​ನರಮೇಧದ ಹೊಣೆಯಿಂದ ನುಣುಚಿಕೊಳ್ಳುತ್ತಿರುವ ಪಾಕಿಸ್ತಾನ: ಭಾರತದ ವಾಗ್ದಾಳಿ

Update: 2022-06-03 18:11 GMT

ವಿಶ್ವಸಂಸ್ಥೆ, ಜೂ.3: ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಜಮ್ಮು-ಕಾಶ್ಮೀರದ ವಿಷಯವನ್ನು ಎತ್ತಿರುವ ಪಾಕಿಸ್ತಾನವನ್ನು ತೀವ್ರ ತರಾಟೆಗೆತ್ತಿಕೊಂಡಿರುವ ಭಾರತ, ಒಂದು ದೇಶವು ನರಮೇಧ ಹಾಗೂ ಜನಾಂಗೀಯ ಶುದ್ಧೀಕರಣದಂತಹ ಗಂಭೀರ ಅಪರಾಧದಿಂದ ಯಾವ ರೀತಿ ತಪ್ಪಿಸಿಕೊಳ್ಳಬಹುದು ಎಂಬುದಕ್ಕೆ ಪಾಕಿಸ್ತಾನ ಜೀವಂತ ಉದಾಹರಣೆಯಾಗಿದೆ ಎಂದಿದೆ.

ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರತ್ಯುತ್ತರ ನೀಡಲು ದೃಢ ಮತ್ತು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುವುದನ್ನು ಭಾರತ ಮುಂದುವರಿಸಲಿದೆ ಎಂದು ಹೇಳಿದೆ. ಗುರುವಾರ ಭದ್ರತಾ ಸಮಿತಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯ ಕಾನೂನು ಸಲಹೆಗಾರರಾದ ಡಾ. ಕಾಜಲ್ ಭಟ್ ‘ಪಾಕ್ ಪ್ರತಿನಿಧಿ ಹರಡಿದ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರಕ್ಕೆ ಪ್ರತಿಕ್ರಿಯಿಸಲು ಈ ವೇದಿಕೆಯನ್ನು ಒತ್ತಾಯಪೂರ್ವಕ ಬಳಸಬೇಕಾಗಿದೆ ಎಂದರು. ಈದಿನ ಅಂತರಾಷ್ಟ್ರೀಯ ನಿಯಮಗಳ ಗಂಭೀರ ಉಲ್ಲಂಘನೆಗಾಗಿ ಉತ್ತರದಾಯಿತ್ವವನ್ನು ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ವಿಪರ್ಯಾಸವೆಂದರೆ, ನರಮೇಧದ ನಾಚಿಕೆಗೇಡಿನ ಇತಿಹಾಸ ಹೊಂದಿರುವ ಪಾಕಿಸ್ತಾನ 50 ವರ್ಷದ ಹಿಂದೆ ಪೂರ್ವಪಾಕಿಸ್ತಾನ(ಈಗ ಬಾಂಗ್ಲಾದೇಶ)ದಲ್ಲಿ ಎಸಗಿದ ನರಮೇಧದ ಬಗ್ಗೆ ಕ್ಷಮೆ ಯಾಚನೆ ಅಥವಾ ಹೊಣೆ ಹೊರುವುದು ಹಾಗಿರಲಿ, ಅದನ್ನು ಒಪ್ಪಿಕೊಳ್ಳಲೂ ತಯಾರಿಲ್ಲ. ಕನಿಷ್ಟ ಈ ವೇದಿಕೆಯ ಘನತೆಗೆ ಧಕ್ಕೆ ಬರುವ ಕಾರ್ಯದಿಂದಾದರೂ ಅವರು ದೂರ ಇರಲಿ ಎಂದರು.

ಪಾಕಿಸ್ತಾನದ ಸೇನೆಯ ಆಪರೇಷನ್ ಸರ್ಚ್‌ಲೈಟ್ ಎಂಬ ಹೆಸರಿನ ಕಾರ್ಯಾಚರಣೆಯ ಮೂಲಕ ವ್ಯವಸ್ಥಿತ ನರಮೇಧ ಎಸಗಲಾಗುತ್ತಿದೆ. ಅಮಾಯಕ ಮಹಿಳೆಯರು, ಮಕ್ಕಳು, ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಗಳನ್ನು ಯುದ್ಧದ ಆಯುಧಗಳಂತೆ ಬಳಸಲಾಗುತ್ತಿದೆ ಎಂದರು. ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ತಥಾಕಥಿತ ಬದಲಾವಣೆಯ ಬಗ್ಗೆಯೂ ಪಾಕ್ ಪ್ರತಿನಿಧಿ ಮಾತನಾಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತ ಸದಸ್ಯರನ್ನು ಗುರಿಯಾಗಿಸಿಕೊಂಡಿರುವ ಪಾಕ್ ಬೆಂಬಲಿತ ಭಯೋತ್ಪಾದಕರು ಮಾತ್ರ ಜನಸಂಖ್ಯಾ ಬದಲಾವಣೆಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

ಈ ಪ್ರದೇಶದಲ್ಲಿ ಶಾಂತಿ ನೆಲೆಸಲು ಪಾಕ್ ಮಾಡಬೇಕಿರುವ ಏಕೈಕ ಉಪಕಾರವೆಂದರೆ, ಭಾರತ ಮತ್ತದರ ಜನರನ್ನು ಗುರಿಯಾಗಿಸಿಕೊಂಡ ಉಗ್ರರನ್ನು ಬೆಂಬಲಿಸದೆ ಇರುವುದು ಎಂದ ಅವರು, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಈ ಹಿಂದೆ, ಇಂದು ಮತ್ತು ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ . ಪಾಕ್ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿರುವ ಪ್ರದೇಶವೂ ಇದರಲ್ಲಿ ಸೇರಿದೆ ಎಂದರು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ್ದ ಭಾರತದ ವಿದೇಶ ವ್ಯವಹಾರ ಇಲಾಖೆಯ ಸಹಾಯಕ ಸಚಿವ ಡಾ.ರಾಜ್ ಕುಮಾರ್ ರಂಜನ್ ಸಿಂಗ್, ಹೊಣೆಗಾರಿಕೆ ಮತ್ತು ನ್ಯಾಯವನ್ನು ರಾಜಕೀಯ ಉದ್ದೇಶಗಳಿಗೆ ಜೋಡಿಸಲಾಗದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News