ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಗೆ ಎಸ್ಡಿಪಿಐ ಖಂಡನೆ
ಮಂಗಳೂರು : ಅನಗತ್ಯವಾಗಿ ಬಾಲ ಬಿಚ್ಚಿದರೆ ಮಂಗಳೂರಿಗೂ ಬುಲ್ಡೋಝರ್ ಮಾಡೆಲ್ ಬರುತ್ತೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯ ಸಂವಿಧಾನ ವಿರೋಧಿ ಹೇಳಿಕೆಗೆ ಎಸ್ಡಿಪಿಐ ದ.ಕ. ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಹಾಗೂ ರೈತ ಮುಖಂಡ ವಿಕ್ಟರ್ ಮಾರ್ಟೀಸ್ ಖಂಡಿಸಿದ್ದಾರೆ.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ಉದ್ದೇಶದಿಂದ ಇಂತಹ ಅತಿರೇಕದ ಹೇಳಿಕೆಗಳು ಪರಸ್ಪರ ಗಲಭೆ ನಡೆಸುವ ಸಂಘ ಪರಿವಾರದ ಯೋಜನೆಯ ಭಾಗವಾಗಿದೆ. ಬುಲ್ಡೋಝರ್ ಮಾಡೆಲನ್ನು ಪಿಎಸ್ಐ, ಶೇ.೪೦ ಕಮಿಷನ್, ಬಿಡಿಎ, ರಫೇಲ್ ಹಗರಣ, ಅಧಿಕಾರಕ್ಕಾಗಿ ಕೋಟಿಗಟ್ಟಲೆ ಖರ್ಚು ಮಾಡಿ ಶಾಸಕರನ್ನು ಖರೀದಿಸಿದ ಬಿಜೆಪಿ ನಾಯಕರ ಮನೆಗಳಿಗೆ ಕಳುಹಿಸಿ ಅಕ್ರಮ ಭ್ರಷ್ಟಾಚಾರದ ಹಣದಿಂದ ಕಟ್ಟಿರುವ ಮನೆಗಳಿಗೆ, ಬೇನಾಮಿ ಆಸ್ತಿಗಳಿಗೆ ಬುಲ್ಡೋಝರ್ ಮಾಡೆಲ್ ಬಳಕೆಯಾಗಲಿ ಎಂದು ಆಗ್ರಹಿಸಿದ್ದಾರೆ.
ನ್ಯಾಯಾಲಯವು ಆರೋಪಿಯನ್ನು ಅಪರಾಧಿ ಎಂದು ತೀರ್ಪು ನೀಡುವ ತನಕ ಆತನ ವಿರುದ್ಧ ಸರಕಾರ ಅಥವಾ ಯಾರೇ ಆದರೂ ಯಾವುದೇ ಕ್ರಮ ಕೈಗೊಳ್ಳುವುದು ಸಂವಿಧಾನ ಬಾಹಿರವಾಗಿದೆ. ಒಂದು ವೇಳೆ ನ್ಯಾಯಾಲಯದ ತೀರ್ಪಿನ ಮೊದಲೇ ಕಾನೂನು ವಿರೋಧಿಯಾಗಿ ಬುಲ್ಡೋಝರ್ ಮಾಡೆಲ್ ಬಂದಲ್ಲಿ ಸಂವಿಧಾನ ಬದ್ದವಾಗಿಯೇ ಅದನ್ನು ಭ್ರಷ್ಟ, ಮತ್ತು ಕೋಮು ಪೀಡಿತ ಬಿಜೆಪಿ ನಾಯಕರ ಮನೆಗಳಿಗೆ ಕಳುಹಿಸಲು ಜಿಲ್ಲೆಯ ಜನತೆ ಸನ್ನದ್ದರಾಗಿದ್ದಾರೆ ಎಂದು ವಿಕ್ಟರ್ ಮಾರ್ಟೀಸ್ ತಿಳಿಸಿದ್ದಾರೆ.