ದಾದಿಯರು ಇಲ್ಲದೆ ಆರೋಗ್ಯ ಸೇವೆ ಪೂರ್ಣವಾಗದು: ಸಿಸ್ಟರ್ ಧನ್ಯಾ ದೇವಸಿಯ
ಬಂಟ್ವಾಳ, ಮೇ 13: ಆರೋಗ್ಯ ಕ್ಷೇತ್ರದಲ್ಲಿ ನರ್ಸ್ ಗಳ ಸೇವೆ ಅತೀ ಪ್ರಮುಖವಾಗಿದ್ದು, ನರ್ಸ್ ಗಳು ಇಲ್ಲದ ಆರೋಗ್ಯ ಸೇವೆ ಅಪೂರ್ಣವಾಗಲಿದೆ ಎಂದು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮುಖ್ಯ ನರ್ಸಿಂಗ್ ಅಧಿಕಾರಿ ಸಿಸ್ಟರ್ ಸಿಸ್ಟರ್ ಧನ್ಯಾ ದೇವಸಿಯ ಹೇಳಿದ್ದಾರೆ.
ವಿಶ್ವ ನರ್ಸ್ ಗಳ ದಿನದ ಪ್ರಯುಕ್ತ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದ ನರ್ಸ್ ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನರ್ಸ್ ಎಂಬುದು ಹುದ್ದೆ ಅಲ್ಲ. ಅದೊಂದು ಸೇವೆಯಾಗಿದೆ. ಹಾಗಾಗಿ ಎಲ್ಲಾ ನರ್ಸ್ ಗಳಿಗೆ ತಮ್ಮ ಮೇಲೆ ಬಗ್ಗೆ ಸ್ವಂತ ಹೆಮ್ಮೆ ಇರಬೇಕು. ನಮ್ಮ ಮೊದಲ ಮೌಲ್ಯ ಸೇವೆಯಾಗಿರಬೇಕು ಎಂದರು.
ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನರ್ಸ್ ಗಳು ಅಪಾರ ಪ್ರಮಾಣದಲ್ಲಿ ಸಂಕಷ್ಟವನ್ನು ಅನುಭವಿಸಿದ್ದಾರೆ. ಅವರು ಅನುಭವಿಸಿದ ಸಂಕಷ್ಟದ ಸಂಪೂರ್ಣ ಅರಿವು ಸಮಾಜಕ್ಕೆ ಇಲ್ಲವಾಗಿದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನರ್ಸ್ ಗಳ ಸೇವೆ ದೊಡ್ಡ ಕೊಡುಗೆ ನೀಡಿದೆ. ಹಾಗಾಗಿ ನರ್ಸ್ ಗಳ ಸೇವೆಯನ್ನು ಗೌರವದಿಂದ ಕಾಣಬೇಕು ಎಂದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನಿರ್ದೇಶಕ ವಂ. ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, ದಾದಿಯರು ಹೆಚ್ಚಿನ ಸಮಯ ತಮ್ಮ ಕುಟುಂಬದಿಂದ ದೂರ ಇದ್ದು ರೋಗಿಗಳನ್ನೇ ತಮ್ಮ ಕುಟುಂಬದವರಂತೆ ನೋಡುತ್ತಾ ಅವರ ಸೇವೆ ಮಾಡುತ್ತಾರೆ. ನಿಮ್ಮ ತ್ಯಾಗ, ರೋಗಿಗಳ ಮೇಲಿನ ಪ್ರೀತಿ ಮತ್ತು ನೀವು ಅವರಿಗೆ ಕೊಡುವಂತಹ ಗುಣಪಡಿಸುವ ಸ್ಪರ್ಶ ಪ್ರಶಂಸನೀಯ ಎಂದರು.
ರೋಗಿ ಎಲ್ಲರಿಂದ ಬಯಸುವುದು ನಗು ಮತ್ತು ತಾಳ್ಮೆಯಾಗಿದೆ. ನಾವು ರೋಗಿಗಳಾದಾಗ ಬೇರೆಯವರಿಂದ ಏನನ್ನು ಬಯಸುತ್ತೇವೆಯೋ ಅದನ್ನೇ ನಿಮ್ಮಿಂದ ರೋಗಿಗಳು ಬಯಸುತ್ತಾರೆ. ನೀವು ಮಾಡುವ ಸೇವೆ ಸಫಲವಾಗಲಿ. ನಿಮ್ಮ ಮತ್ತು ಕುಟುಂಬವನ್ನು ದೇವರು ರಕ್ಷಿಸಲಿ ಎಂದರು ಹಾರೈಸಿದರು.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹತ್ತು ವರ್ಷಗಳಿಂದ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ. ಮುಂದೆಯೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನರ್ಸಿಂಗ್ ಕಾಲೇಜು ಆರಂಭಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ದಾದಿಯರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಉತ್ತಮ ಸೇವೆ ಸಲ್ಲಿಸಿದ ದಾದಿಯರನ್ನು ಗೌರವಿಸಲಾಯಿತು.
ಫಾಮರ್ ಮುಲ್ಲರ್ ಆಸ್ಪತ್ರೆಯ ಮಾಜಿ ಸಿಎನ್ಒ ಸಿಸ್ಟರ್ ಜಾನೆಟ್ ಡಿಸೋಜ, ಡೀನ್ ಉರ್ಬನ್ ಜೆ.ಎ.ಡಿಸೋಜ ತುಂಬೆ, ತುಂಬೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತ ನಿರ್ದೇಶಕ ವಂ. ಫಾದರ್ ಫಾದರ್ ಸಿಲ್ವೇಸ್ಟರ್ ವಿನ್ಸೆಂಟ್ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿಸ್ಟರ್ ಸಿಲ್ವಿಯಾ ನಿಶಾ ಲೋಬೊ ವಂದಿಸಿದರು. ಅಲಿಷಾ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಅನುಷಾ ರೆಬೆಲ್ಲೋ ವರದಿ ವಾಚಿಸಿದರು.