಗೆ ಈ ಮಧ್ಯೆ ಫೋನ್ ಮಾಡಿದಾಗ ಸಂಜಯ್ ಅತ್ತುಕೊಂಡುಬಿಟ್ಟ. ಎರಡು ದಿನಗಳಾದ ಮೇಲೆ ದಿನಾಂಕ 5ರಂದು ಬೆಳಗ್ಗೆ ನಿಡಸಾಲೆ ಪುಟ್ಟುಸ್ವಾಮಯ್ಯ ಅವರು ಫೋನ್ ಮಾಡಿ ಜರಗನಹಳ್ಳಿ ಇನ್ನಿಲ್ಲ ಅಂತ ತಿಳಿಸಿದರು. ನನಗೆ ಏನು ಮಾಡಬೇಕೋ ಅರ್ಥವಾಗಲಿಲ್ಲ. ಅವರ ಬಗ್ಗೆ ಒಂದು ವೆಬಿನಾರ್‌ನಲ್ಲಿ 'ನಾನು ಸಾಯೋವರೆಗೂ ಅವರ ಜೊತೆಗಿನ ಬೆಚ್ಚನೆ ನೆನಪುಗಳು ನನ್ನ ಜೊತೆಗೆ ಹಾಗೇ ಉಳಿದುಕೊಂಡಿರುತ್ತವೆ' ಎಂದಿದ್ದೆ. ಈಗಲೂ ಅದೇ ಮಾತುಗಳನ್ನು ಹೇಳುತ್ತೇನೆ. ಅವರು ಇನ್ನಷ್ಟು ವರ್ಷಗಳು ನಮ್ಮ ಜೊತೆಗೆ ಇರಬೇಕಾಗಿತ್ತು

Writer - ಡಾ.ಎಂ. ವೆಂಕಟಸ್ವಾಮಿ

contributor

Editor - ಡಾ.ಎಂ. ವೆಂಕಟಸ್ವಾಮಿ

contributor

Similar News