ಕುರಿಯ ಗಣಪತಿ ಶಾಸ್ತ್ರಿಗಳಿಗೆ ಶ್ರೀವಿದ್ಯಾಮಾನ್ಯ ಯಕ್ಷ ಪ್ರಶಸ್ತಿ ಪ್ರದಾನ
ಉಡುಪಿ : ಪಲಿಮಾರು ಮಠದ ಯತಿಗಳಾಗಿದ್ದ ಶ್ರೀವಿದ್ಯಾಮಾನ್ಯ ತೀರ್ಥರ ಆರಾಧನೆಯ ಸಂದರ್ಭದಲ್ಲಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥರು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಕುರಿಯ ಗಣಪತಿ ಶಾಸ್ತ್ರಿಗಳಿಗೆ ‘ಶ್ರೀವಿದ್ಯಾಮಾನ್ಯ ಯಕ್ಷಕಲಾ ಪ್ರಶಸ್ತಿ’ಯನ್ನು ನೀಡಿ ಅನುಗ್ರಸಿದರು.
ಬುಧವಾರ ಪಲಿಮಾರು ಮೂಲ ಮಠದಲ್ಲಿ ಜರಗಿದ ಜ್ಞಾನಸತ್ರದಲ್ಲಿ ಪೇಜಾವರ, ಅದಮಾರು, ಚಿತ್ರಾಪುರ ಹಾಗೂ ಪಲಿಮಾರು ಮಠದ ಕಿರಿಯ ಶ್ರೀ ಉಪಸ್ಥಿತರಿದ್ದು ಅನುಗ್ರಹಿಸಿದರು.
ಪ್ರಶಸ್ತಿಯು ೫೦,೦೦೦ ರೂ.ನಗದು ಪುರಸ್ಕಾರವನ್ನೊಳಗೊಂಡಿದೆ. ಕುರಿಯ ಗಣಪತಿ ಶಾಸ್ತ್ರಿಗಳು ಕಟೀಲು ಮೇಳದಲ್ಲಿ ೩ ದಶಕಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದರು.
ಪ್ರಶಸ್ತಿ ವಿತರಿಸಿ ಮಾತನಾಡಿದ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಕುರಿಯ ಗಣಪತಿ ಶಾಸ್ತ್ರಿಗಳು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಭಾಗವತರಾಗಿ, ನಿರ್ದೇಶಕರಾಗಿ ನೀಡಿದ ವಿಶೇಷ ಕೊಡುಗೆಯನ್ನು ಸ್ಮರಿಸಿಕೊಂಡು, ಅವರಿಗೆ ಉತ್ತರೋತ್ತರ ಶ್ರೇಯಸ್ಸನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸ್ತ್ರಿಗಳು,ಈ ಗೌರವ ಕುರಿಯ ಮನೆತನಕ್ಕೆ ಮುಖ್ಯವಾಗಿ ಕುರಿಯ ವಿಠಲ ಶಾಸ್ತ್ರಿಗಳಿಗೆ ಸಂದಿದೆ ಎಂದು ಧನ್ಯತೆಯಿಂದ ನುಡಿದರು.
ಇದೇ ಸಂದರ್ಭದಲ್ಲಿ ಮೈಸೂರಿನ ವಿದ್ವಾಂಸರಾದ ಡಾ.ಸಿ.ಎಚ್. ಶ್ರೀನಿವಾಸ ಮೂರ್ತಿ ಇವರಿಗೆ ಒಂದು ಲಕ್ಷ ರೂ.ಮೊತ್ತಗಳನ್ನೊಳಗೊಂಡ ‘ಪರವಿದ್ಯಾಮಾನ್ಯ ಪ್ರಶಸ್ತಿ’ ನೀಡಿ ಶ್ರೀಪಾದರು ಗೌರವಿಸಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದನಾ ಪತ್ರವನ್ನು ವಾಚಿಸಿದರು. ವಿದ್ವಾನ್ ಮೋಹನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.