ಪ್ರಧಾನಿ ಮೋದಿ ಯಶಸ್ವೀ ಆಡಳಿತದ ಅಂಕ ಪಟ್ಟಿಯನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಿದ್ದಾರೆ: ಶಾಸಕ ಭರತ್ ಶೆಟ್ಟಿ

Update: 2022-06-15 18:01 GMT

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ 8 ವರ್ಷ ಯಶಸ್ವೀ ಆಡಳಿತದ ಅಂಕ ಪಟ್ಟಿಯನ್ನು ಪಕ್ಷದ ಕಾರ್ಯಕರ್ತರು ಕ್ಷೇತ್ರದ ಪ್ರತೀ ಮನೆ ಮನೆಗೆ ತಲುಪಿಸಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ವೈ. ಭರತ್ ಶೆಟ್ಟಿ ಹೇಳಿದ್ದಾರೆ.

ಸುರತ್ಕಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆರೋಗ್ಯ ಮತ್ತು ಸಾಂಕ್ರಾಮಿಕ ವಿಪತ್ತು ನಿರ್ವಹಣೆ, ವಾಕ್ಸಿನೇಷನ್ ದಾಖಲೆಯ ಸೇವೆ, ರೈತರ ಕಲ್ಯಾಣ , ಯುವ ಸಬಲೀಕರಣ, ಆರ್ಥಿಕ ಸಲಕರಣೆಗಳು, ತಂತ್ರಜ್ಞಾನ, ಶಿಕ್ಷಣ ನೀತಿ, ಐತಿಹಾಸಿಕ ಹೆಗ್ಗುರುತಿನ ನಿರ್ಧಾರಗಳಾದ ರಾಮಮಂದಿರ ನಿರ್ಮಾಣಕ್ಕೆ ಚಾಲನೆ, ಕಾಶಿ ವಿಶ್ವನಾಥ ಕ್ಷೇತ್ರ ಮತ್ತು ಕೇದಾರನಾಥ ಕ್ಷೇತ್ರದ ಜೀರ್ಣೋದ್ಧಾರ, ತ್ರಿವಳಿ ತಲಾಕ್ ಅಂತ್ಯ ಮತ್ತಿತರ ಹತ್ತು ಹಲವು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ 8ವರ್ಷದ ಆಡಳಿತದಲ್ಲಿ  ಐತಿಹಾಸಿಕ  ಸಾಧನೆಗಳು ಎಂದು ಹೇಳಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಗೌರವಾರ್ಥ 5 ಸ್ಥಳಗಳನ್ನು ಪಂಚತೀರ್ಥಗಳಾಗಿ ಅಭಿವೃದ್ಧಿ, ಯೋಗ ದಿನಾಚರಣೆ, ನವೆಂಬರ್ 26ರನ್ನು ಸಂವಿಧಾನ ದಿನವನ್ನಾಗಿ ಆಚರಣೆ ಮತ್ತಿತರ ಹಲವು ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ 80 ಕೋಟಿ ಜನರಿಗೆ ಉಚಿತ ಆಹಾರ ಸಾಮಗ್ರಿಗಳ ಪೂರೈಕೆ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಗರ ಪ್ರದೇಶದಲ್ಲಿ 1.22 ಕೋಟಿ ಮನೆ ಮತ್ತು ಗ್ರಾಮೀಣ ಭಾಗಗಳಲ್ಲಿ 2.3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ, ಹರ್ ಘರ್ ನಲ್ ಸೆ ಜಲ್ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ 6.2 ಕೋಟಿ ಹೊಸ ಮನೆಗಳಿಗೆ ಕೊಳವೆ ನೀರು ಸಂಪರ್ಕ ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಯಡಿ 29.6 ಲಕ್ಷ ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ಯೋಜನೆ ಆಯುಷ್ಮಾನ್ ಯೋಜನೆಯಡಿ 3.2 ಕೋಟಿ ಜನರಿಗೆ r5 ಲಕ್ಷ ರೂ. ಯಷ್ಟು ಉಚಿತ ಚಿಕಿತ್ಸಾ ವಿಮೆ,  18 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್ ಗಳ ವಿತರಣೆ, ವಿಶ್ವದ ಅತ್ಯಂತ ದೊಡ್ಡ ಲಸಿಕೆ ಅಭಿಯಾನದಲ್ಲಿ 190 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಿಕೆ, 8,720 ಏಳು ಜನ ಔಷಧಿ ಕೇಂದ್ರಗಳಲ್ಲಿ ಕೈಗೆಟಕುವ ದರದಲ್ಲಿ ಔಷಧಿಗಳ ವಿತರಣೆ, ಕಳೆದ 8 ವರ್ಷಗಳಲ್ಲಿ 15 ಹೊಸ ಎಐಐಎಂ ಗಳ ಉದ್ಘಾಟನೆ ಸುಮಾರು 200 ಹೊಸ ವೈದ್ಯಕೀಯ ಕಾಲೇಜುಗಳ ಪ್ರಾರಂಭ, ದೇಶದ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಯೋಜನೆ, ಪ್ರತಿ ಬ್ಲಾಕ್ಗಳನ್ನು ಆರೋಗ್ಯ ಕೇಂದ್ರಗಳ ಸ್ಥಾಪನೆ ಸೇರಿದಂತೆ ಹಲವಾರು ಜನಪ್ರಿಯ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದೆ ಇದು ಮೋದಿ ಸರಕಾರದ ಎಂಟು ವರ್ಷಗಳ ಸಾಧನೆ ಎಂದರು.

ತನ್ನ ಕ್ಷೇತ್ರದಲ್ಲಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಸರಕಾರಿ ಸೌಲಭ್ಯಗಳಾದ ಆಧಾರ್ ಕಾರ್ಡ್ ಸೇವೆ ಪಿಂಚಣಿ, ಇ ಶ್ರಮ, ಆಯುಷ್ಮಾನ್,  ರೇಷನ್ ಕಾರ್ಡ್  ನೀಡುವ ಕಾರ್ಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆ , ರಾಜ್ಯದಾದ್ಯಂತ ಹದಿನೈದು ದಿನಗಳ ಕಾಲ ಸಮಾಜಮುಖಿ ಕಾರ್ಯಕ್ರಮಗಳನ್ನು‌ ಜೂ.1ರಿಂದ ಜೂ.15ರ ವರೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ  ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್‍ರಾಜ್ ಕೃಷ್ಣಾಪುರ, ಸಂದೀಪ್ ಪಚ್ಚನಾಡಿ, ಮಹೇಶ್ ಮೂರ್ತಿ ಸುರತ್ಕಲ್ ,  ಶರತ್ ರಾಜ್ ಕೃಷ್ಣಾಪುರ , ಮನಪಾ ಸದಸ್ಯರಾದ ಶ್ವೇತಾ ಪೂಜಾರಿ, ಕಿರಣ್ ಕುಮಾರ್ ಕೋಡಿಕಲ್, ನಯನಾ ಆರ್.ಕೋಟ್ಯಾನ್, ಬಿಜೆಪಿ ಮುಖಂಡರಾದ ರಾಜೇಶ್ ಮುಕ್ಕ , ರಾಘವೇಂದ್ರ ಶೆಣೈ, ಪುಷ್ಪರಾಜ್  ಉಪಸ್ಥಿತರಿದ್ದರು.

ಟೋಲ್ ತೆರವಿಗೆ ನನ್ನ ಬೆಂಬಲವಿದೆ: ಶಾಸಕ ಭರತ್ ಶೆಟ್ಟಿ
ಟೋಲ್‍ಗೇಟ್  ವಿಚಾರಕ್ಕೆ ಸಂಬಂಧಪಟ್ಟಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಸುರತ್ಕಲ್ ಟೋಲ್ ಗೇಟ್ ತೆರವಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಹೋರಾಟ ಸಮಿತಿಯ ಹೆಸರಿನಲ್ಲಿ ನಾಟಕವಾಡುವವರನ್ನು ಬಿಟ್ಟು ಸಾರ್ವಜನಿಕರು ಹೋರಾಟಗಳನ್ನು ಆಯೊಜಿಸಿದರೆ ನಾನೂ ಭಾಗವಹಿಸುತ್ತೇನೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News