ಪುತ್ತೂರು; ರಸ್ತೆ ಅಪಘಾತ: ಗಾಯಾಳು ಯುವಕ ಮೃತ್ಯು
ಪುತ್ತೂರು: ಮೂರು ದಿನಗಳ ಹಿಂದೆ ಪುತ್ತೂರು ನಗರದ ಬೈಪಾಸ್ ನಲ್ಲಿ ನಡೆದ ಸ್ಕೂಟರ್ - ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರ್ ಕಲ್ಲರ್ಪೆ ನಿವಾಸಿ ಹಸೈನಾರ್ (ಕುಂಞಿಚ್ಚ) ಅವರ ಪುತ್ರ ಮಹಮ್ಮದ್ ಹಾಸಿರ್ (18) ಮೃತಪಟ್ಟ ಯುವಕ.
ಪುತ್ತೂರು ತಾಲೂಕಿನ ಅರಿಯಡ್ಕ ನಿವಾಸಿ ಆದಂ ಕುಂಞಿ ಅವರ ಪುತ್ರ ಸಿನಾನ್(18) ಮತ್ತು ಹಾಸಿರ್ ಅವರು ಜೊತೆಯಾಗಿ ಸ್ಜೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸ್ಕೂಟರ್ ಮತ್ತು ಲಾರಿ ನಡುವೆ ಢಿಕ್ಕಿಯಾಗಿ ಇಬ್ಬರೂ ಗಾಯಗೊಂಡಿದ್ದರು.
ಸ್ಕೂಟರ್ ಚಲಾಯಿಸುತ್ತಿದ್ದ ಸಿನಾನ್ ಸ್ಥಳದಲ್ಲೇ ಮೃತಪಟ್ಟಿದ್ದರು. ಹಾಸಿರ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ತಂದೆ, ತಾಯಿ, ಓರ್ವ ಸಹೋದರಿಯನ್ನು ಅಗಲಿದ್ದಾರೆ.