ತ್ರಿಪುರಾ: 11 ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕಾರ

Update: 2022-05-16 18:26 GMT

ಅಗರ್ತಲಾ, ಮೇ 16: ಮಾಣಿಕ್ ಸಹಾ ಸಂಪುಟದ ಒಟ್ಟು 11 ಶಾಸಕರು ಅಗರ್ತಲ ರಾಜಭವನದಲ್ಲಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಎಸ್.ಎನ್. ಆರ್ಯ ಅವರು ಸಂಪುಟ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಮಾಣಿಕ್ ಸಹಾ, ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದೇವ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ತ್ರಿಪುರಾದ ಸಂಪುಟ ಸಚಿವರಾಗಿ ಬಿಜೆಪಿಯ 9 ಹಾಗೂ ಇಂಡೀಜಿನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್ಟಿ)ದ ಇಬ್ಬರು ಸೇರಿದಂತೆ ಒಟ್ಟು 11 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ರವಿವಾರ ಬೆಳಗ್ಗೆ ಮಾಣಿಕ್ ಸಹಾ ಅವರು ತ್ರಿಪುರಾದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಬಿಪ್ಲಬ್ ಕುಮಾರ್ ದೇವ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಪರಿವೀಕ್ಷಕರ ಉಪಸ್ಥಿತಿಯಲ್ಲಿ ಶನಿವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಣಿಕ್ ಸಹಾ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ವಿಧಾನ ಸಭೆ ಚುನಾವಣೆಗೆ ಒಂದು ವರ್ಷ ಇರುವಾಗ ಬಿಪ್ಲಬ್ ಕುಮಾರ್ ದೇವ್ ಅವರ ಬದಲಿಗೆ ಮಾಣಿಕ್ ಸಹಾ ಅವರನ್ನು ನೇಮಕ ಮಾಡುವ ಮೂಲಕ ನಾಯಕತ್ವವನ್ನು ಬದಲಾಯಿಸಲು ಬಿಜೆಪಿ ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News