ಮಂಗಳೂರು: ಇಎಸ್ಐ ಫಾರ್ಮಸಿಸ್ಟ್ ವಿಷ್ಣುಮೂರ್ತಿ ಎಸಿಬಿ ಬಲೆಗೆ
ಮಂಗಳೂರು, ಜೂ.4: ವೈದ್ಯಕೀಯ ಚಿಕಿತ್ಸೆಯ ಬಿಲ್ ಮಂಜೂರು ಮಾಡಲು ಬಡ ಮಹಿಳೆಯೊಬ್ಬರಿಂದ 2 ಸಾವಿರ ರೂ. ಲಂಚ ಪಡೆದ ಇಎಸ್ಐ ಚಿಕಿತ್ಸಾಲಯದ ಹಿರಿಯ ಫಾರ್ಮಸಿಸ್ಟ್ ವಿಷ್ಣುಮೂರ್ತಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಬಿದ್ದ ಪ್ರಕರಣ ನಡೆದಿದೆ.
ಪಣಂಬೂರು-ಬೈಕಂಪಾಡಿಯಲ್ಲಿರುವ ಕಾರ್ಮಿಕ ಸಚಿವಾಲಯದ ಕಚೇರಿಯಲ್ಲಿ ಆರೋಪಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಪಣಂಬೂರು ನಿವಾಸಿ ಪ್ರಶಾಂತ್ ಕುಮಾರ್ ಅವರು ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಪತ್ನಿ ಬೇಕರಿ ಕೆಲಸ ನಿರ್ವಹಿಸುತ್ತಿದ್ದು ಇಎಸ್ಐ ಸದಸ್ಯತ್ವ ಹೊಂದಿದ್ದಾರೆ. ಪ್ರಶಾಂತ್ ಕುಮಾರ್ ಅವರು ಕೆಎಂಸಿ ವೈದ್ಯರ ಸಲಹೆಯಂತೆ ಇಎಸ್ಐ ಡಿಸ್ಪೆನ್ಸರಿಯಿಂದ ಮಾತ್ರೆ ಮತ್ತು ಇಂಜೆಕ್ಷನ್ ಪಡೆದುಕೊಂಡು ಹೋಗುತ್ತಿದ್ದರು. ಇಎಸ್ಐ ಡಿಸ್ಪೆನ್ಸರಿಯಲ್ಲಿ ಔಷಧಿ ಇಲ್ಲದಿದ್ದರೆ ಮೆಡಿಕಲ್ನಿಂದ ಖರೀದಿಸಿ ಆ ಬಿಲ್ಗಳನ್ನು ಇಎಸ್ಐ ಡಿಸ್ಪೆನ್ಸರಿಗೆ ನೀಡುತ್ತಿದ್ದರು. ಈ ಬಿಲ್ ಮಂಜೂರಾತಿಗೆ ಪ್ರಶಾಂತ್ ಕುಮಾರ್ 2 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸಿಬಿ ಕಚೇರಿಯಲ್ಲಿ ದೂರು ದಾಖಲಾಗಿತ್ತು. ಮಧ್ಯಾಹ್ನ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಎಸಿಬಿ ಪಶ್ಚಿಮ ವಲಯದ ಪೊಲೀಸ್ ಅಧೀಕ್ಷಕ ಸಿ.ಎ.ಸೈಮನ್ ಅವರ ಮಾರ್ಗದರ್ಶನದಲ್ಲಿ ಎಸಿಬಿ ದಕ್ಷಿಣ ಕನ್ನಡ ಡಿವೈಎಸ್ಪಿ ಕೆಸಿ ಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಮತ್ತು ಗುರುರಾಜ್ ಹಾಗೂ ಸಿಬ್ಬಂದಿ ಹರಿಪ್ರಸಾದ್, ರಾಧಾಕೃಷ್ಣ ಡಿ.ಎ., ರಾಧಾಕೃಷ್ಣ ಕೆ., ಉಮೇಶ, ವೈಶಾಲಿ. ಗಂಗಣ್ಣ. ಆದರ್ಶ. ರಾಕೇಶ್, ಭರತ್, ಮೋಹನ್ ಸಾಲಿಯಾನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.