×
Ad

ರಾತ್ರೋರಾತ್ರಿ ನೋಟ್ ಬ್ಯಾನ್ ಮಾಡಿದ ಹಾಗೆ ಹಿಜಾಬ್ ಬ್ಯಾನ್ ಮಾಡಿದ್ದಾರೆ: ಮಂಗಳೂರು ವಿವಿ ಕಾಲೇಜು ವಿದ್ಯಾರ್ಥಿಗಳು

Update: 2022-06-03 15:35 IST

ಮಂಗಳೂರು: ರಾತ್ರೋರಾತ್ರಿ ನೋಟ್ ಬ್ಯಾನ್ ಮಾಡಿದ ಹಾಗೆ ಹಿಜಾಬ್ ಬ್ಯಾನ್ ಮಾಡಿದ್ದಾರೆ, ಹೈಕೋರ್ಟ್ ಆದೇಶ ಅನ್ವಯಿಸದಿದ್ರೂ ಹಿಜಾಬ್ ಗೆ ನಿರ್ಬಂಧ ಹೇರಿದ್ದಾರೆ, ವಿದ್ಯಾರ್ಥಿಗಳು ದೇಶ ಕಟ್ಟುವವರು ಎಂದು ಭಾಷಣ ಮಾತ್ರ ಮಾಡಿ ಪ್ರಯೋಜನ ಇಲ್ಲ ಎಂದು ಮಂಗಳೂರು  ವಿವಿ ಕಾಲೇಜು ವಿದ್ಯಾರ್ಥಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿವಿ ವಿದ್ಯಾರ್ಥಿ ಸಮನ್ವಯ ಸಮಿತಿಯ ಮುಖ್ಯಸ್ಥ ರಿಯಾಝ್ ಪುತ್ತೂರು ಮಾತನಾಡಿ, ಪದವಿ ಕಾಲೇಜುಗಳಲ್ಲಿ ಅನ್ವಯವಾಗದ ಹೈಕೋರ್ಟ್ ತೀರ್ಪುವನ್ನು ದುರುಪಯೋಗ ಪಡಿಸಿಕೊಂಡು ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲರು, ಸಿಂಡಿಕೇಟ್ ಸದಸ್ಯರ ಮೇಲೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕು. ವಿದ್ಯಾರ್ಥಿಗಳಿಗೆ ಶಿರವಸ್ತ್ರದೊಂದಿಗೆ ತರಗತಿಗೆ ಬರಲು ಅವಕಾಶ ನೀಡಬೇಕು. ಈ ರೀತಿಯಲ್ಲಿ ನಡೆಯದೇ ಹೋದರೆ ಸಂತ್ರಸ್ತ ವಿದ್ಯಾರ್ಥಿಗಳ ಜತೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು  ಸಮಿತಿ ಹೋರಾಟದ ಹಾದಿಯನ್ನು ಹಿಡಿಯುತ್ತದೆ ಎಂದರು.‌

ಮಂಗಳೂರು ವಿವಿ ಕಾಲೇಜಿನ ವಿದ್ಯಾರ್ಥಿನಿ ಗೌಸಿಯಾ ಮಾತನಾಡಿ, ಕಾಲೇಜಿನ ಮಾರ್ಗಸೂಚಿ ಪುಸ್ತಕದಲ್ಲಿ ಶಿರವಸ್ತ್ರಕ್ಕೆ ಅವಕಾಶವಿದೆ ಎಂದು ಹೇಳಲಾಗಿದೆ. ಹೈಕೋರ್ಟ್ ಆದೇಶವು ಶೈಕ್ಷಣಿಕ ಅವಧಿಯ ಮಧ್ಯದಲ್ಲಿ ಸಮವಸ್ತ್ರದಲ್ಲಿ ಬದಲಾವಣೆ ತರಲು ತಿಳಿಸಿಲ್ಲ. ಆದೇಶವು ಕಾಲೇಜಿನ ಆವರಣದಲ್ಲಿ ಹಿಜಾಬ್‌ಗೆ ನಿರ್ಬಂಧ ವಿಧಿಸಿಲ್ಲ. ಆದರೆ ಪ್ರಿನ್ಸಿಪಾಲರು ಮಾತ್ರ ಹೈಕೋರ್ಟ್ ಆದೇಶವಿದೆ. ಸಿಂಡಿಕೇಟ್‌ನಲ್ಲಿ ಹಿಜಾಬ್ ಪ್ರವೇಶ ನಿಷೇಧದ ಕುರಿತು ತೀರ್ಮಾನ ಮಾಡಲಾಗಿದೆ ಎಂದು ತರಗತಿಯಲ್ಲಿ ಕೂರಲು ಅವಕಾಶ ನೀಡುತ್ತಿಲ್ಲ. ಲೈಬ್ರೆರಿಯಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ಕೂಡ ಕಸಿದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ಹಲವು ವರ್ಷಗಳಿಂದ ಹಿಜಾಬ್ ಕುರಿತು ಕಾಲೇಜಿನಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಹೈಕೋರ್ಟ್ ತೀರ್ಪು ಬಂದ ಬಳಿಕನೂ ಎರಡು ತಿಂಗಳುಗಳ ಕಾಲ ಕಾಲೇಜಿಗೆ ಹಿಜಾಬ್ ಹಾಕಿಕೊಂಡು ಬರುತ್ತಿದ್ದೆವು. ಆದರೆ ಮೇ 16ರಂದು ವಾಟ್ಸಾಫ್ ಗ್ರೂಪ್‌ನಲ್ಲಿ ಹಿಜಾಬ್‌ಗೆ ಅವಕಾಶ ಇಲ್ಲ ಎಂದು ಮೆಸೇಜ್ ಕಳುಹಿಸಲಾಗಿದೆ. ಈ ಕುರಿತು ಪ್ರಾಂಶುಪಾಲರಲ್ಲಿ  ಆದೇಶ ಕೇಳಿದ್ದೇವೆ.  ವಿವಿಯ ಕುಲಪತಿ ಜತೆಯಲ್ಲಿ ಮಾತನಾಡಿ ಎಂದರು. ಈ ಬಳಿಕ ಕುಲಪತಿಯವರು ಡಿಸಿ ಅವರಲ್ಲಿ ಮಾತನಾಡಲು ತಿಳಿಸಿದರು.  ಇದೇ ರೀತಿ ಎಲ್ಲ ಕಡೆಯಿಂದಲೂ ಮಾತನಾಡಿ ದ್ದೇವೆ. ಹೈಕೋರ್ಟ್ ಆದೇಶದ ಪ್ರತಿಯನ್ನು ಇಟ್ಟುಕೊಂಡು ಮನವಿ ಕೊಟ್ಟಿದ್ದೇವೆ. ಆದರೂ ಕೂಡ ತರಗತಿಯಲ್ಲಿ ಹಿಜಾಬ್ ಹಾಕಿ ಕೂರಲು ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಎಬಿವಿಪಿ ಸಂಘಟನೆಯ ಕೃತ್ಯ: ಮಂಗಳೂರು ವಿವಿ ಕಾಲೇಜಿನ ಹಿಜಾಬ್ ವಿಚಾರದಲ್ಲಿ  ಎಬಿವಿಪಿ ವಿದ್ಯಾರ್ಥಿ ಸಂಘಟನೆಯವರು ಅನಗತ್ಯವಾಗಿ ಸಮಸ್ಯೆಯನ್ನು  ಸೃಷ್ಟಿಮಾಡಿದ್ದಾರೆ. ಪ್ರಾಂಶುಪಾಲರಿಗೆ ಒತ್ತಡ ಹಾಕಿಕೊಂಡು ಅವರಿಗೆ ಮನವಿ ಪತ್ರವನ್ನು ನೀಡಿ ಅವರು ವಿವಿಯ ಸಿಂಡಿಕೇಟ್ ಸಭೆಗೆ ಪತ್ರವನ್ನು ಒಪ್ಪಿಸಿ ಇಂತಹ ಸಮಸ್ಯೆಗೆ ಕಾರಣಕರ್ತರಾಗಿದ್ದಾರೆ ಎಂದು ವಿದ್ಯಾರ್ಥಿನಿ ಗೌಸಿಯಾ ಆರೋಪಿಸಿದರು.

ಇದರ ನಡುವೆ ಎಬಿವಿಪಿ ಸಂಘಟನೆಯವರು ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಫೋಟೋ, ವಿಡಿಯೋ ಮಾಡುವುದು, ಧರ್ಮ ನಿಂದನೆ, ಜಾತಿ ನಿಂದನೆ, ಹಿಂಬಾಲಿಸಿಕೊಂಡು ಪ್ರಚೋದನೆ ನೀಡುವಂತಹ ಕೆಲಸವನ್ನು ಮಾಡುತ್ತಿದ್ದು, ಈ ಕುರಿತು ಪೊಲೀಸ್ ಇಲಾಖೆಗೆ ದೂರು ಕೂಡ ನೀಡಲಾಗಿದೆ ಎಂದು ಅವರು ಹೇಳಿದರು.

ಹೆತ್ತವರಿಗೆ ತಿಳಿಸಿಲ್ಲ: ಹಿಜಾಬ್ ನಿಷೇಧದಿಂದಾಗಿ ನಮ್ಮನ್ನು ತರಗತಿಗೆ ಕೂರಲು ಅವಕಾಶ ನೀಡದೇ ಇರುವ ವಿಚಾರವನ್ನು ಕಾಲೇಜಿನ ಪ್ರಾಂಶುಪಾಲರು, ಆಡಳಿತ ವರ್ಗದವರು ಯಾವುದೇ ರೀತಿಯಿಂದಲ್ಲೂ ಕರೆ ಮಾಡಿ ನಮ್ಮ ಹೆತ್ತವರಿಗೆ ಮಾಹಿತಿ ತಲುಪಿಸಿಲ್ಲ. ಮಾಧ್ಯಮಗಳಲ್ಲಿ ಬಂದ ವಿಚಾರದಿಂದ ಹೆತ್ತವರು ಕಾಲೇಜಿಗೆ ಬಂದು ಈ ವಿಚಾರದಲ್ಲಿ ವಿಚಾರಿಸಿದಾಗಲೂ ಸರಿಯಾಗಿ ಸ್ಪಂದನೆ ನೀಡಿಲ್ಲ. ಹಿಜಾಬ್ ವಿಚಾರದಲ್ಲಿ ಸಭೆಗಳು ಕಾಲೇಜಿನಲ್ಲಿ ನಡೆದಾಗಲೂ ನಮ್ಮನ್ನು ಅದಕ್ಕೆ ಆಹ್ವಾನಿಸದೇ  ಏಕ ಮುಖವಾಗಿ ಸಭೆ ನಡೆಸುವ ಕೆಲಸ ಮಾಡಲಾಗಿದೆ ಎಂದು ಗೌಸಿಯಾ ಆರೋಪಿಸಿದರು.

ವಿದ್ಯಾರ್ಥಿಗಳಾದ  ಶಷ್ಮಾ, ಮೌಶಿತಾ, ಸಮನ್ವಯ ಸಮಿತಿಯ ಸಂಯೋಜಕ ಅಶಾಮ್ ಇದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News