ಮಮತಾ ಬ್ಯಾನರ್ಜಿಗೆ ನಿಂದನೆ ಪ್ರಕರಣ: ಬಂಧಿತ ಯುಟ್ಯೂಬರ್ ರೊದ್ದುರ್ ರಾಯ್ ನನ್ನು ಕೊಲ್ಕತ್ತಾಕ್ಕೆ ಕರೆ ತಂದ ಪೊಲೀಸರು
ಕೋಲ್ಕತಾ, ಜೂ. 9: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ನಿಂದಿಸಿದ ಆರೋಪದಲ್ಲಿ ಕೋಲ್ಕತಾ ಪೊಲೀಸರು ಗೋವಾದಲ್ಲಿ ಬಂಧಿಸಿದ ಯುಟ್ಯೂಬರ್ ಹಾಗೂ ವ್ಲೋಗರ್ ರೊದ್ದುರ್ ರಾಯ್ಯನ್ನು ಟ್ರಾನ್ಸಿಟ್ ಡಿಮಾಂಡ್ (ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತರಲು ಅನುಮತಿ)ನಲ್ಲಿ ಬುಧವಾರ ಸಂಜೆ ಕೋಲ್ಕತ್ತಾಗೆ ಕರೆ ತರಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ನಿಂದಿಸಿದ ಆರೋಪದಲ್ಲಿ ಕೋಲ್ಕತ್ತಾ ಪೊಲೀಸರು ರಾಯ್ ನನ್ನು ಗೋವಾದಿಂದ ಜೂನ್ 7ರಂದು ಬಂಧಿಸಿದ್ದರು.
ಗಾಯಕ ಕೆ.ಕೆ. ನಿಧನರಾದ ಬಳಿಕ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಮುಖ್ಯಮಂತ್ರಿ ಹಾಗೂ ಇತರ ಸಚಿವರ ವಿರುದ್ಧ ಅವಹೇಳನಕಾರಿ ಭಾಷೆ ಬಳಸಲಾಗಿದೆ ಎಂದು ಆರೋಪಿಸಿ ಟಿಎಂಸಿಯ ರಾಜ್ಯ ಸಭಾ ಸದಸ್ಯ ಸಂತನು ಸೇನ್ ಕೊಲ್ಕತ್ತಾದ ಪೊಲೀಸ್ ಆಯುಕ್ತರಲ್ಲಿ ರಾಯ್ ವಿರುದ್ಧ ಜೂನ್ 3ರಂದು ದೂರು ಸಲ್ಲಿಸಿದ್ದರು.