ಇ.ಡಿ. ವಿಶೇಷ ಸರಕಾರಿ ಅಭಿಯೋಜಕರಾಗಿ ವಕೀಲ ಮಹೇಶ್ ಕಜೆ ನೇಮಕ
ಪುತ್ತೂರು, ಮೇ 14: ಜಾರಿ ನಿರ್ದೇಶನಾಲಯ (ಇ.ಡಿ.)ಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯ ಪ್ರಕರಣಗಳ ತನಿಖೆಗೆ ಸರಕಾರದ ಪರ ವಾದ ಮಂಡಿಸಲು ವಿಶೇಷ ಸರಕಾರಿ ಅಭಿಯೋಜಕರಾಗಿ ಪುತ್ತೂರಿನ ಹೆಸರಾಂತ ನ್ಯಾಯವಾದಿ ಮಹೇಶ್ ಕಜೆ ನೇಮಕಗೊಂಡಿದ್ದಾರೆ.
ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ರಿತೇಶ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬೆಂಗಳೂರಿನ ಶಾಂತಿನಗರ ಬಿಎಂಟಿಸಿ ಬಿ ಬ್ಲಾಕ್ನಲ್ಲಿರುವ ಬೆಂಗಳೂರು ವಲಯ ಇ.ಡಿ. ಕಚೇರಿಗೆ ಹಾಜರಾಗಿ ಇಡಿ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳನ್ನು ಸ್ವೀಕರಿಸುವಂತೆ ಸೂಚಿಸಿದ್ದಾರೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಕೇದಾರ ನಿವಾಸಿಯಾಗಿರುವ ವಕೀಲ ಮಹೇಶ್ ಕಜೆ, ಬೊಳುವಾರು ಕಜೆ ಲಾ ಛೇಂಬರ್ಸ್ನ ಮುಖ್ಯಸ್ಥ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿರುವ ಇವರು, ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮಾಜಿ ಸದಸ್ಯ, ಜೆಸಿಐ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.