ರಾಜ್ಯದಲ್ಲಿ ಮುಸ್ಲಿಮರ ವಿರುದ್ಧ ಸಂವಿಧಾನ ವಿರೋಧಿ ಕೃತ್ಯಗಳು ನಡೆಯುತ್ತಿವೆ: ಅನ್ವರ್ ಮಾಣಿಪ್ಪಾಡಿ

Update: 2022-06-27 11:22 GMT

ಮಂಗಳೂರು, ಜೂ.27: ಸಂವಿಧಾನದ ಈ ದೇಶದ ಪವಿತ್ರ ಗ್ರಂಥವಾಗಿದ್ದು, ರಾಜ್ಯದಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ಸಂವಿಧಾನ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಇದರಿಂದ ಬೇಸರವಾಗಿದೆ ಎಂದು ಬಿಜೆಪಿ ನಾಯಕ ಹಾಗು ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸೌಹಾರ್ದದಿಂದ ಒಗ್ಗಟ್ಟಿನಿಂದ ಇದ್ದ ನಾಡಿನಲ್ಲಿ ಕೆಲ ಸಮಯದಿಂದ ಸಂವಿಧಾನ ವಿರೋಧಿ, ಸಮುದಾಯದ ವಿರುದ್ಧ ದ್ವೇಷ ತುಂಬಿದ ಕೃತ್ಯಗಳು ನಡೆಯುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಪ್ರಧಾನಿ ಮೋದಿಯವರು ಸಬ್‌ ಕಾ ಸಾತ್ ಸಬ್‌ ಕಾ ವಿಕಾಸ್ ಧ್ಯೇಯದ ಆಡಳಿತವನ್ನು ಜಾರಿಗೊಳಿಸಲು ರಾಜ್ಯದಲ್ಲಿ ಸಾಧ್ಯವಾಗುತ್ತಿಲ್ಲ. ಪ್ರಧಾನಿ ಮೋದಿ ಮೇಲೆ ವಿಶ್ವಾಸವಿದೆ. ಈ ವಿಷಯದ ಬಗ್ಗೆ ಅವರ ಗಮನಕ್ಕೂ ತರುವ ಪ್ರಯತ್ನ ಮಾಡಿದ್ದೇನೆ. ಆದರೆ ಸ್ಪಂದನ ದೊರಕಿಲ್ಲ ಎಂದು ಮಾಣಿಪ್ಪಾಡಿ ಹೇಳಿದರು.

ವಕ್ಫ್ ಹಗರಣಗಳ ಕುರಿತಂತೆ ಕಳೆದ 10 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಕೂಡಾ ವರದಿಗೆ ಜಯ ದೊರಕಿದೆ. ಇದನ್ನು ಸಾರ್ವಜನಿಕಗೊಳಿಸಬೇಕೆಂಬ ಬೇಡಿಕೆ ಈಡೇರಿಲ್ಲ. ಈ ಬಗ್ಗೆ ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೂ ಮನವಿ ಮಾಡಿದ್ದೆ. ಆದರೆ ಯಡಿಯೂರಪ್ಪರ ಪುತ್ರ ನನ್ನನ್ನು ಕಚೇರಿಗೆ ಬರಲು ಹೇಳಿ ಬ್ರೋಕರ್ ರೀತಿಯಲ್ಲಿ ವರ್ತಿಸಿದ್ದ ಬಗ್ಗೆ ನಾನು ವಿರೋಧಿಸಿದ್ದು ಎಲ್ಲರಿಗೂ ತಿಳಿದ ವಿಚಾರ. ಮುಖ್ಯಮಂತ್ರಿ ಬೊಮ್ಮಾಯಿ ಸರಕಾರಕ್ಕೂ ಅವರಿಗೂ ಪತ್ರ ಬರೆದು ದಾಖಲೆಗಳ ಸಹಿತ ವಿವರ ನೀಡಿದ್ದೇನೆ. ಆದರೆ ಈ ಸರಕಾರವೂ ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು.

ಈ ನಡುವೆ ಕೋವಿಡ್ ಕಾರಣದಿಂದ ಬಂದ್ ಆಗಿದ್ದ ಯಲಹಂಕದ ಮಸೀದಿಯೊಂದನ್ನು ತೆರೆಯಲು ಬಿಡದೆ ಅಲ್ಲಿನ ಪೊಲೀಸರು ಉದ್ಧಟತನ ತೋರಿಸಿದ್ದಾರೆ. ಇದಲ್ಲದೆ ರಾಜ್ಯದ ಹಲವೆಡೆ ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವ, ಹತ್ತಿಕ್ಕುವ ಪ್ರಯತ್ನ ನಡೆಸುತ್ತಿರುವಾಗ ಅದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ವಕ್ಫ್ ಹಗರಣಗಳ ವರದಿಯನ್ನು ಸಾರ್ವಜನಿಕಗೊಳಿಸಬೇಕು. ನಾನು ಮಾಡಿರುವ ಯಾವುದೇ ಆರೋಪದಲ್ಲಿ, ವರದಿಯಲ್ಲಿ ಸುಳ್ಳು, ತಪ್ಪಾಗಿದ್ದರೂ ನಾನು ಖಡ್ಗದಡಿ ತಲೆ ಇರಿಸಲು ಸಿದ್ಧ ಎಂದವರು ಹೇಳಿದರು.

ಸರಕಾರದ ಆಫರ್‌ಗಳನ್ನು ತಿರಸ್ಕರಿಸಿರುವೆ

ಐದು ತಿಂಗಳಿನಿಂದ ಸಾಕಷ್ಟು ಆಫರ್‌ಗಳು ರಾಜ್ಯ ಸರಕಾರದ ಕಡೆಯಿಂದ ಬಂದಿದೆ. ನಾನು ಎಲ್ಲವನ್ನೂ ತಿರಸ್ಕರಿಸಿದ್ದೇನೆ. ಹಾಗಾಗಿ ನಾನು ಯಾವುದೇ ರೀತಿಯ ಒತ್ತಡ, ಆಮಿಷದಿಂದ ಈ ರೀತಿಯಾಗಿ ಬಹಿರಂಗವಾಗಿ ಮಾತನಾಡುತ್ತಿಲ್ಲ. ನಾನು ಸತ್ಯವನ್ನಷ್ಟೇ ಹೇಳುತ್ತಿದ್ದೇನೆ. ಇದೀಗ ನನಗೆ ನೀಡಿರುವ ಗನ್‌ಮ್ಯಾನ್, ಇತರ ಎಲ್ಲಾ ಸೌಲಭ್ಯಗಳನ್ನು ವಾಪಸ್ ಮಾಡುತ್ತಿದ್ದೇನೆ ಎಂದು ಅನ್ವರ್ ಮಾಣಿಪ್ಪಾಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News