ಕೇಂದ್ರದ 'ಅಗ್ನಿಪಥ್' ಯೋಜನೆ ವಿರೋಧಿಸಿ ಬಿಹಾರದಲ್ಲಿ ಸೇನಾ ಆಕಾಂಕ್ಷಿಗಳಿಂದ ಭಾರೀ ಪ್ರತಿಭಟನೆ, ಹೆದ್ದಾರಿ ತಡೆ

Update: 2022-06-15 09:27 GMT
ಸಾಂದರ್ಭಿಕ ಚಿತ್ರ, Photo:PTI

ಪಾಟ್ನಾ: ಅಲ್ಪಾವಧಿಯ ಗುತ್ತಿಗೆಯಲ್ಲಿ ಸೈನಿಕರನ್ನು ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳಿಸುವ ಕೇಂದ್ರ ಸರಕಾರದ 'ಅಗ್ನಿಪಥ್' ಯೋಜನೆಗೆ ಅಸಮಾಧಾನ ವ್ಯಕ್ತಪಡಿಸಿದ ಸೇನಾ ಆಕಾಂಕ್ಷಿಗಳು ಬುಧವಾರ ಬಿಹಾರದ ಮುಝಾಫರ್‌ಪುರದಲ್ಲಿ ಹೆದ್ದಾರಿ ಹಾಗೂ  ಬಕ್ಸಾರ್‌ನಲ್ಲಿ ರೈಲು ಹಳಿಗಳನ್ನು ತಡೆದು ಪ್ರತಿಭಟಿಸಿದರು.

ಮಂಗಳವಾರದಂದು ಸರಕಾರ ಘೋಷಿಸಿರುವ  ಈ ಯೋಜನೆಯನ್ನು ತಮ್ಮ ದೀರ್ಘಾವಧಿಯ ಭವಿಷ್ಯಕ್ಕೆ ಹಾನಿಕರ ಎಂದು ಅವರು ಪ್ರತಿಭಟನಾಕಾರರು ಹೇಳಿದ್ದಾರೆ. ಏಕೆಂದರೆ ಈ ಯೋಜನೆಯಡಿಯಲ್ಲಿ ನೇಮಕಗೊಂಡವರು ಅಥವಾ ಅಗ್ನಿವೀರ್‌ರ ಪೈಕಿ  ಶೇಕಡಾ 25 ರಷ್ಟು ಮಾತ್ರ ಖಾಯಂ ಆಗಿ ಸೇವೆ ಸಲ್ಲಿಸಲಿದ್ದಾರೆ. ಉಳಿದವರನ್ನು ಕೈಬಿಡಲಾಗುತ್ತದೆ.

" ನಮಗೆ ಕೆಲಸ ಕೊಡಿ ಅಥವಾ ನಮ್ಮನ್ನು ಕೊಂದುಹಾಕಿ" ಎಂಬ ಘೋಷಣೆಗಳೊಂದಿಗೆ ಪ್ರತಿಭಟಿಸಿದ ಯುವಕರು ಉತ್ತರ ಪ್ರದೇಶದ ಲಕ್ನೋವನ್ನು ಬಿಹಾರದ ಮುಝಾಫರ್‌ಪುರ ಬರೌನಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 28 ರಲ್ಲಿ ಟೈರ್ ಮತ್ತು ಹೋರ್ಡಿಂಗ್‌ಗಳನ್ನು ರಾಶಿ ಹಾಕಿ ಸುಟ್ಟುಹಾಕಿದರು,

ಎರಡು ವರ್ಷಗಳ ನಂತರ ನಿಯಮಿತ ನೇಮಕಾತಿ ರ್ಯಾಲಿಗಳು ಪುನರಾರಂಭಗೊಳ್ಳುವುದನ್ನು ನಾವು  ಕಾಯುತ್ತಿದ್ದೇವೆ. ಆದರೆ ಅದರ ಬದಲಿಗೆ ಈ ಯೋಜನೆಯನ್ನು ನೀಡಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಕೊರೋನವೈರಸ್ ಸಾಂಕ್ರಾಮಿಕ ರೋಗವು ಆರಂಭವಾದ ನಂತರ ಎರಡು ವರ್ಷಗಳ ಹಿಂದೆ ನಿಯಮಿತ ನೇಮಕಾತಿ ರ್ಯಾಲಿಗಳನ್ನು ನಿಲ್ಲಿಸಲಾಯಿತು. ಆದರೆ ಅದನ್ನ ಇನ್ನೂ ಪುನರಾರಂಭಿಸಲಾಗಿಲ್ಲ.

"ಸೇನೆಯು ವಯಸ್ಸಿನ ಪಟ್ಟಿಯನ್ನು ಸಡಿಲಿಸಬೇಕು., ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಕಾಯುತ್ತಿರುವವರಿಗೆ ನ್ಯಾಯಯುತ ಅವಕಾಶ ಸಿಗಬೇಕು" ಎಂದು ಮುಝಾಫರ್‌ಪುರದ ಪ್ರತಿಭಟನಾಕಾರರೊಬ್ಬರು ಹೇಳಿದರು.

ಅಗ್ನಿಪಥ್ ಯೋಜನೆಯಡಿ ಸೇನೆಗೆ ನೇಮಕಾತಿ ಮಾಡಿಕೊಳ್ಳುವವರ ವಯಸ್ಸು 17.5 ರಿಂದ 21 ವರ್ಷಗಳಾಗಿರಬೇಕು.

"ಸರಕಾರವು ನಮ್ಮೊಂದಿಗೆ ಪಬ್ ಜಿಯಂತಹ ಆಟವಾಡುತ್ತಿದೆ.  ಇಷ್ಟು ದಿನದಿಂದ ತಮ್ಮ ಸರಕಾರ ನೇಮಕಾತಿಯನ್ನು ತಡೆಹಿಡಿದಿದ್ದರೂ ಯಾವುದೇ ಬಿಜೆಪಿ ನಾಯಕರು ಏನನ್ನೂ ಹೇಳಲಿಲ್ಲ, ಸರಕಾರವು ಏನಾದರೂ ಪ್ರಮುಖ ನಿರ್ಧಾರ  ತೆಗೆದುಕೊಳ್ಳುವವರೆಗೆ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ’’ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News