ಬುಲ್ಡೋಜರ್‌ಗೆ ಬಲಿಯಾದ ಕಾನೂನು

Update: 2022-06-14 03:56 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈ ದೇಶದಲ್ಲಿ ಇನ್ನು ಮುಂದೆ ಶಾಂತಿಯುತ ಪ್ರತಿಭಟನೆ ಮಾಡುವುದು ಕೂಡಾ ಅಪರಾಧ. ಚಳವಳಿ ಮಾಡುವವರನ್ನು ಬಂಧಿಸುವ, ಖಟ್ಲೆ ಹಾಕಿ ಕೋರ್ಟಿಗೆ ಕಳುಹಿಸುವ ದಿನಗಳು ಮುಗಿದು ಹೋದವು. ಈಗ ಏನಿದ್ದರೂ ಬುಲ್ಡೋಜರ್ ದಾಳಿ. ಇದಕ್ಕೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ.ಅಲ್ಲಿನ ಮುಖ್ಯಮಂತ್ರಿ ಆದಿತ್ಯನಾಥ್ ಅಪರಾಧಿಗಳು ಯಾರೆಂದು ತಾನೇ ತೀರ್ಮಾನಿಸಿ ಅವರ ಅಧಿಕೃತ ಮನೆಗಳ ಮೇಲೆ ಬುಲ್ಡೋಜರ್ ಬಿಟ್ಟು ನೆಲಸಮಗೊಳಿಸುತ್ತಾರೆ. ಅಲ್ಲಿ ಪೊಲೀಸ್ ವ್ಯವಸ್ಥೆ, ನ್ಯಾಯಾಲಯ, ಕಾನೂನು ಆಡಳಿತ ಎಲ್ಲವೂ ಬುಲ್ಡೋಜರ್ ಅಡಿ ಸಿಕ್ಕಿ ಪುಡಿ ಪುಡಿಯಾಗುತ್ತಿವೆ. ಮುಂದಿನ ದಿನಗಳಲ್ಲಿ ಬುಲ್ಡೋಜರ್ ಪ್ರಯೋಗ ಭಾರತದಾದ್ಯಂತ ಜಾರಿಯಾದರೆ ಅಚ್ಚರಿ ಪಡಬೇಕಿಲ್ಲ.

ಬಿಜೆಪಿಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್‌ರ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಯ ವಿರುದ್ಧ ದೇಶದ ಎಲ್ಲೆಡೆಯಂತೆ ಉತ್ತರ ಪ್ರದೇಶದಲ್ಲೂ ಮುಸಲ್ಮಾನರು ಪ್ರತಿಭಟನೆ ನಡೆಸಿದ್ದಾರೆ. ಇದು ಸಂವಿಧಾನ ಅವರಿಗೆ ನೀಡಿರುವ ಹಕ್ಕು. ಪ್ರತಿಭಟನೆಯಲ್ಲಿ ಕಾನೂನು ಉಲ್ಲಂಘನೆಯಾಗಿದ್ದರೆ ಅದಕ್ಕೆ ಕಾನೂನು ಪ್ರಕಾರ ಕ್ರಮವಾಗಬೇಕು. ಇದರಿಂದ ಆದಿತ್ಯನಾಥ್ ಕೆಂಡಾಮಂಡಲರಾಗಿ ಪ್ರಯಾಗ್‌ರಾಜ್‌ನಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು ಎಂದು ಹೇಳಿ ಜಾವೇದ್ ಮುಹಮ್ಮದ್ ಅವರ ಮನೆಯ ಮೇಲೆ ಬುಲ್ಡೋಜರ್ ಬಿಟ್ಟು ನೆಲಸಮಗೊಳಿಸಿದ್ದಾರೆ. ಅವರು ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಂಡು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಾಗಿತ್ತು. ಯಾರು ಅಪರಾಧ ಎಸಗಿದ್ದಾರೆ ಎಂದು ಸಾಕ್ಷ್ಯಾಧಾರಗಳನ್ನು ಅವಲೋಕಿಸಿ ಕ್ರಮ ಕೈಗೊಳ್ಳಬೇಕಾಗಿರುವುದು ನ್ಯಾಯಾಲಯ. ಆದರೆ ವಿವೇಕ ಕಳೆದುಕೊಂಡ ಆದಿತ್ಯನಾಥ್ ತಾನೇ ಮುಖ್ಯ ನ್ಯಾಯಾಧೀಶರ ಪಾತ್ರವನ್ನೂ ನಿರ್ವಹಿಸಿ ಜಾವೇದ್ ಮುಹಮ್ಮದ್ ಅಪರಾಧಿ ಎಂದು ತಾನೇ ತೀರ್ಮಾನಿಸಿ ಅವರ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಇದು ಒಬ್ಬಿಬ್ಬರ ಮನೆಗಳನ್ನು ಕೆಡವಿದ ಸಮಸ್ಯೆಯಲ್ಲ. ಇಷ್ಟೆಲ್ಲ ನಡೆದರೂ ದಿಲ್ಲಿಯ ಮಹಾರಾಜ ಮೌನ ಮುರಿದಿಲ್ಲ. ಭಾರತವನ್ನು ಮುರಿಯಲು ಹೊರಟವರು ಮೌನ ಮುರಿಯಲು ಹೇಗೆ ಸಾಧ್ಯ?

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್‌ರ ಬಗ್ಗೆ ಆಡಿದ ಮಾತು ಆಕಸ್ಮಿಕವಲ್ಲ. ಮುಸ್ಲಿಮ್ ರಾಷ್ಟ್ರಗಳಿಂದ ಉಗ್ರ ಪ್ರತಿರೋಧ ಬಂದ ನಂತರ ಆಕೆಯನ್ನು ವಕ್ತಾರ ಹೊಣೆಗಾರಿಕೆಯಿಂದ ಮುಕ್ತಗೊಳಿಸಿದ್ದರೂ ಆಕೆಗೆ ಪೊಲೀಸ್ ಕಾವಲು ಒದಗಿಸಲಾಗಿದೆ. ಆರೆಸ್ಸೆಸ್ ಮತ್ತು ಅದರ ಅಂಗ ಸಂಘಟನೆಗಳು ಭಾರತದಲ್ಲಿ ಮುಸ್ಲಿಮರನ್ನು ಕೆರಳಿಸಿ ಹಿಂಸೆಯ ಖೆಡ್ಡಾಕ್ಕೆ ಕೆಡವಿ ಮುಖ್ಯವಾಹಿನಿಯಿಂದ ಅವರನ್ನು ಪ್ರತ್ಯೇಕಿಸಿ ಹತ್ತಿಕ್ಕುವ ಭಾರೀ ಷಡ್ಯಂತ್ರದ ಭಾಗವಾಗಿ ನೂಪುರ್ ಶರ್ಮಾ ಹೇಳಿಕೆ ನೀಡಿದ್ದಾರೆ. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ಜಾಣ ಮೌನ ತಾಳಿದ್ದಾರೆ. ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರು ಒಂದೆಡೆ ಸೌಮ್ಯದಿಂದ ಮಾತಾಡಿ ಇನ್ನೊಂದೆಡೆ ನೂಪುರ್ ಶರ್ಮಾರಂತಹವರಿಂದ ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡಿಸುತ್ತಾರೆ. ಅಮಾಯಕ ಜನ ಇದರಿಂದ ಗಲಿಬಿಲಿಗೊಳ್ಳುತ್ತಾರೆ. ಇದು ಸಂಘದ ಹಳೆಯ ಆಟ. ಮೋದಿ ಬರುವವರೆಗೆ ವಾಜಪೇಯಿ ಸೌಮ್ಯ ಮುಖವಾಡ ಹಾಕಿದ್ದರು. ಅಡ್ವಾಣಿ ಉಗ್ರಾವತಾರ ತಾಳುತ್ತಿದ್ದರು. ಈಗ ಭಾಗವತರು ಗೋವಿನ ಮುಖವಾಡ ಹಾಕಿ, ಮೋದಿ ಬಾಯಿಗೆ ಟೇಪು ಹಚ್ಚಿ ನೂಪುರ್ ಶರ್ಮಾರಂತಹವರನ್ನು ಮಾತಾಡಲು ಬಿಟ್ಟಿದ್ದಾರೆ. ಮುಸಲ್ಮಾನರನ್ನು ಕೆರಳಿಸಿ, ಪ್ರಚೋದಿಸಿ ಅವರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಐದು ನೂರಕ್ಕೂ ಹೆಚ್ಚು ಜನರನ್ನು ಬಂಧಿಸಿ ಜೈಲಿಗೆ ತಳ್ಳಲಾಗಿದೆ. ಮನೆಗಳನ್ನು ನೆಲಸಮಗೊಳಿಸಲಾಗಿದೆ.

ಭಿನ್ನಾಭಿಪ್ರಾಯ ಹೊಂದಿದವರ ಮನೆಗಳನ್ನು ಬುಲ್ಡೋಜರ್ ಬಿಟ್ಟು ನೆಲಸಮಗೊಳಿಸುವ ಸ್ಥಿತಿಗೆ ಈ ದೇಶ ಬಂದಿದೆ ಅಂದರೆ ಇಲ್ಲಿ ಪ್ರಜಾಪ್ರಭುತ್ವಕ್ಕೆ ಭಾರೀ ಅಪಾಯ ಬಂದಿದೆ ಎಂದು ಅರ್ಥ. ಮನೆ ಕೆಡಹುವುದನ್ನು ನೋಡಿ ಚಪ್ಪಾಳೆ ತಟ್ಟುವ, ಕೇಕೆ ಹಾಕುವ ರೋಗಗ್ರಸ್ತ ಮನಸ್ಸುಗಳ ವಿಕಾರ ನರ್ತನ ನಡೆದಿರುವಾಗ ವಿವೇಚನೆಗೆ ಜಾಗ ಎಲ್ಲಿದೆ?
ಆರ್ಥಿಕವಾಗಿ ಭಾರತವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದ ಸಂಘಪರಿವಾರ ನಿಯಂತ್ರಿತ ಮೋದಿ ಸರಕಾರ ತನ್ನ ಫ್ಯಾಶಿಸ್ಟ್ ಕಾರ್ಯಸೂಚಿಯ ಜಾರಿಗಾಗಿ ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ನ್ಯಾಯಾಂಗವನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. ಸಂಸತ್ತಿನ ಮತ್ತು ಕೆಲ ಶಾಸನ ಸಭೆಗಳ ಬಹುಮತವನ್ನು ಬಳಸಿಕೊಂಡು ಒಂದಿಡೀ ಸಮುದಾಯವನ್ನು ಚಿತ್ರ ಹಿಂಸೆಗೆ ಗುರಿಪಡಿಸುತ್ತಿದೆ. ಕೋಮುವಾದವನ್ನು ವಿರೋಧ ಮಾಡುವವರನ್ನೆಲ್ಲ ದೇಶ ದ್ರೋಹಿಗಳೆಂದು ಕರೆದು ಅವಮಾನಿಸಲಾಗುತ್ತಿದೆ. ಭಾರತದ ಬಹುಸಂಖ್ಯಾತ ಜನ ಶಾಂತಿಪ್ರಿಯರು ಎಂಬುದು ನಿಜವಾದರೂ ಮತಾಂಧತೆಯ ಮತ್ತೇರಿಸಿ ಒಡಕಿನ ವಿಷಬೀಜ ಬಿತ್ತಲಾಗುತ್ತಿದೆ. ಭಾರತದ ಏಕತೆ ಮತ್ತು ಸಮಗ್ರತೆಗೆ ಹಿಂದೆಂದೂ ಕಂಡರಿಯದ ಗಂಡಾಂತರ ಎದುರಾಗಿದೆ.

ಒಂದೆಡೆ ಹಿಜಾಬ್ ವಿವಾದ, ಮಗದೊಂದೆಡೆ ಮಸೀದಿಗಳನ್ನು, ದರ್ಗಾಗಳನ್ನು ಅಗೆದು ಶಿವಲಿಂಗ ಗಳ ಹುಡುಕಾಟ. ಇದು ಸಾಲದೆಂಬಂತೆ ಈಗ ಬುಲ್ಡೋಜರ್ ಹರಿಸಿ ಬಡವರ ಮನೆಗಳ ಧ್ವಂಸ ಕಾರ್ಯಾಚರಣೆ.. ಹೀಗೆ ಭಾರತಕ್ಕಾಗಿ ಬೆವರು ಸುರಿಸಿದ, ರಕ್ತ ಬಸಿದ ಒಂದಿಡೀ ಸಮುದಾಯವನ್ನು ಭೀತಿಯ ಕಾರ್ಗತ್ತಲಿಗೆ ತಳ್ಳಲಾಗುತ್ತಿದೆ. ಈಗ ಮನೆಗಳಿಗೆ ಬುಲ್ಡೋಜರ್ ಬಿಟ್ಟವರು ನಾಳೆ ಸಂಸತ್ತಿಗೂ, ನ್ಯಾಯಾಲಯಕ್ಕೂ ಹಾಗೂ ಸಂವಿಧಾನದ ಮೇಲೂ ಬುಲ್ಡೋಜರ್ ಹರಿಸುವ ದಿನಗಳು ದೂರವಿಲ್ಲ. ಈಗ ಸುಮ್ಮನಿದ್ದರೆ ಬಹುತ್ವ ಭಾರತ ಸ್ಮಶಾನ ಭಾರತವಾಗುತ್ತದೆ. ಇದನ್ನು ತಡೆಯಲು ಇರುವ ಏಕೈಕ ಪರಿಹಾರವೆಂದರೆ ರಾಜಕೀಯ ಅಧಿಕಾರದಿಂದ ಸಂವಿಧಾನ ವಿರೋಧಿ ಶಕ್ತಿಗಳನ್ನು ದೂರವಿಡುವುದು. ಅದಕ್ಕಾಗಿ ಇನ್ನಾದರೂ ಸಮಾನ ಮನಸ್ಕ ಪಕ್ಷಗಳು, ಸಂಘಟನೆಗಳು ಒಂದಾಗಬೇಕಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News