ಮೇ 20ರಿಂದ 22ವರೆಗೆ ರಾಷ್ಟ್ರೀಯ ಹಲಸು ಮೇಳ - ನಿಟ್ಟೆ ಗ್ರಾಮೋತ್ಸವ
ಕಾರ್ಕಳ, ಮೇ 14: ಅಟಲ್ ಇಂಕ್ಯುಬೇಷನ್ ಸೆಂಟರ್, ಸುಫಲ ರೈತ ಉತ್ಪಾದಕ ಕಂಪೆನಿಯ ಆಶ್ರಯದಲ್ಲಿ ನಿಟ್ಟೆ ಗ್ರಾಮ ಪಂಚಾಯತ್, ಸಂಜೀವಿನಿ ಸ್ವಸಹಾಯ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ಮೇ 20ರಿಂದ 22ರವರೆಗೆ ರಾಷ್ಟ್ರೀಯ ಹಲಸು ಮೇಳ ಮತ್ತು ನಿಟ್ಟೆ ಗ್ರಾಮೋತ್ಸವವು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಜರುಗಲಿದೆ ಎಂದು ಸುಫಲ ರೈತ ಉತ್ಪಾದಕ ಕಂಪೆನಿಯ ಆಡಳಿತ ನಿರ್ದೇಶಕ ನವೀನ್ ನಾಯಕ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಹಲಸಿನ ವಿವಿಧ ತಳಿಗಳಿಂದ ಮೌಲ್ಯಾಧಾರಿತ ಉತ್ಪನ್ನ ತಯಾರಿ, ಸಂಸ್ಕರಣೆ, ಮಾರಾಟ ನಿಟ್ಟಿನಲ್ಲಿ ಹಾಗೂ ರೈತರು, ಉದ್ಯಮಿಗಳು, ಸಂಶೋಧಕರು, ವಿಜ್ಞಾನಿಗಳು, ಚಿಂತಕರು, ವಿದ್ಯಾರ್ಥಿಗಳು ಹಾಗೂ ಗ್ರಾಹಕರನ್ನು ಬೆಸೆಯುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ರಾಷ್ಟ್ರೀಯ ಹಲಸು ಮೇಳ ನಡೆಯಲಿದೆ.
ಹಲಸಿನ ಮೌಲ್ಯವರ್ಧನೆಯಲ್ಲಿ ಯಶಸ್ಸು ಕಂಡವರ ಕಥೆ, ಹಲಸಿನ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆ ಸಾಧ್ಯತೆಗಳ ಕುರಿತ ಉಪನ್ಯಾಸ, ಚರ್ಚೆ, ಪ್ರಾತ್ಯಕ್ಷಿಕೆಗಳು ರಾಷ್ಟ್ರೀಯ ಹಲಸು ಮೇಳದಲ್ಲಿ ನಡೆಯಲಿದೆ ಎಂದು ನವೀನ್ ನಾಯಕ್ ವಿವರಿಸಿದರು.
ಸಭಾ ಕಾರ್ಯಕ್ರಮ
ಮೇ 20ರಂದು ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಚಿವರಾದ ವಿ.ಸುನೀಲ್ ಕುಮಾರ್, ಶೋಭಾ ಕರಂದ್ಲಾಜೆ, ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿನಯ್ ಹೆಗ್ಡೆ ಉಪಸ್ಥಿತರಿರುವರು.
ಮಳಿಗೆಗಳು
ಹಲಸಿನ ವಿವಿಧ ಆಹಾರ ಉತ್ಪನ್ನ, ಮೌಲ್ಯವರ್ಧನೆಯ ಪ್ರಯೋಗ, ಯಂತ್ರೋಪಕರಣಗಳು ಸೇರಿದಂತೆ ನೂರಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ.
ನಿಟ್ಟೆ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಮೂರು ದಿನಗಳ ಕಾಲ ನಿಟ್ಟೆ ಗ್ರಾಮೋತ್ಸವ ನಡೆಯಲಿದೆ. ಈ ಪ್ರಯುಕ್ತ ಉಡುಪಿ ಹಾಗೂ ದ.ಕ. ಜಿಲ್ಲೆಯ ಆಸಕ್ತರೆಲ್ಲರಿಗೂ ವಿವಿಧ ಸ್ಪರ್ಧೆಗಳನ್ನು ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಸ್ಕೃತಿ ವೈವಿಧ್ಯ ವಿಷಯದ ಕುರಿತು ಅರ್ಧ ಗಂಟೆಯ ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆ, ಕಿರಿಯ ಮತ್ತು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ರಮವಾಗಿ ಹಣ್ಣುಗಳು, ಕರಾವಳಿ ವೈಶಿಷ್ಟ್ಯ, ಕರ್ನಾಟಕದ ಪ್ರವಾಸಿ ತಾಣ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆ, ಸಾರ್ವಜನಿಕರಿಗೆ ಮಾವು ಮತ್ತು ಹಲಸಿನ ಅಡುಗೆ, ಮಾವು ಮತ್ತು ಹಲಸಿನ ಪ್ರದರ್ಶನ ಏರ್ಪಡಿಸಲಾಗಿದೆ. ಬಳಿಕ ಪ್ರಸಿದ್ಧ ಸಾಂಸ್ಕೃತಿಕ ತಂಡಗಳಿಂದ ಸಾಂಸ್ಕೃತಿಕ ಹಾಸ್ಯ, ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ನವೀನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿಟ್ಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮಿತ್ರಾ ಲಕ್ಷ್ಮಣ್, ಎಐಸಿಯ ಪುನೀತ್ ರೈ, ಎಐಸಿಯ ಬಿಸಿನೆಸ್ ಡೆವೆಲಪ್ಮೆಂಟ್ ಎಕ್ಸಿಕ್ಯೂಟಿವ್ ಪ್ರವೀಣ್ ಡಿ. ಜಾದವ್ ಉಪಸ್ಥಿತರಿದ್ದರು.