ಅಡ್ಯಾರ್-ಹರೇಕಳ ತಾತ್ಕಾಲಿಕ ಸಂಪರ್ಕ ರಸ್ತೆ ಕುಸಿತ

Update: 2022-05-15 12:11 GMT

ಮಂಗಳೂರು : ಅಡ್ಯಾರ್-ಹರೇಕಳ-ಪಾವೂರು ಮಧ್ಯೆ ನೇತ್ರಾವತಿ ನದಿ ಮೂಲಕ ಕಲ್ಪಿಸಲಾದ ತಾತ್ಕಾಲಿಕ ಮಣ್ಣಿನ ಸಂಪರ್ಕ ರಸ್ತೆಯು ಶನಿವಾರ ತಡರಾತ್ರಿ ಕುಸಿದಿದೆ. ಇದರಿಂದ ಅತ್ತಿಂದಿತ್ತ ಸಾರ್ವಜನಿಕರ ಸಂಪರ್ಕಕ್ಕೆ ತೊಡಕಾಗಿವೆ.

ಕೆಲವು ತಿಂಗಳಿನಿಂದ ಈ ಮಣ್ಣಿನ ರಸ್ತೆಯಲ್ಲಿ ತಾತ್ಕಾಲಿಕವಾಗಿ ಚಲಿಸುತ್ತಿದ್ದ ವಾಹನಗಳ ಓಡಾಟವು ರವಿವಾರ ಮುಂಜಾನೆಯಿಂದ ಸಂಪೂರ್ಣ ಸ್ಥಗಿತಗೊಂಡಿವೆ. ಹಾಗಾಗಿ ಸಾರ್ವಜನಿಕರು ಎಂದಿನಂತೆ ದೋಣಿಯನ್ನೇ ಆಶ್ರಯಿಸತೊಡಗಿದ್ದಾರೆ.

ಕುಸಿತದ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಹರೇಕಳ ಪಾವೂರು ಕಡೆಯ ವಾಹನಿಗರು ಮುಂಜಾನೆಯ ವೇಳೆಗೆ ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಮತ್ತು ಸಾರ್ವಜನಿಕರು ನಡೆದುಕೊಂಡು ಅಡ್ಯಾರ್‌ ನತ್ತ ಆಗಮಿಸಿದ್ದರು. ಆದರೆ ಸಂಪರ್ಕ ರಸ್ತೆ ಕುಸಿದ ಬಗ್ಗೆ ತಿಳಿಯುತ್ತಲೇ ಮತ್ತೆ ವಾಪಸ್ ಹೋಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಹರೇಕಳ-ಪಾವೂರಿನಿಂದ ಅಡ್ಯಾರ್‌ಗೆ ಸಂಪರ್ಕ ಕಲ್ಪಿಸುವ ಅಣೆಕಟ್ಟು ಸಹಿತದ ಸೇತುವೆ ನಿರ್ಮಾಣ ಕಾಮಗಾರಿಯು ಭರದಿಂದ ಸಾಗುತ್ತಿದೆ. ಇದರ  ಪಕ್ಕದಲ್ಲೇ ಮಣ್ಣಿನ ರಸ್ತೆಯನ್ನು ನಿರ್ಮಿಸಲಾಗಿತ್ತು. ಈ ರಸ್ತೆಯಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನಗಳು ತಾತ್ಕಾಲಿಕ ನೆಲೆಯಲ್ಲಿ ಚಲಿಸುತ್ತಿತ್ತು. ಇದರಿಂದ ಈ ಭಾಗದ ಸಾವಿರಾರು ಮಂದಿಗೆ ತುಂಬಾ ಅನುಕೂಲವಾಗುತ್ತಿತ್ತು.

ಆದರೆ ಶನಿವಾರ ತಡರಾತ್ರಿ ವೇಳೆ ಅಡ್ಯಾರ್ ಸಮೀಪದಲ್ಲೇ ಪಶ್ಚಿಮಾಭಿಮುಖವಾಗಿ ನೀರಿನ ಹರಿವು ಹೆಚ್ಚಾಗಿ ಮಣ್ಣು ಕೊಚ್ಚಿ ಹೋಗಿವೆ. ಹಾಗಾಗಿ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ. ಜನರು ಅನಿವಾರ್ಯವಾಗಿ ದೋಣಿ ಮೂಲಕ ಜನರು ಸಂಪರ್ಕ ಸಾಧಿಸುತ್ತಿದ್ದಾರೆ.

ರಾಜ್ಯದ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 192 ಕೋ.ರೂ. ವೆಚ್ಚದಲ್ಲಿ ವೆಂಟೆಡ್ ಡ್ಯಾಂ ಸಹಿತ 520 ಮೀ. ಉದ್ದದ ಮತ್ತು 7.5 ಮೀ. ಅಗಲದ ಸೇತುವೆಯನ್ನು (೧.೨೫ ಮೀ. ಅಗಲದ ಫುಟ್‌ಪಾತ್ ಸಹಿತ) ನಿರ್ಮಿಸಲಾಗುತ್ತಿದೆ. ಈಗಾಗಲೆ ಈ ಯೋಜನೆಯ ಕಾಮಗಾರಿಯು ಶೇ.೯೦ರಷ್ಟು ಪೂರ್ಣಗೊಂಡಿವೆ.

ಡ್ಯಾಂ ಸಹಿತ ಸೇತುವೆ ಕಾಮಗಾರಿ ಪೂರ್ಣಗೊಂಡರೆ ಹರೇಕಳ, ಪಾವೂರು, ಬೋಳಿಯಾರು, ಕೊಣಾಜೆ, ಅಂಬ್ಲಮೊಗರು, ಮುನ್ನೂರು, ಬೆಳ್ಮ, ಕಿನ್ಯ, ಮಂಜನಾಡಿ, ಕುರ್ನಾಡು ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ.

ಈ ಭಾಗದ ಜನರು ಮಂಗಳೂರಿಗೆ ಸುತ್ತಿ ಬಳಸಿ ಬರುವುದು ತಪ್ಪಲಿದೆ. ಅಲ್ಲದೆ ಉಳ್ಳಾಲ ತಾಲೂಕು ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಲಕ್ಷಾಂತರ ಮಂದಿಗೆ ಕುಡಿಯುವ ನೀರಿನ ಪೂರೈಕೆಯೂ ಆಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News