×
Ad

ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

Update: 2022-05-11 16:32 IST

ಉಡುಪಿ : ಅಸಾಮಿ ಚಂಡಮಾರುತದ ಪರಿಣಾಮ ಉಡುಪಿ ಜಿಲ್ಲೆಯಾದ್ಯಂತ ಬೆಳಗ್ಗೆಯಿಂದ ಭಾರೀ ಮಳೆಯಾಗಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿರುವ ಬಗ್ಗೆ ವರದಿಯಾಗಿದೆ.

ಮುಂಜಾನೆಯಿಂದ ಮೋಡ ಕವಿದ ವಾತಾವರಣದ ಕಂಡುಬಂದಿದ್ದು, ಬಳಿಕ  ಜಿಟಿಜಿಟಿ ಮಳೆ ಬಿರುಸು ಪಡೆದು ಕೊಂಡಿತು. ಉಡುಪಿ, ಕಾಪು, ಕಾರ್ಕಳ, ಬ್ರಹ್ಮಾವ, ಹೆಬ್ರಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧೆಡೆ  ನಿರಂತರವಾಗಿ ಎಡಬಿಡದೇ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ಥ ಗೊಂಡಿದೆ.

ಕೊಲ್ಲೂರು, ಸಿದ್ಧಾಪುರ ಸೇರಿದಂತೆ ಕೆಲವೆಡೆ ವಿಪರೀತ ಮಳೆಯಾಗಿ ರುವ ಬಗ್ಗೆ ವರದಿಯಾಗಿದೆ. ಉಡುಪಿ ನಗರ ಸೇರಿದಂತೆ ಹಲವು ತಗ್ಗು ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿ, ಜನ ಪರದಾಡುವಂತಾಗಿದೆ.

ಮಲ್ಪೆ ಬೀಚ್ ಖಾಲಿ ಖಾಲಿ!

ಪ್ರವಾಸಿಗರಿಂದ ತುಂಬಿ ಹೋಗುತ್ತಿದ್ದ ಮಲ್ಪೆ ಬೀಚ್, ಇದೀಗ ಚಂಡ ಮಾರುತದ ಪರಿಣಾಮವಾಗಿ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ಜನರಿಲ್ಲದೆ ಬೀಕೋ ಎನ್ನುತ್ತಿದೆ.

ಸಮುದ್ರ ಪ್ರಕ್ಷುಬ್ದಗೊಂಡಿರುವುದರಿಂದ ಕಡಲ ಅಬ್ಬರ ಹೆಚ್ಚಾಗಿ ಬೃಹತ್ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಅಲ್ಲದೆ ಎರಡು ದಿನಗಳ ಹಿಂದೆ ಜಿಲ್ಲಾಡಳಿತ ಮಲ್ಪೆ ಬೀಚ್‌ನಲ್ಲಿ ವಾಟರ್‌ ಸ್ಪೋರ್ಟ್ಸ್, ಪ್ರವಾಸಿ ಬೋಟು, ಸೈಂಟ್ ಮೇರಿಸ್ ದ್ವೀಪ ಪ್ರವೇಶ ಮತ್ತು ಪ್ರವಾಸಿಗರು ನೀರಿಗೆ ಇಳಿಯದಂತೆ ನಿಷೇಧ ಹೇರಿತ್ತು.

ಅಲ್ಲದೆ ಇಂದು ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿರುವುದರಿಂದ ಬೀಚ್ ಖಾಲಿಯಾಗಿರುವುದು ಕಂಡುಬಂತು. ಈ ಮಧ್ಯೆ ಈಗಾಗಲೇ ಪ್ರವಾಸ ಹೊರಟು ಉಡುಪಿ ತಲುಪಿರುವ ಹೊರ ಜಿಲ್ಲೆ ಹಾಗೂ ರಾಜ್ಯಗಳ ಪ್ರವಾಸಿಗರು ದೂರದಲ್ಲೇ ಬೀಚ್ ವೀಕ್ಷಿಸಿ ವಾಪಾಸ್ಸಾಗುತ್ತಿದ್ದಾರೆ. ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಪ್ರವಾಸ ಬಂದಿರುವ ಪ್ರವಾಸಿಗರಿಗೆ ಮಳೆಯಿಂದ ಸಾಕಷ್ಟು ನಿರಾಸೆ ಆಗಿದೆ.

ಹೆದ್ದಾರಿಯಲ್ಲಿ ಕೃತಕ ನೆರೆ

ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಕುಂದಾಪುರದ ಕೋಟೇಶ್ವರ, ಕೆ.ಎಸ್.ಆರ್.ಟಿ.ಸಿ ಎದುರು, ಬೀಜಾಡಿ, ಕುಂಭಾಸಿ, ತೆಕ್ಕಟ್ಟೆ, ಕೋಟ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಕೃತಕ ನೆರೆ ಸೃಷ್ಠಿಯಾಗಿದೆ.

ಕೆಲ ದಿನದಿಂದಲೂ ಕೂಡ ಆಗಾಗ್ಗೆ ಮಳೆಯಾಗುತ್ತಿದ್ದು ವಾರ್ಷಿಕ ಮಳೆಗಾಲದ ಋತು ಆಗಮಿಸುತ್ತಿದ್ದರೂ ಕೂಡ ಸಂಬಂಧಪಟ್ಟ ಇಲಾಖೆ ಮಾತ್ರ ರಾಷ್ಟ್ರೀಯ ಹೆದ್ದಾರಿ ಚರಂಡಿ ನಿರ್ವಹಣೆ ವ್ಯವಸ್ಥೆಯಲ್ಲಿ ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿರುವುದರ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಂದಾಪುರದ ಅಂಕದಕಟ್ಟೆ, ಬಸ್ರೂರು ಮೂರುಕೈ ಬಳಿ, ಕುಂದಾಪುರ- ಬೈಂದೂರು ಸರ್ವೀಸ್ ರಸ್ತೆಯ ವಿವಿದೆಡೆ ಸರ್ವೀಸ್ ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿ ಹಾಗೂ ಚರಂಡಿ ಅವ್ಯವಸ್ಥೆ ಹಿನ್ನೆಲೆ ಮಳೆ ನೀರು ಮೊಣಕಾಲೆತ್ತರ ನಿಂತು ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದೆ.

ಈ ತಿಂಗಳಿನಲ್ಲಿ ಬಹುತೇಕ ಕಡೆಗಳಲ್ಲಿ ಸಾಂಸ್ಕೃತಿಕ, ಮನೋರಂಜನಾ, ಕ್ರೀಡಾ, ಧಾರ್ಮಿಕ ಸೇರಿದಂತೆ ವಿವಿಧ ಶುಭ ಕಾರ್ಯಕ್ರಮಗಗಳು ಈಗಾಗಲೇ ನಿಗದಿಯಾಗಿವೆ. ಆದರೆ ಈ ಅನಿರೀಕ್ಷಿತ ಮಳೆ ಈಗಾಗಲೇ ನಿಗದಿಯಾಗಿರುವ ಶುಭ ಸಮಾರಂಭಗಳಿಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News