ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶೈಲಜಾ ಅಮರನಾಥ್ ನಿವಾಸಕ್ಕೆ ದುಷ್ಕರ್ಮಿಗಳಿಂದ ದಾಳಿ, ದಾಂಧಲೆ: ದೂರು
Update: 2022-06-18 15:39 GMT
ಪುತ್ತೂರು : ರಾಜ್ಯ ಕಾಂಗ್ರೆಸ್ʼನ ಐಟಿ ಸೆಲ್ ಕಾಯದರ್ಶಿ ಹಾಗೂ ಮಹಿಳಾ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾಯದರ್ಶಿ ಪುತ್ತೂರಿನ ನ್ಯಾಯವಾದಿ ಶೈಲಜಾ ಅಮರನಾಥ ಅವರ ನಿವಾಸಕ್ಕೆ ತಂಡವೊಂದು ದಾಳಿ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಮುರಿದು, ಮನೆಗೆ ಮಡ್ ಆಯಿಲ್ ಬಳಿದು ದಾಂದಲೆ ನಡೆಸಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಪುತ್ತೂರಿನ ಬಪ್ಪಳಿಗೆಯಲ್ಲಿರುವ ಶೈಲಜಾ ಅವರ ಮನೆಯಂಗಳಕ್ಕೆ ಬಂದ ತಂಡವೊಂದು ಮನೆಯ ಕಿಟಕಿಗೆ ಅಳವಡಿಸಿದ ಗಾಜುಗಳನ್ನು ಒಡೆದು, ಮನೆಯ ಸಿಟೌಟ್ ಗೆ ಮಡ್ ಆಯಿಲ್ ಸುರಿದು ಪರಾರಿಯಾಗಿದ್ದಾರೆ ಎಂದು ಈ ಬಗ್ಗೆ ಶೈಲಜಾ ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಅದಕ್ಕೂ ಮೊದಲು ಕೆಲ ಸಂಘಟನೆಗಳು ಶೈಲಜಾ ಅವರ ವಿರುದ್ಧ ಹಿಂದೂ ದೇವರುಗಳ ಅವಹೇಳನ ನಡೆಸಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು. ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ನಲ್ಲಿ ಹಿಂದೂ ದೇವರ ಕುರಿತು ಕೆಟ್ಟ ಪದಗಳನ್ನು ಬಳಸಿ ಅವರು ಅವಹೇಳನ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.